ಕೃಷಿ ಕ್ಷೇತ್ರೋತ್ಸವ | ಅಡಿಕೆ ಬೆಳೆ ನಿರ್ವಹಣಾ ಸಂವಾದ | ಬದಲಾಗುತ್ತಿರುವ ಕೃಷಿ ಪದ್ಧತಿಯ ಸೂಚನೆ |

February 5, 2022
11:14 PM

ವಾಸು ಪೂಜಾರಿಯವರ ತೋಟದಲ್ಲಿ ಸಿಪಿಸಿಆರ್‌ ಐ ವತಿಯಿಂದ ನಡೆದ ಅಡಿಕೆ ಬೆಳೆ ನಿರ್ವಹಣಾ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೃಷಿಕರಲ್ಲಿ ನಾನೂ ಒಬ್ಬ. ವಾಸು ಅಣ್ಣನ ಅಡಿಕೆ ತೋಟ ಮತ್ತು ಕಾಳುಮೆಣಸಿನ ನಿರ್ವಹಣಾ ಕ್ರಮ ಎಂಥವರನ್ನೂ ಮನಸೂರೆಗೊಳ್ಳುವಂತೆ ಇದೆ. ಇಡೀ ಕಾರ್ಯಕ್ರಮದ ಬಳಿಕ ಅವಲೋಕನ ಮಾಡಿದಾಗ ಕೃಷಿ ಪದ್ದತಿ ಬದಲಾಗುತ್ತಿರುವುದು  ಕಂಡು ಪುಳಕವಾಯಿತು.

Advertisement
Advertisement

ಉದ್ಘಾಟನಾ ಕಾರ್ಯಕ್ರಮಕ್ಕೆ ಭಾಗವಹಿಸಬೇಕೆಂದು ತುಡಿತದಲ್ಲಿ ಇದ್ದೆ,ಆದರೆ ಅನಿವಾರ್ಯ ಕಾರಣದಿಂದ ತಲುಪುವಾಗ 11:30 ಆಯ್ತು. ಹಾಗಾಗಿ ನೇರವಾಗಿ ಡಾ ಭವಿಷ್ಯ ಅವರ ಪಾಠದ ಮಾತುಗಳೇ ನನಗೆ ಮೊದಲಾಗಿ ಸಿಕ್ಕಿತು. ಅವರ ವಿವರಣಾ ಕ್ರಮಕ್ಕೆ ಎರಡು ಮಾತಿಲ್ಲ .ವಿವರಣೆಗಳ ಮಧ್ಯದಲ್ಲಿ ಬಂದ ಒಂದು ಮಾತು, ಯಾವ ಕಾರಣಕ್ಕೂ ಹುಲ್ಲನ್ನು ಕಳೆಯೆಂದು ತಿಳಿಯದಿರಿ.ಅದು ಕ್ರಾಂತಿ.ಹುಲ್ಲು ಮಾಡುವ ಕೆಲಸ ಹುಲ್ಲಿನಿಂದಲೇ ನಡೆಯಬೇಕಷ್ಟೆ ವಿನಃ ಬೇರೆ ಇನ್ನು ಯಾವುದೇ ಬದಲಿ ವ್ಯವಸ್ಥೆ ಇಲ್ಲ. ನಮ್ಮ ಮನೆಯಲ್ಲಿಯೇ ನನ್ನ ಅಪ್ಪ ರೌಂಡಪ್ ಬಿಟ್ಟು ಆದ ದೋಷದ ಪರಿಣಾಮದಿಂದ ಈ ಮಾತನ್ನು ಹೇಳುತ್ತಿದ್ದೇನೆ ಎಂದರು. ಕೀಟ-ರೋಗ ಬಾಧೆ ಗಳ ನಿರ್ವಹಣೆಯ ಬಗ್ಗೆ ವಿಜ್ಞಾನಿ ರಾಜಕುಮಾರ್ ಅವರು ಚೆನ್ನಾಗಿ ವಿವರಿಸಿದರು. ಸಾಧ್ಯವಾದಷ್ಟು ರಾಸಾಯನಿಕಗಳನ್ನು ಬಳಸಬೇಡಿ ಅನಿವಾರ್ಯ ಆದರೆ ಮಾತ್ರ ಬಳಸಿ ಅಂದರು. ರಾಸಾಯನಿಕಗಳು ಪ್ರಕೃತಿಗೆ ಮಾರಕ ಎಂಬುದನ್ನು ಒತ್ತಿ ಒತ್ತಿ ತಿಳಿಸಿದರು.

ಸುರೇಶಚಂದ್ರರ ವಿವರಣ ಸಾಮರ್ಥ್ಯ ವಂತೂ ಅದ್ಭುತ. ಯುದ್ಧೋತ್ಸಾಹದಲ್ಲಿ ಕೆಲಸ ಮಾಡಿ ಹಾಗಾದರೆ ಮುಂದಿನ ಜೀವನದ ನೆಮ್ಮದಿಗೆ ಪೂರಕ ಎಂಬುದನ್ನು ತನ್ನ ಕಾಳುಮೆಣಸು ಮತ್ತು ಜಾಯಿಕಾಯಿ ಕೃಷಿಯ ಬಗ್ಗೆ ಅತ್ಯುತ್ತಮವಾಗಿ ವಿವರಿಸಿದರು. ಅವರು ಕಂಡ ಹೊಸ ತಳಿಯು ಏಪ್ರಿಲಿನಲ್ಲಿಯೇ ಹಣ್ಣಾಗಲು ಸುರುವಾಗುವ ಕಾರಣ ಮಳೆಗಾಲದ ಆರಂಭದಲ್ಲಿಯೇ ಹೆಚ್ಚಿನ ಫಸಲು ಒಣಗಿ ಸಿಗುವುದು ತುಂಬಾ ಲಾಭಕರ ಎಂಬ ಹೊಸ ವಿಷಯ ನನಗೆ ಸಿಕ್ಕಿತು.

ವಿಷ್ಣುಭಟ್ಟರ ಸ್ವತಹ ಮದ್ದು ಬಿಡುವುದರಿಂದ ಹಿಡಿದು ತಾನು ಮಾಡುವ ಕೆಲಸದ ಬಗೆಗಿನ ಸ್ವಸಾಮರ್ಥ್ಯವನ್ನು ವಿವರಿಸುವುದರ ಒಂದಿಗೆ ವಿಜ್ಞಾನಿಗಳ ಮಾತಿನಂತೆ ನಡೆದುದರ ಪರಿಣಾಮ ತನ್ನ ಅಡಿಕೆ ಕೃಷಿ ಇಂದು ಚೆನ್ನಾಗಿ ಉಳಿಯಿತು ಎಂಬ ಮಾಹಿತಿಯನ್ನು ಕೊಟ್ಟರು. ಔಷಧಿ ಹೊಡೆದುದರ ಪರಿಣಾಮವಾಗಿ ತನ್ನ ಎಂಟು ಜೇನು ಪೆಟ್ಟಿಗೆಗಳು ಮಟಾಶ್ ಆಯಿತು ಎಂದು ಹೇಳುವಾಗ ಮೊದಲೇ ಹಸಿದಿದ್ದ ನನ್ನ ಹೊಟ್ಟೆ ಮತ್ತಷ್ಟು ನೋವಿನಿಂದ ಚುರುಗುಟ್ಟಿತು. ಆ ನಂತರದಲ್ಲಿ ತಾನು ವಿಷವನ್ನು ಪ್ರಯೋಗಿಸಲಿಲ್ಲ ಎಂಬುದನ್ನು ಒತ್ತಿ ಹೇಳಿದರು.

40 ವರುಷದ ಹಿಂದೆ ಸಾವಯವದ ರೈತರಿಗೆ ರಾಸಾಯನಿಕಗಳನ್ನು ಬಳಸಲು ಪ್ರೇರೇಪಿಸಿದಂತೆ, ಮತ್ತೆ ಇಂದು ರಾಸಾಯನಿಕಗಳನ್ನು ಕಡಿಮೆ ಮಾಡಿ ಸಾವಯವ ವಸ್ತುಗಳ ಬಗ್ಗೆ ಹೆಚ್ಚಿನ ಗಮನವನ್ನು ವಿಜ್ಞಾನಿಗಳು ನೀಡುತ್ತಿರುವುದನ್ನು ನಾನು ಕಂಡೆ. ಬೋರೋನ್ ಕೊರತೆಯಿಂದ ಆಗುವ ಸೋಗೆ ಗಿಡ್ಡ ಮರಗಳು ರಾಸಾಯನಿಕವನ್ನು ಹೆಚ್ಚಾಗಿ ಬಳಸುವ ತೋಟಗಳಲ್ಲಿ ಪ್ರತಿಶತ 30ರಷ್ಟು ಇರುತ್ತವೆ ಎಂಬ ಮಾಹಿತಿ ನನಗಿರಲಿಲ್ಲ. ಶಂಖದಿಂದ ಬಂದುದೇ ತೀರ್ಥವಾಗುವ ಕಾರಣ ಶಂಖ ತೀರ್ಥ ಅಲ್ಲಲ್ಲಿ ಆಗಾಗ ಇಂತಹ ಗೋಷ್ಠಿಗಳ ಮೂಲಕ ಉದ್ಭವ ಆಗಲಿ ಎಂದು ಹಾರೈಸುತ್ತೇನೆ.

ನಾನು ಗಮನಿಸಿದಂತೆ, ಒಂದು ತಲೆಮಾರು ಆಧುನಿಕ ಕೃಷಿಗೆ ಪಾದಾರ್ಪಣೆ ಮಾಡಿ ಇನ್ನೊಂದು ತಲೆಮಾರು ಅದರ ಉತ್ತುಂಗದಲ್ಲಿಇದೆ. ಈ ಮಧ್ಯದಲ್ಲಿ ಕೃಷಿಯೂ ಅನೇಕ ಮಾರ್ಪಾಡುಗಳನ್ನು ಏಳುಬೀಳುಗಳನ್ನೂ ಕಂಡಿದೆ. ಅದೇ ಹೊತ್ತಿನಲ್ಲಿ ಆಧುನಿಕ ಕೃಷಿಯನ್ನು ರಾಸಾಯನಿಕಗಳನ್ನು ಬೋಧಿಸಿದ ವಿಜ್ಞಾನಿಗಳ ತಂಡ ಕೂಡ ನಿರ್ಗಮಿಸಿದೆ. ಯುವ ವಿಜ್ಞಾನಿಗಳ ತಂಡ ಆಧುನಿಕದ ಭೀಕರತೆಯನ್ನು ಗಮನಿಸಿ ಸಾಧ್ಯವಾದಷ್ಟು ಸಹಜತೆಯ ಕಡೆಗೆ ಒಲವು ತೋರಿಸುವಂತೆ ಕಂಡಿತು. ಎಷ್ಟೋ ರಾಸಾಯನಿಕಗಳು ವಿದೇಶಗಳಿಂದ ಬರಬೇಕಾಗುತ್ತದೆಯಂತೆ. ರಾಜಕೀಯ ವಿಪ್ಲವಗಳು,ವಿದೇಶಿ ಮನಸ್ಥಿತಿ ಗಳಿಂದಾಗಿ ಅವು ಬಾರದೇ ಇದ್ದರೂ ನಮ್ಮ ಕೃಷಿ ಸದೃಢವಾಗಿ ಬೆಳೆಯುವಂತೆ ಇರಲಿ ಎಂದು ತಿಳಿಸಿದರು. ಅವರುಗಳಿಗೆ ಯಶಸ್ಸು ಸಿಗಲಿ ಮತ್ತು ಪ್ರಕೃತಿ ಉಳಿಯಲಿ.

ಕೊರೋನಾ ಕಾರಣದಿಂದ ನಡೆಯದ ಅನೇಕ ಕೃಷಿ ಮಿತ್ರರ ಭೇಟಿ ಈ ಕಾರಣದಿಂದ ಇಂದು ನಡೆಯಿತು.

# ಎ.ಪಿ. ಸದಾಶಿವ. ಮರಿಕೆ.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

ಇದನ್ನೂ ಓದಿ

ಕರಾವಳಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಆಗ್ರಹ | ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಮಗ್ರ ದೃಷ್ಟಿ ಅಗತ್ಯ
February 13, 2026
10:24 AM
by: ದ ರೂರಲ್ ಮಿರರ್.ಕಾಂ
ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!
February 12, 2026
7:47 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ
February 12, 2026
7:04 AM
by: ಮಿರರ್‌ ಡೆಸ್ಕ್
ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ
February 12, 2026
6:54 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror