ಗಿಡ ನೀಡಿ ಹಣ್ಣು ಖರೀದಿ | ಪುತ್ತೂರಿನ ಪುಟ್ಟ ಅಂಗಡಿಯ ದೊಡ್ಡ ಸಂದೇಶ |

January 23, 2023
9:31 AM

ಗಿಡ ನೀಡಿ ಹಣ್ಣು ಖರೀದಿ..!. ಈ ಸಂಗತಿ ದೊಡ್ಡ ಕಂಪನಿಗಳಿಗೆ ಮಾತ್ರಾ ಸಾಧ್ಯ ಎನ್ನುವ ಭಾವನೆ ಹಲವು ಕಡೆ ಇದೆ. ಆದರೆ ಸಣ್ಣ ಸಣ್ಣ ಅಂಗಡಿಗಳೂ ದೊಡ್ಡ ಸಂದೇಶ ನೀಡಲು ಸಾಧ್ಯವಿದೆ. ಕೃಷಿ ಆದಾಯ ದ್ವಿಗುಣ, ಸ್ಥಳೀಯ ಮಾರುಕಟ್ಟೆ ವೃದ್ಧಿಯ ಮಾದರಿಯೊಂದನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಪರ್ಪುಂಜದ ಸೌಗಂಧಿಕಾದ ಚಂದ್ರ ಅವರು ತೋರಿಸಿದ್ದಾರೆ.

Advertisement

ಪುತ್ತೂರು ತಾಲೂಕಿನ ಪರ್ಪುಂಜದಲ್ಲಿ ಸೌಗಂಧಿಕಾ ನರ್ಸರಿ ಹಾಗೂ ಪುಟ್ಟ ಜ್ಯೂಸ್‌ ಹಾಗೂ ಚಾಟ್ಸ್‌ ಅಂಗಡಿಯನ್ನು ಹೊಂದಿದ್ದಾರೆ. ಸುಳ್ಯ-ಪುತ್ತೂರು ಹೆದ್ದಾರಿ ನಡುವೆ ಈ ಅಂಗಡಿ ಕಾಣಸಿಗುತ್ತದೆ. ಕಳೆದ ಹಲವು ಸಮಯಗಳಿಂದ ಗಿಡಗಳ ಮಾರಾಟ ಹಾಗೂ ಜ್ಯೂಸ್‌ ಅಂಗಡಿ ನಡೆಸುತ್ತಿದ್ದರು. ರಾಸಾಯನಿಕ ಮುಕ್ತ, ಪ್ಲಾಸ್ಟಿಕ್‌ ಮುಕ್ತ ಎನ್ನುವ ಕಲ್ಪನೆಯನ್ನು ಹೊಂದಿರುವ ಚಂದ್ರ ಅವರು ಅನುಷ್ಟಾನವನ್ನೂ ಮಾಡುತ್ತಿದ್ದಾರೆ. ರಾಸಾಯನಿಕ ಮುಕ್ತ ಜ್ಯೂಸ್‌ ಕಲ್ಪನೆ ಬಂದಾಗ ಪುನರ್ಪುಳಿ, ಗಾಂಧಾರಿ, ಲೆಮೆನ್‌ ಜ್ಯೂಸ್‌ ಇತ್ಯಾದಿಗಳನ್ನು ಮಾಡುತ್ತಿದ್ದರು. ಈಚೆಗೆ ಪ್ಯಾಶನ್‌ ಫ್ರುಟ್‌ ಜ್ಯೂಸ್‌ ಯೋಜನೆ ಬಂದಿತ್ತು. ಸ್ವಲ್ಪ ಅವರದೇ ತೋಟದಲ್ಲಿ ಹಣ್ಣುಗಳು ಸಿಕ್ಕಿತ್ತು. ಅದಾದ ನಂತರ ತಾವೇ ಗಿಡಗಳನ್ನು ಮಾಡಿ ಕೃಷಿಕರಿಗೆ ನೀಡಿದರು. ಹಣ್ಣಾಗಲು ಆರಂಭವಾದಾಗ ಆ ಹಣ್ಣನ್ನು ತಾವೇ ಖರೀದಿ ಮಾಡಿದರು. ಈಗ ಸದಾ ಫ್ಯಾಶನ್‌ ಫ್ರುಟ್‌ ಜ್ಯೂಸ್‌ ಲಭ್ಯ ಇರುವಂತೆ ನೋಡಿಕೊಳ್ಳುತ್ತಾರೆ. ಹಾಗಿದ್ದರೂ ಅವರಿಗೆ ಹಣ್ಣುಗಳು ಸಾಲುತ್ತಿಲ್ಲ ಎನ್ನುತ್ತಾರೆ. ಗಿಡ ನೀಡಿದ ಇನ್ನಷ್ಟು ಮಂದಿ ಹಣ್ಣುಗಳನ್ನು ನೀಡುವ ನಿರೀಕ್ಷೆ ಇರಿಸಿಕೊಂಡಿರುವ ಚಂದ್ರ ಅವರು ಹೆಚ್ಚಾಗಿ ಲಭ್ಯವಾದರೆ ಅಗತ್ಯ ಇರುವಷ್ಟು ಹಣ್ಣುಗಳ ರಸ ತೆಗೆದು ಇರಿಸಿಕೊಂಡು ಅದೇ ಜ್ಯೂಸ್‌ ಮಾರಾಟ ಮಾಡಲೂ ಸಾಧ್ಯವಿದೆ. ಯಾವುದೇ ರಾಸಾಯನಿಕ ಬಳಕೆ ಮಾಡದೆ ದಾಸ್ತಾನು ಮಾಡುವುದು  ಕೂಡಾ ಸಾಹಸದ ಕೆಲವೇ ಆಗಿದೆ. ಇದೆಲ್ಲಾ ಸವಾಲುಗಳನ್ನು ಎದುರಿಸಿ ಹೊಸದಾದ ಕಲ್ಪನೆಯನ್ನು ಮುಂದಿಟ್ಟಿದ್ದಾರೆ.

ಇದೇ ಮಾದರಿಗಳನ್ನು  ಗ್ರಾಮೀಣ ಭಾಗಗಳಲ್ಲಿ ಮಾಡಲು ಸಾಧ್ಯ ಇದೆ. ಗಿಡಗಳನ್ನು ನೀಡಿ ಹಣ್ಣು ಖರೀದಿ ಮಾಡಿ ಅದೇ ಹಣ್ಣಿನ ರಸವನ್ನು ಮಾರಾಟ ಮಾಡುವುದರಿಂದ ಗ್ರಾಮೀಣ ಆರ್ಥಿಕತೆ ಬೆಳೆಸುವ ಅವಕಾಶ ಇದೆ. ರೈತರ ಆದಾಯ ದ್ವಿಗುಣದ ಕನಸುಗಳೂ ನನಸಾಗಬಹುದು. ಪ್ಯಾಶನ್‌ ಫ್ರುಟ್‌ ನಂತಹ ಹಣ್ಣಿನ ಗಿಡಗಳನ್ನು ಬೆಳೆಯಲು ಸಾಕಷ್ಟು ಆರೈಕೆಗಳೂ ಬೇಕಾಗಿಲ್ಲ, ನೀರು, ಗೊಬ್ಬರ ಹಾಗೂ ಸೂಕ್ತ ಜಾಗ ಇದಿಷ್ಟು ಇದ್ದರೆ ಯಥೇಚ್ಛವಾದ ಹಣ್ಣುಗಳಾಗುತ್ತವೆ. ಈ ಹಣ್ಣುಗಳು ಆರೋಗ್ಯಕ್ಕೂ ಉತ್ತಮ ಎನ್ನುವುದು  ಸಂಶೋಧನೆಗಳೂ ಹೇಳುತ್ತವೆ. ಈ ಎಲ್ಲಾ ಕಾರಣಗಳಿಂದ ಕೃಷಿಕರಿಗೆ ಉಪಬೆಳೆಯಾಗಿ ಬೆಳೆಯಬಹುದಾಗಿದೆ. ಗ್ರಾಮೀಣ ಆರ್ಥಿಕತೆಗೂ ಇದು ಸಹಕಾರಿ ಆಗಬಲ್ಲುದು.

ಒಂದು ಸಹಕಾರಿ ಸಂಸ್ಥೆ, ಒಂದು ರೈತ ಉತ್ಪಾದಕ ಸಂಸ್ಥೆ, ಗ್ರಾಮೀಣ ಭಾಗದ ಗುಂಪುಗಳನ್ನು ಒಟ್ಟಾಗಿ ಮಾಡಬಹುದಾದ ಒಂದು ಮಾದರಿಯನ್ನು ಸೌಗಂಧಿಕಾದ ಚಂದ್ರ ಅವರು ಮಾಡಿ ತೋರಿಸಿದ್ದಾರೆ. ಈ ಮಾದರಿ ರಾಜ್ಯದ ಕೃಷಿಕರ ಮನದಲ್ಲಿ ಬೆಳೆದು ಕೃಷಿ ಅಭಿವೃದ್ಧಿಗೂ, ರೈತರ ಆದಾಯ ದ್ವಿಗುಣದ ಕನಸುಗಳೂ ಪೂರಕವಾಗಬಹುದು.

 

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಹೊಸರುಚಿ | ಗುಜ್ಜೆ ಶೇಂಗಾ ಮಸಾಲಾ ಪಲ್ಯ
April 12, 2025
8:00 AM
by: ದಿವ್ಯ ಮಹೇಶ್
4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆ ವಿಸ್ತರಿಸಲು ಕಾಫಿ ಮಂಡಳಿ ಯೋಜನೆ
April 12, 2025
7:32 AM
by: The Rural Mirror ಸುದ್ದಿಜಾಲ
“ಟ್ರಂಪ್‌ ಸುಂಕ” ಭಾರತೀಯ ರಬ್ಬರ್‌ ಮಾರುಕಟ್ಟೆ ಮೇಲೆ ಪರಿಣಾಮ ಸಾಧ್ಯತೆ
April 12, 2025
7:08 AM
by: The Rural Mirror ಸುದ್ದಿಜಾಲ
2025 ಮುಂಗಾರು ಮಳೆ | ಸಾಮಾನ್ಯವಾಗಿರಲಿದೆ ಈ ಬಾರಿಯ ಮುಂಗಾರು |
April 12, 2025
6:43 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group