Advertisement
MIRROR FOCUS

ಹವಾಮಾನ ವೈಪರೀತ್ಯಕ್ಕೆ ಒಳಗಾಗುತ್ತಿರುವ ಕಲಿಯುಗ…. ! | ಬೆಂಕಿಗೆ ಆಹುತಿಯಾಗುತ್ತಿರುವ ಕಾಡು…! | ಪರಿಸರ ಕಾಳಜಿಯ ಯುವ ತಂತ್ರಜ್ಞೆ ಅಂಜಲಿ ಹೇಳುತ್ತಾರೆ… |

Share
ಮಲೆನಾಡಿನ ಹಲವು ಕಡೆಗಳಲ್ಲಿ  ಕಾಡು ಬೆಂಕಿಗೆ ಆಹುತಿಯಾಗುತ್ತಿದೆ. ಸುಂದರ ಪರಿಸರವು ದಟ್ಟ ಹೊಗೆಯಿಂದ ಆವೃತವಾಗುತ್ತಿದೆ. ಅಲ್ಲಿ, ಇಲ್ಲಿ  ಎಂದು ಕಾಡಿನ ಬೆಂಕಿಯ ಬಗ್ಗೆ ಸುದ್ದಿಯಾಗುತ್ತಿದೆ. ಪರಿಸರ ಪ್ರೇಮಿಗಳಿಗೆ ಇದೊಂದು ವಿಷಾದದ ಸಂಗತಿ. ಈ ಬಗ್ಗೆ ಪರಿಸರ ಇಂಜಿನಿಯರಿಂಗ್‌ ಮಾಡಿರುವ ಯುವ ಚಿಂತಕಿ ಅಂಜಲಿ ವಾಗ್ಲೆ ಬರೆದಿದ್ದಾರೆ. ಅದರ ಯಥಾವತ್ತಾದ ರೂಪ ಇಲ್ಲಿದೆ.

ಮನೆಯ ಹಿಂದೆ ಇರುವ ಈ ಗುಡ್ಡದ ಪ್ರದೇಶಕ್ಕೆ 2020 ರಲ್ಲಿ ಚಾರಣಕ್ಕೆ ಹೋಗಿದ್ದೆವು. ಆದರೆ ಯಾವುದೇ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿರಲಿಲ್ಲ. ಇದಕ್ಕೆ ಮೂಲ ಕಾರಣ ಇಷ್ಟೇ, ಒಂದು ಫೋಟೋ ನೂರು ಜನ ನೋಡಿ ಅದರಲ್ಲಿ ಹತ್ತು ಜನ ಆ ಪ್ರದೇಶಕ್ಕೆ ಹೋದರೆ ಸಾಕು ಅದರ ಪರಿಣಾಮ ಏನಾಗುತ್ತದೆ ಅಂತ ಕುಖ್ಯಾತ ಪ್ರವಾಸಿ ಸ್ಥಳಗಳ ಮಲಿನಗೊಂಡಿರುವ ಪರಿಸ್ಥಿತಿಯಿಂದಲೇ ಕಾಣಬಹುದು.

ನಾವು ಹೋದ ಸಮಯದಲ್ಲಿ ಗುಡ್ಡದ ತುದಿಯಿಂದ ಮೇಲೆ ನೋಡಿದರು ಸೂರ್ಯನ ಬೆಳಕು ಅಲ್ಪ ಸ್ವಲ್ಪ ಕಾಣುತ್ತಿತ್ತು. ಅಷ್ಟು ದಟ್ಟವಾದ ಕಾಡು. ಜಿಗಣೆಗಳಂತೂ zoombie ಗಳಂತೆ ಒಂದೇ ಸಮನೆ ಕಾಲು, ಕೈ , ತೊಡೆಗಳ ಮೇಲೆ ದಾಳಿ ಮಾಡಿದ್ದವು. ನಂತರದ 2 ದಿನ ಕೈ ಕಾಲು ತುರಿಸುವುದರಲ್ಲೇ ಹೋಗಿತ್ತು. ಈ ಕಾಡಿಗೆ ಕಾಲುದಾರಿಯೂ ಇಲ್ಲ, ಕಡವೆ, ಕಾಡುಹಂದಿಗಳು ಹೋದ ದಾರಿಯನ್ನು ಅರಸಿ ಹೋಗಬೇಕು. ಪುನಃ ಇಳಿದುಕೊಂಡು ಬರುವಾಗ ದಾರಿ ತಪ್ಪಿದ್ದೆವು. ಹಾಗೆಯೇ ಈ ಕಾಡು-ಗುಡ್ಡದ ಬಗ್ಗೆ ಹಲವಾರು ಕತೆಗಳೂ ಇವೆ. ಯಾರೋ ಸತ್ತಿದ್ರು, ದೈವದ ವಾಸಸ್ಥಳ, ಒಬ್ಬೊಬ್ಬರೇ ಹೋಗ್ಬಾರ್ದು; ಹೋದರೆ ದಾರಿ ತಪ್ತಾರೆ ಅಂತೆಲ್ಲ. ಊರಿನ ಜನ ಸಾಮಾನ್ಯವಾಗಿ ಅಡಿಕೆ ತೆಗಿಲಿಕೆ ಕೊಕ್ಕೆ ತಯಾರಿಸಲು ಓಟೆ ತರ್ಲಿಕೆ ಹೋಗ್ತಾರೆ. ಹಳ್ಳಿಯ ಜನರ ಜೀವನ ಶೇಕಡಾ 70 % ಕಾಡಿನ ಸಂಪನ್ಮೂಲಗಳ ಮೇಲೆಯೇ ಅವಲಂಬಿತವಾಗಿರುತ್ತದೆ. ಪರ್ಯಾಯ ಆಯ್ಕೆಗಳನ್ನು ಕೊಡದೆ, ಹಠಾತ್ತಾಗಿ ನೀವು ಕಾಡಿನ ಸಂಪನ್ಮೂಲಗಳನ್ನು ಉಪಯೋಗಿಸಬೇಡಿ ಎಂದು ಜನರಿಗೆ ಹೇಳಲು ಸಾಧ್ಯವಿಲ್ಲ.

ಯಾಕೆ ಈಗ ಈ ಕಥೆ ಅಂತ ಕೇಳ್ಬೋದು ನೀವು. ನಿನ್ನೆ ನನ್ನ ತಂದೆಯವರಲ್ಲಿ, “ಹೌದಾ ಅಪ್ಪ? ವರ್ಪಾರೆ ಕಡೆ ಕಾಡಿಗೆ ಬೆಂಕಿ ಬಿದ್ದಿದೆಯಂತೆ, ಗೊತ್ತುಂಟಾ?” ಅಂತ. ಅವ್ರಿಗೂ ಮೊದಲು ಗೊತ್ತಿರ್ಲಿಲ್ಲ. ಆಮೇಲೆ ಕಾಲ್ ಮಾಡಿ ಅಮ್ಮ ಹೇಳಿದ್ರು ಹೌದು ಬೆಂಕಿ ಬಿದ್ದಿದೆ, ಇನ್ನೂ ಆರಿಸಲಿಕೆ ಆಗ್ತಿಲ್ಲ, ಈಗ ಒಣಗಿದ ಎಲೆಗಳೆಲ್ಲ ಜಾಸ್ತಿ ಬಿದ್ದಿರುವ ಕಾರಣ ಬೆಂಕಿ ಜಾಸ್ತಿ ಆಗ್ತಿದೆ, ಸುಮಾರು 400 ಎಕರೆ ಕಾಡಿಗೆ ಬೆಂಕಿ ಬಿದ್ದಿದೆ ಅಂತಿದ್ದಾರೆ, ಯಾರೋ ಬೀಡಿ ಸೇದಿ ಬಿಸಾಕಿರಬೇಕು, ವೇಸ್ಟ್ ರಾಶಿ ಹಾಕಿ ಬೆಂಕಿ ಹಾಕಿರ್ತಾರೆ ಇಲ್ಲಾ ಓಟೆಗಳಿಗೆ ಬೆಂಕಿ ಹಾಕಿರ್ತಾರೆ. ಜನರಿಗೆ ಭಾಷೆ ಇಲ್ಲಾ, ಅದರ ಮೇಲೆ ಈ ಬಿಸಿಲು ಬೇರೆ ಅಂತ ಹೇಳಿದ್ರು.

ಇಷ್ಟು ವರ್ಷಗಳಲ್ಲಿ ನೀರಿನ ಸಮಸ್ಯೆ ಬಂದಿರಲಿಲ್ಲ. ಬಾವಿಯ ಆಳದಲ್ಲಿ ನೀರು ಸಿಗದೆ ಎರಡು ಮೂರು ಮನೆಗಳು ಕೊಳವೆ ಬಾವಿ ತೆಗೆಸುವ ಸದ್ದು ಇತ್ತೀಚೆಗೆ ಕಿವಿಗೆ ಬಿತ್ತು. ಈ ಸುತ್ತಮುತ್ತಲಿನ ಕಾಡಿನಿಂದಾಗಿಯೇ ಅತಿ ಹೆಚ್ಚು ಮಳೆ ನಮ್ಮ ಊರಿನಲ್ಲಿ ಬೀಳುತ್ತದೆ. ಕಾಡಿಗೆ ಬೆಂಕಿ ಬಿದ್ರೆ, ಮಣ್ಣಿನ ಫಲವತ್ತತೆ ಕಡಿಮೆಯಾಗಿ ಸವಕಳಿ ಉಂಟಾಗುವ ಅವಕಾಶಗಳು ಜಾಸ್ತಿಯಾಗುತ್ತದೆ.ಕಾಡಿನ ಮರ ಗಿಡಗಳನ್ನು ಯಾರೂ ನೀರು, ಯೂರಿಯಾ ಹಾಕಿ ಬೆಳೆಸಿರುವುದಿಲ್ಲ!ಎಷ್ಟೋ ವರ್ಷಗಳಿಂದ ಬದುಕಿರುವ ಮರಗಳು ಸಾಯುತ್ತವೆ. ಓಟೆ, ಬಿದಿರು ಮತ್ತು ಇತರ ದೊಡ್ಡ ಮರಗಳು ಮಣ್ಣಿನಲ್ಲಿ ನೀರಿನ ಅಂಶ ಜಾಸ್ತಿ ಮಾಡುತ್ತವೆ. ಅವುಗಳೇ ಇಲ್ಲದೆ ಹೋದರೆ, ನಾಡಿದ್ದು ಕೂದಲು ಉದುರುತ್ತದೆ ಅಂತ ಸೊಪ್ಪು ಹುಡುಕಿಕೊಂಡು ಹೋದ್ರೆ ಸೊಪ್ಪಲ್ಲಾ, ಬಜಾವ್ ಸ ಸಿಗ್ಲಿಕಿಲ್ಲ!!

ಅದೊಂದು ಕಾಲ ಇತ್ತು ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನ ಮಾಡ್ತಾರೆ ಅಂತ ಅದರ ಬಗ್ಗೆ ಗೊತ್ತಿರುವವರು, ಗೊತ್ತಿಲ್ದೇ ಇರುವವರೂ ಎಲ್ಲ ಸೇರಿ ಭಾರಿ ವಿರೋಧ ಪ್ರತಿಭಟನೆ ಎಲ್ಲ ಮಾಡಿದ್ರು. ಜನರ ವಿರುದ್ಧ ಹೋದ್ರೆ ನಮಗೆ ವೋಟ್ ಸಿಗ್ಲಿಕ್ಕಿಲ್ಲ ಅಂತ ಅಧಿಕಾರದಲ್ಲಿದ್ದವರು ಅಂದ್ಕೊಂಡು ಅದ್ಕೆ ಸಪೋರ್ಟ್ ಮಾಡ್ಲಿಲ್ಲ್ವೋ ಏನೋ? ಈಗ ಈ ರೀತಿಯ ಘಟನೆಗಳನ್ನು ನೋಡ್ವಾಗ ನನಿಗೆ ವ್ಯಯಕ್ತಿಕವಾಗಿ ಅನಿಸ್ತದೆ, “ಓ! ಆ ರೂಲ್ ಬರ್ತಿದ್ರೆ ನಮಗೆ, ಊರವ್ರಿಗೆ ಎಲ್ಲ ಕಷ್ಟ ಆಗ್ತಿತ್ತು ಆದರೆ ಇರುವ ಅಳಿದುಳಿದ ಕಾಡಾದ್ರು ಉಳೀತಿತ್ತೇನೋ?” ಅಂತ. ಪ್ರಕೃತಿಗೆ ಎಷ್ಟೇ ಹಾನಿ ನಾವು ಮಾಡಿದ್ರು, ಪ್ರಕೃತಿ ಚೇತರಿಸಿಕೊಳ್ತದೆ, ಆದರೆ ಆ ಚೇತರಿಸಿಕೊಳ್ಳುವ ಸಮಯದಲ್ಲಿ ಹಾನಿಗೊಳಗಾಗುವುದು ಅಲ್ಲಿ ಜೀವಿಸುತ್ತಿರುವ ಮಾನವರು ಮತ್ತು ಇತರ ಪ್ರಾಣಿಗಳು.

ಅಗ್ನಿ ದೇವರಿಗೆ ಅಜೀರ್ಣ ಆಗಿದೆ ಅಂತ ಕಾಡಿಗೆ ಬೆಂಕಿ ಹಚ್ಲಿಕೆ, ಯಾರೂ ಅರ್ಜುನರಲ್ಲ, ಕಾಡು ಖಾಂಡವ ವನವಲ್ಲ, ಎಲ್ಲದರಕ್ಕಿಂತ ಮೊದಲಾಗಿ ಇದು ದ್ವಾಪರಯುಗವಲ್ಲ!!ಹವಾಮಾನ ವೈಪರೀತ್ಯಕ್ಕೆ ಒಳಗಾಗುತ್ತಿರುವ ಕಲಿಯುಗ ಎಂಬುದನ್ನು ಮರೆಯದಿರಿ….!!

 

ಬರಹ :
ಅಂಜಲಿ ವಾಗ್ಲೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

10 hours ago

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

19 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

23 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

2 days ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

2 days ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

2 days ago