ರಕ್ಷಾ ಬಂಧನವೆಂಬ ಪವಿತ್ರ ಪದ್ದತಿ ಮತ್ತು ನಮ್ಮ ಕೊಳಕು ಮನಸುಗಳು

August 19, 2024
5:07 PM

ಇತ್ತೀಚೆಗಷ್ಟೇ ಒಂದು ಹೆಣ್ಣು ಮಗಳು ಇದ್ದಕ್ಕಿದ್ದಂತೆ ಕಾಲ್ ಮಾಡಿ ಚಿಕ್ಕ ಮಗುವಿನಂತೆ ಬಿಕ್ಕಳಿಸಿ ಬಿಕ್ಕಳಿಸಿ ಅಳತೊಡಗಿದರು. ಕಾರಣ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಯಾವುದೇ ಕಾರಣವಿಲ್ಲದೆ ಕೇವಲ ಒಂದು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ಮಾತ್ರಕ್ಕೆ ಎಷ್ಟೊಂದು ನಿಂದನೆಯ ಬರಹಗಳೆಂದರೆ ಅದನ್ನು ವರ್ಣಿಸಲು ಸಾಧ್ಯವಿಲ್ಲ. ಹೆಣ್ಣನ್ನು ನಿಂದಿಸಬಹುದಾದ ಎಲ್ಲಾ ಪದಗಳಿಂದಲೂ ವಾಕ್ಯ ರಚನೆ ಮಾಡಲಾಗಿತ್ತು ಅದೂ ಬಹಿರಂಗವಾಗಿ………

Advertisement

ಇದು ಒಂದು ಸಾಂಕೇತಿಕ ಘಟನೆ ಮಾತ್ರ. ಈ ರೀತಿಯ ಅನೇಕ ಘಟನೆಗಳು ದಿನನಿತ್ಯ ಎಲ್ಲಾ ಕಡೆಗಳಲ್ಲೂ ನಡೆಯುತ್ತಿದೆ. ಮಹಿಳೆಯರು ಸಾರ್ವಜನಿಕ ಜೀವನ ಪ್ರವೇಶಿಸಲು ಇರುವ ಬಹುದೊಡ್ಡ ಆತಂಕ ಈ ವಿಕೃತ ಮನಸ್ಸುಗಳದು. ಅದೇ ಕಾರಣದಿಂದ ಕುಟುಂಬದ ಹೆಣ್ಣುಮಕ್ಕಳು ಸಾರ್ವಜನಿಕ ಕ್ಷೇತ್ರಕ್ಕೆ ಬರಲು ಹಿಂಜರಿಯುತ್ತಾರೆ. ಬಹಳ ಜನ ಕೊಚ್ಚಿಕೊಳ್ಳುತ್ತಾರೆ, ಓ ಭಾರತದಲ್ಲಿ ಮಹಿಳೆಯರಿಗೆ ಇರುವ ಗೌರವ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ.

ಬೇಕೆ ಉದಾಹರಣೆಗಳು,
ಕೇಳಿ ನೋಡಿ ವಿದುವೆ – ವಿಚ್ಛೇದಿತ ಮಹಿಳೆಯರನ್ನು, ಕೇಳಿ ನೋಡಿ ಒಂಟಿಯಾಗಿ ರಸ್ತೆ, ಬಸ್ಸು, ರೈಲುಗಳಲ್ಲಿ ಓಡಾಡುವ ಮಹಿಳೆಯರನ್ನು, ಕೇಳಿ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವ ಮಹಿಳೆಯರನ್ನು, ಕೇಳಿ ನೋಡಿ ಉದ್ಯೋಗ ಪಡೆಯಲು ಸಂದರ್ಶಕ್ಕೆ ಹಾಜರಾಗುವ ಮಹಿಳೆಯರನ್ನು, ಅಷ್ಟೇ ಏಕೆ ತಮ್ಮ ಮನೆಯ ಯುವ ಮಹಿಳೆಯರನ್ನು ಹೊರಗೆ ಕಳಿಸಲು ಎಷ್ಟು ತಂದೆ ತಾಯಿಗಳ ಮನಸ್ಸು ತಳಮಳಗೊಳ್ಳುತ್ತದೆ ಎಂದು……..

ಒಂದು ವೇಳೆ ಯಾರಾದರೂ ಹೆಣ್ಣು ಮಗಳು ನಾನು ಹೊರ ಸಮಾಜದಲ್ಲಿ ಚಟುವಟಿಕೆಯಿಂದ ಇರುವಾಗಲೂ ಪುರುಷರಿಂದ ಯಾವುದೇ ಕೆಟ್ಟ ನಡವಳಿಕೆ ಕಂಡುಬಂದಿಲ್ಲ. ಅದಕ್ಕೆ ಬದಲಾಗಿ ಒಳ್ಳೆಯ ಅನುಭವ ಆಗಿದೆ ಎಂದಾದರೆ, ನೀವು ಅದೃಷ್ಟವಂತರು ಮತ್ತು ಅದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತಾ…. ಕೇವಲ ಕೆಟ್ಟ ಅನುಭವದ ಮಹಿಳೆಯರ ಬಗ್ಗೆ ಮಾತ್ರ ಈ ಲೇಖನ …..

Advertisement

ರಕ್ಷಾ ಬಂಧನ ಕೇವಲ ಒಂದು ಬಣ್ಣಬಣ್ಣದ ದಾರದ ಗಂಟಲ್ಲ, ಅದು ಒಂದು ಭಾವನಾತ್ಮಕ ಸಂಬಂಧ. ಅದು ಕೇವಲ ಈ ಕ್ಷಣದಲ್ಲಿ ಮಾತ್ರ ಇರುವುದಲ್ಲ, ಅದು ಮಕ್ಕಳಾಟವಲ್ಲ, ಅದು ತೋರಿಕೆಯ ಪ್ರದರ್ಶನವಲ್ಲ, ಅದು ನಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಂಡ ಪದ್ದತಿಯಲ್ಲ, ಅದು ನಮ್ಮ ಇಡೀ ಬದುಕಿನಲ್ಲಿ ನಮ್ಮ ವ್ಯಕ್ತಿತ್ವದ ಭಾಗವಾಗಿರುವಂತಹುದು. ಅದು ವ್ಯಕ್ತಿ ಸ್ವಾತಂತ್ರ್ಯದ ಪ್ರತೀಕ.

Advertisement

ನಾವು ಎಲ್ಲವನ್ನೂ ಎಲ್ಲರನ್ನೂ ಗೌರವಿಸುವ, ಇತರರ ಘನತೆಗೆ ಯಾವುದೇ ಚ್ಯುತಿ ಬಾರದಂತೆ ನಡೆದುಕೊಳ್ಳುವ ಸ್ವಭಾವದವರಾದರೆ ರಕ್ಷಾ ಬಂಧನದ ಅವಶ್ಯಕತೆಯೇ ಇರುವುದಿಲ್ಲ.
ತಾಯಿಯಾದರೇನು, ತಂಗಿಯಾದರೇನು ? ಅಕ್ಕನಾದರೇನು ?
ಮಗಳಾದರೇನು ? ಸೊಸೆಯಾದರೇನು ?
ಪ್ರೇಯಸಿಯಾದರೇನು ?
ಹೆಂಡತಿಯಾದರೇನು ?
ನೆರೆ ಮನೆಯವರಾದರೇನು?
ಸಹಪಾಠಿಗಳಾದರೇನು ?
ಪರಿಚಿತರಾದರೇನು ?
ಅಪರಿಚಿತರಾದರೇನು ?……

ಎಲ್ಲರನ್ನೂ ಆ ಸಂದರ್ಭ ಸನ್ನಿವೇಶ ಸಂಬಂಧಕ್ಕೆ ತಕ್ಕಂತೆ ನಾವು ಗೌರವಿಸಿ ಹಾಗೆಯೇ ವರ್ತಿಸಬೇಕಲ್ಲವೇ ? ಕೇವಲ ಭಾರತ ಮಾತ್ರವಲ್ಲ ವಿಶ್ವದ ಎಲ್ಲಾ ಕಡೆಯ ಕೌಟುಂಬಿಕ ವ್ಯವಸ್ಥೆ ಇರುವುದೇ ಹೀಗೆ. ತಾಯಿ – ಹೆಂಡತಿ ಸಂಬಂಧ ಬೇರೆ ಇರಬಹುದು. ಆದರೆ ವ್ಯಕ್ತಿ ಸ್ವಾತಂತ್ರ್ಯದ ಗೌರವ ಒಂದೇ….

ಅಪರಿಚಿತ ಮಹಿಳೆ ಎಂದ ಮಾತ್ರಕ್ಕೆ ಅಥವಾ ಪಕ್ಕದ ಮನೆಯ ಅಸಹಾಯಕ ಹೆಣ್ಣು ಎಂದ ಮಾತ್ರಕ್ಕೆ ನಾವು ಕೆಟ್ಟದ್ದಾಗಿ ವರ್ತಿಸುವುದು ಉಚಿತವೇ ? ತಂಗಿ ಅಥವಾ ಅಕ್ಕ ಆದ ಮಾತ್ರಕ್ಕೆ ಒಳ್ಳೆಯ ವರ್ತನೆ, ಪರಸ್ತ್ರೀಯಾದರೆ ಕೆಟ್ಟ ವರ್ತನೆ ತೋರಲು ಅನುಮತಿ ಎಂದು ಭಾವಿಸಬೇಕೆ.? ವ್ಯಕ್ತಿ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಎಲ್ಲರಿಗೂ ಅವರವರ ಗೌರವ ನೀಡಬೇಕಲ್ಲವೇ ?

ಹಿಂದೆ ರಾಜಪ್ರಭುತ್ವದ ಅನಾಗರಿಕ, ಕ್ರೂರ ದಾಳಿಕೋರರಿಂದ ರಕ್ಷಿಸಲು ಈ ರಕ್ಷಾ ಬಂಧನ ಪದ್ದತಿಯನ್ನು ಆಚರಣೆಗೆ ತರಲಾಯಿತು ಎಂದು ಹೇಳಲಾಗುತ್ತದೆ. ಹೆಣ್ಣನ್ನು ಭೋಗದ ವಸ್ತು ಎಂದು ಪರಿಗಣಿಸಲಾಗಿದ್ದ ಸಮಯದಲ್ಲಿ ಇದು ಆಚರಣೆಗೆ ಬಂದಿದೆ ಎಂಬುದು ನೆನಪಿರಲಿ. ಈಗ ಇರುವುದು ಪ್ರಜಾಪ್ರಭುತ್ವ ಮತ್ತು ಸಮಾನ ಹಕ್ಕುಗಳ ಸ್ವಾತಂತ್ರ್ಯವಿರುವ ದೇಶ.

ಈಗ ಪ್ರಾಣಿ ಪಕ್ಷಿಗಳಿಗೂ ಒಂದಷ್ಟು ಸ್ವಾತಂತ್ರ್ಯ ಮತ್ತು ಪ್ರಾಣ ರಕ್ಷಣೆಯ ನಿಯಮಗಳನ್ನು ರೂಪಿಸಲಾಗಿದೆ. ಇದರ ಅರ್ಥ ರಕ್ಷಾ ಬಂಧನ ಎಂಬ ಹಬ್ಬ ಅಥವಾ ಪದ್ದತಿಯನ್ನು ವಿರೋಧಿಸುವುದಲ್ಲ. ಅದರ ಮೂಲ ಆಶಯದಂತೆ ಪ್ರತಿ ಹೆಣ್ಣು ಗೌರವಾರ್ಹಳು ಮತ್ತು ಸ್ವಾತಂತ್ರ್ಯಕ್ಕೆ ಅರ್ಹಳು. ಕೇವಲ ತಂಗಿ ಅಥವಾ ಅಕ್ಕ ಮಾತ್ರವಲ್ಲ…..

Advertisement

ಹಬ್ಬಗಳು, ಪದ್ದತಿಗಳು, ನಂಬಿಕೆಗಳು ಕೇವಲ ಆಚರಣೆಗಳಾಗದೆ ಅವು ಅನುಸರಣೆಗಳಾದಾಗ ಮಾತ್ರ ಅದು ದೀರ್ಘಕಾಲ ಮಹತ್ವ ಪಡೆಯುತ್ತದೆ. ಇಲ್ಲದಿದ್ದರೆ ರಕ್ಷಾ ಬಂಧನ ಅಪಹಾಸ್ಯದ ಪದ್ದತಿಯಾಗಿ ಸಿನಿಮಾ ರಂಗದ ಕಾಮಿಡಿ ದೃಶ್ಯಗಳಲ್ಲಿ ತೋರಿಸುವಂತೆ ಅನುಕೂಲಕ್ಕೆ ತಕ್ಕಂತೆ ಬದಲಾಗುವ ಹೆಣ್ಣು – ಗಂಡುಗಳ ಆಟವಾಗುತ್ತದೆ.

ಇದು ಈ ಸಮಾಜದಲ್ಲಿ ಇರುವ, ಮಹಿಳೆಯರ ಬಗ್ಗೆ ಕೊಳಕು ಮನಸ್ಥಿತಿ ಹೊಂದಿರುವವರ ಮನಃ ಪರಿವರ್ತನೆಗಾಗಿ ಮಾತ್ರ. ಇತರರಿಗೆ ಇದು ಅನ್ವಯಿಸುವುದಿಲ್ಲ…. ರಕ್ಷಾ ಬಂಧನ ಎಲ್ಲಾ ಮಹಿಳೆಯರ ಗೌರವ ರಕ್ಷಿಸುವ ಮತ್ತು ಪುರಷರೊಂದಿಗೆ ಭಾವನಾತ್ಮಕ ಪ್ರೀತಿಯ ಸಂಬಂಧ ಬೆಸೆಯುವ ಪದ್ದತಿ ರಾಖಿ ಕಟ್ಟುವ ಸಾಂಕೇತಿಕ ಆಚರಣೆಯಿಂದ. …….

ಬರಹ :
ವಿವೇಕಾನಂದ. ಎಚ್. ಕೆ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

ಕಾಡೆಂದರೇನು…? , ಅರಣ್ಯ ಸಚಿವರಿಗೆ ಇದೊಂದು ಮನವಿ..
July 24, 2025
12:43 PM
by: ಪ್ರಬಂಧ ಅಂಬುತೀರ್ಥ
ಹಸುರೆಂಬ ಉಸಿರಿನ ಮಹತ್ವ ಇದು…
July 13, 2025
10:55 PM
by: ಎ ಪಿ ಸದಾಶಿವ ಮರಿಕೆ
ಹಲಸಿನ ಬೀಜದ ಖಾರಾ ಸೇವ್‌ – ನೀವೂ ಮಾಡಿನೋಡಿ
July 13, 2025
10:15 PM
by: The Rural Mirror ಸುದ್ದಿಜಾಲ
ಸಾಮಾಜಿಕ ಕಾರ್ಯಕರ್ತ ಧನಂಜಯ ವಾಗ್ಲೆ ಇನ್ನಿಲ್ಲ | ಅವರು ಬರೆದಿರುವ ಓದಲೇಬೇಕಾದ ಬರಹ ಇಲ್ಲಿದೆ…
July 13, 2025
5:09 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group