ಮಳೆಗಾಲ ಎಂದರೆ ಕೇವಲ ಮಳೆ ಹನಿಗಳ ಸುರಿಮಳೆ ಅಲ್ಲ. ಮಲೆನಾಡಿನಲ್ಲಿ ಅದು ಪ್ರಕೃತಿಯ ವಾರ್ಷಿಕ ಉತ್ಸವ. ಪಶ್ಚಿಮ ಘಟ್ಟದ ಬೆಟ್ಟಗಳು ಮೋಡಗಳನ್ನು ತಬ್ಬಿಕೊಂಡು ನಿಂತಾಗ, ಕಾಡಿನ ಪ್ರತಿಯೊಂದು ಎಲೆ ಹೊಸ ಜೀವ ಪಡೆಯುತ್ತದೆ. ಕಲ್ಲುಬಂಡೆಗಳ ನಡುವೆ ಹುಟ್ಟುವ ಪುಟ್ಟ ಜಲಪಾತಗಳು, ಹಸಿರು ಹೊದಿಕೆಯ ತಗ್ಗುಗಳು, ಮಂಜಿನ ಪರದೆಗಳ ನಡುವೆ ಸಾಗುವ ರಸ್ತೆ.. ಇವೆಲ್ಲವೂ ಸೇರಿ ಮಲೆನಾಡನ್ನು ಮಳೆಗಾಲದಲ್ಲಿ ಭೂಮಿಯ ಮೇಲಿನ ಸ್ವರ್ಗವನ್ನಾಗಿ ರೂಪಿಸುತ್ತವೆ.

ಈ ಬಾರಿ ತಿಂಗಳು ತಡವಾಗಿ ಈ ಸೊಬಗು ಆರಂಭವಾಗಿದೆ. ಪ್ರತೀ ವರ್ಷವೂ ಶಿರಾಡಿ ಘಾಟಿಯ ರಸ್ತೆಯಲ್ಲಿ ಮಳೆಗಾಲದಲ್ಲಿ ಪ್ರಯಾಣಿಸಿದವರು ಆ ಅನುಭವವನ್ನು ಮರೆಯುವುದಿಲ್ಲ. ಒಂದು ತಿರುವಿನಲ್ಲಿ ದಟ್ಟ ಮಂಜು, ಮತ್ತೊಂದು ತಿರುವಿನಲ್ಲಿ ಬೆಟ್ಟದ ಎದೆಯಿಂದ ಧುಮ್ಮಿಕ್ಕುವ ಜಲಪಾತ, ಇನ್ನೊಂದು ಕ್ಷಣದಲ್ಲಿ ಮರಗಳ ತುದಿಗೆ ತಾಕಿ ಹರಿಯುವ ಮೋಡಗಳು, ಮಳೆಯ ಹನಿಗಳು ಸಣ್ಣಕೆ ಬೀಳುವ ಸೊಬಗು. ಹೀಗಾಗಿ ಈ ಸೊಬಗು ಸವಿಯಬೇಕು. ಆದರೆ ಈ ವರ್ಷ ತಡವಾಗಿದೆ.ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ದಕ್ಷಿಣ ಕನ್ನಡವನ್ನು ಹಾಸನದೊಂದಿಗೆ ಸಂಪರ್ಕಿಸುವ ಶಿರಾಡಿ ಘಾಟಿ ಕೇವಲ ರಾಷ್ಟ್ರೀಯ ಹೆದ್ದಾರಿ ಅಲ್ಲ. ಅದು ಪಶ್ಚಿಮ ಘಟ್ಟದ ಜೀವಂತ ಪರಿಸರ ವ್ಯವಸ್ಥೆಯ ನೋಟ. ಮಳೆಗಾಲ ಆರಂಭವಾಗುತ್ತಿದ್ದಂತೆ ಒಣಗಿದ್ದ ಬೆಟ್ಟಗಳು ಹಸಿರು ಹೊದಿಕೆ ತೊಟ್ಟು ನಿಂತುಕೊಳ್ಳುತ್ತವೆ. ಸಣ್ಣ ಹಳ್ಳಗಳು ಉಕ್ಕಿ ಹರಿಯುತ್ತವೆ. ರಸ್ತೆಯ ಎರಡೂ ಬದಿಗಳಲ್ಲಿ ಅನೇಕ ತಾತ್ಕಾಲಿಕ ಜಲಪಾತಗಳು ಕಾಣಿಸಿಕೊಳ್ಳುತ್ತವೆ. ಬೆಳಗಿನ ಹೊತ್ತಿನಲ್ಲಿ ಬೆಟ್ಟಗಳ ನಡುವೆ ಹರಡಿಕೊಂಡಿರುವ ಮಂಜು, ಮಧ್ಯಾಹ್ನದ ತುಂತುರು ಮಳೆ, ಸಂಜೆ ವೇಳೆಗೆ ಕೇಳಿಬರುವ ಕಪ್ಪೆಗಳ ಕೂಗು ಹಾಗೂ ಪಕ್ಷಿಗಳ ಧ್ವನಿ , ಇವೆಲ್ಲವೂ ನಗರ ಜೀವನದ ಗದ್ದಲದಿಂದ ದೂರವಾದ ಅನುಭವವನ್ನು ನೀಡುತ್ತವೆ. ಈಗೀಗ ವಾಹನ ಸದ್ದಿನ ನಡುವೆ ಇದೂ ಮರೆಯಾಗುತ್ತಿದೆ.

ಈ ಮಳೆಯೇ ಕಾವೇರಿ, ನೇತ್ರಾವತಿ, ಕುಮಾರಧಾರಾ ಸೇರಿದಂತೆ ದಕ್ಷಿಣ ಭಾರತದ ಅನೇಕ ನದಿಗಳಿಗೆ ಜೀವ ತುಂಬುತ್ತದೆ. ಇದೇ ಮಳೆಯ ನೀರು ಕಾಫಿ, ಅಡಿಕೆ, ಕರಿಮೆಣಸು, ಏಲಕ್ಕಿ ಮತ್ತು ಭತ್ತದ ಹೊಲಗಳಿಗೆ ಹೊಸ ಚೈತನ್ಯ ನೀಡುತ್ತದೆ. ಆದ್ದರಿಂದ ಮಲೆನಾಡಿನ ಮಳೆ ಕೇವಲ ಪ್ರವಾಸಿಗರ ಕ್ಯಾಮೆರಾದಲ್ಲಿನ ಸುಂದರ ಚಿತ್ರವಲ್ಲ, ಲಕ್ಷಾಂತರ ರೈತರ ಬದುಕಿನ ಆಶಾಕಿರಣವೂ ಹೌದು. ಇದಕ್ಕಾಗಿ ಮಳೆಗಾಗಿ ಎಲ್ಲರ ಚಿತ್ತ. ಈ ಮಳೆಯೇ ಈಗ ಬದುಕಿನ ಆಸರೆ. ಕೃಷಿಕರಿಗೆ ಭವಿಷ್ಯದ ಚಿಂತೆಯಾದರೆ, ಕ್ಯಾಮರಾ ಹೊತ್ತು ಕಾಡಿನ ಸೊಗಬು ಸವಿಯಲು ಬಂದವರಿಗೆ ಇದು ರೀಫ್ರೆಶ್ ಮೆಂಟ್.


ಮಳೆಯನ್ನು ಪದಗಳಲ್ಲಿ ಸಂಪೂರ್ಣವಾಗಿ ವರ್ಣಿಸಲು ಸಾಧ್ಯವಿಲ್ಲ.ಅದನ್ನು ಅನುಭವಿಸಬೇಕು. ಮಳೆಗಾಲದಲ್ಲಿ ಶಿರಾಡಿ ಘಾಟಿಯ ಮೂಲಕ ಒಮ್ಮೆ ಪ್ರಯಾಣಿಸಿದರೆ, ಪಶ್ಚಿಮ ಘಟ್ಟವನ್ನು ಯುನೆಸ್ಕೋ ವಿಶ್ವ ಪರಂಪರೆ ತಾಣವೆಂದು ಏಕೆ ಕರೆಯುತ್ತಾರೆ ಎಂಬುದಕ್ಕೆ ಉತ್ತರ ಪ್ರಕೃತಿಯೇ ನೀಡುತ್ತದೆ. ಈ ಮಳೆಗಾಲದ ಸಮಯದಲ್ಲಿ ಕಾರಿನ ಗಾಜಿನ ಮೇಲೆ ಜಾರುವ ಮಳೆಯ ಹನಿಗಳು, ಮಂಜಿನೊಳಗೆ ಮಾಯವಾಗುವ ರಸ್ತೆ, ಕಾಡಿನ ತಾಜಾ ಮಣ್ಣಿನ ಪರಿಮಳ, ಬೆಟ್ಟದ ತುದಿಯಿಂದ ಧುಮ್ಮಿಕ್ಕುವ ಜಲಪಾತಗಳು … ಇವೆಲ್ಲವೂ ಜೀವನದ ವೇಗವನ್ನು ಕ್ಷಣಮಾತ್ರ ನಿಧಾನಗೊಳಿಸಿ, ಪ್ರಕೃತಿಯೊಡನೆ ಮತ್ತೆ ಬೆಸೆದುಕೊಳ್ಳುವ ಅವಕಾಶ ನೀಡುತ್ತವೆ. ಇದಕ್ಕೆ ನೋಡಿ, ಮಳೆಯೂ ಕಾಲಕಾಲಕ್ಕೆ ಬರಬೇಕು. ಈ ಬಾರಿ ಈ ಅವಕಾಶಕ್ಕೆ ಒಂದು ತಿಂಗಳು ವಿಳಂಬವಾಯ್ತು. ಅದಕ್ಕಾಗಿಯೇ ಪಶ್ವಿಮ ಘಟ್ಟ ಉಳಿಸಿ ಎನ್ನುವ ಕೂಗು ಕೂಡಾ ಹೆಚ್ಚಾಗುತ್ತಿರುವುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
The monsoon transforms Karnataka’s Malnad region and Shiradi Ghat into one of India’s most breathtaking travel destinations. Mist-covered mountains, seasonal waterfalls, evergreen forests, and rain-fed rivers create a spectacular landscape while also sustaining agriculture and biodiversity. Responsible tourism is essential to preserve this fragile ecosystem.

