ಭತ್ತ ಬೆಳೆಯುವ ರೈತ ಆತ್ಮಹತ್ಯೆಯತ್ತ, ಅಕ್ಕಿ ಮಾರುವ ವ್ಯಾಪಾರಿ ಅರಮನೆಯತ್ತಾ..!. | ವಿವೇಕಾನಂದ ಎಚ್‌ ಕೆ ಬರೆಯುತ್ತಾರೆ….

December 25, 2023
12:50 PM

ವೈಕುಂಠ ಏಕಾದಶಿ(Vaikunta Ekadashi) ಮತ್ತು ರೈತರ ದಿನದ(Farmers Day) ಆಯ್ಕೆಯಲ್ಲಿ ಬಹುತೇಕ ಮಹಿಳೆಯರು(Women) ಮತ್ತು ಮಾಧ್ಯಮಗಳು(Media) ವೈಕುಂಠ ಏಕಾದಶಿಗೆ ಮಹತ್ವ ನೀಡಿದರು. ಆಹಾರ(Food) ಮತ್ತು ಭಕ್ತಿಯ(Bhakthi) ನಡುವೆ ಭಕ್ತಿಯೇ ಪ್ರಧಾನವಾಯಿತು… ಬೆವರಿನ ಮುಂದೆ ಸ್ನಾನವೇ‌ ಶ್ರೇಷ್ಠವಾಯಿತು… ನಾವೆಲ್ಲರೂ ನೆನಪಿಡಬೇಕಾದ – ಪ್ರೀತಿಯಿಂದ – ಹೃದಯದಾಳದಿಂದ ಕೃತಜ್ಞತೆ ಸಲ್ಲಿಸಬೇಕಾದ ಅತ್ಯಂತ ಮಹತ್ವದ ದಿನ.. ರಾಷ್ಟ್ರೀಯ ರೈತ ದಿನ

Advertisement
Advertisement

ಅನ್ನದಾತ ಅನಾಥನಾಗುವ ಮುನ್ನ… ಅನ್ನಕ್ಕಾಗಿ ನಾವು ಪರದಾಡುವ ಮುನ್ನ.. ರೈತರಿಗೆ ಕೊಡಲು ನಮ್ಮ ಬಳಿ ಹಣವಿಲ್ಲ, ರೈತರ ಸಂಕಷ್ಟ ಪರಿಹರಿಸಲು ನಮ್ಮ ಬಳಿ ಅಧಿಕಾರವೂ ಇಲ್ಲ, ಸಣ್ಣ ಪುಟ್ಟ ಹೋರಾಟಗಳಿಗೆ ಕೈ ಜೋಡಿಸಿದರು ಉತ್ತಮ ಫಲಿತಾಂಶ ಕಾಣುತ್ತಿಲ್ಲ. ಏಕೆಂದರೆ ಪ್ರಾಮುಖ್ಯತೆ ಕೊಡಬೇಕಾದ ವಿಷಯಗಳನ್ನು ಮರೆಸಿ ಭಾವನಾತ್ಮಕ ಅಂಶಗಳನ್ನು ಮುನ್ನಲೆಗೆ ತಂದು ಇಡೀ ರೈತ ಸಮೂಹವನ್ನು ವಂಚಿಸಲಾಗುತ್ತಿದೆ. ಮನರಂಜನೆಗೆ ಸಾಕಷ್ಟು ಪ್ರೇಕ್ಷಕರಿದ್ದಾರೆ, ರಾಜಕಾರಣಕ್ಕಾಗಿ ಸಾಕಷ್ಟು ಹಿಂಬಾಲಕರಿದ್ದಾರೆ, ಧಾರ್ಮಿಕ ಕೆಲಸಗಳಿಗೆ ಸಾಕಷ್ಟು ಭಕ್ತರಿದ್ದಾರೆ, ಆದರೆ ರೈತರ ಕಷ್ಟಗಳಿಗೆ ಧ್ವನಿಯಾಗಲು ಮಾತ್ರ ಕೆಲವೇ ಜನರಿದ್ದಾರೆ. ಅದಕ್ಕೆ ಕಾರಣ ಜನರಿಗೆ ತಿನ್ನುವ ಅನ್ನ ಬೆಳೆಯುವ ಕೃಷಿ ಎಂಬುದು ಏನು ಎಂದೇ ಸರಿಯಾದ ತಿಳಿವಳಿಕೆ ಇಲ್ಲ. ದುಡಿದು ದುಡಿದು ಸವೆಯುತ್ತಿರುವ ರೈತರು.. ತಿಂದು ತಿಂದು ಕೊಬ್ಬುತ್ತಿರುವ ಕೆಲವರು.. ದುಡಿಯದೇ ತಿನ್ನುತ್ತಾ ಅನ್ನವೇ ವಿಷವಾಗಿ ಸಾಯುತ್ತಿರುವ ಹಲವರು… ಕೃಷಿ ಮತ್ತು ರೈತ ನಮ್ಮ ಕಣ್ಣ ಮುಂದೆಯೇ ಬಿಕ್ಕಳಿಸುವುದನ್ನು ನೋಡುವ ದೌರ್ಭಾಗ್ಯ ನಮ್ಮದು… ಏಳಿ ಎದ್ದೇಳಿ ಎಚ್ಚರಗೊಳ್ಳಿ , ಅರ್ಥಮಾಡಿಕೊಳ್ಳಿ ನೀವು ದಡ್ಡರೆಂದು, ಆಗ ನಿಮಗೆ ಅರಿವಾಗುತ್ತದೆ ನೀವು ಯಾರೆಂದು, ಆಗ ನಿಮ್ಮ ಶೋಷಣೆಯ ಕಾರಣಗಳು ಅರ್ಥವಾಗುತ್ತದೆ, ಬೆನ್ನು ಮೂಳೆಗೂ ಎಲುಬಿಲ್ಲದ ನಾಲಿಗೆಗೂ ಇರುವ ವ್ಯತ್ಯಾಸ, ಆಗ ತೋರಿಸಿ ಈ ದುರಹಂಕಾರಿಗಳಿಗೆ ಅನ್ನದ ಮಹತ್ವ, ಆಗ ನೋಡಿ ನಿಮ್ಮ ಕಾಲಿಗೆ ಬೀಳುತ್ತಾರೆ, ನೀವೇ ಅನ್ನದಾತರೆಂದು, ಆಮೇಲೆ ಪ್ರತಿದಿನವೂ ನಿಮ್ಮನ್ನೇ ನೆನಪಿಸಿಕೊಳ್ಳುತ್ತಾರೆ. ಅಲ್ಲಿಯವರೆಗೂ ನಿಮ್ಮ ದಿನ ನಿಮ್ಮ ತ್ಯಾಗ ಯಾರಿಗೂ ನೆನಪಾಗುವುದಿಲ್ಲ. ಇದನ್ನು ಸಾಧ್ಯವಾಗಿಸಬೇಕಾಗಿರುವುದು ಶೇಕಡ 70% ರಷ್ಟು ಇರುವ ರೈತರ ವಿದ್ಯಾವಂತ ಮಕ್ಕಳು. ಅವರುಗಳು ಜಾಗೃತರಾದರೆ ಯಾರೂ ತಡೆಯಲು ಸಾಧ್ಯವಿಲ್ಲ.

Advertisement

ರೈತರಾಗುವುದು ವರವೋ ? ಶಾಪವೋ ?: ಅನ್ನದಾತ – ದೇಶದ ಬೆನ್ನೆಲುಬು – ರೈತನೇ ದೇವರು ಈ ಭಾವನಾತ್ಮಕ ನಂಬಿಕೆಗಳನ್ನು ಸ್ವಲ್ಪ ಪಕ್ಕಕ್ಕೆ ಸರಿಸಿ ವಾಸ್ತವ ಪರಿಶೀಲಿಸೋಣ…… ಈ ಕ್ಷಣದಲ್ಲಿ ” ತಿನ್ನವವರಿಗೆ ವರ, ಬೆಳೆಯುವವರಿಗೆ ಶಾಪ ” ಮಂಗನಿಂದ ಮಾನವನಾದ ಕಾಲ ಮುಗಿದು ಕ್ರಮೇಣ ಮಾನವ ಮಂಗನಾಗುತ್ತಿರುವ ಈ ಸನ್ನಿವೇಶದಲ್ಲಿ ರೈತ ಮಾತ್ರ ಆಗಲೂ ಮಂಗನೇ ಈಗಲೂ ಮಂಗನೇ ಎಂದು ವಿಷಾದದಿಂದ, ದುಃಖದಿಂದ ಮತ್ತು ಆಕ್ರೋಶದಿಂದ ಹೇಳಬೇಕೆನಿಸುತ್ತದೆ. ಎಲ್ಲಾ ಕ್ಷೇತ್ರಗಳು ಅಭಿವೃದ್ಧಿಯ ಪಥದಲ್ಲಿ ಸಾಕಷ್ಟು ಮುನ್ನಡೆಯುತ್ತಿರುವಾಗ ಶಿಕ್ಷಣ ಸಾಹಿತ್ಯ ಸಂಗೀತ ವಿಜ್ಞಾನ ಆರೋಗ್ಯ ಆಡಳಿತ ಸಾರಿಗೆ ಸಂಪರ್ಕ ದಿನದಿನಕ್ಕೂ ಹೊಸ ಹೊಸ ಆಯಾಮ ಪಡೆದುಕೊಳ್ಳುತ್ತಿರುವಾಗ ಭಾರತದ ಕೃಷಿ ಮಾತ್ರ ಎಲ್ಲೋ ಕೆಲವು ಸಣ್ಣ ಪುಟ್ಟ ಬದಲಾವಣೆ ಹೊರತುಪಡಿಸಿ ಮೂಲ ನಿಯಮಗಳು ಮಾತ್ರ ಇನ್ನೂ ಗತಕಾಲದ ಅಂಶಗಳನ್ನೇ ಅಳವಡಿಸಿಕೊಂಡಿದೆ.

ಭೂಮಿಯ ಉಪಯೋಗ, ಬಿತ್ತನೆ, ನೀರಾವರಿ, ಸಸ್ಯಗಳ ಬೆಳವಣಿಗೆ, ಕಟಾವು, ಸಂಗ್ರಹಣೆ, ಮಾರುಕಟ್ಟೆ, ಬೆಲೆ ನಿಗದಿ, ಲಾಭ ಹಣದ ಉಪಯೋಗ, ನಷ್ಟದ ಪರಿಸ್ಥಿತಿಯ ನಿರ್ವಹಣೆ, ಕೌಟುಂಬಿಕ ನಿರ್ವಹಣೆ, ನಂಬಿಕೆಗಳು, ಅರಿವು ಮತ್ತು ಅವರ ಒಟ್ಟು ವ್ಯಕ್ತಿತ್ವ ಸಮಾಜದ ದೃಷ್ಟಿಯಲ್ಲಿ ಇನ್ನೂ ಹಾಸ್ಯಾಸ್ಪದವಾಗಿಯೇ ಇದೆ. ಅವರನ್ನು ಶೋಷಿಸಲು ಯಾವ ತಂತ್ರಗಳೂ ಬೇಡ. ಆತನ ವ್ಯಕ್ತಿತ್ವವೇ ಶೋಷಣೆಯನ್ನು ಸ್ವತಃ ತಾನೇ ಒಪ್ಪಿಕೊಳ್ಳುವ ಮನಸ್ಥಿತಿ ಹೊಂದಿದೆ. ವ್ಯಕ್ತಿ ಮೂಲಭೂತವಾಗಿ ಪ್ರಜ್ಞಾವಂತನಾಗಿದ್ದರೆ ಆತ ಮಾಡುವ ಕೆಲಸಗಳು ಸಹ ಘನತೆಯಿಂದ ಕೂಡಿರುತ್ತದೆ. ವೈದ್ಯನೇ ಇರಬಹುದು, ಇಂಜಿನಿಯರೇ ಇರಬಹುದು, ಚಾಲಕ ಶಿಕ್ಷಕ ವಕೀಲ ರಾಜಕಾರಣಿ ವ್ಯಾಪಾರೋದ್ಯಮಿ ಯಾರೇ ಆಗಲಿ ಧೃಡ ಮನಸ್ಸಿನ ಅರಿವಿರುವ ವ್ಯಕ್ತಿತ್ವ ಅವನದಾಗಿದ್ದರೆ ಆತ ಯಾವುದೇ ವ್ಯವಸ್ಥೆಯಲ್ಲಿ ಕನಿಷ್ಠ ಉತ್ತಮ ಬದುಕನ್ನು ರೂಪಿಸಿಕೊಳ್ಳಬಹುದು.

Advertisement

ಆದರೆ ಮೂಲ ಸಾಮಾನ್ಯ ಜ್ಞಾನ ಇಲ್ಲದ ವ್ಯಕ್ತಿ ಯಾವುದೇ ಕೆಲಸ ಮಾಡಿದರೂ ಆತ ಸೋಲುವ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆಯೇ ಹೆಚ್ಚು. ವಾಸ್ತವವಾಗಿ ಭಾರತೀಯ ಬಹುತೇಕ ರೈತರು ಸಾಮಾನ್ಯ ಜ್ಞಾನದಿಂದ ವಂಚಿತರಾಗಿದ್ದಾರೆ. ಜಾಗತೀಕರಣದ ಸ್ಪರ್ಧಾತ್ಮಕ ಬದಲಾವಣೆಗಳನ್ನು ಗಮನಿಸಲೇ ಸಾಧ್ಯವಾಗದಂತ ಕತ್ತಲೆಯಲ್ಲಿ ಮುಳುಗುತ್ತಿದ್ದಾರೆ. ರಾಜಕಾರಣಿಗಳ, ಮಧ್ಯವರ್ತಿಗಳ, ವ್ಯಾಪಾರಿ ವಾಣಿಜ್ಯೋದ್ಯಮಿಗಳ ಬಲೆಯೊಳಗೆ ಬಹು ಸುಲಭವಾಗಿ ಸಿಕ್ಕಿಹಾಕಿಕೊಂಡಿದ್ದಾರೆ. ಬಲಿಷ್ಠ ರಕ್ಷಣಾತ್ಮಕ ಆಡಳಿತ ವ್ಯವಸ್ಥೆ ಹೊಂದಿರುವ ಸರ್ಕಾರದ ವಿರುದ್ಧ ಇನ್ನೂ ಹಳೆಯ ಅಸ್ತ್ರಗಳಾದ ಪ್ರತಿಭಟನೆ, ಮುತ್ತಿಗೆ, ಉಪವಾಸ, ಸತ್ಯಾಗ್ರಹ ಎಂಬ ಮೊಂಡಾದ ಕತ್ತಿಯನ್ನು ಉಪಯೋಗಿಸುತ್ತಿದ್ದಾರೆ. ಅತಿಯಾದ ಜನಸಂಖ್ಯೆಯ ಪರಿಣಾಮ ಮತ್ತು ಬಡತನ ಅಜ್ಞಾನದ ಕಾರಣದಿಂದ ಅನಿವಾರ್ಯವಾಗಿ ಒಡೆದು ಆಳುವ ರಾಜಕೀಯ ಪಕ್ಷಗಳ ಒತ್ತಡಕ್ಕೆ ಒಳಗಾಗುತ್ತಾರೆ ಮತ್ತು ಅತಿಯಾದ ಹಣದ ಹರಿವಿನಿಂದ ಹಾಗು ಹಣದ ಮಹತ್ವದಿಂದ ರೈತನೆಂಬುದು ಶಾಪವಾಗಿ ಮಾರ್ಪಟ್ಟಿದೆ.

ಇದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂಬುದನ್ನು ಮರೆಯದಿರಿ. ಮತ ಎಂಬುದು ನಮ್ಮ ಮತಿಯ ( ಮನಸ್ಸಿನ ) ಅಸ್ತ್ರವಾದಾಗ……. ಒಂದು ವೇಳೆ ಹೊಸ ನಾಯಕತ್ವದ ಹೊಸ ಚಿಂತನೆಯ ಹೊಸ ಗಾಳಿಯೊಂದು ಬಲವಾಗಿ ರೈತರ ಮನಸ್ಸಿನಲ್ಲಿ ಬೀಸಿ ಅವರನ್ನು ಪ್ರಬುದ್ದತೆಯೆಡಗೆ ಆಧುನಿಕತೆಯೆಡೆಗೆ, ಸ್ವತಂತ್ರ ಚಿಂತನೆಯೆಡೆಗೆ ಮುನ್ನಡೆಸಿದರೆ….. ವಿಧಾನಸೌದ – ಪಾರ್ಲಿಮೆಂಟು, ಅಧಿಕಾರಶಾಹಿ, ವ್ಯಾಪಾರಿಗಳು, ಮಧ್ಯವರ್ತಿಗಳು, ವೃತ್ತಿನಿರತರು, ಅಷ್ಟೇ ಏಕೆ, ಇಡೀ ವ್ಯವಸ್ಥೆಯೇ ಬುಡಮೇಲಾಗಿ ” ರೈತನೇ ಅನ್ನದಾತ. ನಮ್ಮ ಬದುಕಿನ ಜೀವ ದ್ರವ್ಯ ರೈತನೇ ” ಎಂದು ಕೂಗಿ ಹೇಳುತ್ತಾ ಎಲ್ಲರೂ ಆತನ ಬಗ್ಗೆ ಘನತೆಯಿಂದ ನಡೆದುಕೊಳ್ಳುವ ದಿನಗಳು ಬರುತ್ತದೆ.

Advertisement

ಮುಖ್ಯವಾಗಿ ರೈತನನ್ನು ಹಾಸ್ಯಾಸ್ಪದವಾಗಿ ನೋಡುವ ಮನರಂಜನಾ ಉದ್ಯಮ, ರಾಜಕೀಯ ವ್ಯವಸ್ಥೆ, ವಾಣಿಜ್ಯೋಧ್ಯಮ, ಮಧ್ಯವರ್ತಿ ವೃತ್ತಿಯಲ್ಲಿರುವವರು ತಾವೇ ಹಾಸ್ಯಾಸ್ಪದವಾಗುತ್ತಾರೆ.. ಆ ಹೊಸ ನಾಯಕತ್ವ ಮತ್ತು ಚಿಂತನೆಯ ತಂಗಾಳಿಗಾಗಿ ಕಾಯುತ್ತಿರುವ… ನಿಂಬೆ ಹಣ್ಣು ಮಾರುವ ಅಜ್ಜಿಯ ಬಳಿ ಚೌಕಾಸಿ ಮಾಡದಿರಿ… ಸೊಪ್ಪಿನ ಅಜ್ಜನ ಬಳಿ ಕೊಸರಾಡದಿರಿ……. ಕಡಲೆಕಾಯಿ ಮಾರುವವರ ಹತ್ತಿರ ಜಗಳವಾಡದಿರಿ….. ಹಣ್ಣಿನವನ ಹತ್ತಿರ ಪೌರುಷ ತೋರದಿರಿ….. ಎಳನೀರಿನವರ ಬಳಿ ಜುಗ್ಗುತನದಿಂದ ವರ್ತಿಸದಿರಿ… ಹೂವಿನವರ ಹತ್ತಿರ ನಿಮ್ಮೆಲ್ಲಾ ಜಿಪುಣತನ ಖರ್ಚುಮಾಡದಿರಿ……ಗೊತ್ತೇ ನಿಮಗೆ ಹಣ್ಣು ತರಕಾರಿ ಸೊಪ್ಪು ಬೇಳೆಕಾಳುಗಳು ಭತ್ತ ಬೆಳೆಯುವವರ ಕಷ್ಟ,….. ಗೊತ್ತೇ ನಿಮಗೆ ಅವು ಬೆಳೆಯಲು ಎಷ್ಟು ದಿನ ಬೇಕೆಂದು… ನಿಮ್ಮ ಮನೆಯಲ್ಲಿ ಬೇಯುವ ಅನ್ನ ಕಂಪ್ಯೂಟರ್ ನಲ್ಲಿ ತಯಾರಾದದ್ದಲ್ಲ.. ನೀವು ಊಟ ಮಾಡುವ ತರಕಾರಿ ಇಂಟರ್ನೆಟ್ ನಲ್ಲಿ ಬೆಳೆದದ್ದಲ್ಲ… ಅದು ರೈತರ ಬೆವರ ಹನಿಗಳಿಂದ ಬಸಿದದ್ದು… ತಾಕತಿದ್ದರೆ Pizza – Burger ಹೋಟೆಲ್ ಗಳಲ್ಲಿ ಚೌಕಾಸಿ ಮಾಡಿ… ಧೈರ್ಯವಿದ್ದರೆ Shopping mall ಗಳಲ್ಲಿ ಕೊಸರಾಡಿ… ಶಕ್ತಿಯಿದ್ದರೆ Multiplex theater ಟಿಕೆಟ್ ಕೌಂಟರ್ ನಲ್ಲಿ ಜಗಳವಾಡಿ… ಸದ್ಯಕ್ಕೆ ಸಾಮಾನ್ಯರಿಗೆ ಊಟಕ್ಕೇನು ಕೊರತೆ ಇಲ್ಲ, ರಾಜಕಾರಣಿಗಳಿಗೆ ಓಟು ಕೊಳ್ಳಲು ಸಮಸ್ಯೆ ಇಲ್ಲ, ಉದ್ಯಮಿಗಳಿಗೆ ವ್ಯಾಪಾರಕ್ಕೇನು ತೊಂದರೆ ಇಲ್ಲ,..

ಡಾಕ್ಟರು, ಆಕ್ಟರು, ಮೇಷ್ಟರು, ಲಾಯರು, ಆಡಿಟರು, ಬ್ರೋಕರು, ಆಫೀಸರು ಯಾರಿಗೂ ತೊಂದರೆ ಏನೂ ಇಲ್ಲ.. ನೋಡೋಣ ಮುಂದೆ.. ರೈತರೆಲ್ಲ ವಿಷ ಕುಡಿದು ಸತ್ತ ಮೇಲೆ, ಊಟಕ್ಕೆ ತೊಂದರೆಯಾದ ಮೇಲೆ ರೈತರನ್ನು ನೆನಪಿಸಿಕೊಳ್ಳೋಣ… ಅಲ್ಲಿಯವರೆಗೂ ಚೆನ್ನಾಗಿ ಊಟ ಮಾಡ್ಕೊಂಡು ಎಲ್ರೂ ಆರಾಮವಾಗಿರಿ…. ಬೆಳಗಿನ ಬಿಸಿ ಬಿಸಿ ಕಾಫಿ ಟೀ, ನಂತರದ ಉಪ್ಪಿಟ್ಟು ಚಿತ್ರಾನ್ನ ಇಡ್ಲಿ ವಡೆ ದೋಸೆ, ಮಧ್ಯಾಹ್ನದ ರೊಟ್ಟಿ ಚಪಾತಿ ಮುದ್ದೆ ಅನ್ನ, ಸಂಜೆಯ ಪಾನಿಪುರಿ, ಮಸಾಲಾ ಪುರಿ, ಬೇಲ್ ಪುರಿ, ವಡಾ ಪಾವ್, ಪಾವ್ ಬಾಜಿ, ರಾತ್ರಿಯ ಚಿಕನ್ ಮಟನ್ ರೋಟಿ, ದಾಲ್ ಪಾಲಾಕ್, ದೋಕ್ಲಾ, ಕಿಚಡಿ ಎಲ್ಲಾ ದುಡ್ಡು ಕೊಟ್ಟರೆ ಸಿಗುತ್ತದೆ. ಮನೆಗೇ ತಂದು ಕೊಡುತ್ತಾರೆ.

Advertisement

ಫಾದರ್ಸ್ ಡೇ, ಮದರ್ಸ್ ಡೇ, ಚಿಲ್ಡ್ರನ್ಸ್ ಡೇ, ವ್ಯಾಲೆಂಟೈನ್ ಡೇ, ಆ ಡೇ ಈ ಡೇ….ಎಲ್ಲಾ ಸಂಭ್ರಮದಿಂದ ಆಚರಿಸಿ….. ನೋಡೋಣ ಗಾಡಿ ಹೀಗೆ ಎಷ್ಟು ದೂರ ಹೋಗುತ್ತೆ ಅಂತ…. ರೈತರ ಬೆವರಿನ ಘಮಲು, ಶ್ರಮದ ನಿಟ್ಟುಸಿರು, ನಿರಾಸೆಯ ಆಕ್ರಂದನ, ನೋವಿನ ಕೂಗು, ಈ ಸಮಾಜಕ್ಕೆ ತಟ್ಟುವವರೆಗೂ.. ಮನುಷ್ಯ ಪ್ರಾಣಿಗಳ ಸುಖಕ್ಕೆ ತೊಂದರೆಯೇನು ಇಲ್ಲ…… ಆತ್ಮವಂಚಕರು, ನಾವು ಆತ್ಮವಂಚಕರು… ಕ್ಷಮಿಸಿ, ಇದು ಯಾರ ವಿರುದ್ಧದ ದ್ವೇಷವೂ ಅಲ್ಲ, ನಿಮ್ಮ ಮನಸ್ಸಿನ ಜಾಗೃತಿಗಾಗಿ, ನಿಮ್ಮ ಗಮನ ಸೆಳೆಯಲು, ರೈತರ ಶ್ರಮವನ್ನು ನಿಮಗೆ ನೆನಪಿಸಲು, ಆಹಾರದ ಮಹತ್ವ ಸಾರಲು ಮಾತ್ರ…….

ಬರಹ : ವಿವೇಕಾನಂದ ಎಚ್. ಕೆ.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

Karnataka Weather | 28-04-2024 | ರಾಜ್ಯದಲ್ಲಿ ಒಣ ಹವೆ | ಕರಾವಳಿ ಜಿಲ್ಲೆಗಳಲ್ಲಿ ಮೋಡ |
April 28, 2024
11:41 AM
by: ಸಾಯಿಶೇಖರ್ ಕರಿಕಳ
20 ಕೃಷಿ ಉತ್ಪನ್ನಗಳ ರಫ್ತುಗಳಿಗೆ ಉತ್ತೇಜನ ನೀಡುವ ಯೋಜನೆ |
April 27, 2024
9:05 PM
by: ದ ರೂರಲ್ ಮಿರರ್.ಕಾಂ
Karnataka Weather | 27-04-2024 | ಮೋಡ- ಬಿಸಿಗಾಳಿ | ಮಳೆ ಸಾಧ್ಯತೆ ಕಡಿಮೆ |
April 27, 2024
3:21 PM
by: ಸಾಯಿಶೇಖರ್ ಕರಿಕಳ
ಕೋವಿ ಠೇವಣಾತಿ ಪ್ರಕರಣ | ಬೆಳ್ಳಾರೆ ಜಯಪ್ರಸಾದ್ ಜೋಶಿ ಹಾಗೂ ಇತರ 4 ರಿಟ್ ಅರ್ಜಿದಾರರ ಪರ ಹೈಕೋರ್ಟ್ ಆದೇಶ‌ |
April 27, 2024
2:15 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror