ಅಡಿಕೆ ಮಾರುಕಟ್ಟೆ ಒಂದು ಅತೀ ಸೂಕ್ಷ್ಮ ಮಾರುಕಟ್ಟೆ.ಇಲ್ಲಿ ಸಣ್ಣ ಸಣ್ಣ ವಿಷಯಗಳು ಇಡೀ ಮಾರುಕಟ್ಟೆಯನ್ನು ಬುಡಮೇಲು ಮಾಡಬಲ್ಲದು.ಇದು ಮಾಹಿತಿಯ ಕೊರತೆಯಿಂದ, ಗೊಂದಲಗಳಿಂದ ,ಸರಕಾರದ ಬದಲಾದ ನೀತಿಗಳಿಂದ, ಪ್ರಾಕೃತಿಕ ಅಸಮತೋಲನಗಳಿಂದ,ಯುದ್ಧ ಇತ್ಯಾದಿಗಳಿಂದ. ವಾಸ್ತವವಾಗಿ ಇವಾವುದು ಮಾರುಕಟ್ಟೆ ಇಲ್ಲವೇ ದಾರನೇ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ.ಹೀಗಿದ್ದರೂ ಯಾಕೆ ಹೀಗಾಗುತ್ತದೆ ಎಂಬುದನ್ನು ನೋಡಿದಾಗ ಈ ಕ್ಷೇತ್ರದಲ್ಲಿ ಕಂಡು ಬರುವ ಮುಖ್ಯ ಲೋಪವೆಂದರೆ ಸರಿಯಾದ ಮಾಹಿತಿಯ ಕೊರತೆ, ಅಲ್ಲದೆ ಬಹು ಪಾಲು ಕಾರ್ಯ ನಿರ್ವಹಿಸುವ ಅಸಂಘಟಿತ ಮಾರಾಟ ವ್ಯವಸ್ಥೆ.…..ಮುಂದೆ ಓದಿ….
ಮೇಲಿನ ಈ ಸ್ಥಿತಿಯಿಂದಾಗಿ ಇಲ್ಲಿ ಕೆಲವೊಂದು ಸಿದ್ಧಾಂತಗಳು ಪರೋಕ್ಷವಾಗಿ ಅನ್ವಯ ಆಗುತ್ತಿವೆ.ಈ ಸಿದ್ದಾಂತಗಳೆಂದರೆ ಮೈಂಡ್ ಗೇಮ್,ಸ್ಪೆಕುಲೇಟಿವ್ ಮತ್ತು ಸೆಂಟಿಮೆಂಟ್.
ಮೈಂಡ್ ಗೇಮ್: ಈ ಸಿದ್ಧಾಂತ ಅಡಿಕೆ ಮಾರುಕಟ್ಟೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೆಳೆಗಾರರ ಮನಸ್ಥಿತಿಯನ್ನು ಅರ್ಥೈಸಿ ಅದಕ್ಕನುಗುಣವಾಗಿ ಬೇಡಿಕೆಯನ್ನು ಇಡುವುದು. ಯಾವುದಾದರೂ ಗೊಂದಲ ವಾತಾವರಣದಲ್ಲಿ ಸೃಷ್ಟಿ ಆದಾಗ ಇನ್ನು ಧಾರಣೆ ಏರಿಕೆಗೆ ಅವಕಾಶ ಕಡಿಮೆ, ಸಾಧ್ಯವಾದಷ್ಟು ಬೇಗ ಅಡಿಕೆಯನ್ನು ಮಾರಾಟ ಮಾಡಲು ಒತ್ತಡ ಹೇರುವುದು. ಉದಾಹರಣೆಗೆ ಪ್ರಾಕೃತಿಕ ವಿಕೋಪ ಆದಾಗ,ನೀತಿ ನಿಯಮಗಳಲ್ಲಿ ಬದಲಾವಣೆ ಆದಾಗ ಅಡಿಕೆ ಮೇಲೆ ತೋಗು ಕತ್ತಿ ಬಂದಾಗ ಇತ್ಯಾದಿ. ವಾಸ್ತವವಾಗಿ ಇವಾವುದೂ ಪ್ರಭಲ ಪರಿಣಾಮ ಬೀರುವುದಿಲ್ಲ. ಇದೇ ರೀತಿ ಆಮದಾಗಬಹುದು ಆಮದಾಗಿದೆ ಇತ್ಯಾದಿ ವಿಚಾರಗಳು.
ಸ್ಪೆಕುಲೆಟಿವ್ : ಇಲ್ಲಿ ಊಹೆಗಳು ಮಾರುಕಟ್ಟೆಯನ್ನು ಏರು ಪೇರು ಮಾಡುತ್ತವೆ. ಪೂರೈಕೆ ಮತ್ತು ಬೇಡಿಕೆ ಬಗ್ಗೆ ಸರಿಯಾದ ಮಾಹಿತಿಗಳು ಇಲ್ಲದೆ ಕೇವಲ ಊಹೆಗಳ ಆಧಾರದಲ್ಲಿ ಧಾರಣೆ ಆತಂತ್ರಗೊಳ್ಳುವುದು. ಉದಾಹರಣೆಗೆ ಸ್ಟಾಕ್ ಇರುವ ಮಾಲು ಖಾಲಿ ಆಗದೆ ಇದ್ದಾಗ ಬೇಡಿಕೆ ಮತ್ತು ಪೂರೈಕೆ ಏರು ಪೇರು ಆಗಿ ದಾರಣೆಯು ಅದೇ ದಾರಿ ಹಿಡಿಯುತ್ತದೆ.
ಸೆಂಟಿಮೆಂಟ್ : ಇದು ಬೆಳೆಗಾರರ ಭಾವನೆಗಳ ಮೇಲೆ ಆಗುವಂತಹ ತಂತ್ರ. ಇಲ್ಲಿ ವ್ಯವಹಾರ ಮಾಡುವವರು ಬೆಳೆಗಾರರೊಂದಿಗೆ ಆತ್ಮೀಯ ಸಂಬಂಧ ಇಟ್ಟುಕೊಂಡು ಅವರ ಆಗು ಹೋಗುಗಳ ಬಗ್ಗೆ ತಿಳಿದುಕೊಂಡು ಅವಕಾಶ ಬಳಸಿಕೊಂಡು ಧಾರಣೆಯಲ್ಲಿ ಏರು ಪೇರು ಮಾಡುವುದು.ಇದರೊಂದಿಗೆ ಹೆಚ್ಚು ಧಾರಣೆಯ ಆಸೆ ತೋರಿಸಿ ಹಣದ ಪಾವತಿ ಸರಿಯಾಗಿ ಮಾಡದೆ ಕೊನೆಗೆ ಹಣ ಕೊಡದೆ ಇರುವುದು.
ಮೇಲೆ ತಿಳಿಸಿದ ಹಲವು ಸಿದ್ಧಾಂತಗಳು ಬಹು ಪಾಲು ಎಲ್ಲಾ ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಸರ್ವೇ ಸಾಮಾನ್ಯ.ಇದರಿಂದಾಗಿ ಕೃಷಿಕರು ಸೋಲನ್ನು ಅನುಭವಿಸುತ್ತಾರೆ. ಈ ರೀತಿಯ ಸೋಲನ್ನು ತಪ್ಪಿಸಲು ಅಡಿಕೆ ಕ್ಷೇತ್ರಕ್ಕೆ ಇಂದು ಉತ್ಪಾದನೆ ಪೂರೈಕೆ ಬೇಡಿಕೆ ಮಾರುಕಟ್ಟೆಯ ಸ್ಥಿತಿ ಗತಿ ಇತ್ಯಾದಿಗಳ ಮಾಹಿತಿ ಅತ್ಯಗತ್ಯ. ಇವನ್ನು ಕಾಲಕಾಲಕ್ಕೆ ಒದಗಿಸಲು ಕ್ಷೇತ್ರಕ್ಕೊಬ್ಬ ವಕ್ತಾರ ಅನಿವಾರ್ಯ.ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ಬಲವಾದ ಸಂಘಟನೆ ಮೂಲಕ ಆಗಲೇ ಬೇಕು. ನಮ್ಮಲ್ಲಿ ಇಂದು ಅಡಿಕೆ ಮಾರುಕಟ್ಟೆಯಲ್ಲಿ ಕ್ಯಾಂಪ್ಕೊ ಇರುವ ಕಾರಣ ಮೇಲೆ ಹೆಸರಿಸಿದ ಸಿದ್ಧಾಂತಗಳು ಅತಿರೇಕಕ್ಕೆ ತಲಪಿಲ್ಲ. ಈ ಸಂಸ್ಥೆ ಒಂದಿಗೆ ನಮ್ಮದಾದ ಪ್ರಭಲ ಸಂಘಟನೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರು ನೆಮ್ಮದಿ ಕಂಡುಕೊಳ್ಳಬಹುದು.
ಡಾ|ವಿಘ್ನಶ್ವರ ಭಟ್ ವರ್ಮುಡಿ ಅವರು ಕೃಷಿಕರು. ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದವರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯದ ಪೆರ್ಲದ ನಲಂದಾ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಂಶೋಧನಾ ಬರಹಗಳು ಪ್ರಕಟವಾಗಿದೆ. ಅಡಿಕೆ ಮಾರುಕಟ್ಟೆ ಬಗ್ಗೆ ಅಧಿಕೃತವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ.