ತೇರೆಳೆಯಲು ಆಸ್ತಿಕ ಜನ ಬೇಕಾಗಿದ್ದಾರೆ…..!! | ಮಕ್ಕಳು ಮುಂದೆ ಬಾಳಿ ಬದುಕಲು ಒಂದು ಸ್ವಸ್ಥ ಸಮಾಜ ಸೃಷ್ಟಿಸಿ..

March 8, 2024
7:18 PM
ಗ್ರಾಮೀಣ ಜನರ ಬದುಕಿನ ಸ್ಥಿತಿಯನ್ನು ತೆರೆದಿಟ್ಟಿದ್ದಾರೆ ಪ್ರಬಂಧ ಅಂಬುತೀರ್ಥ... ಅವರ ಬರಹ ಇಲ್ಲಿದೆ..

ಈ ವರ್ಷ ನನಗೆ ನಮ್ಮ ಮಲೆನಾಡಿನ(Malenadu) ಕೆಲವು ಪುರಾಣ ಪ್ರಸಿದ್ಧ ರಥೋತ್ಸವಗಳನ್ನು(Cart festival) ನೋಡುವ ಸೌಭಾಗ್ಯ ಬಂದಿತ್ತು. ಅದೊಂದು ಮಲೆನಾಡಿನ ಮೂಲೆ ಊರು. ಮುಳುಗಡೆಯ ಶಾಪ ಬಾಧಿತ ಆ ಊರಿನ ರಥೋತ್ಸವದ ದಿನ ಭಕ್ತಿ ಪೂರ್ವಕ ನಾನು ಅಲ್ಲಿಗೆ ಹೋಗಿದ್ದೆ. ದೇವರ ರಥಾರೋಹೋಣದ ಸುತ್ತ ಮುತ್ತ ನೋಡಿದಾಗ ಅಲ್ಲಿ ಸುಮಾರು ಅರವತ್ತು-ಅರವತ್ತೈದು-ಎಪ್ಪತ್ತೈದು ವರ್ಷ ವಯಸ್ಸು ದಾಟಿದ ಹಿರಿಯ ತಲೆಗಳೇ(Old age) ಹೆಚ್ಚು ಕಂಡವು. ಮೊದಲ ತಲೆಮಾರು ಈಗಿಲ್ಲ, ಅಲ್ಲಿದ್ದಧ್ದು ಎರಡನೇ ತಲೆಮಾರು ವಯೋವೃದ್ದರು‌. ಬೆರಳೆಣಿಕೆಯ ಮೂರನೇ ತಲೆಮಾರಿನ ಯುವಕರು(Youths) ಕಾಣಿಸಿದರು. ಆದರೆ ನಾಲ್ಕನೇ ತಲೆಮಾರಿನ ಪೀಳಿಗೆಯ ಯಾರೊಬ್ಬರೂ ಅಲ್ಲಿ ಭಾಗವಹಿಸಿರಲಿಲ್ಲ.

Advertisement

ಯಾಕೆ ಹೀಗಾಗುತ್ತಿದೆ…?: ಈ ಐವತ್ತು ವರ್ಷಗಳ ಹಿಂದಿನ ತನಕವೂ ಪೀಳಿಗೆಯಿಂದ ಮುಂದಿನ ಈ ಎಲ್ಲಾ ವಿದ್ಯೆ ಕಲೆ ಹರಿದುಬರುತ್ತಿತ್ತು. ಇದಕ್ಕೆ ಮುಖ್ಯ ಕಾರಣ ಕೂಡು ಕುಟುಂಬ ಮತ್ತು ಕೃಷಿ ಆಧಾರಿತ ಜೀವನ. ಮೂವತ್ತು ವರ್ಷಗಳ ಹಿಂದೆ ದೇಶ ಜಾಗತಿಕರಣಕ್ಕೆ ಒಳ ಪಟ್ಟ ನಂತರ ಮೊದಲು ಬಹುತೇಕ ಹಿಂದೂ ಕುಟುಂಬಗಳು ಶಿಕ್ಷಣಕ್ಕೆ ಆದ್ಯತೆ ನೀಡಿದವು. ತತ್ಪರಿಣಾಮವಾಗಿ ಶಿಕ್ಷಿತ ಪೀಳಿಗೆ ನಗರದತ್ತ ವಲಸೆ ಹೋಗತೊಡಗಿತು. ಜೊತೆ ಜೊತೆಗೆ ಇತರೆ ವರ್ಗಗಳೂ ಕೃಷಿ ಮತ್ತು ಕೃಷಿ ಸಂಬಂಧಿಸಿದ ಚಟುವಟಿಕೆಗಳಿಂದ ದೂರ ಸರಿದು ಪಟ್ಟಣಕ್ಕೆ ವಲಸೆ ಹೋಗತೊಡಗಿ ಹಳ್ಳಿ ಕೃಷಿ ಜೀವನ ಮಾಡುವವರ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾದರು.

ಹಿಂದೆ ಒಂದು ಕುಟುಂಬವೊಂದರಲ್ಲಿ ಒಟ್ಟು ಎಂಟು ಮಕ್ಕಳಿದ್ದರೆ, ಆ ಎಂಟು ಮಕ್ಕಳಿಗೆ ಅರವತ್ತನಾಲ್ಕು ಮಕ್ಕಳಾಗಿ, ಆ ಅರವತ್ತಾನಲ್ಕು ಮಕ್ಕಳಿಗೆ 512 ಮಕ್ಕಳಂತೆ ದ್ವಿಗುಣವಾಗುತ್ತಾ ಹೋಗುತ್ತಿತ್ತು. ಹಿಂದೆ ಗ್ರಾಮೀಣ ಕುಟುಂಬ ಹೀಗಿತ್ತು. ಜನಸಂಖ್ಯೆ ಹೀಗೆ ಬೆಳವಣಿಗೆಯಾಗುತ್ತಿತ್ತು. ಆದರೆ ಬದಲಾದ ಸಾಮಾಜಿಕ ವಾತಾವರಣದಲ್ಲಿ ಈ ಕೌಟುಂಬಿಕ ದ್ವಿಗುಣತೆ ನಿಂತು ಹೋಯಿತು. ಈಗ ಹಿಂದೂಗಳ ಜನಸಂಖ್ಯೆ ಬೆಳವಣಿಗೆ ನಿಂತಿದೆ ಅಥವಾ ಹೆಚ್ಚಾಗುತ್ತಲೂ ಇಲ್ಲ. ನಮ್ಮ ಪೀಳಿಗೆ ಅನೇಕ ಯುವಕರಿಗೆ ಮದುವೆ ಹಲವಾರು ಕಾರಣಕ್ಕೆ ಮರೀಚಿಕೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮಾಡುವ ಅನೇಕ ಯುವಕರಿಗೆ ಎಲ್ಲಾ ಬಗೆಯ ಯೋಗ್ಯತೆಯಿದ್ದರೂ ಮದುವೆ ಆಗುತ್ತಿಲ್ಲ‌…!! ಇದರ ಜೊತೆಯಲ್ಲಿ ಯುವ ಪೀಳಿಗೆಯಲ್ಲಿ ಪೇಟೆ ಪಟ್ಟಣದಲ್ಲಿದ್ದೂ ಕೆಲವರು ಮದುವೆ ಆಗುತ್ತಿಲ್ಲ‌…!! ನಾವಿಬ್ಬರು ನಮಗಿಬ್ಬರು ಕಾಲ ಮುಗಿದು, ನಾವಿಬ್ಬರು ನಮಗೊಂದು ಮಗು ಕಾಲವೂ ಮುಗಿದು ಈಗ ನಾವೇ ಮಕ್ಕಳು ನಮಗೇತಕ್ಕೆ ಮಕ್ಕಳು…?! ಎನ್ನುವ ದಂಪತಿಗಳೂ ನಮ್ಮ ನಡುವೆ ಇದ್ದಾರೆ‌..!!

ದೇಶ ವಿದೇಶದ ಕೆಲಸ ..!! ಐಷಾರಾಮಿ ನಗರ ಜೀವನದ ನಡುವೆ ಮಲೆನಾಡು ಕರಾವಳಿಯ ಹಳ್ಳಿಗಳಲ್ಲಿ ಅಪ್ಪನಿಂದ ಮಗ. ಮಗನ ನಂತರ ಅವನ ಮಗ (ಮೂರನೇ ತಲೆಮಾರಿನ ಪೀಳಿಗೆ) ಕೃಷಿ ಇನ್ನಿತರ ಚಟುವಟಿಕೆಗಳನ್ನು ನಿರ್ವಹಿಸಿ ಕೊಂಡು ಹೋಗಲು ಬರುತ್ತಿಲ್ಲ.!! ಇದೊಂದು ದೊಡ್ಡ ನಿರ್ವಾತ… ಈ ಖಾಲಿ ತನ ತುಂಬುವುದು ಸಾದ್ಯವೇ ಇಲ್ಲ ಎನ್ನ ಬಹುದೇನೋ…!? ಹಳ್ಳಿಯ ಮನೆ ಕೃಷಿ ಜೀವನ ಹೇಗೋ ಸಾಗಿ ಹೋಗುತ್ತಿದೆ. ಆದರೆ ಊರ ದೇವಸ್ಥಾನಗಳ ರಥೋತ್ಸವ ಜಾತ್ರೆಗಳು ಪೀಳಿಗೆಯಿಂದ ಪೀಳಿಗೆ ಇಲ್ಲದೇ ಖಾಲಿ ಹೊಡೆಯುತ್ತಿದೆ…!! ರಥದ ಎತ್ತರದಲ್ಲಿ ವಿರಾಜಮಾನನಾಗಿ ಕುಳಿತ ಭಗವಂತನಿಗೂ ರಥದ ಕೆಳಗೆ ನೆರೆದ ಭಕ್ತರನ್ನು ನೋಡಿದರೆ “ತಲೆ ನೆರದವರೇ ಅಧಿಕವಾಗಿ ಕಾಣಿಸುತ್ತಾರೆ….!

ಕೆಲವು ದಿನಗಳ ಹಿಂದೆ ಪಟ್ಟಣವೊಂದರ ರಾಜಬೀದಿಯಲ್ಲಿ ಪ್ರಮುಖ ದೇವಸ್ಥಾನದ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ ನಡೆಯುತ್ತಿತ್ತು. ಈ ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿದ್ದು ನಾಲ್ಕು ಜನ ಪಲ್ಲಕ್ಕಿ ಹೊರುವವರು , ಒಬ್ಬರು ಅರ್ಚಕರು, ಇಬ್ಬರು ಪತಾಕೆ ಹಿಡಿಯುವರು, ದಂಡ ಹಿಡಿಯುವವರು ಸೇರಿ ಒಂದು ಹತ್ತು ಜನದೊಳಗೆ. ಓಲಗದವರು ನಾಲ್ಕು ಜನ‌ ಎಕ್ಟ್ರ ಪ್ಲೇಯರ್ಸ್… ಇದು ಇಪ್ಪತ್ತು ಸಾವಿರ ಜನ ಸನಾತನಿಗಳ ಸಂಖ್ಯೆ ಇರುವ ಪಟ್ಟಣವೊಂದರ “ಪ್ರಮುಖ ದೇವರ” ರಾಜ ಬೀದಿ ಉತ್ಸವಕ್ಕೆ ನೆರೆದ ಜನ‌ ….!!

ಪಟ್ಟಣದ ಮತ್ತೊಂದು ಪ್ರಮುಖ ದೇವಸ್ಥಾನದ ಜಾತ್ರೆಗೆ ನಾಲ್ಕು ದಿನಗಳಲ್ಲಿ ಲಕ್ಷಾಂತರ ಜನ ಬಂದು ಭಾಗವಹಿಸಿದರೂ ಕೂಡ ರಥ ಎಳೆಯಲು ಜನ ಕೊರತೆಯೇ. ಸುಮಾರು ಒಂದು ಕಿಲೋಮೀಟರ್ ಉದ್ದದ ರಥ ಬೀದಿಯಲ್ಲಿ ಅಕ್ಕ ಪಕ್ಕದಲ್ಲಿ ಅಂಗಡಿ ಸಾಲಿನ ವೈಭವ ಅಮೋಘ. ಈ ಜಾತ್ರೆಯ ಅಂಗಡಿಗೆ ಬರುವ ಜನರಲ್ಲಿ ರಥ ಬೀದಿಯ ಕೊನೆಯಲ್ಲಿ ಇರುವ ದೇವಸ್ಥಾನಕ್ಕೆ ಬರುವವರು ಲಕ್ಷದಲ್ಲಿ ಹತ್ತು ಸಾವಿರ ಜನ ಇರಬಹುದು. ಉಳಿದ ತೊಂಬತ್ತು ಸಾವಿರ ಮಂದಿಗೆ ಜಾತ್ರೆ ರಥೋತ್ಸವಗಳು ಒಂದು ಮನೋರಂಜನೆ ಮಾತ್ರ…!!

ಕಳೆದ ವರ್ಷ ನಮ್ಮ ಮಲೆನಾಡಿನ ಪ್ರಮುಖ ಜಾತ್ರಾ ಮಹೋತ್ಸವ ನಡೆವಲ್ಲಿನ ಕ್ಷೇತ್ರದ ದೇವಸ್ಥಾನದ ರಥದ “ದ್ವಜ ಕಟ್ಟುವ ನುರಿತ” ರು ಸಿಗದೇ ಪರದಾಟವಾಗಿದ್ದ ಸುದ್ದಿ ಕೇಳಿ ಬಂದಿತ್ತು. ಈ ‌ನೈಪುಣ್ಯತೆ ಕೂಡ ಹಿರಿಯರಿಂದ ಬಳುವಳಿಯಾಗಿ ಬಂದಿದ್ದು. ಆದರೆ ಹಿರಿಯರ ಜೊತೆಗೆ ಈ ಕೆಲಸ ಕಲಿಯಲು ಕಲೆತು ಉತ್ಸಾಹದಿಂದ ಮುಂದಿನ ಪೀಳಿಗೆ ಮುಂದೆ ಬರದಿದ್ದರೆ ಹೀಗಿನ ಕೌಶಲ್ಯತೆ ಮುಂದುವರೆಯುವುದು ಹೇಗೆ…?ಹೌದು…

ಇಂದು ಮಲೆನಾಡಿನಲ್ಲಿ ಮೇಲ್ವರ್ಗ ಸೇರಿದಂತೆ ಯಾವ ಜಾತಿ ಜನಾಂಗದ ವರ್ಗದ ಮೂರನೇ ನಾಲ್ಕನೇ ಪೀಳಿಗೆಯೂ ಜಾತ್ರೆ ಹಬ್ಬ “ಹಿರಿ” ಹರಿದಿನಗಳಲ್ಲಿ ಭಾಗವಹಿಸುತ್ತಿಲ್ಲ. ಈ ಹಣ್ಣು ತಲೆಯ ಮುದುಕರು ಇನ್ನ ಎಷ್ಟು ದಿನ ಈ ಸಂಪ್ರದಾಯವನ್ನು ನಡೆಸಿಕೊಂಡು ಹೋದಾರು….? ಮುದುಕರು ಮತ್ತು ಸ್ವಯಂ ಸೇವಕರುಗಳು ಇಂತಹ ಸಂಧರ್ಭದಲ್ಲಿ ಬಂದು ಸೇರಿ ಕೊಳ್ಳದಿದ್ದರೆ ಬಹುಶಃ ಕಾರ್ಯಕ್ರಮಗಳೇ ನಡೆಯದೇನೋ…!???

ಬಹುಶಃ ಮುಂದಿನ ಒಂದೆರಡು ದಶಕಗಳಲ್ಲಿ ನಮ್ಮ ಮಲೆನಾಡಿನ ಅನೇಕ ರಥೋತ್ಸವಗಳು ರಥ ಎಳೆಯಲು ಜನ ಬರದೇ ಟ್ರಾಕ್ಟರ್ ಜೆಸಿಬಿಯಲ್ಲಿ ಎಳೆಯುವ ಪರಿಸ್ಥಿತಿ ಬರಬಹುದು. ಇಲ್ಲವೇ ಬಹಳ ದೇವಸ್ಥಾನಗಳ ರಥೋತ್ಸವಗಳೇ ನಿಲ್ಲುವ ಸ್ಪಷ್ಟ ಸೂಚನೆ ಕಾಣಿಸುತ್ತಿದೆ. ನಮ್ಮ ಮೂರು ಮತ್ತು ನಾಲ್ಕನೇ ಪೀಳಿಗೆಯ ಮಕ್ಕಳು ಎಲ್ಲೇ ಏನೇ ಕೆಲಸ ಮಾಡುತ್ತಿರಲಿ ಈ ಹಬ್ಬ ಸತ್ ಸಂಪ್ರದಾಯಗಳಲ್ಲಿ ಭಾಗವಹಿಸಲು ಆಸಕ್ತಿ ತೋರಿಸಬೇಕು.

ನಮ್ಮ ಊರಿನಲ್ಲಿ ಕೇವಲ ಇನ್ನೂರು ಸಂಖ್ಯೆಯಲ್ಲಿ ಇರುವ ಅಲ್ಪಸಂಖ್ಯಾತ ಧರ್ಮದವರು ಪ್ರತಿ ವರ್ಷವೂ ಎರಡು ದಿನ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡುತ್ತಾರೆ. ಅವರೆಷ್ಟು ಅಚ್ಚುಕಟ್ಟಾಗಿ ಆ ಕಾರ್ಯಕ್ರಮ ನಿರ್ವಹಣೆ ಮಾಡುತ್ತಾರೆಂದರೆ ಅಷ್ಟು ಅನುಕರಣನೀಯವಾಗಿ ಆಚರಿಸುತ್ತಾರೆ.

ತಮ್ಮ ಧರ್ಮದ ಅಷ್ಟೂ ಮನೆಗಳ ಅಷ್ಟೂ ಸದಸ್ಯರು ಆ ಕಾರ್ಯಕ್ರಮದಲ್ಲಿ ಪಾಲ್ಲೊಳ್ಳುವಂತೆ ಮಾಡುತ್ತಾರೆ. ಅವರಲ್ಲೂ ಚಿಕ್ಕ ಪುಟ್ಟ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಅವರಿಗೆ ಅವರ ‘ಧರ್ಮ ” ಎಲ್ಲಕ್ಕಿಂತ ಮಿಗಿಲು. ಇದರ ಜೊತೆಯಲ್ಲಿ ಸಭಾ “ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ” ಒಂದೇ ಒಂದು ಸಿನಿಮಾ ಹಾಡುಗಳು ಅಥವಾ ಮುದ್ರಿತ (record songs) ಹಾಡುಗಳು ಇರುವುದಿಲ್ಲ. ಪ್ರತಿಯೊಬ್ಬರೂ ಸ್ವಂತವಾಗಿ ಹಾಡುವುದು, ಕಿರು ನಾಟಕ ಮಾಡುವ ಕಾರ್ಯಕ್ರಮ ಇರುತ್ತದೆ. ಧರ್ಮ ಭಾಷೆ ನಮ್ಮದಲ್ಲದಿದ್ದರೂ ಅವರ ಪಾಲ್ಗೊಳ್ಳುವಿಕೆ, ಪ್ರಸ್ತುತಿ ನಮ್ಮ ಗಮನ ಸೆಳೆಯುತ್ತದೆ. ಒಂದು ಕಡೆ ಅನ್ಯ ಧರ್ಮ ತಮ್ಮ ಅಸ್ತಿತ್ವಕ್ಕಾಗಿ “ಧರ್ಮಕ್ಕಾಗಿ ಅದೆಷ್ಟೇ ಕಷ್ಟ ಆದರೂ ತಮ್ಮ ಜನಸಂಖ್ಯೆ ಬೆಳೆಸಿ ಕೊಳ್ಳುತ್ತಾ ಹೋಗುತ್ತಿದೆ”…

ನಮ್ಮ ಬಾಲಗಂಗಾಧರ ತಿಲಕರ ಸ್ವತಂತ್ರ ಪೂರ್ವದ ಸಾರ್ವಜನಿಕ ಗಣೇಶೋತ್ಸವದ ಪರಿಕಲ್ಪನೆಯ ಒಟ್ಟು ಸಾರ ಎಲ್ಲರನ್ನೂ ಒಟ್ಟಾಗಿ ತೆಗದುಕೊಂಡು ಹೋಗುವುದು. ಗಣೇಶೋತ್ಸವ ದ ನೆಪದಲ್ಲಿ ಎಲ್ಲರೂ ಒಟ್ಟಾಗಿ ಹಬ್ಬವನ್ನು ಆಚರಿಸುವುದು ಮುಖ್ಯ ಉದ್ದೇಶ. ಇವತ್ತು ಯಾವುದೇ ಊರಿನ ಗಣೇಶೋತ್ಸವವೂ ಮೂಲ ಆಶಯ ಕಳೆದುಕೊಂಡಿರುವುದು ಗಮನಾರ್ಹ. ಈ ಗಣಪತಿಯ ವಿಸರ್ಜನೆಯ ದಿನವೂ ಹಾಗೆ ಆಗುತ್ತಿದೆ. ಮುಂದೆ ಗಣಪತಿ ಮೂರ್ತಿಯ ಟ್ರಾಕ್ಟರ್ ಸಾಗಿದರೆ ಹಿಂದೆ ಎದೆ ನಡುಗಿಸುವ ಡಿಜೆ ಸ್ಪೀಕರ್ ಗಳ, ಬಣ್ಣ ಬಣ್ಣದ ಲೈಟುಗಳ ಟ್ರಾಕ್ಟರ್.. ಅದರ ಹಿಂದೆ ಕಣ್ಣು ಕೆಂಪಾದ ಹಣೆಗೆ ಡಾಳಾದ ಕುಂಕುಮ ಹಚ್ಚಿಕೊಂಡ ಯುವಕರ ತಂಡ..

ಮುಂದೆ ಬ್ರಹ್ಮಚಾರಿ ಗಣೇಶ..!! ಹಿಂದೆ
ರಾ ರಾ ರುಕ್ಕಮ್ಮ ಅಶ್ಲೀಲ ಹಾಡಿನ ನೃತ್ಯ..!!
ಗಣೇಶ ನಿಗೂ ರುಕ್ಕಮ್ಮನಿಗೂ ಸಂಬಂಧವೇನು…?
ಗಣೋತ್ಸವ ಆಯೋಜಕರನ್ನ ಯಾಕೆ ಈ ಅಶ್ಲೀಲ ಅಪಸವ್ಯ ..‌? ಎಂದು ಕೇಳಿದರೆ ಅವರು ” ಏನ್ ಮಾಡೋದು ಸಾರ್ ..!? ಈ ಡಿಜೆ ಸಾಂಗ್ ಇಲ್ಲದಿದ್ದರೆ ಯುವಕರು ಮೆರವಣಿಗೆಗೆ ಬರೋಲ್ಲ ಸಾರ್…!! ” ಎಂದು ತಮ್ಮ ಅಸಹಾಯಕತೆಯನ್ನ ತೋಡಿಕೊಳ್ತಾರೆ.

ನಮ್ಮ ಯುವ ಪೀಳಿಗೆಗೆ ಜಾತ್ರೆ ಉತ್ಸವಗಳು ಮನೋರಂಜನೆ ಮಾತ್ರವಾಗಿದೆ. ನಿಜಕ್ಕೂ ಜಾತ್ರೆ ಉತ್ಸವಗಳು ಕೇವಲ ಆಸ್ತಿಕತೆಯ ಆಧಾರದ ಕಾರ್ಯಕ್ರಮವಲ್ಲ. ಹಿಂದಿನ ಕಾಲದಲ್ಲಿ ಒಂದು ಊರಿನ ಜಾತ್ರಾ ಮಹೋತ್ಸವದ ಮೂಲಕ ಆ ಊರಿನ ಎಲ್ಲಾ ವರ್ಗಗಳೂ ಒಗ್ಗಟ್ಟಾಗುತ್ತಿತ್ತು. ಅದು ರಾಜರ ಆಳ್ವಿಕೆಯ ಕಾಲ. ಸದಾ ಶತ್ರು ಭಯ… ಆಗ ಹಳ್ಳಿಯ ಜನ ಒಗ್ಗಟ್ಟಾಗಿ ಬಾಳಲೇಬೇಕಾದ ಅನಿವಾರ್ಯತೆ ಇತ್ತು.‌ ಅದಕ್ಕೆ ಇಂತಹ ಜಾತ್ರೆ ಹಬ್ಬಗಳು “ವೇದಿಕೆ” ಯಾಗುತ್ತಿತ್ತು. ಹಾಗಾಗಿ ಈ ಜಾತ್ರೆಗಳಲ್ಲಿ ಊರಿನ ಎಲ್ಲರ ಭಾಗವಹಿಸುವಿಕೆ ಇತ್ತು. ಇದರ ಮಹತ್ವದ ಆಳ ಇದ್ದದ್ದು ಇಲ್ಲಿ. ಈಗ ಕಾಲ ಬದಲಾಗಿದೆ. ಜನರಿಗೆ ಯಾವುದೋ ಪಕ್ಕದ ರಾಜ್ಯದ ರಾಜರು ಯುದ್ದಕ್ಕೆ ದಂಡೆತ್ತಿ ನಮ್ಮ ಈ ಹಳ್ಳಿಯ ಮೇಲೆ ಯುದ್ಧ ಮಾಡಲು ಬರೋಲ್ಲ…!! ಆದರೆ ಈಗಲೂ ಸನಾತನ ಧರ್ಮಕ್ಕೆ ಆಗಿನಷ್ಟೇ ಅಪಾಯವಿದೆ. ಹೊರಗಿನ‌ ಧರ್ಮದವರು ಒಳಗಿನ “ಅಧರ್ಮಿಗಳ” ಮೂಲಕ ಹಿಂದೂ ಧರ್ಮದ ಅಸ್ತಿತ್ವಕ್ಕೇ ದಕ್ಕೆ ತರಲು ನಿರಂತರವಾಗಿ ಪ್ರಯತ್ನ ಮಾಡುತ್ತಿರುವುದು ಕಾಣಿಸುತ್ತಿದೆ.

ನಾವು ನಮ್ಮ ಮಕ್ಕಳ ಭವ್ಯ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ಕೊಡಿಸುತ್ತೇವೆ. ನಾವು ನಮ್ಮ ಸುಖ ತ್ಯಾಗ ಮಾಡಿ ಕಷ್ಟ ಪಟ್ಟು ಮಕ್ಕಳಿಗಾಗಿ “ಚರ ಸ್ಥಿರಾಸ್ತಿ ‘ ಮಾಡುತ್ತೇವೆ. ಆದರೆ ‌ನಾವು ನಮ್ಮ ಮಕ್ಕಳು ಮುಂದೆ ಬಾಳಿ ಬದುಕಲು ಒಂದು ಸ್ವಸ್ಥ ಸಮಾಜ ಸೃಷ್ಟಿಸಿ ಉಳಿಸಿ ಕೊಡುತ್ತೀವೆಯೇ..? ವಿಧ್ಯಾ ಬುದ್ದಿ ಇದ್ದು ಭಾರತದಲ್ಲಲ್ಲ, ವಿಶ್ವದ ಯಾವುದೇ ದೇಶದಲ್ಲಿ ಇದ್ದರೂ ಯುದ್ಧ ಕ್ಷಾಮ ಡಾಂಬರ ಆದಾಗ ನಮ್ಮ ಮಕ್ಕಳು ಮರಳಿ ತಾಯ್ನಾಡಿಗೆ ಬರಲೇ ಬೇಕು. ಇದಕ್ಕೆ ಇಸ್ರೇಲ್ ಪ್ಯಾಲೆಸ್ಟೈನ್ ಯುದ್ದ, ರಷ್ಯಾ ಉಕ್ರೇನ್ ಯುದ್ಧ ಗಳು ಇತ್ತೀಚಿನ ಸಾಕ್ಷಿ. ಅದೇ ರೀತಿಯಲ್ಲಿ ಕೊರೋನ ಸಾಂಕ್ರಾಮಿಕ ರೋಗದಲ್ಲೂ ಪೇಟೆ ಪಟ್ಟಣದಲ್ಲಿ, ದೇಶ ವಿದೇಶಗಳಲ್ಲಿ ನೆಲೆ ಗೊಂಡವರು ಬಂದಿದ್ದು ತಮ್ಮ ತಾಯ್ನಾಡಿಗೆ….

ಹೌದು ಬಂಧುಗಳೇ…,  ದಯಮಾಡಿ ನಮ್ಮ ಮುಂದಿನ ಪೀಳಿಗೆಗೆ ನಮ್ಮ ಮೂಲ ನಿವಾಸವಾದ ಹಳ್ಳಿ ಮನೆಗಳನ್ನು ಉಳಿಸಿ. ಕೃಷಿ ಮಾಡದಿದ್ದರೂ ಪರವಾಗಿಲ್ಲ, ಪೇಟೆ ಪಟ್ಟಣದಲ್ಲಿ ಎಷ್ಟೇ ಆಸ್ತಿ ಅಂತಸ್ತು ಇದ್ದರೂ ಪರವಾಗಿಲ್ಲ… ದಯಮಾಡಿ ಹಳ್ಳಿಯ ಮನೆಗಳನ್ನು “ಅನ್ಯರಿಗೆ ” ಮಾರದಿರಿ. ದಯಮಾಡಿ ವರ್ಷ ಕ್ಕೆ ಎರಡು ಬಾರಿ ಯಾದರೂ ಅದರಲ್ಲೂ ವಿಶೇಷವಾಗಿ ಹಬ್ಬ ಜಾತ್ರೆಯ ಸಂಧರ್ಭದಲ್ಲಾದರೂ ಮೂರು ನಾಲ್ಕನೇ ತಲೆಮಾರಿನ ಮಕ್ಕಳು ಮೊಮ್ಮಗನ ಬಂದು ಭಾಗವಹಿಸಲು‌ ಆಗ್ರಹಿಸಿ. ಜ್ಞಾಪಕವಿಡಿ ಸನ್ಮಿತ್ರರೇ ನಮ್ಮ ನಡುವಿನ‌ ಅನೇಕರಿಗೆ ತಮ್ಮ ಮಕ್ಕಳು ಈ ಆಸ್ತಿಕ ಕಾರ್ಯಕ್ರಮದಲ್ಲಿ ಪಟ್ಟಣದಿಂದ ಹಳ್ಳಿಗೆ ಭಾಗವಹಿಸದಿರುವುದೂ ಒಂಥರ ಹೆಮ್ಮೆ…!! ಆದರೆ ಈ ಅನುಪಸ್ಥಿತಿ ಮತ್ತು ಅಸಡ್ಡೆ ಮುಂದೊಂದು ದಿನ ನಮ್ಮೆಲ್ಲರ “ಮೂಲ ಅಸ್ತಿತ್ವಕ್ಕೆ ದಕ್ಕೆ ” ತರುತ್ತದೆ….. ಇದರಲ್ಲಿ ಯಾವುದೇ ಸಂಶಯ ಬೇಡ..!! ನಾವು ನಮ್ಮ ಮಕ್ಕಳು ಮೊಮ್ಮಕ್ಕಳ ಭಾಗವಹಿಸುವಿಕೆಯ ಸಡಗರದ ಸರಪಳಿ ಯ ಕೊಂಡಿ ಕೂಡಿಕೊಳ್ಳಲಿ….

ಊರ ಹಬ್ಬ ಜಾತ್ರೆ ಆಚರಣಾ ಸಮಿತಿಯ ವರೂ ಊರಿನ ಪ್ರತಿ ಮನೆಯ ಸದಸ್ಯರನ್ನು ಜಾತ್ರೆ ಹಬ್ಬದ ದಿನಗಳಲ್ಲಿ ಸೇರಿಸಿಕೊಂಡು ಹೋಗುವ ಅಭಿಯಾನ ಮಾಡಿ ಎಂದು ಕೋರುತ್ತಿದ್ದೇನೆ. ಇಂತಹ ಸಂಧರ್ಭದಲ್ಲಿ ಮೇಲು ಕೀಳು ಬಡವ ಬಲ್ಲಿದ ಮತ್ತು ಪಕ್ಷಗಳ ಮೀರಿ ಸಮಸ್ತ ಹಿಂದೂಗಳೂ ಒಂದು ಎನ್ನುವ ಹಾಗೆ ಸಮಸ್ತರೂ ಖುಷಿಯಿಂದ ಸೇರುವಂತಾಗಲಿ. ನಮ್ಮ ಸನಾತನ ಧರ್ಮದ ಹಬ್ಬ ರಥೋತ್ಸವ ಜಾತ್ರೆಗಳು ಆಸಕ್ತ ಆಸ್ತಿಕ ಮಹಾ ಜನಗಳಿಂದ ತುಂಬಿ ತುಳಕಲಿ ಎಂದು ಬಯಸೋಣ.. ಹಿಂದೂ ಪಕ್ಷ ಸಂಘಗಳ ಮುಖ ನೋಡದೇ ತಮಗಾಗಿ ಸಮಸ್ತ ಹಿಂದೂ ಸಮಾಜದ ಭವಿಷ್ಯತ್ ಗಾಗಿ ಊರ ಹಬ್ಬ ಜಾತ್ರೆಗಳಲ್ಲಿ ಹೃದಯ ಪೂರ್ವಕವಾಗಿ ಭಾಗವಹಿಸಿ ಅಸ್ತಿತ್ವ ಉಳಿಕೊಳ್ಳುತ್ತಾ ದೇವತಾರಾಧನೆಯ ಕಳೆ ಗಟ್ಟಿಸೋಣ..

ಬರಹ
ಪ್ರಬಂಧ ಅಂಬುತೀರ್ಥ

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |
May 13, 2025
7:20 AM
by: ದ ರೂರಲ್ ಮಿರರ್.ಕಾಂ
ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ
May 13, 2025
6:53 AM
by: ದ ರೂರಲ್ ಮಿರರ್.ಕಾಂ
ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ
May 12, 2025
10:14 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ
May 12, 2025
2:17 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group