ಸರಕಾರದ ಸೂಚನೆಯಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ- ಕೆವೈಸಿ ಮಾಡಲಾದ ಪಡಿತರ ಚೀಟಿ ಫಲಾನುಭವಿಗಳನ್ನು ಹೊರತು ಪಡಿಸಿ ಉಳಿದಿರುವ ಫಲಾನುಭವಿಗಳ ಇ-ಕೆವೈಸಿ ನ್ಯಾಯಬೆಲೆ ಅಂಗಡಿಗಳ ಮೂಲಕ ಇ-ಕೆವೈಸಿ ಮಾಡಲು ಕೊನೆಯ ಅವಕಾಶವಾಗಿರುತ್ತದೆ. ತದನಂತರ ಇ-ಕೆವೈಸಿ ಮಾಡದ ಪಡಿತರ ಚೀಟಿದಾರರ ಪಡಿತರವನ್ನು ತಡೆಹಿಡಿಯಲಾಗುತ್ತದೆ. ಕೆಲವು ಸದಸ್ಯರು ಒಟಿಪಿ ಮೂಲಕ ತಿದ್ದುಪಡಿ ಮಾಡಿದ್ದು ಸದರಿ ಸದಸ್ಯರು ಜೀವಂತ ಇರುವ ಬಗ್ಗೆ ಜೀವಮಾಪನ ನೀಡಿ ಇ-ಕೆವೈಸಿ ಮಾಡುವುದು ಕಡ್ಡಾಯವಾಗಿರುತ್ತದೆ.
ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ನೀಡಬೇಕಾಗಿದ್ದು, ಪಡಿತರ ಚೀಟಿಗಳಲ್ಲಿನ ಕುಟುಂಬದ ಮುಖ್ಯಸ್ಥ, ಸಂಬಂಧ, ಲಿಂಗ, ಜಾತಿ, ಎಲ್.ಪಿ.ಜಿ.ವಿವರ, ಮೊಬೈಲ್ ಸಂಖ್ಯೆ ತುರ್ತಾಗಿ ಸಂಗ್ರಹಿಸಬೇಕಾಗಿರುತ್ತದೆ.
ಆದುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಾಲ್ತಿ ಇರುವ ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಗಳ ಇ-ಕೆವೈಸಿ ನೀಡಲು ಆಧಾರ್ ಕಾರ್ಡ್, ಎಲ್.ಪಿ.ಜಿ ದಾಖಲೆ, ಜಾತಿ ಪ್ರಮಾಣ ಪತ್ರ(ಇದ್ದಲ್ಲಿ), ಆದಾಯ ಪ್ರಮಾಣ ಪತ್ರ, ಎಂಡೋಸಲ್ಫಾನ್ ಪೀಡಿತರಂತಹ ವಿಶೇಷ ವರ್ಗದವರು ಹೊಂದಿರುವ ಧೃಢಪತ್ರಗಳಿದ್ದಲ್ಲಿ ಅವುಗಳೊಂದಿಗೆ ತಮಗೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಮಾಡಲು ತಿಳಿಸಿದೆ. ಆದ್ಯತೆ ಮೇರೆಗೆ ಇ-ಕೆವೈಸಿ ಮಾಡದಿರುವ ಅಂತ್ಯೋದಯ ಆದ್ಯತಾ (ಬಿಪಿಎಲ್) ಪಡಿತರ ಚೀಟಿಗಳಿಗೆ ಇ-ಕೆವೈಸಿ ಕಡ್ಡಾಯವಾಗಿ ಮಾಡಲೇ ಬೇಕಾಗಿದ್ದು ಇ-ಕೆವೈಸಿ ನೀಡಲು ಯಾವುದೇ ಶುಲ್ಕವಿರುವುದಿಲ್ಲ.
ಇ-ಕೆವೈಸಿ ಆಗದ ಪಡಿತರ ಪಡೆಯುತ್ತಿರುವ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಸ್ತುತ ನಡೆಯುತ್ತಿರುವ ಇ-ಕೆವೈಸಿ ಡ್ರೈವ್ ನಲ್ಲಿ ಇ-ಕೆವೈಸಿ ಮಾಡಿಕೊಳ್ಳಬೇಕು. ಫಲಾನುಭವಿಗಳು ತಮ್ಮ ಇ-ಕೆವೈಸಿ ಸ್ಥಿತಿಯನ್ನು ನೋಡಿಕೊಳ್ಳಲು ಮತ್ತು ಸ್ಪಷ್ಟೀಕರಣಗಳನ್ನು ಪಡೆಯಲು ಇಲಾಖೆಯ ನಿಶುಲ್ಕ ಸಹಾಯವಾಣಿ -1967/14445/1800 425 9339 ಗೆ ಕರೆ ಮಾಡಬಹುದು.
ಹಾಸಿಗೆ ಹಿಡಿದವರು, ಅಂಗವಿಕಲರು, ವೃದ್ಧರು, ಕುಷ್ಠರೋಗಿಗಳು ಇ-ಕೆವೈಸಿ ಮಾಡಲು ಸಾಧ್ಯವಾಗದಿದ್ದರೆ ಆಹಾರ ನಿರೀಕ್ಷಕರಿಗೆ ಮಾಹಿತಿ ಒದಗಿಸಬೇಕು. ಇ-ಕೆವೈಸಿ ಫಲಾನುಭವಿಯು ಕರ್ನಾಟಕದ ಹೊರಗಿದ್ದರೆ, ಅವರ ವಾಸ್ತವ್ಯದ ಹತ್ತಿರ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಬೇಕು. ಒಂದು ವೇಳೆ ಎಪ್ರಿಲ್ 30 ರ ಒಳಗೆ ಇ-ಕೆವೈಸಿ ಪೂರ್ಣಗೊಳಿಸಲು ಫಲಾನುಭವಿಗಳು ವಿಫಲರಾದ್ದಲ್ಲಿ, ಅಂತಹ ಫಲಾನುಭವಿಗಳನ್ನು ಪಡಿತರ ಚೀಟಿಯಿಂದ ರದ್ದುಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.