ಶಂಕರಾಯರ ಎನ್ವಾರ್ನಮೆಂಟು ರೆವಲ್ಯುಷನ್ | ಪರಿಸರ ಉಳಿಸಿ ಎಂದು ಬೊಬ್ಬೆ ಹೊಡೆದರೆ ಸಾಲದು | ಅದು ನಮ್ಮಿಂದ ಆಗಬೇಕು… |

May 30, 2024
2:24 PM
ಪರಿಸರ ಕಾಳಜಿ ಹಾಗೂ ಪರಿಸರ ಕಾರ್ಯಕ್ರಮದ ಬಗ್ಗೆ ಕಾಲ್ಪನಿಕ ಕಥೆಯೊಂದನ್ನು , ವಾಸ್ತವ ಸ್ಥಿತಿಯ ಕನ್ನಡಿಯಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಬರಹಗಾರ ಪ್ರಬಂಧ ಅಂಬುತೀರ್ಥ .

ಪಟ್ಟಣದ ಸಭಾಂಗಣದಲ್ಲಿ ತಾಲ್ಲೂಕಿನ ಟ್ರಾಕ್ಟರ್ ಕ್ಲಬ್, ಜೆಸಿಬಿ ಇತರ ಸಂಸ್ಥೆಗಳು ಸೇರಿ ವರ್ಷಾವಧಿ ಕಾರ್ಯಕ್ರಮದಂತೆ ಪರಿಸರ ಪ್ರಜ್ಞೆ ಮೂಡಿಸುವ ಕಾರ್ಯಕ್ರಮವನ್ನು ತಾಲೂಕು ಅರ್ಥ್ ಮೂವರ್ಸ್ ಅಸೋಸಿಯೇಷನ್, ತಾಲ್ಲೂಕು ಟಿಂಬರ್ ಕಂಟ್ರಾಕ್ಟರ್ ಅಸೋಸಿಯೇಷನ್, ಪ್ಯಾರಾಟ್ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಇಂಡಸ್ಟ್ರಿ ಸಹಯೋಗದಲ್ಲಿ ಒಂದು ಕಾರ್ಯಕ್ರಮ ಆಯೋಜನೆ ಪಡಿಸಲಾಗಿತ್ತು. ವಾಟ್ಸಾಪ್, ಫೇಸ್ ಬುಕ್, ಇನ್ಸ್ಟಾ ಗ್ರಾಮ್ ಸೇರಿದಂತೆ ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ ಈ ದಿನದ ಕಾರ್ಯಕ್ರಮದ ಫ್ಲೆಕ್ಸ್(Flex) ಹಾಕಿ ಪ್ರಚಾರ ಮಾಡಲಾಗಿತ್ತು. ಶಂಕರರಾಯರು ನಿವೃತ್ತ ಶಿಕ್ಷಕರು‌ . ಪರಿಸರದ(Environment) ಬಗ್ಗೆ ಅಪಾರ ಕಾಳಜಿ ಇರುವವರು. ಪತ್ರಿಕೆಗಳಲ್ಲಿ ಆಗಾಗ್ಗೆ ಚುಟುಕಾಗಿ ಪರಿಸರದ ಬಗ್ಗೆ ಬರೆಯುವ ಬರಹಗಾರರು. “ಪರಿಸರ ಪರಿ” ಎಂಬ ಪುಸ್ತಕ ಬರೆದು ಪ್ರಕಟಿಸಿದವರು. ‌‌‌‌‌ಕಾರ್ಯಕ್ರಮದ(Program) ಜಾಹೀರಾತು ನೋಡಿ ಕಾರ್ಯಕ್ರಮ ಕ್ಕೆ ಬಂದು ಸಭಿಕರಾದವರು.

Advertisement
Advertisement

ಪರಿಸರದ ಬಗ್ಗೆ ಭೀಷಣ ಭಾಷಣಗಳೆಲ್ಲಾ ಮುಗಿದ ಮೇಲೆ ಎಲ್ಲಾ ಸಭಿಕರಿಗೂ ಲಘು ಭೋಜನ ಏರ್ಪಡಿಸಿದ್ದರು. ಬಫೆ ಮಾಧ್ಯಮದಲ್ಲಿ ತಲೆಗೆ ಪ್ಲಾಸ್ಟಿಕ್ ತುರುಬು ಹಾಕಿ , ಕೈಗೆ ಗ್ಲೌಸು ಹಾಕಿದ ಯೂನಿಫಾರಮುದಾರಿಗಳು ಚಾ ತಿಂಡಿ ಬಡಿಸಲು ಶಸ್ತ್ರ ಸನ್ನದ್ದರಾಗಿ ನಿಂತಿದ್ದರು. ಪರಿಸರ ಉಳಿಸುವ ಕಾರ್ಯಕ್ರಮದಲ್ಲಿ ಉಪಹಾರ ಬಡಿಸುವ ತಟ್ಟೆ ಥರ್ಮಕೂಲ್ ನದ್ದು, ಆರೋಗ್ಯ ಪರಿಸರ ಎರಡಕ್ಕೂ ಹಾನಿಕಾರಕ ಪೇಪರ್ ಕಪ್, ಪ್ಲಾಸ್ಟಿಕ್ ಚಮಚ, ಪ್ಲಾಸ್ಟಿಕ್ ನೀರಿನ ಲೋಟ..!!

ಸಭಿಕರೆಲ್ಲಾ ಸಾಲಾಗಿ ನಿಂತು ಈ ಪ್ಲಾಸ್ಟಿಕ್ ಪರಿಕರ ಪಡೆದುಕೊಂಡು “ಭವತಿ ಬಫೆ ಫುಡ್ ಭಿಕ್ಷಾಂದೇಹಿ ” ಎಂದು ಬೇಡುವಂತೆ ಬಡಿಸುವವರ ಬಳಿ ತಟ್ಟೆ ಹಿಡಿದು ನಿಂತರು.. ಆ ಕಾರ್ಯಕ್ರಮದಲ್ಲಿ ಒಂದು ಘಟನೆ ಅಥವಾ ಈ ಕಥೆಯ ಟ್ವಿಸ್ಟ್ ನೆಡೆಯಿತು..

ಶಂಕರರಾಯರು ಲಘು ಉಪಾಹಾರವನ್ನು ಬಡಿಸಿಕೊಳ್ಳುವ ಸಲುವಾಗಿ ಮನೆಯಿಂದ ತಂದಿದ್ದ ತಮ್ಮ ಹೆಗಲ “ಬಟ್ಟೆಯ ಚೀಲದಲ್ಲಿ” ಹಾಕಿ ಕೊಂಡು ಬಂದಿದ್ದ ಸ್ಟೀಲು ಲೋಟ ತಟ್ಟೆ ಚಮಚವನ್ನು ತೆಗೆದುಕೊಂಡು ಸಾಲಿನಲ್ಲಿ ನಿಂತಾಗ ಇಡೀ “ಸೀಝನ್ ಪರಿಸರವಾದಿ” ಗಳೆಲ್ಲ ಬಲು ಅಚ್ಚರಿಯಿಂದ ಈ ಮುದುಕನನ್ನು ವಿಚಿತ್ರ ವಾಗಿ ನೋಡತೊಡಗಿದರು. ಯಾರೋ ಈ ವೃದ್ದ ಶಂಕರಾಯರ ಕಾಳಜಿ ಪೂರ್ವಕ ನಡೆಯನ್ನು ಅರ್ಥ ಮಾಡಿಕೊಳ್ಳಲಾರದೇ ಗತಿಯಿಲ್ಲದವರು ಎಂದು
ಭಾವಿಸಿ ಆಯೋಜಕರಿಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ‌”ನೀವು ಗತಿ ಗೆಟ್ಟವರನ್ನೆಲ್ಲಾ ಈ ಪ್ರೋಗ್ರಾಂಗೆ ಯಾಕೆ ಅಲೋ ಮಾಡಿದ್ದೀರ..? ” ಎಂದು ಮುಗ್ಧ ಶಂಕರಾಯರಿಗೆ ಕೇಳಿಸುವಂತೆಯೇ ಬಯ್ಯ ತೊಡಗಿದರು.

ಆಗ ಶಂಕರರಾಯರು ತಮ್ಮ ಧ್ವನಿ ಎತ್ತಿ “ಮಿತ್ರರೇ ನಾನು ಗತಿ ಗೆಟ್ಟವನಲ್ಲ. ನಾನೊಬ್ಬ ನಿವೃತ್ತ ಶಿಕ್ಷಕ.. ನನ್ನ ವೃತ್ತಿ ಜೀವನದಲ್ಲಿ ಸಹಸ್ರಾರು ಮಕ್ಕಳಿಗೆ ಅಕ್ಷರ ಶಿಕ್ಷಣ ನೀಡಿದ್ದೇನೆ.. ಪರಿಸರದ ಬಗ್ಗೆ ಅಪಾರ ಕಾಳಜಿ ಇರುವವ. ನೀವು ನೂರು ಮಂದಿ ಈ ಎರಡು ಗಂಟೆಗಳ ಕಾಲ ಪರಿಸರ ಉಳಿಸಿ ಉಳಿಸಿ ಎಂದು ಬೊಬ್ಬೆ ಹೊಡೆದು ಈಗ ಕಾರ್ಯಕ್ರಮದ ಕೊನೆಯಲ್ಲಿ ನೀರಿನ ಬಾಟಲು, ಪ್ಲಾಸ್ಟಿಕ್ ತಟ್ಟೆ, ಚಮಚ, ಥರ್ಮಾಕೂಲು ಬೌಲು, ಕಾರ್ಯಕ್ರಮದ ಫ್ಲೆಕ್ಸು ಬ್ಯಾನರು, ಅತಿಥಿಗಳಿಗೆ ಕೊಟ್ಟ ಕೃತಕ ಪ್ಲಾಸ್ಟಿಕ್ ಬೊಕೆ .. ಎಲ್ಲಾ ಸೇರಿ ಐವತ್ತು ಕೆಜಿ ಪ್ಲಾಸ್ಟಿಕ್ ವೇಸ್ಟ್ ನ್ನ‌ ಈ ನಿಸರ್ಗಕ್ಕೆ ಸುರಿಯುತ್ತಿದ್ದೀರಿ.. ನೀವು ಈ ಕಾರ್ಯಕ್ರಮದ ನೆಪದಲ್ಲಿ ಬಳಸಿ ಬಿಸಾಡುವ ಪ್ಲಾಸ್ಟಿಕ್ ಥರ್ಮಾ ಕೂಲು ಉತ್ಪನ್ನಗಳು ಇನ್ನೂ ಸಾವಿರ ವರ್ಷಗಳಿಗೂ ಕರಗಿ ಹೋಗದು..? ಪರಿಸರದ ಪ್ರೀತಿಯಿಂದ ನಾನು ಸ್ಟೀಲ್ ತಟ್ಟೆ ಲೋಟ ಚಮಚ ಬಳಸಿದರೆ ನಿಮಗೆ ಬಿಕ್ಷುಕ ನಂತೆ ಕಾಣಿಸುತ್ತೀನಾ..? ಈ ನಿಸರ್ಗವನ್ನು ಈ ಒಂದು ದಿನದ ಕಾರ್ಯಕ್ರಮದ ನೆಪದಲ್ಲಿ ನೀವು ಸುರಿದ ಪ್ಲಾಸ್ಟಿಕ್ ಕಸದಿಂದ ಅದೆಷ್ಟು ಹಾಳು ಗೆಡವಿದ್ದೀರ ಎಂಬ ಅರಿವಿದೆಯ ನಿಮಗೆ..?

ಪರಿಸರ ಕಾಳಜಿ‌ ಎಂದರೆ ಪರಿಸರ ಸಂಬಂಧಿಸಿದ ಕಾರ್ಯಕ್ರಮ ಮಾಡುವುದೋ, ವರ್ಷ ವರ್ಷವೂ ಅದೇ ಅದೇ ಗುಂಡಿಗೆ ಗಿಡ ನೆಟ್ಟು ವನಮಹೋತ್ಸವ ಮಾಡಿ ಫೋಟೋ ತೆಕ್ಕಂಡು ಫೇಸ್ ಬುಕ್ಕು ವಾಟ್ಸಾಪ್ ಸ್ಟೇಟಸ್ ಗೆ ಹಾಕೋದಲ್ಲ.. ಪರಿಸರ ಕಾಳಜಿ ಎಂದರೆ ಪರಿಸರಕ್ಕೆ ಹಾನಿ ಮಾಡದೇ ಬಾಳುವುದು.. ಅದೇ ನಿಜವಾದ ಪರಿಸರ ಪ್ರೀತಿ.. ನಿಮ್ಮ ತರದ ಗಿಲೀಟು ಪರಿಸರ ವಾದಿಗಳಿಂದಲೇ ಪರಿಸರ ಪ್ರೀತಿಗೆ ವ್ಯವಸ್ಥೆ ಗೌರವ ನೀಡದಿರುವುದು.. ” ಎಂದು ಜೋರಾಗಿ ಮೇಷ್ಟ್ರು ವರ್ಷನ್ ನಲ್ಲಿ ಬೈದು ಸ್ಟೀಲ್ ತಟ್ಟೆ ಲೋಟನ ಬಟ್ಟೆ ಬ್ಯಾಗ್ ನಲ್ಲಿ ಮರಳಿ ಹಾಕಿಕೊಂಡು ಸಭಾ ಭವನದಿಂದ ಆಚೇ ಹೋಗುವುದೇ ಮಾಡಿದರು. ಆರ್ಟಿಫಿಷಿಯಲ್ ವಾಟ್ಸಾಪ್ ಸ್ಟೇಟಸ್ ಗಳೆಲ್ಲ ” ಮೇಷ್ಟ್ರ ಸ್ಟ್ರೋಕ್ ” ನಿಂದ ತತ್ತರಿಸಿ “ಸ್ಕ್ರೀನ್ ಷಾಟ್ ” ನಂತೆ “ಸ್ತಭ್ದ” ವಾಗಿ ಹೋದರು..

ಪ್ಲಾಸ್ಟಿಕ್ ಒಂದು ಬಗೆಯಲ್ಲಿ ಆತ್ಮರಕ್ಷಕ ರಿವಲ್ವಾರ್ ಇದ್ದಂತೆ‌ .. ಅದನ್ನು ಆತ್ಮರಕ್ಷಣೆ ಗಾಗಿ ಮಾತ್ರ ಬಳಸಿ ಗನ್ ನ್ನ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.. ನೀರಿನ ಬಾಟಲಿಯೋ, ಲಘು ಪಾನೀಯಗಳ ಬಾಟಲಿಯೋ ಬಳಸಿದ ನಂತರ ಡಸ್ಟ್ ಬಿನ್ ಗೆ ಹಾಕಿದರೆ ಸುರಕ್ಷಿತ..!! ಅಥವಾ better… ಆದರೆ ಅದನ್ನು ರಸ್ತೆಗೆ ಎಸೆದರೆ..!?? ಈ ಜಾಗೃತಿ ಕಾಳಜಿ ಎಲ್ಲಾ ಬಳಸುಗರಲ್ಲಿ ಇದ್ದರೆ ಮಾತ್ರ ಪ್ಲಾಸ್ಟಿಕ್ ಉಪಯೋಗಿ.. ಪ್ಲಾಸ್ಟಿಕ್ ಗೂ ಮರಕ್ಕೂ ಅಷ್ಟೇನೂ ಸಂಬಂಧವಿಲ್ಲ.. ಪ್ಲಾಸ್ಟಿಕ್ ನಿಂದ ಆಹಾರ ಉತ್ಪನ್ನಗಳ ಪ್ಯಾಕಿಂಗ್ ನಲ್ಲಿ ಹೈಜನಿಕ್ ಆಗಿದೆ. ಆದರೆ ಆ ಪ್ಯಾಕಿಂಗ್ ಸರಿಯಾಗಿ ವಿಲೇವಾರಿ ಆಗದೆ ಪರಿಸರಕ್ಕೆ ಹಾನಿಕಾರಕವಾಗಿದೆ..!! ಮುಂಚೆ ಎಲ್ಲಾ ಅಂಗಡಿಯಲ್ಲೂ ಪೇಪರ್ ನಲ್ಲಿ ಪ್ಯಾಕಿಂಗ್ ಮಾಡಿಕೊಡುವ ಪದ್ದತಿ ಇತ್ತು. ಜನ ಅದಕ್ಕೆ ಹೊಂದಿಕೊಂಡಿದ್ದರು. ಜನ‌ ಅಂಗಡಿಗೆ ಹೋಗುವಾಗ ಕೈ ಚೀಲ ಕೊಂಡೊಯ್ಯದೇ ಇರುತ್ತಿರಲಿಲ್ಲ..!! ಈಗ ಅಂಗಡಿಗೆ ಹೋಗುವಾಗ ಕಾಲಿ ಕೈಯಲ್ಲಿ ಹೋಗುತ್ತಾರೆ. ಒಮ್ಮೆ ಒಬ್ಬ ಒಂದು ವಾರದ ಸಾಮಾನು ತರಲು ಅಂಗಡಿಗೆ ಹೋದರೆ ಕನಿಷ್ಠ ನೂರು ಗ್ರಾಮ್ ಪ್ಲಾಸ್ಟಿಕ್ ಉತ್ಪನ್ನವನ್ನು ಪ್ಯಾಕಿಂಗ್ ನೆಪದಲ್ಲಿ ಮನೆಗೆ ತರುತ್ತಾನೆ. ಇದರಲ್ಲಿ ಮನುಷ್ಯ ಮನಸು ಮಾಡಿದರೆ ಕಡಿಮೆ ಪ್ಲಾಸ್ಟಿಕ್ ಪ್ಯಾಕಿಂಗ್ ಕಡಿಮೆ ಮಾಡಬಹುದು.. ಕಡಿಮೆ ಮೈಕ್ರಾನ್ ನ ಪ್ಲಾಸ್ಟಿಕ್ ಪರಿಸರಕ್ಕೆ ಬಲು ದೊಡ್ಡ ಸವಾಲು..!! ಪ್ಲಾಸ್ಟಿಕ್ ನ್ನ ಪ್ರಜ್ಞಾವಂತರು ಉಪಯೋಗಿಸಿ ಸುರಕ್ಷಿತವಾಗಿ ಸಂಸ್ಕರಣೆಗೆ ಕಳಿಸಿದರೆ ಮಾತ್ರ ಒಳ್ಳೆಯದು..  ‌

ಬರಹ :
ಪ್ರಬಂಧ ಅಂಬುತೀರ್ಥ

ಚಿತ್ರ ಕೃಪೆ : ಶ್ರೀ ದತ್ತಾತ್ತಿ ಕಟ್ಟೆಹೆಕ್ಕಲು

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ
ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ
January 29, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror