ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ.. ಸುಳ್ಯದಲ್ಲಿ ಅಭಿವೃದ್ಧಿಯೂ ಆಗಲ್ಲ… ಚುನಾವಣೆ ಬರುವಾಗ ನಾವು ಮನೆ ಮನೆಗೆ ಓಟು ಕೇಳಲು ಯಾವ ಮುಖದಲ್ಲಿ ಹೋಗುವುದು..? ಹೀಗೆಂದು ಸುಳ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಳ್ಯದ ಬೆಳ್ಳಾರೆ ನಿವಾಸಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಹಾಗೂ ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಬೆಳ್ಳಾರೆಯಲ್ಲಿ ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಆಕ್ರೋಶಗೊಂಡಿದ್ದರು. ಕಳೆದ ಹಲವಾರು ಸಮಯಗಳಿಂದ ಸುಳ್ಯದಲ್ಲಿ ಬಿಜೆಪಿ ವಿರುದ್ಧ ಕಾರ್ಯಕರ್ತರು ಅಸಮಾಧಾನಗೊಂಡಿದ್ದರು. ಈಗಾಗಲೇ ಹಲವು ಕಡೆಗಳಲ್ಲಿ ಅಭಿವೃದ್ಧಿ ವಿಚಾರದಲ್ಲಿ ಅಸಮಾಧಾನಗಳು ಬಿಜೆಪಿ ಕಾರ್ಯಕರ್ತರಲ್ಲಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರಲ್ಲಿದೆ. ಆದರೆ ಬಹಿರಂಗವಾಗಿ ಸ್ಫೋಟಗೊಂಡಿರಲಿಲ್ಲ. ಇದೀಗ ಸಕ್ರಿಯ ಕಾರ್ಯಕರ್ತ ಪ್ರವೀಣ ನೆಟ್ಟಾರು ಹತ್ಯೆಯಾದ ಬೆನ್ನಲ್ಲೇ ಆಕ್ರೋಶ ಸ್ಫೋಟಗೊಂಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಹಿಂದೂಗಳಿಗೆ ರಕ್ಷಣೆ ಇಲ್ಲ, ಕಾರ್ಯಕರ್ತರು ಸಂಘಟನೆಯ ಸೂಚನೆ ಮೇರೆಗೇ ಕೆಲಸ ಮಾಡಿದರೂ ಕೇಸುಗಳಾದಾಗ ಯಾವ ಮುಖಂಡರೂ ಸಿಗುವುದಿಲ್ಲ. ಇದೀಗ ಸಕ್ರಿಯ ಕಾರ್ಯಕರ್ತ ಹತ್ಯೆಯಾದಾಗಲೂ ಮೌನವಾಗಿರುವ ನಾಯಕರು ಕೊನೆಗೆ ಬಂದು ನಾಟಕವಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು. #PraveenNettar pic.twitter.com/cmT53zxSJD
— theruralmirror (@ruralmirror) July 27, 2022
ಇದೇ ವೇಳೆ ಸುಳ್ಯ ಅಭಿವೃದ್ಧಿ ನೆಲೆಯಲ್ಲೂ ಹಿಂದೆ ಇದೆ.ಪ್ರತೀ ಬಾರಿ ಕೂಡಾ ಚುನಾವಣೆ ವೇಳೆ ಮತ ಕೇಳಲು ಹೋಗುವಾದ ಮತದಾರರು ನೇರವಾಗಿ ಪ್ರಶ್ನೆ ಮಾಡುತ್ತಾರೆ. ಹಾಗಿದ್ದರೂ ಇದುವರೆಗೆ ಹೇಳುತ್ತಲೇ ಬಂದರೂ ಯಾವ ಕೆಲಸವೂ ಆಗುತ್ತಿಲ್ಲ. ನಾಯಕರು ಕೂಡಾ ಮಾತನಾಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಳ್ಳಾರೆಯಲ್ಲಿ ಬಿಜೆಪಿ ನಾಯಕರು ಆಗಮಿಸಿದಾಗ ಕಾರುಗಳನ್ನು ತಡೆದ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಹಿಂದೂ ಸಂಘಟನೆಯ ಕಾರ್ಯಕರ್ತರ ಜೊತೆ ಮಾತನಾಡಲು ತೆರಳಿದವರನ್ನು ಮಾತನಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಸಚಿವ ಸುನಿಲ್ ಕುಮಾರ್ ಕಾರ್ಯಕರ್ತರನ್ನು ತಪ್ಪಿಸಿ ಹೋಗಿದ್ದರು. ಸಚಿವ ಅಂಗಾರ ಅವರು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುವ ವೇಳೆ ಮೌನವಾಗಿದ್ದರು. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರೂ ಮೌನವಾಗಿದ್ದರು. ಅವರ ಕಾರನ್ನು ತಡೆದ ಗೋ ಬ್ಯಾಕ್ ಎಂದೂ ಹೇಳಿದ್ದರು.
ಹಿಂದೂ ಕಾರ್ಯಕರ್ತ, ಬಿಜೆಪಿ ಯುವಮೋರ್ಚಾ ಕಾರ್ಯಕರ್ತನ ಹತ್ಯೆ ಬಗ್ಗೆ ಆಕ್ರೋಶ #PraveenNettar pic.twitter.com/Tib5d2OhPF
— theruralmirror (@ruralmirror) July 27, 2022