Open Talk | ಆರಂಭದ ಮಳೆ ಹಾಗೂ ಗ್ರಾಮೀಣ ಭಾಗದಲ್ಲಿ ಕೈಕೊಡುವ ವಿದ್ಯುತ್..!‌ | ಪರಿಹಾರ ಏನು..?

May 20, 2024
11:02 AM
ಮಳೆಗಾಲದ ಆರಂಭದಲ್ಲಿ ಮೂಲಭೂತ ಸೇವೆ ಎಂದು ಇಂದು ಗ್ರಾಮೀಣ ಭಾಗದಲ್ಲೂ ಬಯಸುವ ವಿದ್ಯುತ್‌ ಕೈಕೊಡುತ್ತದೆ. ಗ್ರಾಮೀಣ ಭಾಗದಲ್ಲಿ ವಾರಗಳ ಕಾಲ ವಿದ್ಯುತ್‌ ಮಾಯವಾದ ದಿನಗಳೂ ಇವೆ. ಹಾಗೆಂದು ಈ ಸಮಸ್ಯೆಗಳನ್ನು ಪರಿಹಾರ ಮಾಡಲು ಸಾಧ್ಯ ಇಲ್ಲವೇ..? ಪರಿಹಾರದ ದಾರಿಗಳನ್ನು ಏಕೆ ಜನರು ಮಾತನಾಡುತ್ತಿಲ್ಲ..?

ಮೊದಲ ಮಳೆ, ಮಳೆಗಾಲ ಆರಂಭದ ಹೊತ್ತಿನಲ್ಲಿ ಗ್ರಾಮೀಣ ಭಾಗದ ಬಹುತೇಕ ಕಡೆ ಕತ್ತಲು…!. ಒಂದೆರಡು ದಿನ ವಿದ್ಯುತ್‌ ಕೈಕೊಟ್ಟು, ಚಿಮಣಿ ದೀಪವೇ ಗತಿಯಾಗುವ ಸಂದರ್ಭ ಇರುತ್ತದೆ. ಈ ಪರಿಸ್ಥಿತಿ ಮುಂದೆ ಇನ್ನಷ್ಟು ಹೆಚ್ಚಾಗಬಹುದು ಏಕೆ..? ಅದಕ್ಕೊಂದು ಕಾರಣ ಇದೆ.

Advertisement

ಅಕಾಲದಲ್ಲಿ ಮಳೆಯಾಗಿ, ಸಕಾಲದಲ್ಲಿ ಮಳೆಯಾಗದೆ ಕೃಷಿ ಸಹಿತ, ಕುಡಿಯುವ ನೀರಿಗೆ ಸಂಕಷ್ಟವಾಗುವುದು ಈಗ ಹೆಚ್ಚಾಗುತ್ತಿದೆ. ಹೆಚ್ಚು ವರದಿಗಳು ಬರುತ್ತಿವೆ. ಹಿಂದೆಲ್ಲಾ ನಗರದಲ್ಲಿ ಮಾತ್ರಾ ನೀರಿನ ಸಮಸ್ಯೆ, ಬರದ ಸಮಸ್ಯೆ ಎನ್ನುವ ಸುದ್ದಿಗಳು ಕೇಳುತ್ತಿದ್ದರೆ, ಈಗ ಗ್ರಾಮೀಣ ಭಾಗದಿಂದಲೂ ಈ ಸುದ್ದಿ ಕೇಳುತ್ತಿದೆ. ಕುಡಿಯುವ ನೀರಿಗೂ ಬರ, ಕೃಷಿಗೂ ನೀರಿಲ್ಲದೆ ಪರದಾಟ..!. ಈ ವರ್ಷ ಇಂತಹ ಸುದ್ದಿ ಹೆಚ್ಚಾಗಿದೆ. ಈ ಸಂಕಷ್ಟ ದೂರ ಮಾಡಲು ಪರಿಸರ ರಕ್ಷಣೆ, ಕಾಡು ಉಳಿಸಿ ಎನ್ನುವ ಕೂಗು ಹೆಚ್ಚಾಗುತ್ತಿದೆ. ಇದೆಲ್ಲಾ ಅನಿವಾರ್ಯ ಸ್ಥಿತಿ. ಬದಲಾದ ಸನ್ನಿವೇಶದಲ್ಲಿ ಕೆಲವೊಂದು ಸಂಕಟಗಳನ್ನು ಸಹಿಸಿಕೊಳ್ಳಬೇಕಿದೆ.

ಗ್ರಾಮೀಣ ಭಾಗಕ್ಕೆ ಮೂಲಭೂತ ಸೌಕರ್ಯ ಅಗತ್ಯವಾಗಿ ಬೇಕಾಗಿದೆ. ರಸ್ತೆ, ನೀರು, ವಿದ್ಯುತ್‌, ಈಚೆಗೆ ನೆಟ್ವರ್ಕ್‌ ಕೂಡಾ ಅಗತ್ಯವಾದ ವಿಷಯ. ಮೂಲಭೂತ ವ್ಯವಸ್ಥೆಗಳು ಪ್ರತೀ ಬಾರಿ ಕೂಡಾ ಕೈಕೊಡುವುದು ಮೊದಲ ಮಳೆಗೆ. ಮೇ ಅಂತ್ಯ-ಜೂನ್‌ ಆರಂಭದ ಕೆಲವು ದಿನ ಎಲ್ಲಾ ವ್ಯವಸ್ಥೆಗಳೂ ಗ್ರಾಮೀಣ ಭಾಗದಲ್ಲಿ ಕೈಕೊಡುತ್ತವೆ. ಕೆಲವು ಕಡೆ ವಾಋಗಳ ಕಾಲವೂ ವಿದ್ಯುತ್‌ ಇಲ್ಲದೆ ಕೈಕೊಡುವ ಪರಿಸ್ಥಿತಿ ಇದೆ. ಆಗ ಎಲ್ಲರೂ ಶಾಪ ಹಾಕುವುದು ವಿದ್ಯುತ್‌ ಇಲಾಖೆಗೆ, ಆಡಳಿತ ವ್ಯವಸ್ಥೆಗೆ..!. ಒಂದು ವಾರ ಶಾಪ ಹಾಕುತ್ತಿದ್ದಾಗ ಸಹಜವಾಗಿಯೇ ಎಲ್ಲಾ ವ್ಯವಸ್ಥೆಗಳೂ ಸರಿಯಾಗುತ್ತದೆ, ನಂತರ ಮುಂದಿನ ವರ್ಷವೇ ಈ ಕೂಗು..!. ಈ ನಡುವೆ ವಹಿಸುವ ಮೌನವೇ ಪ್ರತೀ ವರ್ಷ ಗ್ರಾಮೀಣ ಭಾಗದಲ್ಲಿ ಸಮಸ್ಯೆ ಪುನರಾವರ್ತನೆಗೆ ಕಾರಣವಾಗಿದೆ. ಪರಿಹಾರದ ಮಾರ್ಗಗಳು ಗ್ರಾಮೀಣ ಭಾಗದ ಜನರಲ್ಲಿ ಇದ್ದರೂ ಮಾತನಾಡುವುದಿಲ್ಲ, ಕಾರಣ ದಾಕ್ಷಿಣ್ಯ..!. ಯಾಕೆ ಸುಮ್ಮನೆ ಮಾತನಾಡಿ ನಿಷ್ಟೂರ…!, ಯಾವುದಾದರೂ ಪತ್ರಿಕೆಯಲ್ಲೋ, ಯಾರಾದರೊಬ್ಬರು ಬರೆದರೆ, “ಭಾರೀ ಚಂದ ಆಗಿದೆ” ಶಹಭಾಸ್‌ ಹೇಳುತ್ತಾ ಸುಮ್ಮಿನಿರುವುದೇ ಸಮಸ್ಯೆ ನಿವಾರಣೆ ಆಗದೇ ಇರಲೂ ಒಂದು ಕಾರಣ.

ಈಚೆಗೆ ಅಲ್ಲಲ್ಲಿ ಗಿಡಗಳನ್ನು ನೆಡುವ ಕಾರ್ಯವನ್ನು ಇಲಾಖೆಗಳು ಮಾಡುತ್ತವೆ. ಅರಣ್ಯ ಇಲಾಖೆ ಕಾಡಿನ ಒಳಗಡೆ ಗಿಡಗಳನ್ನು ನೆಟ್ಟರೆ ಸಾಮಾಜಿಕ ಅರಣ್ಯದ ನೆಪದಲ್ಲಿ ಆ ಇಲಾಖೆಯು ರಸ್ತೆ ಬದಿ ಗಿಡಗಳನ್ನು ನೆಡುತ್ತದೆ. ಬಹುತೇಕ ಕಡೆ ಈ ಗಿಡಗಳನ್ನು ವಿದ್ಯುತ್‌ ತಂತಿಯ ಅಡಿಯಲ್ಲಿ ನೆಟ್ಟಿರುವುದು ಸರಿಯಾಗಿ ಗಮನಿಸಿದರೆ ತಿಳಿಯುತ್ತದೆ. ಈ ಗಿಡಗಳು ದೊಡ್ಡದಾಗುತ್ತಲೇ ವಿದ್ಯುತ್‌ ತಂತಿಗಳಿಗೆ ಮುಟ್ಟುವುದು ನಿಶ್ಚಿತ. ಆಗ ವಿದ್ಯುತ್‌ ಟ್ರಿಪ್‌ ಆಗುವುದು ವಿದ್ಯುತ್‌ ಇಲಾಖೆ ಸಹಿಸಬೇಕು. ಜನರು ಏಕೆ ವಿದ್ಯುತ್‌ ಇಲ್ಲ ಎಂದು ಕೇಳಿದರೆ,” ಲೈನ್‌ ಟ್ರಿಪ್‌ ಆಗುತ್ತದೆ” ಎಂದು ಮೆಸ್ಕಾಂ ಸಹಾಯವಾಣಿ ಹೇಳಲೇಬೇಕು…!. ಹೀಗಾಗಿ ಇಂತಹ ಸಮಯದಲ್ಲಿ ಮರದ ಗೆಲ್ಲು, ಗಿಡಗಳನ್ನು ಮತ್ತೆ ಕತ್ತರಿಸುವ ಮೂಲಕ ಮತ್ತೆ ಅರಣ್ಯ ನಾಶ, ಪರಿಸರ ನಾಶದ ಕೂಗು ಸಹಜವಾಗಿಯೇ ಕೇಳಬೇಕಿದೆ. ಇದಕ್ಕಾಗಿ ಗಿಡ ನೆಡುವ ಮುನ್ನವೇ ಏಕೆ ಆಡಳಿತಗಳು, ಸಾಮಾಜಿಕ ಜವಾಬ್ದಾರಿ ವ್ಯಕ್ತಿಗಳು ಮಾತನಾಡುತ್ತಿಲ್ಲ…? ಗ್ರಾಮೀಣ ಭಾಗಕ್ಕೆ ಬೇಕಾದ ಮೂಲಭೂತ ವ್ಯವಸ್ಥೆಯ  ಅಡ್ಡಿಯಲ್ಲಿ ಇದೂ ಒಂದು ಬಹುಮುಖ್ಯವಾದ ಪಾತ್ರ.

ಅದರ ಜೊತೆಗೆ ವಿದ್ಯುತ್‌ ಇಲಾಖೆಯೂ ಮಳೆಗಾಲಕ್ಕೆ ಮುಂಚಿತವಾಗಿ ತಂಡಗಳನ್ನು ಸಿದ್ಧ ಮಾಡುವುದರಲ್ಲೂ ಸೋಲುತ್ತಿದೆ. ಪ್ರತೀ ವರ್ಷ ಆರಂಭದ ಮಳೆಗೆ ಸಮಸ್ಯೆಗಳು ನಿಶ್ಚಿತವೇ ಆಗಿದೆ. ಇದರ ಅರಿವು ಸಾಮಾನ್ಯ ಅಧಿಕಾರಿಗಳಿಗೂ ಇದೆ. ಹೀಗಾಗಿ ಈ ಸಮಸ್ಯೆ ತಪ್ಪಿಸಲು ಇಲಾಖೆಗಳು ತಾತ್ಕಾಲಿಕ ತಂಡವನ್ನು ಸಿದ್ಧ ಮಾಡಿ ಮುಂಜಾಗ್ರತಾ ಕ್ರಮಗಳನ್ನು, ತಕ್ಷಣವೇ ದುರಸ್ತಿ ಮಾಡುವ ವ್ಯವಸ್ಥೆಗೆ ಮುಂದಾಗಬಾರದು ಏಕೆ ? ಗ್ರಾಮೀಣ ಭಾಗದಲ್ಲಿ ಕೂಡಾ ತಕ್ಷಣವೇ ಸೇವೆ ನೀಡುವ ವ್ಯವಸ್ಥೆಗೆ ಮುಂದಾಗುವಂತೆ ಹೆಜ್ಜೆ ಇಡಬಹುದು.

ಈಗಾಗಲೇ ವಿದ್ಯುತ್‌ ಇಲಾಖೆಯ ಸಿಬಂದಿಗಳು ಬೆಳಗಿನಿಂದ ತಡರಾತ್ರಿಯವರೆಗೆ ನಿರಂತರವಾಗಿ ಕೆಲಸ ಮಾಡುತ್ತಾರೆ, ಮಳೆಗಾಲದ ಆರಂಭದಲ್ಲಿ ತುರ್ತು ಕೆಲಸಗಳನ್ನು ಕೈಗೊಳ್ಳುತ್ತಲೇ ಇರುತ್ತಾರೆ. ಗ್ರಾಮೀಣ ಭಾಗದ ಹಲವು ಕಡೆ ಪವರ್‌ ಮ್ಯಾನ್‌ ಗಳು ಶ್ರಮದಾಯಕ ಕೆಲಸ, ಓಡಾಟವೇ ಹೆಚ್ಚಾಗುವ ಸನ್ನಿವೇಶ ಇರುತ್ತದೆ. ಇಲ್ಲೂ ಹಾಗೇ, ತಾಳ್ಮೆಯ ಕೆಲಸವೇ ಬಹುಮುಖ್ಯವಾಗುತ್ತದೆ. ಇದಕ್ಕಾಗಿ ಗ್ರಾಮೀಣ ಜನರ ಸಹಕಾರವೂ ಅಗತ್ಯ ಇರುತ್ತದೆ.

ಈಗ ಬಹುಮುಖ್ಯವಾದ ಪಾತ್ರ ಜನಪ್ರತಿನಿಧಿಗಳು ಹಾಗೂ ಇಲಾಖೆಗಳು ಪ್ರಮುಖ ಅಧಿಕಾರಿಗಳದ್ದು. ಕೆಲಸ ಮಾಡುವ ಸಿಬಂದಿಗಳಿಗೆ ಮೂಲಭೂತ ವ್ಯವಸ್ಥೆ. ರಾಜ್ಯದ ಎಲ್ಲಾ ಕಡೆಗಳಲ್ಲೂ ಗ್ರಾಮೀಣ ಭಾಗಕ್ಕೆ ಸರಿಯಾದ ವಿದ್ಯುತ್‌ ಪೂರೈಕೆ ಮಾಡಲು ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಬೇಕಿದೆ.

ಸುಳ್ಯದಂತಹ ಪ್ರದೇಶದಲ್ಲಿ ವಿದ್ಯುತ್‌ ಸಮಸ್ಯೆ ಕಳೆದ ಹಲವು ವರ್ಷಗಳಿಂದ ಇದೆ. ಹಾಗಿದ್ದರೂ ಇನ್ನೂ ಮೂಲಭೂತ ವ್ಯವಸ್ಥೆಗಳ ಸುಧಾರಣೆಗೆ ಶೀಘ್ರವಾದ ಕ್ರಮಗಳು ಆಗುತ್ತಿಲ್ಲ. ಸುಳ್ಯಕ್ಕೆ 110 ಕೆವಿ ವಿದ್ಯುತ್‌ ಬೇಡಿಕೆ, ಸಬ್‌ ಸ್ಟೇಶನ್‌ ಬೇಡಿಕೆ ಇದ್ದರೂ ಇದುವರೆಗೂ ಆಗಿಲ್ಲ. ಹಲವು ಕಡೆ 33 ಕೆವಿ ಸಬ್‌ ಸ್ಟೇಶನ್‌ ಆದರೂ ಅಲ್ಲೂ ಮೂಲಭೂತ ವ್ಯವಸ್ಥೆಗಳು, ಫೀಡರ್‌ ವ್ಯವಸ್ಥೆಗಳು ಸರಿಯಾಗಿ ಆಗಿಲ್ಲ. ಈಗ ಸುಳ್ಯದ ವಿದ್ಯುತ್‌ ಬೇಡಿಕೆ 110 ಕೆವಿಗಿಂತ ಹೆಚ್ಚಾಗುತ್ತಿದೆ, ಆದರೂ 110 ಕೆವಿ ವ್ಯವಸ್ಥೆ ಇನ್ನೂ ಆಗಿಲ್ಲ..!. ಸುಳ್ಯ ಮಾತ್ರವಲ್ಲ ಕಡಬದಲ್ಲೂ ಈ ಬಾರಿ ವಿದ್ಯುತ್‌ ಬೇಡಿಕೆ ಹೆಚ್ಚಾಗಿತ್ತು ಪೂರೈಕೆ ಕಡಿಮೆಯಾಗಿದೆ. ಇದರ ಪರಿಣಾಮ ಸುಬ್ರಹ್ಮಣ್ಯದಲ್ಲೂ ಕಂಡಿದೆ. ಸುಳ್ಯ-ಕಡಬ-ಸುಬ್ರಹ್ಮಣ್ಯದ ವಿದ್ಯುತ್‌ ಒತ್ತಡಗಳು ಪುತ್ತೂರಿನಲ್ಲೂ ಕಂಡಿದೆ. ಈ ಎಲ್ಲಾ ಸಮಸ್ಯೆಗಳು ಪರೋಕ್ಷವಾಗಿ ಗ್ರಾಮೀಣ ಭಾಗದ ಮೂಲಭೂತ ಸೌಲಭ್ಯದ ಮೇಲೆಯೇ ಹೊಡೆತ ಬೀಳುತ್ತದೆ.

ಅದಕ್ಕಾಗಿಯೇ ಎಲ್ಲಾ ಕಡೆಗಳಲ್ಲೂ ವಿದ್ಯುತ್‌ ಇಲಾಖೆಗೆ ಮೂಲಭೂತ ವ್ಯವಸ್ಥೆ ಕಲ್ಪಿಸಲು ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿದೆ. ಮೊದಲ ಮಳೆಗೂ ವಿದ್ಯುತ್‌ ಸಮಸ್ಯೆಯಾಗದಂತೆ , ಆದರೂ ತಕ್ಷಣವೇ ಸಮಸ್ಯೆ ಪರಿಹಾರ ಮಾಡುವ ವ್ಯವಸ್ಥೆ ಮಾಡಬಹುದಾಗಿದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಣಿಪುರದಲ್ಲಿ 68 ಟನ್ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಡಿಕೆ ವಶ
April 13, 2025
7:42 AM
by: The Rural Mirror ಸುದ್ದಿಜಾಲ
2025ರಲ್ಲಿ ಶನಿ ತಮ್ಮ ನಕ್ಷತ್ರ ಅಥವಾ ರಾಶಿಯಲ್ಲಿ ಅಧೋಗತಿಯ ಚಲನೆ
April 13, 2025
6:38 AM
by: ದ ರೂರಲ್ ಮಿರರ್.ಕಾಂ
ತಾಪಮಾನ ಹೆಚ್ಚಳ | ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರ ಪದಾರ್ಥ |
April 12, 2025
9:16 PM
by: The Rural Mirror ಸುದ್ದಿಜಾಲ
ತೊಗರಿ ಉತ್ಪನ್ನ ಖರೀದಿ ಅವಧಿ ಎ.25 ರವರೆಗೆ ವಿಸ್ತರಣೆ
April 12, 2025
8:44 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group