ರೈತರಿಗೆ ಅಧಿಕ ಇಳುವರಿ ಹಾಗೂ ಮಧುಮೇಹಿಗಳಿಗೆ ಸಕ್ಕರೆ ಅಂಶ ಕಡಿಮೆ ಇರುವ ಭತ್ತದ ಹೊಸ ತಳಿಯಾದ ಕೆಂಪು ಭತ್ತವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯವು ‘ಸಹ್ಯಾದ್ರಿ ಸಿಂಧೂರ’ ಎಂಬ ನೂತನ ಕೆಂಪು ಸಣ್ಣ ಭತ್ತವನ್ನು ಪರಿಚಯಿಸಿಕೊಟ್ಟಿದೆ.
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕೃಷಿ ಮೇಳದಲ್ಲಿ ಸಹ್ಯಾದ್ರಿ ಸಿಂಧೂರ ತಳಿಯ ಭತ್ತವನ್ನು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಬಿಡುಗಡೆಗೊಳಿಸಿದ್ದಾರೆ. ಈಗಾಗಲೇ ಅನೇಕ ಕೆಂಪು ತಳಿಯ ಭತ್ತಗಳಿವೆ. ಆದರೆ, ಈ ಸಹ್ಯಾದ್ರಿ ಸಿಂಧೂರ ತಳಿಯ ಅಕ್ಕಿಯು ಇತರ ಕೆಂಪು ತಳಿಯ ಭತ್ತಕ್ಕಿಂತ ವಿಭಿನ್ನವಾಗಿದೆ. ಇದು ಸಣ್ಣ ಕೆಂಪು ಭತ್ತವಾಗಿದ್ದು, ಇದನ್ನು ಎಲ್ಲರೂ ಸಹ ಊಟಕ್ಕೆ ಬಳಸಬಹುದು.
ಈ ಭತ್ತವನ್ನು ರಾಜ್ಯಾದ್ಯಂತ 40 ಕೇಂದ್ರಗಳಲ್ಲಿ ಪ್ರಯೋಗಿಸಲಾಗಿದ್ದು, ಅತ್ಯಂತ ಯಶಸ್ವಿಯಾಗಿ ಇಳುವರಿ ಬಂದಿದೆ. ಇದು ಒಂದು ಹೆಕ್ಟೇರ್ಗೆ 55 ಕ್ವಿಂಟಾಲ್ ಬರುತ್ತದೆ. ಮಲೆನಾಡಿನಲ್ಲಿ ಒಂದು ಹೆಕ್ಟೇರ್ ಗೆ 22 ಕ್ವಿಂಟಾಲ್ ಇಳುವರಿ ಸಿಗುತ್ತದೆ.ಇದರ ಇನ್ನೊಂದು ವಿಶೇಷತೆಯೆಂದರೆ,ಇದು 120 ದಿನದಲ್ಲೇ ಕಟಾವಿಗೆ ಬರುತ್ತದೆ. ಅಲ್ಲದೆ, ಎರಡು ಬೆಳೆಗಳಾಗಿ ಬೆಳೆಯಬಹುದು. ಇದಕ್ಕೆ ಯಾವುದೇ ರೋಗಭಾಧೆಯು ಬಹುಬೇಗ ತಗಲುವುದಿಲ್ಲ. ಇದರಲ್ಲಿ ಕೀಟವೂ ಇರುವುದಿಲ್ಲ. ಪ್ರೋಟೀನ್, ಐರನ್ ಜಿಂಕ್ ಅಂಶವನ್ನು ಹೆಚ್ಚಾಗಿ ಹೊಂದಿದೆ.




