Advertisement
ಅನುಕ್ರಮ

ಸ್ವಪ್ರಯತ್ನವೊಂದೇ ಯಶಸ್ಸಿನ ಹೆದ್ದಾರಿ

Share

ಭಗವದ್ಗೀತೆಯಲ್ಲಿ ಒಂದು ಬೋಧನೆ ಇದೆ. “ನಿನ್ನ ಕೆಲಸ ನೀನು ಮಾಡುತ್ತಿರು. ಕೆಲಸಕ್ಕೆ ತಕ್ಕ ಪ್ರಯೋಜನ ಸಿಕ್ಕುವಲ್ಲಿ ಅವಿಶ್ವಾಸ ಬೇಡ”. ಸ್ವಪ್ರಯತ್ನಕ್ಕೆ ಪ್ರೇರಣೆ ನೀಡುವ ಮಾತಿದು. ಇದನ್ನು ಅರ್ಥಮಾಡಿಕೊಂಡರೆ ನಮ್ಮ ಬಡತನದ ಹಿಂದೆ ಮತ್ತು ನಮ್ಮ ಪರಾಧೀನತೆಯ ಹಿಂದೆ ನಮ್ಮ ಕರ್ತವ್ಯಚ್ಯುತಿಯೇ ಕಾರಣವೆಂಬುದನ್ನು ಗಮನಿಸಬೇಕು. ಕರ್ತವ್ಯಪರಾಯಣತೆ ಉಳ್ಳವನೇ ವಿದ್ಯಾವಂತನಾಗಬಲ್ಲ.

Advertisement

ಬಡವನಾಗಿ ಹುಟ್ಟುವುದು ಒಬ್ಬನ ತಪ್ಪಲ್ಲ. ಆದರೆ ಬಡವನಾಗಿ ಒಬ್ಬ ಸತ್ತರೆ ಅದು ಅವನದೇ ತಪ್ಪು. ನಮ್ಮ ದೇಶದ ಮಧ್ಯಮವರ್ಗದ ವಿದ್ಯಾರ್ಥಿಗಳನ್ನು ಗಮನದಲ್ಲಿಸಿಕೊಂಡು ನಾನು ಈ ಪ್ರಶ್ನೆಯನ್ನು ಚರ್ಚೆಗೆ ಎತ್ತಿಕೊಂಡಿದ್ದೇನೆ. ಬಡವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮತ್ತು ಶೈಕ್ಷಣಿಕ ಪರಿಸರದ ಕೊರತೆ ಕಾಡುತ್ತಿದ್ದಾಗಲೂ ಅದ್ಭುತ ಯಶಸ್ಸು ಸಾಧಿಸಿದ ಬಡವಿದ್ಯಾರ್ಥಿಗಳ ಉದಾಹರಣೆಗಳು ಸಾಕಷ್ಟು ಇವೆ. ಶ್ರೀಮಂತರ ಮಕ್ಕಳಿಗೆ ಶಿಕ್ಷಣ ಪ್ರಕ್ರಿಯೆಯೊಳಗೆ ಸೇರಿ ಬೇಕಾದ್ದು ಪದವಿ ಸರ್ಟಿಫಿಕೇಟ್ ಮಾತ್ರ. ಉಳಿದಂತೆ ಅವರ ಬದುಕಿನ ಭದ್ರತೆಗೆ ಹೆತ್ತವರು ಪಂಚಾಂಗ ಗಟ್ಟಿ ಮಾಡಿಟ್ಟಿರುತ್ತಾರೆ. ಹಾಗಾಗಿ ಅವರಿಗೆ ಕಲಿಯುವುದನ್ನು ಬಿಟ್ಟು ಬೇರೆ ವ್ಯಸನಗಳಿಗೆ ಅವಕಾಶವಿದೆ. ಆದರೆ ಶೈಕ್ಷಣಿಕ ಪರಿಸರ ಮತ್ತು ಹೆತ್ತವರ ಪ್ರೋತ್ಸಾಹದ ಭಾಗ್ಯ ದೊರಕಿದರೂ ಮಧ್ಯಮವರ್ಗದವರ ಮಕ್ಕಳು ಕಲಿಕೆಯ ಪ್ರಕ್ರಿಯೆಯಲ್ಲಿ ಪ್ರಯತ್ನಶೀಲರಾಗುವುದಿಲ್ಲವೇಕೆ? ತರಗತಿಯಲ್ಲಿ ಕಲಿಸಿದ ಪಾಠವನ್ನು ಅರ್ಥೈಸಿಕೊಂಡು ತಿಳಿದುಕೊಳ್ಳುವ ಪ್ರಯತ್ನದಲ್ಲಿ ಆಲಸ್ಯ ತೋರುತ್ತಿರುವುದೇಕೆ? ಪಠ್ಯಪೂರಕ ಕೃತಿಗಳನ್ನು ಓದಲು ಎತ್ತಿಕೊಳ್ಳುತ್ತಿಲ್ಲವೇಕೆ? ಸ್ಮಾರ್ಟ್‌ಫೋನ್‍ನಲ್ಲಿ ಲಭ್ಯವಿರುವ ಆಟಗಳು, ಇಂಟರ್‍ನೆಟ್ ಬಳಕೆ, ನಿಸ್ತಂತು
ಸಂವಹನಗಳಲ್ಲಿ ಶೀಘ್ರವಾಗಿ ಪ್ರಬುದ್ಧರಾಗುವ ವಿದ್ಯಾರ್ಥಿಗಳಿಗೆ ತಾವು ಕಲಿಕೆಯಲ್ಲಿ ಹಿಂದೆ ಬೀಳುತ್ತಿರುವುದರ ಬಗ್ಗೆ
ಅಲಕ್ಷ್ಯವೇಕೆ? ನನಗನ್ನಿಸುವಂತೆ ತಮ್ಮ ಅಪ್ಪ ಅಮ್ಮ ಹಣದ ಪೂರೈಕೆ ಮಾಡುತ್ತಿರುವಷ್ಟು ಕಾಲ ಇವರು ಕಲಿಕೆಯ
ಹೊಣೆಯನ್ನು ಮರೆಯುತ್ತಾರೆ!

ಉದಾಹರಣೆಗಳು ಅನೇಕ ಇವೆ. ಒಂದು ಸಣ್ಣ ಪಟ್ಟಣದಲ್ಲಿ ದಿನಕ್ಕೆ ಒಂದು ಸಾವಿರಕ್ಕೂ ಮಿಕ್ಕಿ (ಅಂದರೆ ತಿಂಗಳಿಗೆ ಹೆಚ್ಚುಕಡಿಮೆ 25,000/-ಕ್ಕೂ ಮೀರಿದ) ಆದಾಯ ಗಳಿಸುತ್ತಿರುವ ಒಬ್ಬ ಟೈಲರ್‍ರ ಮಗ ಇಂಜಿನಿಯರಿಂಗ್ ಕಲಿತು ಇಂದು ಬೆಂಗಳೂರಿನಲ್ಲಿ ತಿಂಗಳಿಗೆ ಹತ್ತು ಸಾವಿರ ರೂಪಾೈ ಸಂಬಳಕ್ಕೆ ದುಡಿಯುತ್ತಿದ್ದಾನೆ. ಮಗ ಇಂಜಿನಿಯರ್ ಆಗಬೇಕೆಂಬ ಆಸೆ ಅಪ್ಪನಿಗೂ ಇತ್ತು, ಮಗನಿಗೂ ಇತ್ತು. ಆದರೆ ಕಲಿಯುವ ಅವಧಿಯಲ್ಲಿ ಮಗನ ಆಸಕ್ತಿ ಕಲಿಕೆಗಿಂತ ಹೆಚ್ಚು ತಿರುಗಾಟ, ಪಟ್ಟಾಂಗ, ಮೊಬೈಲ್‍ಗಳಲ್ಲಿ ಇತ್ತು. ಈಗ ಉತ್ತಮ ವೇತನದ ಉದ್ಯೋಗ ಸಿಗುವಂತಹ ಅಂಕಗಳೂ ಕೌಶಲವೂ ಇಲ್ಲದೆ “ಸಿಕ್ಕಿದ ಸಂಬಳ ಸಾಕು, ಮುಂದೆ
ಅನುಭವ ಆದ ಬಳಿಕ ಒಳ್ಳೆಯ ಸಂಬಳ ಸಿಗಬಹುದು” ಎಂಬ ಆಸೆಯಿಂದ ದುಡಿಯುತ್ತಿದ್ದಾನೆ. ಕೆಲವೊಮ್ಮೆ ಖರ್ಚಿಗೆ ಅಪ್ಪನೇ ಕೊಡಬೇಕಾಗುತ್ತದೆ. ಆದರೆ ಆತ ವಿದ್ಯಾರ್ಥಿಯಾಗಿದ್ದಾಗಲೇ ಕಲಿಕೆಯಲ್ಲಿ ಆಸಕ್ತಿ ವಹಿಸಿ ಉತ್ತಮ ಸಾಧನೆ ಮಾಡಿದ್ದಿದ್ದರೆ ಈ ಅವಸ್ಥೆ ಬರುತ್ತಿರಲಿಲ್ಲ. ಮಗ “ಬೇಕು” ಎಂದದ್ದೆಲ್ಲವನ್ನೂ ತಂದೆ ತನ್ನ ದುಡಿಮೆಯಿಂದ ಪೂರೈಸಿದ್ದರು. ಯಾಕೆ ಪೂರೈಸಿದ್ದರೆಂದರೆ ಮಗನಿಗೆ ಸ್ನೇಹಿತರ ಮುಂದೆ ಅಗೌರವ ಆಗಬಾರದು ಮತ್ತು ಆ ಕಾರಣದಿಂದ ಆತ್ಮಹತ್ಯೆಯಂತಹ ಸಂಕೀರ್ಣ ತೀರ್ಮಾನಕ್ಕೆ ಬರಬಾರದೆಂಬ ಭಯ ಅವರಲ್ಲಿತ್ತು. ಆತ್ಮೀಯತೆಯಿಂದ ನನ್ನೊಡನೆ ಈ ಮಾತು ಹೇಳಿದ ಆ ಟೈಲರ್ ತಾನು ಎಳವೆಯಿಂದಲೇ ಮಗನಿಗೆ ಸರಿಯಾದ ಮಾರ್ಗದರ್ಶನ ನೀಡದೆ ತಪ್ಪು ಮಾಡಿದೆನೆಂಬ ಭಾವ ಹೊಂದಿದ್ದರು.

ಮರ ಹತ್ತುವ ಧೈರ್ಯ ಮತ್ತು ಕೌಶಲವುಳ್ಳವರು ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ಆ ಕೆಲಸ ಮಾಡಬಲ್ಲವರು ಉತ್ತಮ ಆದಾಯ ಗಳಿಸುತ್ತಾರೆ. ಒಂದು ತೆಂಗಿನ ಮರ ಹತ್ತಿ ಕಾಯಿ ಕೊೈದದ್ದಕ್ಕೆ ರೂಪಾೈ 50/-ರಂತೆ ಪಡೆಯುವ ಒಬ್ಬಾತ ಬೆಳಗ್ಗೆ ಆರೂವರೆಗೆ ಕೆಲಸ ಪ್ರಾರಂಭಿಸಿ ಒಂಭತ್ತೂವರೆಯೊಳಗೆ ಸುಮಾರು 25 -30 ಮರ ಹತ್ತಿ ಇಳಿದು ಒಂದು ಸಾವಿರ ರೂಪಾೈಗಳಿಗಿಂತ ಹೆಚ್ಚು ಸಂಪಾದನೆ ಮಾಡುತ್ತಿದ್ದಾರೆ. ಆದರೆ ಅವರ ಮಗಳು ಎಸ್.ಎಸ್.ಎಲ್.ಸಿ. ಓದಿದ್ದು ಈಗ ಲಾಕ್‍ಡೌನ್ ಕಾಲದಲ್ಲಿ ಪಿ.ಯು.ಸಿ. ಸೇರಿದ್ದರೂ ದಿನದ ಬಹುಭಾಗ ಕಿವಿಗೆ ವಯರ್ ಹಾಕಿಕೊಂಡು ಮೊಬೈಲ್ ಹಿಡಿದುಕೊಂಡು ನಮ್ಮ ಶಾಲಾ ಕ್ಯಾಂಪಸ್‍ನಲ್ಲಿ ತಿರುಗುತ್ತಿದ್ದಳು. ಓದಿನ ಕಡೆಗೆ ಆಕೆ ಗಮನ ಕೊಡುವಂತೆ ಮಾಡಲು ಆಕೆಯ ತಂದೆಗೆ ಸಾಧ್ಯವಾಗದ ಬಗ್ಗೆ, “ನಾನೇನು ಮಾಡುವುದು. ಬೇಕಾದ್ದೆಲ್ಲವನ್ನು ನಾನು ಒದಗಿಸಿ ಕೊಡುತ್ತೇನೆ. ಕಲಿತು ಸಾಧನೆ ಮಾಡುವುದು ಮಕ್ಕಳ ಜವಾಬ್ದಾರಿ. ಮಾಡದಿದ್ದರೆ ಅವ್ರಿಗೇ ಇಲ್ಲ” ಎಂದರು.

ಇದ್ಯಾಕೆ ಹೀಗೆ ವಿದ್ಯಾರ್ಥಿಗಳಲ್ಲಿ ಸುಖದ ಅಪೇಕ್ಷೆ, ಆಲಸ್ಯ ಮತ್ತು ಅಲ್ಪತೃಪ್ತಿಯ ವಿದ್ಯಮಾನ ವ್ಯಾಪಕವಾಗುತ್ತಿದೆ? ಇದಕ್ಕೆ ಕಾರಣವೇನೆಂದರೆ ಹೆತ್ತವರು ಮಕ್ಕಳ ಕಲಿಕೆಗಾಗಿ ಹಣದ ‘ಪೂರೈಕೆಯ ಪಾತ್ರವನ್ನು’ ಮಾತ್ರ ನಿರ್ವಹಿಸುತ್ತಾರೆ. ಅದರ ಸದುಪಯೋಗದ ಬಗ್ಗೆ ಎಚ್ಚರ ನೀಡುವುದಿಲ್ಲ! ಈ ಎಚ್ಚರವನ್ನು ಪ್ರೌಢಶಾಲೆ ದಾಟಿ ಕಾಲೇಜು ಮಟ್ಟಕ್ಕೆ ತಲುಪಿದ ನಂತರ ವಹಿಸಿದರೆ ಸಾಕಾಗುವುದಿಲ್ಲ. ಅದಕ್ಕೆ ಮೊದಲೇ ಅಂದರೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲೇ ಮಕ್ಕಳಿಗೆ ಸಾಧನೆಯ ಗುರಿ ಮತ್ತು ಅದನ್ನು ತಲುಪುವ ಮಾರ್ಗದ ಬಗ್ಗೆ ತರಬೇತಿ ನಡೆಯಬೇಕು. ಅದಕ್ಕಾಗಿ ಹೆತ್ತವರು ತಮ್ಮ ಮಕ್ಕಳ ಈ ಹಂತದಲ್ಲಿ ಶಿಕ್ಷಕರೊಂದಿಗೆ ಸಂವಹನ ಇರಿಸಿಕೊಂಡು ಕಲಿಕೆಯ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು.

ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಬರಲು ಅಂದವಾದ ಅಕ್ಷರ, ಸ್ಫುಟವಾದ ಬರಹ, ಸ್ಪಷ್ಟ ಓದುವಿಕೆ, ಸ್ಪೆಲ್ಲಿಂಗ್ ತಪ್ಪಿಲ್ಲದ ಬರವಣಿಗೆ, ಗಣಿತದ ಕೌಶಲಕ್ಕಾಗಿ ಮಗ್ಗಿ ಬಾಯಿಪಾಠ, ವಿಜ್ಞಾನದ ಸಿದ್ಧಿಗಾಗಿ ಅವಲೋಕನದ ಸಾಮರ್ಥ್ಯ, ಸ್ಮರಣಶಕ್ತಿಯ ವೃದ್ಧಿ, ವಿಶ್ಲೇಷಣಾ ಕೌಶಲಕ್ಕಾಗಿ ಚಿಂತನ ಸಾಮರ್ಥ್ಯದ ಗಳಿಕೆ ಹೀಗೆ ಪಠ್ಯಪೂರಕವಾಗಿ ಮಕ್ಕಳು ಪ್ರಾಥಮಿಕ ಹಂತದಲ್ಲಿ ವಿವಿಧ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ತರಬೇತಿಯನ್ನು ಶಾಲೆಗಳು ನೀಡಬೇಕು. ಅವುಗಳ ಅಭ್ಯಾಸಗಳು ಮನೆಯಲ್ಲಿ ಜರಗಬೇಕು. ಆದರೆ ಶಾಲೆಗಳಲ್ಲೂ ಮನೆಗಳಲ್ಲೂ ಆಗಬೇಕಾದ ಪ್ರಕ್ರಿಯೆಗಳು ಕುಂಠಿತಗೊಳ್ಳುತ್ತಿರುವ ವಿದ್ಯಮಾನ ಇಂದು ಕಂಡು ಬರುತ್ತಿದೆ. ಮಕ್ಕಳು ಪರಿಕ್ಷೆಯಲ್ಲಿ ಏನೇ ಉತ್ತರ ಬರೆದರೂ ಅಂಕಗಳನ್ನು ನೀಡುವ ಅಭ್ಯಾಸ ಬೆಳೆದಿದೆ. ಇದರಿಂದಾಗಿ ಮಕ್ಕಳಿಗೂ ಪರೀಕ್ಷೆ ಎಂಬುದು ಒಂದು ಹಗುರವಾದ ಸಂಗತಿಯಾಗಿದೆ. ಪರಿಕಲ್ಪನೆಗಳನ್ನೇ ಅರ್ಥೈಸಿಕೊಳ್ಳದೆ, ಪಠಣ-ಮನನ-ನಿಧಿಧ್ಯಾಸನ ಕ್ರಿಯೆಯಲ್ಲಿ ತೊಡಗದೆ ಮಕ್ಕಳು ದೊಡ್ಡವರಾಗಿ ಕಾಲೇಜಿಗೆ ಬರುವ ಹೊತ್ತಿಗೆ ಅವರಲ್ಲಿ ಇರಬೇಕಾದ ಅನೇಕ ಸಾಮರ್ಥ್ಯಗಳು
ಚಿಗುರೊಡೆಯದೇ ಇರುವುದು ಕಂಡುಬರುತ್ತದೆ. ಇದು ಶಿಕ್ಷಣದ ಗುಣಮಟ್ಟದ ಮೇಲೆ ತೀವ್ರ ದುಷ್ಪರಿಣಾಮ ಉಂಟುಮಾಡುವ ಸಂಗತಿಯಾಗಿದೆ. ಹಾಗಾಗಿ ಉನ್ನತ ಸಾಧನೆಗಾಗಿ ‘ಕಲಿಯುವುದೆಂದರೇನು’ ಎಂಬುದನ್ನು ಮಕ್ಕಳು
ಕಲಿಯಬೇಕಾದ ಅಗತ್ಯವಿದೆ.

ಬರಹ :
ಚಂದ್ರಶೇಖರ ದಾಮ್ಲೆ

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಮಂಗಳೂರು ಅಡಿಕೆ ಮಾರುಕಟ್ಟೆ ‘ಸೈಕಲಾಜಿಕಲ್ ಬಫರ್’ ಹಂತಕ್ಕೆ…!

ಮಂಗಳೂರಿನ ಅಡಿಕೆ ಮಾರುಕಟ್ಟೆಯು ಪ್ರಸ್ತುತ ಕೇವಲ ಬೆಲೆ ಏರಿಳಿತದ ಕೇಂದ್ರವಾಗಿ ಉಳಿದಿಲ್ಲ; ಬದಲಾಗಿ…

5 hours ago

ಗೇರು ಹಣ್ಣಿನಿಂದ ಆದಾಯಕ್ಕೆ ಹೊಸ ದಾರಿ | ಮಾ.11 ರಂದು ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಉದ್ಯಮ–ವಿಜ್ಞಾನಿಗಳ ಸಂವಾದ

ಪುತ್ತೂರಿನ ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಮಾರ್ಚ್‌ 11ರಂದು ಗೋಡಂಬಿ ಹಣ್ಣಿನ ಮೌಲ್ಯವರ್ಧನೆ ಕುರಿತು…

20 hours ago

ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ

ಇತರರ ಪರಿಶ್ರಮವನ್ನು ಮೆಟ್ಟಿಲಾಗಿಸಿಕೊಂಡ ಸಾಧನೆ ತಾತ್ಕಾಲಿಕವಾಗಿದ್ದು, ನಿಜವಾದ ಯಶಸ್ಸು ಸ್ವಪರಿಶ್ರಮ, ಸತ್ಯ ಮತ್ತು…

20 hours ago

ಹಿರಿಯರ ಪರಿಶ್ರಮದ ಫಲ ಮಕ್ಕಳಿಗೆ ಪರವಾನಗಿ ಆಗಬಾರದು

ಇತ್ತೀಚೆಗೆ (13.02.2026) ಬೆಂಗಳೂರಿನ ಆರು ಮಂದಿ ಎಳೆಯ ಗೆಳೆಯರು (ಎಲ್ಲರೂ 16 ರಿಂದ …

20 hours ago

ವಿಕಸಿತ ಭಾರತಕ್ಕೆ ಕೃತಕ ಬುದ್ಧಿಮತ್ತೆ ಅಡಿಪಾಯ : ಉತ್ಪಾದಕತೆ ಹೆಚ್ಚಳಕ್ಕೆ AI ಸಹಕಾರಿ

ಕೃತಕ ಬುದ್ಧಿಮತ್ತೆ (AI) ವಿಕಸಿತ ಭಾರತದ ನಿರ್ಮಾಣಕ್ಕೆ ಅಡಿಪಾಯವಾಗಿದ್ದು, ಉತ್ಪಾದಕತೆ, ಸ್ಪರ್ಧಾತ್ಮಕತೆ ಹಾಗೂ…

20 hours ago

ಸಫಾರಿ ಆರಂಭಿಸಲು ಮತ್ತೆ ಅನುಮತಿ | ಸಮಯ ಕಡಿತ, GPS-ಡ್ಯಾಶ್ ಕ್ಯಾಮ್ ಕಡ್ಡಾಯ – ಸಚಿವ ಈಶ್ವರ್ ಖಂಡ್ರೆ

ಬಂಡಿಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಯನ್ನು ಮತ್ತೆ ಆರಂಭಿಸಲು ಅನುಮತಿ…

20 hours ago