ಸುಳ್ಯದಲ್ಲಿ ಈ ಬಾರಿ ಅಭಿವೃದ್ಧಿಯ ಬಗ್ಗೆ ಚರ್ಚೆಯಾಗುತ್ತಿದೆ. ಈ ನಡುವೆಯೇ ಪಕ್ಷಗಳ ಒಳ ಜಗಳವು ಗ್ರಾಮೀಣ ಜನರ, ಸುಳ್ಯದ ಜನರ ಅಭಿವೃದ್ಧಿಯ ಚರ್ಚೆಯನ್ನು ಮರೆ ಮಾಚುತ್ತಿದೆ. ಸಾಕಷ್ಟು ಕಡೆಗಳಲ್ಲಿ ಮತದಾನ ಬಹಿಷ್ಕಾರ, ಅಭಿವೃದ್ಧಿ ಕೂಗು, ಹೋರಾಟ ನಡೆಯುತ್ತಿದೆ. ಇದೆಲ್ಲವೂ ಬದಲಾವಣೆಯ ಸೂಚನೆಯಾಗಿದೆ. ಈಗಲೂ ಪಕ್ಷಗಳು ಎಚ್ಚೆತ್ತಿಲ್ಲ. ಜನರ ಕೂಗಿಗೆ ಸ್ಪಂದನೆ ನೀಡಿಲ್ಲ. ಈ ಬಾರಿ ಪ್ರಮುಖ ಎರಡು ಪಕ್ಷಗಳಲ್ಲಿ ಒಳಜಗಳಗಳೇ ಮುಳುವಾಗಿದೆ. ಎರಡೂ ಪ್ರಮುಖ ಪಕ್ಷಗಳಿಂದ ಪ್ರತ್ಯೇಕ ಸಭೆ ನಡೆದಿದೆ.
ಕಾಂಗ್ರೆಸ್ ಪಕ್ಷವು ಟಿಕೆಟ್ ಘೋಷಣೆ ಮಾಡಿದೆ. ಸುಳ್ಯಕ್ಕೆ ಜಿ.ಕೃಷ್ಣಪ್ಪ ಅವರು ಅಭ್ಯರ್ಥಿ. ಇದಾದ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಬೆಳವಣಿಗೆ ಆರಂಭಗೊಂಡಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಎಚ್ ಎಂ ನಂದಕುಮಾರ್ ಅವರ ಅಭಿಮಾನಿ ಬಳಗ ಅಸಮಾಧಾನಗೊಂಡಿದೆ. ಕಾಂಗ್ರೆಸ್ ನಾಯಕರ ಎಚ್ಚರಿಕೆ ನಡುವೆಯೇ ಸುಳ್ಯ ಹಾಗೂ ಕಡಬದಲ್ಲಿ ಭಾನುವಾರ ಸಭೆ ನಡೆಸಿದೆ. ಕಳೆದ ಕೆಲವು ಸಮಯಗಳಿಂದ ಗ್ರಾಮ ಗ್ರಾಮಗಳಿಗೆ ತೆರಳಿ ಕಾರ್ಯಕರ್ತರಿಗೂ ಹತ್ತಿರವಾಗಿದ್ದ ನಂದಕುಮಾರ್ ಅವರಿಗೆ ಟಿಕೆಟ್ ಸಿಗದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂದಕುಮಾರ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಪಕ್ಷದ ನಾಯಕರಿಗೆ ಮನವಿ ಮಾಡಲು ನಿರ್ಧರಿಸಿದ್ದಾರೆ. ನಂದಕುಮಾರ್ ಅವರಿಗೆ ಅಭ್ಯರ್ಥಿತನ ಸಿಗದಿದ್ದರೆ ಮತದಾನ ಚಟುವಟಿಕೆಯಿಂದ ಸಂಪೂರ್ಣ ಹಿಂದೆ ಸರಿಯುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎನ್ನುವುದು ಮೂಲಗಳಿಂದ ತಿಳಿದ ಮಾಹಿತಿ.
ಜಿ ಕೃಷ್ಣಪ್ಪ ಅವರು ಕಾಂಗ್ರೆಸ್ ಉನ್ನತ ಮಟ್ಟದಲ್ಲಿ ಪ್ರಭಾವಿ ನಾಯಕ. ಉದ್ಯಮ ಹೊಂದಿದ್ದು ಸುಳ್ಯದ ನಂಟನ್ನೂ ಹೊಂದಿದ್ದಾರೆ. ಪಕ್ಷದ ಹಿರಿಯ ನಾಯಕರ ಪ್ರಭಾವದಿಂದ ಟಿಕೆಟ್ ಪಡೆಯುವಲ್ಲಿ ಯಶಸ್ಸಾಗಿದ್ದಾರೆ. ಆದರೆ ತಳಮಟ್ಟದಲ್ಲಿ ಕೆಲಸ ಮಾಡಲು ಕಾರ್ಯಕರ್ತರ ಬೆಂಬಲ ಅಗತ್ಯ ಇದೆ. ಇದಕ್ಕಾಗಿ ಏನೆಲ್ಲಾ ಸರ್ಕಸ್ ನಡೆಯುತ್ತದೆ ಎನ್ನುವುದು ಕಾಂಗ್ರೆಸ್ ಸವಾಲು.
ಈ ನಡುವೆ ಬಿಜೆಪಿಯಲ್ಲೂ ಅಸಮಾಧಾನಗಳು ಹೆಚ್ಚಾಗಿವೆ. ಕಳೆದ ಐದು ಬಾರಿ ಶಾಸಕರಾಗಿರುವ ಅಂಗಾರ ಅವರನ್ನು ಬದಲಾಯಿಸಬೇಕು ಎಂಬುದು ಪಕ್ಷದ ಕೆಲವು ಕಾರ್ಯಕರ್ತರ ಬೇಡಿಕೆ. ಅಭಿವೃದ್ಧಿ ಕುಂಠಿತವಾಗಿದೆ, ಯಾವುದೇ ಪ್ರತಿಕ್ರಿಯೆ ಇಲ್ಲ ಹೀಗಾಗಿ ಈ ಬಾರಿ ಅವರೇ ಅಭ್ಯರ್ಥಿಯಾದರೆ ಬೆಂಬಲ ಇಲ್ಲ ಎನ್ನುವುದು ಸಾಮಾನ್ಯ ಜನರದ್ದೂ ಅಭಿಪ್ರಾಯ. ಸುಳ್ಯದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆಯ ನಂತರ ಬಿಜೆಪಿಯಲ್ಲಿ ಎರಡು ಪ್ರಮುಖ ಬಣಗಳು ಇವೆ. ಶೇ.50 ರಷ್ಟು ಗ್ರಾಮಗಳಲ್ಲಿ ಈ ಬಣವೂ ಪ್ರಭಾವ ಹೊಂದೆ. ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಈ ಬಣವೂ ಅಗತ್ಯ ಇದೆ. ಈ ಬಣ ಕೂಡಾ ಅಭ್ಯರ್ಥಿ ಬದಲಾವಣೆಗೆ ಒತ್ತಾಯ ಮಾಡಿವೆ. ಕೆಲವ ನಾಯಕರು ಮಾತ್ರವೇ ಅಂಗಾರ ಅವರೇ ಮತ್ತೊಮ್ಮೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಬಿಜೆಪಿಗೂ ಸವಾಲು ಇದು.
ಬಿಜೆಪಿ ಅಭ್ಯರ್ಥಿ ಬದಲಾವಣೆಯ ಸೂಚನೆ ಸಿಕ್ಕಿರುವ ತಕ್ಷಣವೇ ಐದಾರು ಮಂದಿ ತಮ್ಮದೇ ಗುಂಪು ಆರಂಭಿಸಿದ್ದಾರೆ, ಸಾಮಾಜಿಕ ಜಾಲತಾಣಗಳಲ್ಲಿ ಗುಂಪು ಮಾಡಿ ಪ್ರಚಾರವನ್ನೂ ಆರಂಭಿಸಿದ್ದಾರೆ. ಬಿಜೆಪಿ , ಸಂಘಪರಿವಾರವು ಸುಳ್ಯದಲ್ಲಿ ಯಾವತ್ತೂ ಇಂತಹ ಗುಂಪುಗಾರಿಕೆಗೆ ಡಿಸಿಸಿ ಬ್ಯಾಂಕ್ ಚುನಾವಣೆಯವರೆಗೂ ಮಣೆ ಹಾಕಿಲ್ಲ. ಆದರೆ ಈಗ ಸ್ಥಳೀಯ ನಾಯಕರು, ಸಂಘ ಪರಿವಾರದ ನಾಯಕರ ಹಿಡಿತದಲ್ಲಿ ಇಲ್ಲದ ಈ ಗುಂಪುಗಾರಿಕೆಯನ್ನು ತಡೆಯಲು ಆರ್ ಎಸ್ ಎಸ್ ಎಂಟ್ರಿ ನೀಡಲು ಸಿದ್ಧತೆ ಮಾಡಿದೆ. ಇದಕ್ಕಾಗಿ ಈ ಯಾವುದೇ ಗುಂಪಿನಲ್ಲಿ ಇಲ್ಲದ, ಅಭ್ಯರ್ಥಿ ಆಕಾಂಕ್ಷಿ ಎಂದೂ ಸಾಮಾಜಿಕ ಜಾಲತಾಣದಲ್ಲಿ ಬಾರದ ಯುವಕನೊಬ್ಬನನ್ನು ಕಣಕ್ಕೆ ಇಳಿಸುವ ಸಿದ್ಧತೆ ನಡೆಸುತ್ತಿದೆ. ಹೀಗಾಗಿ ಬಿಜೆಪಿಯಲ್ಲೂ ಈ ಬಾರಿ ಇದುವರೆಗೂ ಕಾಣದ, ಬಹಿರಂಗವಾಗಿ ಕಂಡುಬಾರದ ಗುಂಪುಗಾರಿಕೆಯು ಕಾಣುತ್ತಿದೆ. ಕಳೆದ ವಾರದ ಯುಗಾದಿಯ ದಿನದಂದೇ ಬಿಜೆಪಿಯ ಇನ್ನೊಂದು ಬಣದ ಸಭೆಯೂ ನಡೆದಿದೆ. ಬಿಜೆಪಿಗೂ ಇದು ಸವಾಲಾಗಿದೆ.
ಈ ಎಲ್ಲದರ ನಡುವೆಯೇ ಈ ಬಾರಿ ಆಮ್ ಆದ್ಮಿ ಪಕ್ಷವು ಕಣಕ್ಕೆ ಇಳಿದಿದೆ. ವಿದ್ಯಾವಂತ ಮಹಿಳೆ , ಮಾಜಿ ಕಾಂಗ್ರೆಸ್ ಶಾಸಕ ಕುಶಲ ಅವರ ಪುತ್ರಿ ಸುಮನಾ ಬೆಳ್ಳಾರ್ಕರ್ ಈಗಾಗಲೇ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಈಗಾಗಲೇ ಅವರು ಪ್ರಚಾರ ಕಾರ್ಯ ಆರಂಭ ಮಾಡಿದ್ದಾರೆ. ಹೊಸ ಪಕ್ಷಕ್ಕೆ ಅನೇಕರು ಬೆಂಬಲ ವ್ಯಕ್ತ ಪಡಿಸಿದ್ದಾರೆ. ಅದರಲ್ಲೂ ಯುವಕರು ಅಭಿವೃದ್ಧಿ ಪರವಾದ ಕಾಳಜಿ ಇರುವ ಅನೇಕರು ಎಎಪಿ ಪರವಾಗಿ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಸುಳ್ಯದ ಸಮಗ್ರ ಅಭಿವೃದ್ಧಿ ಯೋಚನೆಯನ್ನು ಮುಂದಿರಿಸಿಕೊಂಡು ಪ್ರಚಾರ ಮಾಡುತ್ತಿರುವ ಎಎಪಿ ತಂಡದ ಜಿಲ್ಲಾಧ್ಯಕ್ಷರಾಗಿ ಸುಳ್ಯ ಅಶೋಕ್ ಎಡಮಲೆ ಅವರೂ ಇರುವುದು ಇನ್ನೊಂದು ಪ್ಲಸ್ ಪಾಯಿಂಟ್. ಅಡಿಕೆ ಹಳದಿ ಎಲೆರೋಗ ಸೇರಿದಂತೆ ಕೃಷಿ ಪ್ರಧಾನವಾದ ಸುಳ್ಯ ಅಭಿವೃದ್ಧಿಗೆ ಇಲ್ಲಿಂದಲೇ ಪ್ರಣಾಳಿಕೆಯನ್ನೂ ತಯಾರು ಮಾಡುತ್ತಿದೆ ಈ ಪಕ್ಷ.
ಸುಳ್ಯದಲ್ಲಿ ಈ ಬಾರಿ ಜೆಡಿಎಸ್ ಕೂಡಾ ಸ್ಪರ್ಧೆ ನಡೆಸುವುದಾಗಿ ಹೇಳಿದೆ, ಎಸ್ಡಿಪಿಐ ಕೂಡಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಬಗ್ಗೆ ಹೇಳಿದೆ.
ಸುಳ್ಯ ಕ್ಷೇತ್ರದಲ್ಲಿ ಒಟ್ಟು 2,04252 ಮತದಾರರಿದ್ದು ಅದರಲ್ಲಿ 1,01023 ಪುರುಷರು ಮತ್ತು 1,03227 ಮಹಿಳೆಯರಿದ್ದಾರೆ. ಗೌಡ ಸಮುದಾಯದ ಮತಗಳೇ 1 ಲಕ್ಷದ 10 ಸಾವಿರದಷ್ಟಿದ್ದಾರೆ. ಉಳಿದಂತೆ, 36 ಸಾವಿರ ಮುಸ್ಲಿಂ, 35 ಸಾವಿರ ಎಸ್ಸಿ-ಎಸ್ಟಿ, ಬಂಟರು 7500, ಇತರೇ 18 ಸಾವಿರ ಮತಗಳಿವೆ.
ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಮೂಲಕ 2018 ರ ಚುನಾವಣೆಯಲ್ಲಿ ಅಂಗಾರ 26 ಸಾವಿರ ಮತಗಳಿಂದ ಮುನ್ನಡೆ ಪಡೆದಿದ್ದರೆ, 2013ರ ಚುನಾವಣೆಯಲ್ಲಿ ಅಂಗಾರ 1300 ಮತಗಳ ಅಂತರಿಂದ ಗೆಲುವು ಕಂಡಿದ್ದರು. 2008 ರ ಚುನಾವಣೆಯಲ್ಲಿ 4000 ಮತಗಳ ಅಂತರಿಂದ ಗೆಲುವು ಕಂಡಿದ್ದರು.
ಪ್ರತೀ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಒಳಗಳಗಳೇ ಬಿಜೆಪಿಗೆ ಇಲ್ಲಿ ವರವಾಗಿ ಪರಿಣಮಿಸಿದೆ. ಸರಿಯಾದ ಪ್ರಚಾರ ಕಾರ್ಯ ನಡೆಸದೆ ಬಿಜೆಪಿಗೆ ಪ್ಲಸ್ ಆಗಿತ್ತು. ಈ ಬಾರಿ ಎಎಪಿ ಕೂಡಾ ಕಣದಲ್ಲಿ ಇರುವುದರಿಂದ ಎರಡೂ ಪಕ್ಷಗಳ ಅಸಮಾಧಾನದ ಮತಗಳು ಎಎಪಿ ಕಡೆಗೆ ವಾಲುವ ಸಾಧ್ಯತೆ ಇದೆ.
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…
ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…