ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ದೇವತೋಪಾಸನೆ, ತಪಸ್ಸು, ಸಚ್ಚಿಂತನೆ, ಕಾರ್ಯಾನ್ವಯದ ಉದ್ದೇಶದಿಂದ ಶಿಷ್ಯಭಕ್ತರು ಸುಮಾರು ಐದು ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಅಶೋಕೆಯಲ್ಲಿ ನಿರ್ಮಿಸಿರುವ ವಿಶಿಷ್ಟ ‘ಸೇವಾಸೌಧ’ ಸಮರ್ಪಣಾ ಸಮಾರಂಭ ಶನಿವಾರ ನಡೆಯಲಿದೆ
ರಾಘವೇಶ್ವರಭಾರತೀ ಶ್ರೀಗಳ ಸಾನ್ನಿಧ್ಯದಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯುವ ಸಮರ್ಪಣಾ ಸಮಾರಂಭದಲ್ಲಿ ಕೊಯಮತ್ತೂರಿನ ಶ್ರೀ ಚಂದ್ರಶೇಖರ ಭಾರತೀ ಚಂದ್ರಶೇಖರ ಸರಸ್ವತಿ ವೇದಪಾಠಶಾಲೆಯ ಮುಖ್ಯಸ್ಥರಾದ ವೇದಬ್ರಹ್ಮ ಶ್ರೀ ಜಂಬೂನಾಥ ಘನಪಾಠಿಗಳು, ತಿರುವನಂತಪುರಂ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಶ್ರೀ ನಾರಾಯಣ ಪಟ್ಟೇರಿ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಟಿಟಿಡಿ ಮಂಡಳಿ ಅಧ್ಯಕ್ಷ ವೈ,ವಿ.ಸುಬ್ಬಾರೆಡ್ಡಿ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸುವರು ಎಂದು ಶ್ರೀಮಠದ ಲೋಕಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು ವಿವರ ನೀಡಿದ್ದಾರೆ.
ರಾಜ್ಯ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತ ಕುಮಾರ್ ಹೆಗಡೆ, ಗೃಹ ಸಚಿವ ಅರಗ ಜ್ಞಾನೇಂದ್ರ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಿವರಾಮ ಹೆಬ್ಬಾರ್, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ದಿನಕರ ಶೆಟ್ಟಿ, ಸುನೀಲ್ ನಾಯಕ್, ರೂಪಾಲಿ ನಾಯಕ್ ಮತ್ತಿತರ ಗಣ್ಯರು ಈ ಅಪೂರ್ವ ಸಮಾರಂಭಕ್ಕೆ ಸಾಕ್ಷಿಗಳಾಗಲಿದ್ದಾರೆ. ವಿಶಿಷ್ಟ ಭವನ : ಸಂಪೂರ್ಣ ಸಾಂಪ್ರದಾಯಿಕ ಶೈಲಿಯಲ್ಲಿ ಸಿಮೆಂಟ್, ಇಟ್ಟಿಗೆ ಬಳಸದೇ ವಿಶಿಷ್ಟವಾಗಿ ನಿರ್ಮಿಸಿದ ಈ ಭವ್ಯ ಭವನದ ಸಮರ್ಪಣಾ ಸಮಾರಂಭಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸಲಿದ್ದಾರೆ. ಶ್ರೀಮಠದ ಸೇವಾಬಿಂದುಗಳ ಸಮರ್ಪಣೆಯಲ್ಲಿ ನಿರ್ಮಾಣಗೊಂಡ ಭಾರತೀಯ ವಾಸ್ತುಶಿಲ್ಪ ವಿನ್ಯಾಸಗಳಲ್ಲಿ ಕಂಗೊಳಿಸುವ ಆವರಣವನ್ನು ಆಮೂಲಾಗ್ರವಾಗಿ ಅಲಂಕರಿಸಲಿರುವ ಭಾರತೀಯ ಮೂಲದ ಗಿಡ-ಮರ-ಬಳ್ಳಿಗಳಿಂದ ಈ ಭವ್ಯ ಮಂದಿರ ಶೋಭಿಸುತ್ತಿದೆ. ಇದೇ ವೇಳೆ ಸಾಂಪ್ರದಾಯಿಕ ಪಾಕವೈಭವವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. ತೊಡದೇವು, ಮಜ್ಜಿಗೆ ದೋಸೆ, ವಡೆ, ಬಜೆ/ಪೋಡಿ, ದೇಸಿ ಹಾಲಿನ ಕುಲ್ಫಿ, ಚಕ್ಕುಲಿ, ಚಾಟ್ಸ್, ಕರ್ಜಿಕಾಯಿ, ಬಾಳ್ಕ, ಉಪ್ಪುಸೊಳೆ ರೊಟ್ಟಿ, ಬಾಳೆಹಣ್ಣು ಒತ್ತುಶ್ಯಾವಿಗೆ, ಕೊಟ್ಟೆ ಕಡುಬು, ವಡಪೆ, ಅಕ್ಕಿ ಒತ್ತುಶ್ಯಾವಿಗೆ, ಉಂಡೆಗಳು, ಚಿಪ್ಸ್, ಬಾಳೆಹಣ್ಣಿನ ಹಲ್ವ, ಹಪ್ಪಳ, ಅಕ್ಕಿವಡೆ, ಓಡುಪ್ಪಾಳೆ, ಗೆಣಸಲೆ, ಹೋಲಿಗೆ ಪತ್ರೋಡೆ, ಅತ್ರಾಸ, ಉಂಡ್ಳಕಾಳು, ತೆಂಗೊಳಲು, ಉಸುಲಿ, ಕೋಸಂಬರಿ, ಹವ್ಯಕ ಪೇಯಗಳಾದ ಅಪ್ಪೆಹುಳಿ, ಬಾಳೆದಿಂಡು ಸೂಪ್ ಮತ್ತಿತರ ತಿಂಡಿ ತಿನಸುಗಳ ಪ್ರಾತ್ಯಕ್ಷಿಕೆ ಮತ್ತು ಮಾರಾಟ ಮೇಳದಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು. ಕೈಮಗ್ಗ, ಕರಕುಶಲ ವಸ್ತುಗಳ ಪ್ರದರ್ಶನ- ಮಾರಾಟವೂ ನಡೆಯಿತು.ಅಗಸ್ತ್ಯರಿಂದ ಪೂಜಿತವಾದ, ವರದ ಮುನಿಗಳು ನೀಡಿದ ಅಶೋಕೆಯಲ್ಲಿ ಶ್ರೀ ಶಂಕರಾಚಾರ್ಯರಿಂದ ಅನುಗ್ರಹಿಸಲ್ಪಟ್ಟ, ವೀರಪರಂಪರೆಯ ಎಲ್ಲ ಪೀಠಾಧಿಪತಿಗಳಿಂದ ಪ್ರತಿದಿನ ಸೇವೆ ಸ್ವೀಕರಿಸುತ್ತಿರುವ ಶ್ರೀರಾಮದೇವರಿಗೆ ಅಶೋಕೆಯಲ್ಲಿ ಪ್ರಥಮ ಬಾರಿಗೆ ಸಾಮ್ರಾಜ್ಯ ಪಟ್ಟಾಭಿಷೇಕವನ್ನೂ ನೆರವೇರಿಸಲಾಯಿತು. ಶ್ರೀಕರಾರ್ಚಿತ ಶ್ರೀಚಂದ್ರಮೌಳೀಶ್ವರ ದೇವರಿಗೆ 56 ಭಕ್ಷ್ಯಗಳ ನೈವೇದ್ಯ ಮತ್ತು 108 ದ್ರವ್ಯಗಳಿಂದ ವಿಶೇಷ ಅಭಿಷೇಕ ಮೆರವೇರಿತು.
ನಾಲ್ಕು ಗಿನಿಸ್ ದಾಖಲೆಗಳ ವೀರ, ಮೃದಂಗ ಮಾಂತ್ರಿಕ ಡಾ.ಕುನ್ನಂಕುಳಂ ಡಾ.ರಾಮಕೃಷ್ಣನ್ ಮತ್ತು ಯೋಗೀಶ್ ಶರ್ಮಾ ಅವರ ಸಂಗೀತ ಕಾರ್ಯಕ್ರಮವೂ ಇರುತ್ತದೆ. ಅನೂಪ್ (ವಯಲಿನ್), ಗೋವಿಂದ ಪ್ರಸಾದ್, ಉಣ್ಣಿಕೃಷ್ಣನ್ ಕಾಸರಗೋಡು ಜಿಲ್ಲೆ ಪೆರಿಯಾ ನಾಗರತ್ನ ಹೆಬ್ಬಾರ್ ಮತ್ತು ತಂಡದಿಂದ ಭಜನಾ ಕಾರ್ಯಕ್ರಮ, ಕುಮಾರಿ ರಚಿತಾ ತಂಡದಿಂದ ಭರತನಾಟ್ಯ ವೈಭವ ನಡೆಯಲಿದೆ.

