ಪುನರ್ಜನ್ಮದ ಬಗ್ಗೆ ವೈಜ್ಞಾನಿಕ ದಾಖಲೆ ಪ್ರಸ್ತುತ ಪಡಿಸಿದ್ದಾರೆ ಅಮೇರಿಕಾದ ಮನೋವಿಜ್ಞಾನಿ | ಅಂಬಿಕಾದಲ್ಲಿ ಆಯೋಜಿಸಿದ ಸಾರ್ವಜನಿಕರ ಸಭೆಯಲ್ಲಿ ಡಾ. ರಾಮಚಂದ್ರ ಗುರೂಜಿ |

December 20, 2023
6:19 AM
ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ಕುಂಡಲಿನಿ ಯೋಗ ಗುರು, ಸಂಮೋಹಿನಿ ತಜ್ಞ ಬೆಂಗಳೂರಿನ ಡಾ.ರಾಮಚಂದ್ರ ಗುರೂಜಿ ಅವರಿಂದ ಅಂತರ್ಮನಸ್ಸಿನ ವಿಸ್ಮಯ ಶಕ್ತಿಗಳ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಿತು.
ಅಮೇರಿಕಾದಲ್ಲಿ ಹಿಂದೆ ಕೇವಲ ಎಂಟು ಶೇಕಡಾ ಮಂದಿಯಷ್ಟೇ ಪುನರ್ಜನ್ಮದಲ್ಲಿ ನಂಬಿಕೆ ಇಟ್ಟಿದ್ದರೆ ಈಗ ಸುಮಾರು ನಲವತ್ತು ಶೇಕಡಾ ಜನ ಆ ಬಗ್ಗೆ ನಂಬಿಕೆ ಹೊಂದಿದ್ದಾರೆ ಎನ್ನುವುದು ಹಿಂದೂ ಧರ್ಮ ಅವರ ಮೇಲೆ ಮಾಡಿರುವ ಪರಿಣಾಮಕ್ಕೆ ಹಿಡಿದ ಕೈಗನ್ನಡಿ. ಧ್ಯಾನ, ಯೋಗ, ಆಧ್ಯಾತ್ಮ ಹೀಗೆ ಅನೇಕ ಸಂಗತಿಗಳನ್ನು ಭಾರತ ಜಗತ್ತಿಗೆ ಕೊಡುಗೆಯಾಗಿ ನೀಡಿದೆ. ಇಂದು ವಿದೇಶೀಯರು ನಮ್ಮ ಹಿಂದೂ ಧರ್ಮದ ಉತ್ಕೃಷ್ಟ ವಿಚಾರಗಳಿಂದ ಪ್ರಭಾಕ್ಕೊಳಗಾಗುತ್ತಿದ್ದಾರೆ ಎಂಬುದು ಹೆಮ್ಮೆ ಪಡಬೇಕಾದ ಸಂಗತಿ ಎಂದು ಕುಂಡಲಿನಿ ಯೋಗ ಗುರು, ಸಂಮೋಹಿನಿ ತಜ್ಞ ಬೆಂಗಳೂರಿನ ಡಾ.ರಾಮಚಂದ್ರ ಗುರೂಜಿ ಹೇಳಿದರು.
ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ಹತ್ತನೆಯ ವರ್ಷ – ದಶಾಂಬಿಕೋತ್ಸವದ ನಿಮಿತ್ತ ‘ಅಂತರ್ಮನಸ್ಸಿನ ವಿಸ್ಮಯ ಶಕ್ತಿಗಳು’ ವಿಷಯದ ಬಗೆಗೆ ಆಯೋಜಿಸಲಾದ ಒಂದು ದಿನದ ವಿಶೇಷ ಕಾರ್ಯಕ್ರಮದ ಭಾಗವಾಗಿ ಸಾರ್ವಜನಿಕರು ಹಾಗೂ ಹೆತ್ತವರ ಸಮಾವೇಶದಲ್ಲಿ ಶನಿವಾರ ಮಾತನಾಡಿದರು.
ನಾವು ಪುನರ್ಜನ್ಮಲ್ಲಿ ನಂಬಿಕೆ ಇಟ್ಟಿದ್ದರೂ ಸಂಶೋಧನೆ ನಡೆಸಿ ಆಧಾರವನ್ನು ಕಾಣಿಸುವುದಿಲ್ಲ. ಆದರೆ ಅಮೇರಿಕಾದಲ್ಲಿನ ಮನೋವಿಜ್ಞಾನಿಯೊಬ್ಬ ವೈಜ್ಞಾನಿಕ ಸಂಶೋಧನೆ ನಡೆಸಿ, ಎರಡು ಸಾವಿರ ವ್ಯಕ್ತಿಗಳ ಮೇಲೆ ಅಧ್ಯಯನ ಕೈಗೊಂಡು ದಾಖಲೆಗಳನ್ನು ಸಾದರಪಡಿಸಿದ್ದಾನೆ. ಇಡಿಯ ಬ್ರಹ್ಮಾಂಡಕ್ಕೇ ಹುಟ್ಟು ಸಾವು ಇದೆ ಎಂಬುದು ಭಗವಾನ್ ಶ್ರೀಕೃಷ್ಣನಿಂದ ತೊಡಗಿ ಆಧುನಿಕ ವಿಜ್ಞಾನಿಗಳವರೆಗೆ ಶೃತವಾಗಿರುವಾಗ ಬ್ರಹ್ಮಾಂಡದ ಭಾಗವಾಗಿರುವ ನಮಗೆ ಹುಟ್ಟು ಸಾವಿಲ್ಲ ಎನ್ನುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಹಲವು ಪ್ರಕರಣಗಳಲ್ಲಿ ಕೆಲವು ಮಕ್ಕಳು, ವ್ಯಕ್ತಿಗಳು ತಮ್ಮ ಪೂರ್ವಜನ್ಮದ ಬಗೆಗೆ ದಾಖಲೆ ಸಹಿತ ವಿವರಣೆ ನೀಡಿದ ಉದಾಹರಣೆಗಳು ನಮ್ಮಲ್ಲಿವೆ ಎಂದರು.
ಹೆತ್ತವರಿಗೆ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವ ಅವಶ್ಯಕತೆ ಇದೆ. ನಮ್ಮ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸುವ ಎಲ್ಲಾ ಹೊಣೆಗಾರಿಕೆಯನ್ನು ಶಿಕ್ಷಣ ಸಂಸ್ಥೆಗಳಿಗೆ ಬಿಟ್ಟು ನಾವು ಸುಮ್ಮನಿರುವಂತಿಲ್ಲ. ಆದರೆ ಮಕ್ಕಳಿಗೆ ಹೇಳುವ ನೈತಿಕತೆ ನಮ್ಮಲ್ಲಿ ಮೂಡಬೇಕಾದರೆ ನಾವು ಸಂಸ್ಕಾರಗಳನ್ನು ಆಚರಿಸಿ ತೋರಬೇಕು. ನಾವು ಬೆಳಗ್ಗೆ ಮಾಡುವ ಯೋಗ, ಧ್ಯಾನ, ಜಪದಂತಹ ಸಂಗತಿಗಳು ಮಕ್ಕಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಮಕ್ಕಳು ಹೆತ್ತವರನ್ನು ನೋಡುತ್ತಾ ಕಲಿಯುತ್ತಿರುತ್ತಾರೆ ಎಂದರು.
ಮಕ್ಕಳಿಗೆ ತುಂಬ ಸುಖಮಯ ವಾತಾವರಣವನ್ನು ಕಲ್ಪಿಸಿಕೊಡಬಾರದು. ಇದರಿಂದ ಮಕ್ಕಳು ನಿರ್ವೀರ್ಯರಾಗುತ್ತಾರೆ. ಗೀಜಗ ಹಕ್ಕಿ ತನ್ನ ಮರಿಗಳಿಗಾಗಿ ಅತ್ಯಂತ ಸುಖಕರವಾದ, ಅರಮನೆಯಂತಹ ಗೂಡನ್ನು ಕಟ್ಟುತ್ತದೆ. ಪರಿಣಾಮವಾಗಿ ಆ ಮರಿಗಳು ಇಪ್ಪತ್ತು ಅಡಿಗಿಂತ ಹೆಚ್ಚು ಎತ್ತರದಲ್ಲಿ ಹಾರಲಾಗದೆ, ಸವಾಲಿನ ಸನ್ನಿವೇಶ ಎದುರಿಸಲಾಗದೆ ಇನ್ನೊಂದು ಜೀವಿಗೆ ಆಹಾರವಾಗುತ್ತದೆ. ಆದರೆ ಹದ್ದು ಮುಳ್ಳಿನ ಗೂಡಲ್ಲಿ ಮೊಟ್ಟೆ ಇಡುತ್ತದೆ. ಮರಿಗಳಿಗೆ ಕಠಿಣ ಪರಿಸ್ಥಿತಿಯಲ್ಲಿ ಬದುಕುವುದನ್ನು ತಿಳಿಸಿಕೊಡುತ್ತದೆ. ಪರಿಣಾಮ ಆ ಮರಿಗಳು ಎತ್ತರದಲ್ಲಿ ಶೋಭಿಸುತ್ತವೆ. ನಮ್ಮ ಮಕ್ಕಳು ಸಾಧಿಸಬೇಕಾದರೆ ನಾವು ಹದ್ದಿನಂತೆ ಕಠಿಣ ಸಂದರ್ಭದಲ್ಲಿ ಬದುಕುವ ಕಲೆಯನ್ನು ಅವರಿಗೆ ತಿಳಿಸಿಕೊಡಬೇಕು ಎಂದರು.
ಪ್ರಸ್ತಾವನೆಗೈದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಅಂಬಿಕಾ ವಿದ್ಯಾಲಯ ತನ್ನ ಹತ್ತನೆಯ ವರ್ಷ – ದಶಾಂಬಿಕೋತ್ಸವದ ಸಂಭ್ರಮದಲ್ಲಿದೆ. ದೇಶಕ್ಕಾಗಿ ಹಂಬಲಿಸುವ ಮಕ್ಕಳನ್ನು ತಯಾರು ಮಾಡುವ ಉದ್ದೇಶ ಸಂಸ್ಥೆಗಿದೆ. ಹಾಗಾಗಿ ದೇಶದ ನೈಜ ಸತ್ವಗಳನ್ನು ಮಕ್ಕಳಿಗೆ ಕಾಣಿಸುವ, ಸಮಾಜಕ್ಕೆ ಒದಗಿಸಿಕೊಡುವ ಪ್ರಯತ್ನವನ್ನು ನಡೆಸಲಾಗುತ್ತಿದೆ. ಅದರ ಅಂಗವಾಗಿ ಅಂತರ್ಮನಸ್ಸಿನಲ್ಲಿ ಇರುವ ಅಗಾಧ ಶಕ್ತಿಯನ್ನು ಪರಿಚಯಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ವತಿಯಿಂದ ಡಾ.ರಾಮಚಂದ್ರ ಗುರೂಜಿಯವರನ್ನು ಸನ್ಮಾನಿಸಲಾಯಿತು. ಹೆತ್ತವರ ಹಾಗೂ ಸಾರ್ವಜನಿಕರ ಪ್ರಶ್ನೆಗಳಿಗೆ ಡಾ.ರಾಮಚಂದ್ರ ಗುರೂಜಿಯವರು ಉತ್ತರಿಸಿದರು. ಅಂಬಿಕಾ ಪದವಿಪೂರ್ವ ವಿದ್ಯಾಲಯದ ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರ್ವಹಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ ವಂದಿಸಿದರು.

Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯದಲ್ಲಿ ಮತ್ತೆ ಚುರುಕಾದ ಮುಂಗಾರು
June 23, 2025
7:56 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 22.06.2025| ಜೂ.28 ರಿಂದ ಮಳೆ‌ ಕಡಿಮೆಯಾಗಲಿದೆಯಾ ?
June 22, 2025
1:26 PM
by: ಸಾಯಿಶೇಖರ್ ಕರಿಕಳ
ಇಲ್ಲಿ ರೈತರು ಕೀಟನಾಶಕಗಳ ಬದಲಿಗೆ ಬಾತುಕೋಳಿಗಳನ್ನು ಬಳಸುತ್ತಾರೆ..!
June 22, 2025
12:00 PM
by: The Rural Mirror ಸುದ್ದಿಜಾಲ
ರಸ್ತೆ ಬದಿ ನೆಡಲಾಗಿರುವ ಮರಗಳ ಸುತ್ತ ಕನಿಷ್ಠ 1 ಮೀಟರ್ ರಸ್ತೆ  ಬ್ಲಾಕ್ ತೆರವಿಗೆ ಆದೇಶ
June 22, 2025
11:00 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group