ಕ್ಯಾಂಪ್ಕೊಗೆ ಸಂಸದ ಬ್ರಿಜೇಶ್ ಚೌಟ ಭೇಟಿ, ಅಡಿಕೆ ಸಮಸ್ಯೆಗಳ ಕುರಿತು ಚರ್ಚೆ

February 19, 2026
6:52 AM
ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ಸಂಸದ ಬ್ರಿಜೇಶ್ ಚೌಟರೊಂದಿಗೆ ಅಡಿಕೆ ಬೆಳೆಗಾರರ ಸಮಸ್ಯೆಗಳು, ಎಲೆ ಚುಕ್ಕಿ ರೋಗ, WHO ವರದಿ ಹಾಗೂ ಸಂಶೋಧನೆ ಕುರಿತ ಚರ್ಚೆ ನಡೆಯಿತು.

ಲೋಕಸಭಾ ಸದಸ್ಯರಾದ ಬ್ರಿಜೇಶ್ ಚೌಟ ಅವರು ಪುತ್ತೂರಿನ ದರ್ಬೆಯಲ್ಲಿರುವ ಕ್ಯಾಂಪ್ಕೋ (CAMPCO) ಚಾಕಲೇಟ್ ಫ್ಯಾಕ್ಟರಿಯನ್ನು ಭೇಟಿ ನೀಡಿ, ನೂತನವಾಗಿ ಆಯ್ಕೆಯಾದ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರು ಮತ್ತು ನಿರ್ದೇಶಕರೊಂದಿಗೆ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಮಾತುಕತೆ ನಡೆಸಿದರು.

Advertisement

ಕ್ಯಾಂಪ್ಕೊ ಅಧ್ಯಕ್ಷರಾದ ಎಸ್.ಆರ್. ಸತೀಶ್ ಚಂದ್ರ ಅವರು ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕಿ ರೋಗ, ಹಳದಿ ರೋಗ ಹಾಗೂ ಕಾಳು ಮೆಣಸಿನ ಸೊರಗು ರೋಗಗಳಿಂದ ಅಡಿಕೆ ಮತ್ತು ಸಂಬಂಧಿತ ಬೆಳೆಗಳಲ್ಲಿ ಸುಮಾರು ಶೇಕಡಾ 40 ರಷ್ಟು ನಷ್ಟವಾಗಿರುವುದನ್ನು ಸಂಸದರಿಗೆ ವಿವರಿಸಿದರು. ಈ ಪರಿಸ್ಥಿತಿಯ ನಡುವೆ ವಿಶ್ವ ಆರೋಗ್ಯ ಸಂಸ್ಥೆ (WHO) ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂದು ಸುಳ್ಳು ಆರೋಪ ಮಾಡುತ್ತಿರುವ ಸಂಗತಿಯೂ ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿರುವುದಾಗಿ ಅವರು ತಿಳಿಸಿದರು.

ಅಲ್ಲದೆ, ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎಂಬುದನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲು ಕ್ಯಾಂಪ್ಕೊ ಸಂಸ್ಥೆ ಕೈಗೊಂಡಿರುವ ವಿವಿಧ ಪ್ರಯತ್ನಗಳು, ಸಂಶೋಧನೆಗೆ ನೀಡುತ್ತಿರುವ ಪ್ರೋತ್ಸಾಹ ಮತ್ತು ಜಾಗೃತಿ ಕಾರ್ಯಕ್ರಮಗಳ ಕುರಿತು  ಸಂಸದರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಿರ್ದೇಶಕ ವಿಶ್ವನಾಥ್ ಹೆಗಡೆ ಕೂಜಳ್ಳಿ ಅವರು ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯು ಅಡಿಕೆಯಲ್ಲಿ ಇರುವ ಅರೆಕೋಲಿನ್ (Arecoline) ಎಂಬ ಒಂದು ಅಂಶವನ್ನು ಗ್ರೂಪ್ 2B ವಿಭಾಗದಲ್ಲಿ ಸೇರಿಸಿರುವುದಾಗಿ ತಿಳಿಸಿದರು. ಆದರೆ ಸಂಪೂರ್ಣ ಅಡಿಕೆಯನ್ನು  ಗ್ರೂಪ್ A ವಿಭಾಗದಲ್ಲಿ ಸೇರಿಸಿರುವುದನ್ನು ಮರುಪರಿಶೀಲಿಸಿ, ಗ್ರೂಪ್ 2B ವಿಭಾಗದಲ್ಲಿ ಮಾತ್ರ ಇರಿಸುವಂತೆ ಪರಿಗಣಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಅಡಿಕೆಯಲ್ಲಿ ಪಾಲಿಫಿನಾಲ್, ಪಾಲಿಸ್ಯಾಕ್ರೈಡ್, ಫೈಬರ್, ಫ್ಯಾಟಿ ಆಸಿಡ್ ಮುಂತಾದ ಆರೋಗ್ಯಕರ ಮತ್ತು ಔಷಧೀಯ ಗುಣಗಳನ್ನು ಹೊಂದಿರುವ ಅನೇಕ ಬಯೋ-ಆಕ್ಟಿವ್ ಘಟಕಗಳಿವೆ. ಪಾರಂಪರಿಕವಾಗಿ ಅಡಿಕೆಯನ್ನು ಔಷಧೀಯವಾಗಿ ಬಳಸಿಕೊಂಡು ಬಂದಿರುವುದನ್ನೂ ಅವರು ಉಲ್ಲೇಖಿಸಿದರು. ಅಡಿಕೆಯಲ್ಲಿರುವ ಇತರ ಔಷಧೀಯ ಗುಣಗಳ ಕುರಿತಾಗಿ ಆಧುನಿಕ ಸಂಶೋಧನೆ ಇನ್ನಷ್ಟು ಅಗತ್ಯವಿದೆ ಎಂದು ತಿಳಿಸಿದರು.

ಈ ಕುರಿತು ಶಿರಸಿಯ ಬಿಎಲ್‌ಆರ್‌ಎಫ್ (BLRF) ಸಂಶೋಧನಾ ಪ್ರಯೋಗಶಾಲೆಯ ತಜ್ಞರಾದ ವಿನಯ್ ಕುಮಾರ್ ಹೆಗಡೆ ಮತ್ತು ಡಾ. ಕೇಶವ್ ಹೆಚ್. ಕೂರ್ಸೆ ಅವರು ನಡೆಸುತ್ತಿರುವ ಸಂಶೋಧನಾ ಪ್ರಯತ್ನಗಳ ಕುರಿತು ಮಾಹಿತಿ ವಿನಿಮಯ ನಡೆಯಿತು. ಅಡಿಕೆ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡಲು ವೈಜ್ಞಾನಿಕ ಆಧಾರಿತ ಅಧ್ಯಯನ ಮತ್ತು ಜಾಗೃತಿ ಅಗತ್ಯವಿದೆ ಎಂದು ಸಭೆಯಲ್ಲಿ ಒತ್ತಿ ಹೇಳಲಾಯಿತು.

ಸಂಸದ ಬ್ರಿಜೇಶ್ ಚೌಟ ಅವರು ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸಹಕರಿಸುವ ಭರವಸೆ ನೀಡಿದರು. ಈ ಸಂದರ್ಭ ಸಂಸ್ಥೆಯ ಮಾಜಿ ಅಧ್ಯಕ್ಷ ಎಸ್‌ ಆರ್‌ ರಂಗಮೂರ್ತಿ,  ಉಪಾಧ್ಯಕ್ಷ ಪದ್ಮರಾಜ ಪಟ್ಟಾಜೆ, ಕ್ಯಾಂಪ್ಕೊ ಆಡಳಿತ ನಿರ್ದೇಶಕ ಡಾ.ಸತ್ಯನಾರಾಯಣ, ನಿರ್ದೇಶಕರುಗಳಾದ ಪುರುಷೋತ್ತಮ ಭಟ್‌, ಮುರಳಿಕೃಷ್ಣ ಕೆ ಎನ್‌ , ಮಹೇಶ್‌ ಚೌಟ, ಸತೀಶ್ಚಂದ್ರ ಭಂಡಾರಿ, ವೆಂಕಟ್ರಮಣ ಭಟ್‌, ದಯಾನಂದ ಹೆಗ್ಡೆ ಮತ್ತಿತರರು ಇದ್ದರು.


Dakshina Kannada MP Brijesh Chowta visited CAMPCO Chocolate Factory in Puttur on February 17, 2026, and held discussions with CAMPCO leadership regarding areca farmers’ challenges. Issues such as leaf spot disease, yellow disease, crop losses up to 40%, and WHO classification concerns were discussed. CAMPCO highlighted ongoing research efforts to scientifically address health-related claims and support farmers.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬೆಂಗಳೂರು ಕಸ ವಿಲೇವಾರಿ ತಡೆದರೆ ಕಠಿಣ ಕ್ರಮ : ಎಸ್ಮಾ ಕಾಯ್ದೆ ಜಾರಿ ಎಚ್ಚರಿಕೆ
February 19, 2026
7:55 AM
by: ಮಿರರ್‌ ಡೆಸ್ಕ್
ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ – WHOಗೆ ಅಧಿಕೃತ ಮನವಿ ಮಾಡಿದ ಉತ್ತರ ಕನ್ನಡ ಸಂಸದ
February 19, 2026
7:00 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 18-02-2026 | ಕರ್ನಾಟಕದಲ್ಲಿ ಬಿಸಿಲಿನ ನಡುವೆ ತುಂತುರು ಮಳೆ ಸಾಧ್ಯತೆ
February 18, 2026
10:36 PM
by: ಸಾಯಿಶೇಖರ್ ಕರಿಕಳ
ಅಡಿಕೆ ವೈಜ್ಞಾನಿಕ ವಿಶ್ಲೇಷಣೆಯ ಪುಸ್ತಕ “ARECANUT” ಬಿಡುಗಡೆ
February 18, 2026
10:28 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror