MIRROR FOCUS

ಗಾಳಿಗೆ ಬಿದ್ದ ಮಾವಿನಮರ 100 ಕ್ಕೂ ಮಿಕ್ಕಿದ ಕೃಷಿಕರ ಮನೆಗೆ ಗಿಡವಾಗಿ ತಲಪಿತು…! | ತಳಿ ಸಂರಕ್ಷಣೆಯ “ಸಮೃದ್ಧ” ಕಾರ್ಯಕ್ರಮ ಇದು |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅತ್ಯಂತ ಉತ್ಕೃಷ್ಟ ಜಾತಿಯ ಕಾಡು ಮಾವಿನ ಮರ ಗಾಳಿಗೆ ಬಿದ್ದಿತು. ತಕ್ಷಣವೇ ಜಾಗೃತವಾದ ಸಂಘವೊಂದು, ತಂಡವೊಂದು ಗಿಡವನ್ನು ಉಳಿಸುವ ಪ್ರಯತ್ನ ಮಾಡಿದರು. ನೂರಕ್ಕೂ ಹೆಚ್ಚು ಮನೆಗಳಿಗೆ ಕಸಿ ಗಿಡವಾಗಿ ತಲಪಿಸುವ ಕೆಲಸ ನಡೆಯಿತು.ಇಂತಹದ್ದೊಂದು “ಸಮೃದ್ಧ” ಕೆಲಸ ನಡೆದದ್ದು ಪುತ್ತೂರಿನಲ್ಲಿ. …………ಮುಂದೆ ಓದಿ……..

Advertisement

ಪುತ್ತೂರಿನಲ್ಲಿ ಸಮೃದ್ಧಿ ಗಿಡಗೆಳತನ ಸಂಘ ಇದೆ. ಕಳೆದ ಹಲವು ವರ್ಷಗಳಿಂದ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಪ್ರತೀ ತಿಂಗಳು ಕೃಷಿ ಸಂಬಂಧಿತ ಸಭೆ, ಪ್ರವಾಸವನ್ನು ಹಮ್ಮಿಕೊಳ್ಳುತ್ತಿದೆ. ನಿಗದಿಯಾದಂತೆ ಬುಧವಾರದಂದು ಕಸಿ ಕಟ್ಟುವ ಬಗ್ಗೆ ತರಬೇತಿ ಹಾಗೂ ತರಕಾರಿ ಕೃಷಿಯ ಬಗ್ಗೆ ಸಭೆ ಆಯೋಜನೆಯಾಗಿತ್ತು. ಕೃಷಿಕ, ನಿವೃತ್ತ ವಿಜ್ಞಾನಿ ಡಾ.ಯದುಕುಮಾರ್‌ ಅವರ ನರ್ಸರಿಯಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು. 1993 ರಲ್ಲಿ ಆರಂಭಗೊಂಡ ಸಮೃದ್ಧಿ ಗಿಡಗೆಳೆತನ ಸಂಘವನ್ನು ಹಲವಾರು ಪ್ರಮುಖರು ಮುನ್ನಡೆಸಿದ್ದರು, ಕೃಷಿ, ತರಕಾರಿ ಬೀಜಗಳ ವಿನಿಮಯ, ವಿನೂತನ ಕೃಷಿಯ ಪರಿಚಯ ಹೀಗೇ ಸಂಘವು ಬೆಳೆದಿದೆ. ಈಗಲೂ ಅದೇ ಕಾರ್ಯವನ್ನು ಮುನ್ನಡೆಸಲಾಗುತ್ತಿದೆ.

ಶಿವಪ್ರಸಾದ್‌ ವರ್ಮುಡಿ ಅವರಿಂದ ಮಾಹಿತಿ

ಪುತ್ತೂರಿನಲ್ಲಿ ಬುಧವಾರ ಕಾರ್ಯಕ್ರಮ ನಿಗದಿಯಾದ ಬಳಿಕ ಸೇಡಿಯಾಪು ಕೃಷಿಕ ಹೃಷಿಕೇಶ ಎಂಬವರ ಮನೆಯಲ್ಲಿದ್ದ ಸುಮಾರು 100 ವರ್ಷ ಹಳೆಯ ಮಾವಿನ ಮರವೊಂದು ಗಾಳಿಗೆ ಉರುಳಿ ಬಿತ್ತು. ಈ ಮರವು ಉತ್ಕೃಷ್ಟ ಜಾತಿಯದ್ದಾಗಿದ್ದು ಅಪ್ಪೆ ಮಿಡಿಯ ಮಾದರಿಯದ್ದಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ನಾಮಾಮಿ ಬಳಗದ ಜಯರಾಮ ಮುಂಡೋಳಿಮೂಲೆ ಹಾಗೂ ಅವರ ತಂಡವು ಕೃಷಿಕರ ಮನೆಗೆ ತೆರಳಿ ಕಸಿ ಮಾಡಿ ಗಿಡ ಉಳಿಸಲು ಸಯಾನ್‌ ತೆಗೆಯುವ ಕಾರ್ಯ ಮಾಡಿತು. ಸಮೃದ್ಧಿಯ ಅಧ್ಯಕ್ಷ ನಿರಂಜನ ಪೋಳ್ಯ ಅವರೂ ಜೊತೆಯಾದರು. ಸುಮಾರು 200 ಕ್ಕೂ ಅಧಿಕ ಸಯಾನ್‌ ಸಂಗ್ರಹಿಸಿದರು.

ಸೇಡಿಯಾಪಿನಲ್ಲಿ ಬಿದ್ದಿರುವ ಮಾವಿನ ಮರ

ಬುಧವಾರದ ಕಾರ್ಯಕ್ರಮದಲ್ಲಿ ಕಸಿಕಟ್ಟುವ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆಯನ್ನು ನಾಮಾಮಿ ತಂಡದ ಶ್ಯಾಮ ಭಟ್‌ ಗೊರಗೋಡಿ ಹಾಗೂ ಜಯರಾಮ ಮುಂಡೋಳಿಮೂಲೆ, ಕೆ ಪಿ ಜಗದೀಶ, ಶ್ರೀಶ ಕುಮಾರ್ ಹಾಗೂ ಪರಮಲೆ ಜಗದೀಶ ಅವರು ನೆರವೇರಿಸಿದರು. ಆ ಬಳಿಕ ಸೇಡಿಯಾಪು ಕೃಷಿಕ ಹೃಷಿಕೇಶ ಅವರ ಮನೆಯ ಮಾವಿನ ಮರದ ಸಯಾನ್‌ ಅನ್ನು ಕಸಿ ಮಾಡಿ ಆಗಮಿಸಿದ ಎಲ್ಲರಿಗೂ ನೀಡಲಾಗಿತ್ತು. ಕಾರ್ಯಕ್ರಮಕ್ಕೆ ಸುಮಾರು 120 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಹೀಗಾಗಿ ಕಸಿ ಕಟ್ಟಿ ನೀಡಿರುವ ಗಿಡದಲ್ಲಿ ಕನಿಷ್ಟ 60 ಗಿಡವಾದರೂ ಉಳಿಯಬಹುದಾಗಿದೆ. ಈ ಮೂಲಕ ಒಂದು ಗಿಡದ ರಕ್ಷಣೆ, ತಳಿ ರಕ್ಷಣೆಯನ್ನು ಸಮೃದ್ಧಿಯ ಮೂಲಕ ನಾಮಾಮಿ ತಂಡವೂ ಮಾಡಿದೆ. ಸಮೃದ್ಧಿ ಗಿಡಗೆಳೆತನ ಸಂಘವು ಇಷ್ಟೂ ವರ್ಷಗಳಿಂದ ಇದೇ ಮಾದರಿಯ ಕೆಲಸಗಳನ್ನು ಮಾಡಿದೆ.

ಸಮೃದ್ಧಿ ಕಾರ್ಯಕ್ರಮದಲ್ಲಿ ಕಸಿ ಕಟ್ಟುವ ಬಗ್ಗೆ ಮಾಹಿತಿ
ಕಸಿ ಕಟ್ಟುವ ಬಗ್ಗೆ ತರಬೇತಿ

ಕಾರ್ಯಕ್ರಮದಲ್ಲಿ ತರಕಾರಿ ಕೃಷಿಕ ಬಗ್ಗೆ ಶಿವಪ್ರಸಾದ್‌ ವರ್ಮುಡಿ ಅವರು ಮಾಹಿತಿ ನೀಡಿದರು. ವಿಷ ರಹಿತವಾಗಿ ತರಕಾರಿ ಕೃಷಿ ಹೇಗೆ ಮಾಡಬಹುದು ಎಂಬುದರ ಬಗ್ಗೆ ಹಾಗೂ ಯಾವ ಸಮಯದಲ್ಲಿ ತರಕಾರಿ ಬೀಜ ನಾಟಿ ಮಾಡಬೇಕು, ಇಳುವರಿ ಹೇಗೆ, ವಿಷ ರಹಿತವಾಗಿ ಹೇಗೆ ತರಕಾರಿ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು.

Advertisement

ಸಮೃದ್ಧಿ ಗಿಡಗೆಳೆತನ ಸಂಘವು ಪ್ರಸಿದ್ಧ ಕೃಷಿ ಮಾಸಪತ್ರಿಕೆ ಅಡಿಕೆ ಪತ್ರಿಕೆ ಹುಟ್ಟು ಹಾಕಿರುವ ಸಂಸ್ಥೆ. ಅಡಿಕೆ ಪತ್ರಿಕೆಯು ದೇಸೀ ಬೀಜ ಸಂರಕ್ಷಣೆಯ ಕೆಲಸವನ್ನು ಈ ಹಿಂದೆ ಮಾಡಿತ್ತು, ಈಗಲೂ ಮಾಡುತ್ತಿದೆ. ಇದಕ್ಕಾಗಿಯೇ ಸಮೃದ್ಧಿ ಗಿಡಗೆಳೆತನ ಸಂಘವು ಹುಟ್ಟಿಕೊಂಡಿತು. ತಿಂಗಳಿಗೊಮ್ಮೆ ಸಭೆ ನಡೆಯುತ್ತದೆ, ಗಿಡಗಳ ಬಗ್ಗೆ ವಿಚಾರವಿನಿಮಯ ನಡೆಯುತ್ತದೆ, ಹೊಸ ಗಿಡಗಳ ಬಗ್ಗೆ ಚರ್ಚೆ, ಮಾತುಕತೆ ನಡೆಯುತ್ತದೆ, ಪ್ರವಾಸವೂ ಇರುತ್ತದೆ. ಹೀಗೇ ಪ್ರತೀ ತಿಂಗಳು ಸಭೆ ಸೇರುವ ವೇಳೆ ಬೀಜಗಳ ವಿನಿಮಯ ನಡೆಯುತ್ತದೆ. ತರಕಾರಿ ಬೀಜಗಳ ಸಹಿತ ಉತ್ತಮ , ಹೊಸ ತಳಿಯ ಯಾವುದೇ ಗಿಡಗಳ ಬೀಜಗಳ, ಗಿಡಗಳ ವಿನಿಮಯ ಕೃಷಿಕರ ಒಳಗೆ ನಡೆಯುತ್ತದೆ. ಇದು ಮತ್ತೆ ವಿನಿಮಯ ನಡೆಯುತ್ತಲೇ ಇರಬೇಕು ಎಂಬುದು ಅಲಿಖಿತ ನಿಯಮ. ಈಗಲೂ ಅದೇ ಕೆಲಸ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಬೀಜಗಳ ವಿನಿಮಯ ನಡೆಯುತ್ತದೆ.

ತರಕಾರಿ ಬೀಜಗಳ ವಿನಿಮಯ

ಹಿಂದೆ ಇದೇ ಸಂಘದ ಮೂಲಕ ವೆನಿಲ್ಲಾ ಗಿಡಗಳ ವಿನಿಮಯ, ರಂಬುಟಾನ್‌ ಹಣ್ಣಿನ ಗಿಡಗಳ ಸೇರಿದಂತೆ ಹಲವು ಗಿಡಗಳ ವಿನಿಮಯ ನಡೆದಿತ್ತು. ಆರಂಭದಲ್ಲಿ ವೆನಿಲ್ಲಾ ಗಿಡವನ್ನು ಇದೇ ಸಂಘವು ಪರಿಚಯ ಮಾಡಿಕೊಂಡು ತನ್ನ ಸದಸ್ಯರು ವಿನಿಮಯ ಮಾಡಿಕೊಂಡಿದ್ದು, ರಂಬುಟಾನ್‌ ಗಿಡವೂ ಅದೇ ಮಾದರಿಯಲ್ಲಿ ವಿನಿಮಯ ನಡೆದಿತ್ತು.

ಇದೀಗ ಸಮೃದ್ಧಿಯ ಕಾರ್ಯಕ್ರಮದಲ್ಲಿ ಒಂದು ಅಪೂರ್ವವಾದ ಮಾವಿನ ತಳಿಯ ಸಂರಕ್ಷಣೆಯ ಕಾರ್ಯವೂ ನಡೆಯುವ ಮೂಲಕ “ಸಮೃದ್ಧ” ಕಾರ್ಯಕ್ರಮವಾಯಿತು.

ಬುಧವಾರದ ಕಾರ್ಯಕ್ರಮದ ಬಗ್ಗೆ ಕೃಷಿಕ ಎಪಿ ಸದಾಶಿವ ಅವರು ದಾಖಲಿಸಿದ ಅಭಿಪ್ರಾಯ ಹೀಗಿತ್ತು….

Advertisement
ಸಮೃದ್ಧಿ ಕಾರ್ಯಕ್ರಮದ ಬಗ್ಗೆ ಕೃಷಿಕ ಎ ಪಿ ಸದಾಶಿವ ಅವರ ದಾಖಲಾತಿ ಹೀಗಿತ್ತು...

ಇಂದು ಸಮೃದ್ಧಿ ಸಭೆ. ಪೂರ್ವ ನಿರ್ಧರಿತ ಅಚ್ಚುಕಟ್ಟಾದ ಕಾರ್ಯಕ್ರಮ. ಭರ್ಜರಿ ಮಳೆ ಮಧ್ಯೆಯು ಏನೇನೂ ಕೊರತೆ ಮತ್ತು ಅನಾನುಕೂಲ ಆಗದಂತೆ ನಡೆಸಿದ ವ್ಯವಸ್ಥೆ ಸಂಘಟಿಸಿದವರ ಬೆನ್ನು ತಟ್ಟಬೇಕಾದದ್ದು. ಅತಿಥೇಯತೆಯ ಮೂಲಕ ವ್ಯವಸ್ಥೆಗೆ ಸ್ಥಳಾವಕಾಶದ ಅನುಕೂಲಗಳನ್ನು ಒದಗಿಸಿದ ಸಮೃದ್ಧಿಯ ಸದಸ್ಯರೂ,ಮಿತ್ರರೂ ನಿಜಾಾರ್ಥದ ವಿಜ್ಞಾನಿಕೃಷಿಕರು ಆದ  ಯದುಕುಮಾರರು ಅಭಿನಂದನೀಯರು.

ಸಮೃದ್ಧಿ ಸಂಘಟನೆಯ ಜನಕ ಶ್ರೀ ಪಡ್ರೆಯವರ ಉದ್ಘಾಟನೆ ಮತ್ತು ಶುಭನುಡಿ ಕಾರ್ಯಕ್ರಮಕ್ಕೊಂದು ಮೆರುಗು.

ನಿರಂತರ ತರಕಾರಿಯ ಬಗ್ಗೆ ಬಹಳ ಉತ್ತಮ ಮಾಹಿತಿಯನ್ನು ಇತ್ತವರು ಶಿವಪ್ರಸಾದ್ ವರ್ಮುಡಿಯವರು. ವರ್ಷಕ್ಕೆ ನಾಲ್ಕಾರು ಬಾರಿಯಾದರೂ ವಾಟ್ಸಾಪ್ ಕೃಷಿ ಗುಂಪುಗಳಲ್ಲಿ ಅವರ ತರಕಾರಿ ಬೀಜ ಬಿತ್ತನೆಯ ಕ್ಯಾಲೆಂಡರ್ ಬಾರದಿದ್ದರೆ ಯಾರ ಅಂಗಳದಲ್ಲಿಯೂ ತರಕಾರಿ ಬೀಜ ಮೊಳಿಕೆ ಬಾರದೋ ಎಂಬ ಸಂಶಯ ಹುಟ್ಟುವಷ್ಟು ಪ್ರಚಾರಗಿಟ್ಟಿಸಿದೆ ಮತ್ತು ತರಕಾರಿ ಪ್ರಿಯರಿಗೆ ಹೊಸ ಹುಮ್ಮಸ್ಸನ್ನೂ ಸೃಷ್ಟಿಸಿದೆ. ಬೀಜ ಬಿತ್ತನೆಯ ಮಾದರಿಯಿಂದ ಹಿಡಿದು ಕೀಟ ರೋಗ ಬಾಧೆಗೆ ಅವರೇ ಸ್ವತಃ ಕಂಡುಕೊಂಡ ಸಾವಯವ ಪರಿಹಾರ ಪದ್ಧತಿಗಳು ಅವರದೇ ಭಾಷೆಯಲ್ಲಿ ಹೇಳುದಿದ್ದರೆ ಕೆಣಿಗಳು ವಿಷ ರಹಿತ ಅನ್ನದ ಬಟ್ಟಲಿನ ಬಯಕೆ ಇರುವವರಿಗೆ ಮಾದರಿ. ನನ್ನ ಗಮನಕ್ಕೆ ಬಂದ ಕೆಣಿಗಳಲ್ಲಿ ಕೆಲವು

1) ಹರಿವೇ ಬೀಜ ಬಿತ್ತುವಾಗ ಬೊಂಬಾಯಿ ಸಜ್ಜಿಗೆಯೊಡನೆ ಮಿಶ್ರ ಮಾಡಿ ಬಿತ್ತುವುದು.

2) ಅಲಸಂಡೆ ಬೀಜ ಬಿತ್ತುವಾಗ ಅಕ್ಕಿ ಕಡಿಯೊಂದಿಗೆ ಬಿತ್ತುವುದು.

Advertisement

3) ಅಲಸಂಡೆ ಬಂಬುಚ್ಚಿ ಕಾಟಕ್ಕೆ ಉರಿ ಬರಲು ಮರದಿಂದ ಹಗ್ಗ ಕಟ್ಟುವಾಗ ಬಾಕಿ ಉಳಿದ ಹಗ್ಗಗಳಿಗಿಂತ ತೆಂಗಿನ ನಾರಿನ ಹಗ್ಗ ಶ್ರೇಷ್ಠ.

4) ಬಂಬುಚ್ಚಿ ಮಿತಿಮೀರಿದರೆ ಮುಸ್ಸಂಜೆಯ ಹೊತ್ತಿನ ನುಸಿ ಬ್ಯಾಟ್ ಪ್ರಯೋಗ.

5) ಕೊತ್ತಂಬರಿ ಹಾತೆಗೂ ನುಸಿ ಬ್ಯಾಟ್ ಪ್ರಯೋಗ.

6) ಹಣ್ಣು ಕೊರಕ ನೊಣಕ್ಕೆ ತುಳಸಿ ರಸದ ಬಾಟ್ಲಿ ಕೆಣಿ

7) ದೇಶಿ ದನದ ಮಜ್ಜಿಗೆ, ಕಹಿಬೇವಿನ ಎಣ್ಣೆ, ಅಡುಗೆ ಸೋಡದ ಮಿಶ್ರಣ ಮತ್ತು ಎಣ್ಣೆ ಕರಗುವಷ್ಟು ಸಾಬೂನು ಹುಡಿಯ ಕಷಾಯ ಸರ್ವರೋಗ ನಿಯಂತ್ರಕ

Advertisement

8) ಮಣ್ಣಿನ ಫಲವತ್ತತೆ ವರ್ಧಿಸಲು ಸೆಗಣಿ ಕುಮ್ಮಾಯಿ ಮಜ್ಜಿಗೆಯ ಒಂದು ತಿಂಗಳ ಕೊಳೆಯುವಿಕೆಯ ಮಿಶ್ರಣ ಎನರ್ಜಿ ಬೂಸ್ಟರ್.

9) ಮೊಳಿಕೆ ಬರೆಸಿ ದ್ವಿದಳ ಧಾನ್ಯವನ್ನು ತಿನ್ನಿಸಿದ ದನದ ಸಗಣಿಗೆ ವಿಶಿಷ್ಟ ಸ್ಥಾನ ಮತ್ತು ಕಪಿಲಾಮೃತ ಎಂಬ ನಾಮ.

10) ತೊಂಡೆ ಚಪ್ಪರಕ್ಕೆ ಎರಡು ಗುಳಿ.ಒಂದು ಚಪ್ಪರದ ಬಳಿಯಿಂದ ಕಡಿತ ಒಂದು ಹೊಸ ಬುಡ. ಹಾಗಿದ್ದಲ್ಲಿ ವರುಷದ ಎಂಟು ತಿಂಗಳೂ ಸಮೃದ್ಧ ತೊಂಡೆ.

ಹೀಗೆ ಇನ್ನೂ ಹತ್ತು ಹಲವು……….ಕೊನೆಯಲ್ಲಿ ಹೇಳಿದ ಮಾತಂತೂ ತುಂಬಾ ಮಾರ್ಮಿಕ. ಮಾನವರು ಮತ್ತು ದಾನವರು ಅಂತ ಹೇಳುವುದನ್ನು ಕೇಳಿದ್ದೇನೆ. ಪ್ರಕೃತಿಯ ಅನೇಕ ಜೀವಸಂಪತ್ತುಗಳನ್ನು ವಿಷವಿಕ್ಕಿ ಕೊಲ್ಲುವವರೇ ದಾನವರು. ವಿಷ ವಿಕ್ಕದೆ ಪ್ರಕೃತಿ ಸಹಜವಾಗಿ ಬೆಳೆಯನ್ನು ಬೆಳೆಸುವ ಮಾನವರಾಗೋಣ ಎಂಬ ಮಾತಿನೊಂದಿಗೆ ವಿರಮಿಸಿದ್ದರು.

ಶಾಮ್ ಭಟ್ರ ಕಶಿ ಕಟ್ಟುವ ಮಾಹಿತಿಯಂತೂ ಕಶಿ ಕಲಿಯುವವರಿಗೆ ಬಹಳ ಉಪಕಾರಿ. ಅವರ ಶಿಷ್ಯ ಜಗದೀಶರ ಕೈಚಳಕವಂತು ಬೆರಗುಕಾರಿ. ನಾನು ಕಂಡಂತೆ ಕಸಿ ಕಟ್ಟುವಲ್ಲಿನ ಕೆಲವು ಸೂಕ್ಷ್ಮಗಳು.

Advertisement

1) ಓಟೆ ಗಿಡದಿಂದ( ಗೊರಟು ) ಕಶಿ ಬಲು ಸುಲಭ.

2) ಒಂದುವರೆ ಇಂಚಿನಷ್ಟು ಉದ್ದಕ್ಕೆ ಸಿಗಿತದ ವೀ ಕಶಿ. ಒಂದು ಬದಿಯ ತೊಗಟೆಯ ಸಾಮಾನ ಜೋಡಣೆ ಕಡ್ಡಾಯ.

3) ಕಶಿ ಕಟ್ಟಿದ ಜಾಗಕ್ಕೆ ನೀರು ಹೋಗದಂತೆ ಕಟ್ಟಿದ ಪ್ಲಾಸ್ಟಿಕ್ ಹಗ್ಗದ ಕೆಳ ಮುಖದ ವಿನ್ಯಾಸದ ಮಾಹಿತಿ.

4) ಅಪ್ಪುಗೆ ಕಶಿಯ ಮಾಹಿತಿ.

5) ಗೆಲ್ಲಿನಲ್ಲಿ ಬೇರುಬರಿಸುವ ಆಕಾಶ ಕಶಿ (ಏರಿಯಲ್ ಗ್ರಾಫ್ಟಿಂಗ್ )ಗೆ ದೊಡ್ಡದಾದ ಪ್ಲಾಸ್ಟಿಕ್ ತೊಟ್ಟೆಗಳಲ್ಲಿ ತೆಮ್ಸಿ ಹುಡಿಯ ಸುಲಭ ಬಳಕೆಯ ಹೊಸ ಪ್ರಯೋಗ. ಅಂದರೆ ಕಟ್ಟುವಾಗ ಹುಡಿ ಉದುರಿ ಆಗುವ ಕಿರಿಕಿರಿಗೆ ಹೊಸ ವಿಧಾನ.

Advertisement

6) ಕಣ್ಣು ಕಶಿಯ ತಂತ್ರಜ್ಞಾನದ ಬಗ್ಗೆ ಅದ್ಭುತ ಮಾಹಿತಿ.

7) ಕಸಿ ಕಟ್ಟುವಾಗ ನಮ್ಮ ಕೈಯ ಸ್ವಚ್ಛತೆಗೆ ಆದ್ಯತೆ. ಕಶಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇತ್ತ ಶಾಮಣ್ಣ ತಂಡಕ್ಕೆ ಅಭಿನಂದನೆಗಳು.

ಕಶಿ ಕಟ್ಟುವಲ್ಲಿ ನಾವು ಸೋತರೆ ಅದು ನಮ್ಮ ದೌರ್ಬಲ್ಯ ಅಷ್ಟೇ.

ಸರಳ ಸುಂದರ ವ್ಯವಸ್ಥಿತ ಕಾರ್ಯಕ್ರಮದ ಮೂಲಕ ನೆರೆದ 120ಕ್ಕಿಂತಲೂ ಹೆಚ್ಚು ಮಂದಿಗೆ ಅದ್ಭುತ ಮಾಹಿತಿಯನ್ನು ನೀಡಿದ ಸಮೃದ್ಧಿ ಅಧ್ಯಕ್ಷ ಕಾರ್ಯದರ್ಶಿ ತಂಡಕ್ಕೆ ಪ್ರೀತಿಪೂರ್ವಕ ಮೆಚ್ಚುಗೆಯ ಅಭಿನಂದನೆಗಳು ಮತ್ತು ಧನ್ಯವಾದಗಳು.

 

Advertisement
ಕಸಿ ಕಟ್ಟುವ ಬಗ್ಗೆ ತರಬೇತಿ
ಕಸಿ ಕಟ್ಟುವುದರ ಕಡೆಗೆ ಆಸಕ್ತಿಯ ನೋಟ

 

The Samriddhi Gidageletan Sangh and Namami Balaga of Puttur have successfully preserved a 100-year-old mango variety. Their dedication to preserving our agricultural heritage is truly inspiring. The Samriddhi Gidageletan Sangh holds agricultural programs every month, where they promote the exchange of seeds of indigenous plants. Their commitment to conservation is truly inspirational.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಸರ್ಪಸಂಸ್ಕಾರವು ಈ ಶಾಪದಿಂದ ಮುಕ್ತಿಯನ್ನು ಒದಗಿಸುವ ಮಾರ್ಗ

ವಿವಾಹದ ವಿಳಂಬ, ಸಂತಾನದ ಕೊರತೆ, ಮತ್ತು ಆರ್ಥಿಕ ಅಡೆತಡೆಗಳಿಗೆ ಕಾರಣವಾಗಬಹುದು. ಸರ್ಪಸಂಸ್ಕಾರವು ಈ…

25 minutes ago

ಹವಾಮಾನ ವರದಿ | 31-07-2025 | ಇನ್ನೊಂದು ವಾಯುಭಾರ ಕುಸಿತದ ಲಕ್ಷಣ |

ಆಗಸ್ಟ್ 2ನೇ ವಾರದಲ್ಲಿ ತಮಿಳುನಾಡು ಕರಾವಳಿಯ ಸಮೀಪ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ…

20 hours ago

ಆಧುನಿಕ ಯುಗದಲ್ಲಿ ತಂತ್ರಜ್ಞ ದಲ್ಲಾಳಿಗಳು

ಅಮಾಯಕ ನಾಗರಿಕರನ್ನು ಬಲಿಗೆ ಹಾಕುವ ಕಾನೂನು ಡಿಜಿಟಲ್ ಸಿಗ್ನೇಜರಿದ್ದು ಮಾತ್ರವಲ್ಲ, ಇನ್ನು ಅನೇಕ…

1 day ago

ಹಾವೇರಿಯಲ್ಲಿ ಕಳಪೆ ಗೊಬ್ಬರ ಹಾಗೂ ಕಳಪೆ ಬೀಜಗಳ ಮಾರಾಟ ಜಾಲ ಸಕ್ರಿಯ | ರಾಜ್ಯದ 639 ರೈತರಿಗೆ ವಂಚನೆ |

ಯೂರಿಯಾ ಗೊಬ್ಬರ ಅಭಾವದ ನಡುವೆಯೇ ರಾಜ್ಯದಲ್ಲಿ ಕಳಪೆ ಗೊಬ್ಬರ ಹಾಗೂ ಕಳಪೆ ಬೀಜಗಳ…

1 day ago

ಕಾಡಾನೆಗಳ ನಿಯಂತ್ರಣಕ್ಕೆ ಕೇಂದ್ರ ಅರಣ್ಯ ಸಚಿವರಿಗೆ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮನವಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಕಾಡಾನೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ…

2 days ago

ಕೊಡಗು ಜಿಲ್ಲೆಯಲ್ಲಿ ಭಾರಿ ಗಾಳಿ ಮಳೆ | 800 ಕ್ಕೂ ಅಧಿಕ ವಿದ್ಯುತ್‌ ಕಂಬಗಳಿಗೆ ಹಾನಿ – ವಿದ್ಯುತ್ ಸಂಪರ್ಕ ಅಸ್ತವ್ಯಸ್ತ

ಕೊಡಗು ಜಿಲ್ಲೆಯಲ್ಲಿ ಕಳೆದ ಐದಾರು ದಿನಗಳಿಂದ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಸುಮಾರು…

2 days ago