ಮಹಿಳಾ ಸಬಲೀಕರಣ ಎನ್ನುವುದು ಕೇವಲ ಘೋಷಣೆಯಲ್ಲ, ಅದು ಬದುಕಿನಲ್ಲಿ ಕಾಣಬೇಕಾದ ಬದಲಾವಣೆ. ಈ ಬದಲಾವಣೆಗೆ ಸ್ಪಷ್ಟ ರೂಪ ನೀಡಿರುವ ಸಂಘಟನೆಗಳಲ್ಲಿ ಸುಜನಾ ಸ್ತ್ರೀಶಕ್ತಿ ಸ್ವಸಹಾಯ ಸಂಘ ಇಂದು ರಾಜ್ಯದ ಮಟ್ಟಿಗೆ ಮಾತ್ರವಲ್ಲ, ದೇಶ–ವಿದೇಶಗಳಿಗೂ ಪರಿಚಿತವಾಗುತ್ತಿದೆ.
ಕೇಂದ್ರ ಸರ್ಕಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ಸಮರ್ಥವಾಗಿ ಬಳಸಿಕೊಂಡು, ಸ್ವಉದ್ಯೋಗ, ಕಿರು ಕೈಗಾರಿಕೆ ಮತ್ತು ಪಾರಂಪರಿಕ ಉತ್ಪನ್ನಗಳ ಮೂಲಕ ಯಶಸ್ಸಿನ ಹಾದಿ ಕಟ್ಟಿಕೊಂಡಿರುವುದು ಈ ಸಂಘದ ವಿಶೇಷತೆ.
23 ವರ್ಷಗಳ ಪ್ರಯಾಣ: 60 ಕೆ.ಜಿ.ಯಿಂದ 1000 ಕೆ.ಜಿ.ವರೆಗೆ : ಶಿವಮೊಗ್ಗ ಜಿಲ್ಲೆಯ ಗೋಪಾಳ ಗ್ರಾಮದಲ್ಲಿ ಕಾರ್ಯನಿರತವಾಗಿರುವ ಈ ಸ್ತ್ರೀಶಕ್ತಿ ಸ್ವಸಹಾಯ ಸಂಘ ಕಳೆದ 23 ವರ್ಷಗಳಿಂದ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಎಳ್ಳು–ಬೆಲ್ಲ ತಯಾರಿಸಿ ಮಾರಾಟ ಮಾಡುತ್ತಿದೆ. ಆರಂಭದಲ್ಲಿ ಕೇವಲ 60 ಕೆ.ಜಿ. ಎಳ್ಳು–ಬೆಲ್ಲ ತಯಾರಿಸುತ್ತಿದ್ದ ಸಂಘಕ್ಕೆ ಇಂದು ಸಾವಿರ ಕೆ.ಜಿ.ಗಿಂತಲೂ ಹೆಚ್ಚಿನ ಬೇಡಿಕೆ ಬರುತ್ತಿರುವುದು ಸದಸ್ಯೆಯರ ಶ್ರಮ ಮತ್ತು ಗುಣಮಟ್ಟದ ಸಾಧನೆಯ ಸಾಕ್ಷಿಯಾಗಿದೆ.

ಎಳ್ಳು–ಬೆಲ್ಲ ಮಾತ್ರವಲ್ಲದೆ, ಗೌರಿ–ಗಣೇಶ, ಯುಗಾದಿ ಹಬ್ಬಗಳ ಸಂದರ್ಭ ಸಕ್ಕರೆ ಅಚ್ಚು, ಹತ್ತಿ ಹಾರ, ಗೆಜ್ಜೆ ವಸ್ತ್ರ, ಬತ್ತಿ, ಅರಿಶಿನ–ಕುಂಕುಮ ಸೇರಿದಂತೆ ಪಾರಂಪರಿಕ ವಸ್ತುಗಳನ್ನು ತಯಾರಿಸಿ ಮಾರುಕಟ್ಟೆಗೆ ಒದಗಿಸಲಾಗುತ್ತಿದೆ.
ದೇಶ–ವಿದೇಶಗಳಿಗೂ ರುಚಿ ತಲುಪಿದೆ : ಈ ಸಂಘ ತಯಾರಿಸುವ ಎಳ್ಳು–ಬೆಲ್ಲಕ್ಕೆ ದೇಶದಲ್ಲಷ್ಟೇ ಅಲ್ಲ, ವಿದೇಶಗಳಲ್ಲಿಯೂ ಭಾರೀ ಬೇಡಿಕೆ ಇದೆ. ದೂರದರ್ಶನದೊಂದಿಗೆ ಮಾತನಾಡಿದ ಅಮೆರಿಕಾದಲ್ಲಿ ವಾಸಿಸುವ ಗ್ರಾಹಕ ದಂಪತಿಗಳಾದ ನಿಶಾಂತ್ ಮತ್ತು ಪವಿತ್ರಾ,
“ಕಳೆದ ಮೂರು ವರ್ಷಗಳಿಂದ ಸಂಕ್ರಾಂತಿ ಹಬ್ಬದ ಸಂದರ್ಭ ಅಮೆರಿಕಾಕ್ಕೆ ಇಲ್ಲಿನ ಎಳ್ಳು–ಬೆಲ್ಲ ತರಿಸಿಕೊಳ್ಳುತ್ತಿದ್ದೇವೆ. ಗುಣಮಟ್ಟ ಅತ್ಯುತ್ತಮವಾಗಿದೆ. ಮಹಿಳಾ ಸಬಲೀಕರಣಕ್ಕೆ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಿಂದ ಮಹಿಳೆಯರು ಸ್ವಯಂ ಉದ್ಯೋಗ ಕಂಡುಕೊಂಡಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸದಸ್ಯೆಯರ ಮಾತು: ಸಂಸ್ಕೃತಿ ಹಾಗೂ ಸ್ವಾವಲಂಬನೆ : ಗ್ರಾಹಕ ಮಹಿಳೆ ಶಾಂತಲಾ ಸುರೇಶ್ ಅವರು,
“ಹಬ್ಬಗಳ ಸಂದರ್ಭದಲ್ಲಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಸ್ತುಗಳನ್ನು ಗುಣಮಟ್ಟದೊಂದಿಗೆ ತಯಾರಿಸಿ ಮಾರಾಟ ಮಾಡುತ್ತಿರುವುದು ಇತರ ಸಂಘಗಳಿಗೆ ಮಾದರಿಯಾಗಿದೆ” ಎಂದರು.
ಸಂಘದ ಸದಸ್ಯೆ ಸಾವಿತ್ರಿ ಉಡುಪ ಮಾತನಾಡಿ,
“ಸಂಸ್ಕೃತಿ ಮತ್ತು ಸಂಸ್ಕಾರಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಸಂಘದ ಮೂಲಕ ಹಮ್ಮಿಕೊಳ್ಳುತ್ತೇವೆ”
ಎಂದರು.
ಮತ್ತೋರ್ವ ಸದಸ್ಯೆ ಉಷಾ ಭಟ್,
“ರಾಸಾಯನಿಕ ಮುಕ್ತ ಅರಿಶಿನ–ಕುಂಕುಮ ತಯಾರಿಸುತ್ತಿದ್ದೇವೆ. ಯುವಕ–ಯುವತಿಯರಿಗೆ ಉಚಿತ ಮಾರ್ಗದರ್ಶನ ನೀಡಿ, ಮಾರುಕಟ್ಟೆ ವ್ಯವಸ್ಥೆ ನಿರ್ಮಿಸುತ್ತಿದ್ದೇವೆ”
ಎಂದು ಹೇಳಿದರು.
ಸದಸ್ಯೆ ಸುಕನ್ಯಾ,
“ಎಳ್ಳು–ಬೆಲ್ಲಕ್ಕೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿದೆ. ಇಂತಹ ಕಿರು ಉದ್ಯಮಗಳು ಮಹಿಳೆಯರನ್ನು ಪ್ರಬಲಗೊಳಿಸುತ್ತವೆ”
ಎಂದು ಅಭಿಪ್ರಾಯಪಟ್ಟರು.
ನಾಯಕತ್ವದ ಶಕ್ತಿ : ಸಂಘದ ಮುಖ್ಯಸ್ಥೆ ಉಮಾಮೂರ್ತಿ ಅವರು,
“ಕಳೆದ 23 ವರ್ಷಗಳಿಂದ ಸಂಘ ನಿರಂತರವಾಗಿ ಕಾರ್ಯನಿರತವಾಗಿದೆ. ಕೇಂದ್ರ ಸರ್ಕಾರದ ಹಲವು ಯೋಜನೆಗಳ ನೆರವಿನಿಂದ ಸ್ವಾವಲಂಬನೆ ಸಾಧಿಸಿದ್ದೇವೆ. ಹಬ್ಬಗಳ ವಸ್ತುಗಳ ಜೊತೆಗೆ ದೇಶೀಯ ಗೃಹ ಉತ್ಪನ್ನಗಳನ್ನೂ ತಯಾರಿಸುತ್ತಿದ್ದೇವೆ” ಎಂದು ತಿಳಿಸಿದರು.
ಮಹಿಳೆಯರಿಗೆ ಸ್ಫೂರ್ತಿ : ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವಾವಲಂಬಿತ್ವ ಸಾಧಿಸುವ ಜೊತೆಗೆ, ಇತರ ಮಹಿಳೆಯರ ಬದುಕಿಗೂ ಆಸರೆಯಾಗಿರುವ ಸುಜನಾ ಸ್ತ್ರೀಶಕ್ತಿ ಸ್ವಸಹಾಯ ಸಂಘ ಇಂದು ಮಹಿಳಾ ಸಬಲೀಕರಣದ ಮಾದರಿಯಾಗಿ ನಿಂತಿದೆ. ಗ್ರಾಮೀಣ ಮಹಿಳೆಯರೂ ಉದ್ಯಮಿಗಳಾಗಬಹುದು ಎಂಬುದಕ್ಕೆ ಈ ಸಂಘವೇ ಉತ್ತರ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ



