ಆನ್ಲೈನ್ ಆರ್ಥಿಕ ವಂಚನೆ ಅಪರಾಧಗಳನ್ನು ತಪ್ಪಿಸುವ ದೃಷ್ಟಿಯಿಂದ ಸಾರ್ವಜನಿಕ ವೈಫೈ ಅನ್ನು ಬಳಸದಂತೆ ಹಾಗೂ ಅಸುರಕ್ಷಿತ ಜಾಲತಾಣಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳ ವಹಿವಾಟು ನಡೆಸದಂತೆ ಸಾರ್ವಜನಿಕರು ಎಚ್ವರವಾಗಿರಬೇಕೆಂದು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಮನವಿ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಮೂಲಕ ಸಾರ್ವಜನಿಕರನ್ನು ವಂಚಿಸಿ ಆರ್ಥಿಕವಾಗಿ ನಷ್ಟ ಹೊಂದುವಂತೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಯಾರೊಂದಿಗೂ ತಮ್ಮ ಎಟಿಎಂ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ವಿವರಗಳು, ಪಿನ್ ಸಂಖ್ಯೆ, ಪಾಸ್ವರ್ಡ್ಗಳನ್ನು ಹಂಚಿಕೊಳ್ಳಬಾರದು ಎಂದರು. ಸಾರ್ವಜನಿಕರು, ಬ್ಯಾಂಕ್ಗಳ ಗ್ರಾಹಕರು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳ ವಂಚನೆ ಕುರಿತು ಸದಾ ಜಾಗೃತರಾಗಿರಬೇಕು. ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್, ಪಿನ್ ಸಂಖ್ಯೆ, ಪಾಸ್ವರ್ಡ್ ಸೇರಿದಂತೆ ಯಾವುದೇ ಮಾಹಿತಿ ವಿವರಗಳನ್ನು ಯಾರೊಂದಿಗೂ ಮೊಬೈಲ್ನಲ್ಲಿ ಹಂಚಿಕೊಳ್ಳಬಾರದು. ಸಹಾಯಕ್ಕಾಗಿ 1930 ಉಚಿತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕು ಎಂದು ಹೇಳಿದರು.