ಹೊಸ ಬೆಳೆ | ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ” |

April 24, 2024
2:57 PM

ಅತಿಯಾದ ಅಡಿಕೆ ಬೆಳೆ(Areca Crop) ವಿಸ್ತರಣೆ ಮತ್ತು ಅಡಿಕೆ ಬೆಳೆಗೆ ಆತಂಕಕಾರಿಯಾದ ಶಿಲೀಂಧ್ರ ರೋಗವಾದ(Fungal disease), ಎಲೆಚುಕ್ಕಿ ರೋಗ(Leaf spot disease), ಹಳದಿ ಎಲೆರೋಗಗಳು(Yellow leaf disease) ಯಾವುದೇ ಕ್ಷಣದಲ್ಲೂ ಮಲೆನಾಡು ಕರಾವಳಿ(Coastal) ಅಡಿಕೆ ಬೆಳೆಗಾರ ಬದುಕು ಅಂಧಕಾರದತ್ತ ದೂಡಬಹುದು. ಬಹಳಷ್ಟು ವರ್ಷಗಳಿಂದಲೂ ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರು ಅಡಿಕೆ ಬೆಳೆಯಷ್ಟೇ ಆರಾಮ ಬೆಳೆ ಮತ್ತು ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ”(Alternate cropping) ಬಗ್ಗೆ ಬಹಳ ಆಸಕ್ತಿಯಿಂದ ಹುಡುಕುತ್ತಿದ್ದಾರೆ. ಮಾರುಕಟ್ಟೆಯ(Market) ಕೃಷಿ ಉದ್ಯಮಿಗಳು(Agricultural entrepreneurs), ಕಂಪನಿಗಳು(Company) ಹೇಳಿದ ಹಲವಾರು ಹೊಸ ಬೆಳೆ ಬೆಳೆದು ಅದಕ್ಕೆ ಸೂಕ್ತ ಮಾರುಕಟ್ಟೆ ಸಿಗದೆ ಕೈ ಸೋತಿದ್ದಾರೆ.

Advertisement
Advertisement

ಟಿ ಎನ್ ಸೀತಾರಾಂ ಅವರು ಮುಕ್ತ ಮುಕ್ತ ದಾರವಾಹಿ ಸರಣಿ ಯಲ್ಲಿ ಈಗ ಬಂದು ಈಗ ಹೋಗುವ ಹೊಸ ಬೆಳೆಗಳಿಗೆ ಕಾಲ್ಪನಿಕವಾದ “ಚಿನರಿಕಾ ಬೆಳೆ” ಎಂಬ ಹೆಸರಿನ ಬೆಳೆಯ ಬಗ್ಗೆ ಒಂದು ಪ್ರಸಂಗವನ್ನು ತಮ್ಮ ಧಾರವಾಹಿ ಯಲ್ಲಿ ಸೃಷ್ಟಿಸಿದ್ದರು. ನಮ್ಮ ರೈತರು ಎಷ್ಟು ಮುಗ್ದರು ಎಂದರೆ ಮುಕ್ತ ಮುಕ್ತ ಸಂವಾದ ದಲ್ಲಿ ಟಿ ಎನ್ ಸೀತಾರಾಂ ಬಳಿ ಈ “ಚಿನರಿಕಾ ಗಿಡ ” ಎಲ್ಲಿ ಸಿಗುತ್ತದೆ…? ನಾವು ಬೆಳೆಯುತ್ತೇವೆ ” ಎಂದು ವಿಚಾರಿಸಿದ್ದರು..‌‌‌ ಚಿನರಿಕಾ ಬೆಳೆಯ ಹಾಗೆ ಆ ಕೆಲವು ವರ್ಷಗಳ ಹಿಂದೆ ಪಚೌಲಿ ಬೆಳೆ ಬಂದು ಹೋಗಿತ್ತು. ಹರ್ಬಲ್ ವಯಾಗ್ರ ಖ್ಯಾತಿಯ ಶ ಸಫೇದ್ ಮುಸ್ಲಿ (ಒಂದು ಬಗೆಯ ಶುಂಠಿ) ಬೆಳೆ ಬಂದು ಹೋಯಿತು ‌… ಹೀಗೆ ಹಲವಾರು ಬೆಳೆ ಬಂತು. ರೈತರಿಗೆ ಬೀಜ ಗೊಬ್ಬರ ಗಿಡ ಕೊಟ್ಟು ಖರೀದಿಸುವ ಒಪ್ಪಂದದ ಕಂಪನಿಗಳು ರೈತರು ಕಂಪನಿಗಳಿಂದ ಬೀಜ ಗಿಡ ಕೊಂಡು ಆ ಬೆಳೆ ಬೆಳೆದು ಉತ್ಪನ್ನ ಬರುವ ಹೊತ್ತಿಗೆ ಪರಾರಿಯಾಗಿದ್ದವು. ರೈತರಿಗೆ ಇಂತಹ ಹಲವಾರು ಕಂಪನಿ ಬೆಳೆಗಳು ಟೋಪಿ ಹಾಕಿದ ಮೇಲೆ ರೈತರು ಯಾವುದೇ ಹೊಸ ಬೆಳೆ ಎಷ್ಟೇ ಲಾಭ ಬರುತ್ತದೆ ಎಂದರೂ ಕಂಪನಿಗಳಿಂದ ಹೊಸ ಬೆಳೆಯ ಬೀಜ ಗಿಡಕೊಂಡು ನೆಡಲು ಅನಾಸಕ್ತರು.

ನಮ್ಮ ಅಡಿಕೆಗೆ ಯಾಕೆ ಅಷ್ಟು ಬೆಲೆ ಇದೆ ಎಂದರೆ ಅಡಿಕೆಯ ವ್ಯವಸ್ಥಿತ ಮಾರುಕಟ್ಟೆ . ಅಡಿಕೆ ಬಿಟ್ಟರೆ ಇನ್ಯಾವ ಬೆಳೆಗೂ ಇಷ್ಟು ಸರಿಯಾದ ವ್ಯವಸ್ಥಿತ ಮಾರುಕಟ್ಟೆ ಇಲ್ಲ…!! ಇವತ್ತಿನ ಅನೇಕ ಬೆಳೆ ಉತ್ಪನ್ನ ಗಳ ಪ್ರಮುಖ ಸಮಸ್ಯೆ ಯೇ ಮಾರುಕಟ್ಟೆ. ಖಾತ್ರಿ ಬೆಲೆ, ಖಾತ್ರಿ ಖರೀದಿದಾರರಿಲ್ಲದಿರುವುದು. ಸೂಕ್ತ ಗ್ಯಾರಂಟಿ ಮಾರುಕಟ್ಟೆ ಇದ್ದರೆ ರೈತರು ಎಷ್ಟೇ ಕಷ್ಟ ವಾದರೂ ಕೃಷಿ ಮಾಡಿ ತೋರಿಸುತ್ತಾರೆ. ಬಹಳಷ್ಟು ಸರ್ತಿ ರೈತರು ಹೊಸ ಬೆಳೆ ಬೆಳೆದು ಮಾರುಕಟ್ಟೆ ಇಲ್ಲದೇ ಸೋತೇ ಅಡಿಕೆ ಯಂತಹ ಬೆಳೆಗೆ ಬಂದಿರುವುದು ಅಥವಾ ಬರುತ್ತಿರುವುದು.ಮೂವತ್ತು ವರ್ಷಗಳ ಹಿಂದೆ ಬಂದ ಹೊಸ ಬೆಳೆ “ತಾಳೆ” ಬೆಳೆಗೆ ಸರಿಯಾದ ಮಾರುಕಟ್ಟೆ ಇದ್ದಿದ್ದರೆ ಅಡಿಕೆ ಈ ಪರಿ ವಿಸ್ತರಣೆ ಆಗುತ್ತಿರಲಿಲ್ಲ…!!ಆವತ್ತು ತಾಳೆ ಮಾರುಕಟ್ಟೆ ಗೆ ಬರುವಾಗ ಕುತಂತ್ರದಿಂದ ತಾಳೆ ಎಣ್ಣೆ ಕಾರ್ಖಾನೆ ಕಾರ್ಯ ನಿರ್ವಹಣೆ ಮಾಡದಂತೆ ತಡೆದ ದುಷ್ಪರಿಣಾಮ ರೈತರು ತಾಳೆ ಬೆಳೆ ತೆಗದು ಅಡಿಕೆ ಬೆಳೆ ಹಾಕಿದ್ದು…
ತಾಳೆ ಕೂಡ ಆಗ ಹೊಸ ಬೆಳೆ ಆಗಿತ್ತು…

ಹೀಗೆ ರೈತ ಹೊಸ ಬೆಳೆಗಿಂತ ಈಗಿರುವ ಬೆಳೆಯ ಬಗ್ಗೆ ಆಸಕ್ತಿ ವಹಿಸುತ್ತಾರೆ. ಅಪರೂಪಕ್ಕೆ ಒಬ್ಬೊಬ್ಬ ರೈತರು ಹೊಸ ಬೆಳೆ ಬೆಳೆದರೂ ಅದರ ಸೀಮಿತ ಬೇಡಿಕೆಯ ಕಾರಣಕ್ಕಾಗಿ ಮಾರುಕಟ್ಟೆ ಯಲ್ಲಿ ಉತ್ತಮ ಬೆಲೆ ಸಿಗದೇ ಸೋತು ಆ ಬೆಳೆ ಕೈ ಬಿಡುತ್ತಾರೆ.

ಕೆಲವು ವರ್ಷಗಳ ಹಿಂದೆ ಬಂದ ಹೊಸ ಬೆಳೆ ಅಗರ್ ವುಡ್ ಮರಗಳು ರೈತರ ತೋಟದಲ್ಲಿ ಬಲಿಷ್ಠ ವಾಗಿ ಬೆಳೆದು ನಿಂತಿದೆ..!! inoculation ಮಾಡಿ ಸುಗಂಧ ಭರಿತ ಅಗರ್ ವುಡ್ ಮಾಡುವುದರಲ್ಲಿ ಯಶಸ್ವಿಯಾಗಿಲ್ಲ. ಆದರೆ ಲಕ್ಷಾಂತರ ಗಿಡ ವ್ಯಾಪಾರ ವಾಗಿಯಾಗಿದೆ. ಇವತ್ತಿಗೂ ಗಿಡ ಕೊಟ್ಟವರು ನೆಟ್ಟ ರೈತರಿಗೆ ಮರು ಖರೀದಿ ಯ ಆಶಾವಾದ ಮೂಡಿಸುತ್ತಿದ್ದಾರೆ. ಆದರೆ ಪ್ರಾಯೋಗಿಕವಾಗಿ ಬಹುತೇಕ ಅಗರ್ ವುಡ್ ಮೌಲ್ಯವರ್ಧನೆ ಸಾದ್ಯವಿಲ್ಲ….!!

ಹೊಸ ಬೆಳೆಗಳಲ್ಲಿ ರೈತರಿಗೆ ಕೋಟಿ ಹಣದ ರುಚಿ ತೋರಿಸಿದ ಏಕೈಕ ಬೆಳೆ “ವೆನಿಲ್ಲಾ” ಬೆಳೆ ಮಾತ್ರ ‌..!!!
ಆದರೆ ಅದನ್ನೂ ನಮ್ಮ ಮಾರುಕಟ್ಟೆ ದೂರ್ತ ದುರಾಸೆಯ ರಫ್ತುದಾರ ವ್ಯಾಪಾರಿ ಗಳು ಬೆರಕೆ ಮಾಡಿ ಭಾರತದ ವೆನಿಲ್ಲಾ ಕ್ಕೆ
ಮಾರುಕಟ್ಟೆ ಯಲ್ಲಿ ಬೆಲೆ ಕುಸಿಯುವಂತೆ ಮಾಡಿದರು. ಎಂಟು ಹತ್ತು ಸಾವಿರ ರೂಪಾಯಿ ಬೆಲೆ ಇದ್ದ ವೆನಿಲ್ಲಾ ಬೀನ್ಸ್ ಗೆ ಕೊನೆಗಾಲದಲ್ಲಿ ಎಪ್ಪತ್ತು ಎಂಬತ್ತು ರೂಪಾಯಿ ಗೆ ಕುಸಿದಿತ್ತು.

ಇವತ್ತು ಕೂಡ ಅಡಿಕೆಗೆ ಮಲೆನಾಡಿನಲ್ಲಿ ಪರ್ಯಾಯವಾಗಬಹುದಾದ ಅತ್ಯಂತ ಸುಲಭದ (ಸೂಕ್ತ ರೀತಿಯಲ್ಲಿ ಬೆಳೆ ಬೆಳೆದರೆ) ಬೆಳೆ ವೆನಿಲ್ಲಾ. ಈಗ ವೆನಿಲ್ಲಾ ಬೆಳೆಗೆ ಉತ್ತಮ ಬೆಲೆ ಇದ್ದರೂ ಕೂಡ ರೈತರು ಹಿಂದಿನ ಕಹಿ ಅನುಭವಕ್ಕೆ ಈಗ ಮತ್ತೆ ಬೆಳೆಯಲು ಪ್ರಯತ್ನ ಮಾಡುತ್ತಿಲ್ಲ…!! ರೈತರು ಹೊಸ ಬೆಳೆ ಬೆಳೆಯುವುದಾದರೆ ಒಂದಷ್ಟು ಜನ ಸಮಾನ ಮನಸ್ಕ ರೈತರು ಒಂದು ಗೂಡಿ ಬೆಳೆ ಬೆಳೆದು “ವ್ಯವಸ್ಥಿತ” ಮಾರುಕಟ್ಟೆ ಸೃಷ್ಟಿಸಿಕೊಂಡರೆ ಉತ್ತಮ . ಅಲ್ಲಲ್ಲಿ ಒಬ್ಬೊಬ್ಬ ರೈತರು ಲಕ್ಷ ಲಕ್ಷ ವೆಚ್ಚ ಮಾಡಿ ಹೊಸ ಬೆಳೆ ಬೆಳೆಯುವುದು ಅಪಾಯ . ರೈತರು ಸಾಕಷ್ಟು ಎಚ್ಚರಿಕೆ ಯಿಂದ ಜವಾಬ್ದಾರಿಯಿಂದ ಮಾರುಕಟ್ಟೆಯ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ತದನಂತರ ಹೊಸ ಬೆಳೆ ಬೆಳೆಯಲಿ…..ರೈತರು ದುಡುಕಿ , ಬಂಡವಾಳ ಹಾಕಿ ಕೈ ಸೋಲದಿರಲಿ ಎಂಬುದಷ್ಟೇ  ಉದ್ದೇಶ.

ಬರಹ :
ಪ್ರಬಂಧ ಅಂಬುತೀರ್ಥ
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಮಣ್ಣಿಲ್ಲದೇ ಅವಕಾಡೊ ಬೆಳೆ..! ಜೇನು ಸೇರಿಸಿದ ಕೃಷಿ ಈಗ ಹೊಸ ಟ್ರೆಂಡ್
February 11, 2026
7:29 AM
by: ದ ರೂರಲ್ ಮಿರರ್.ಕಾಂ
ರೇಷ್ಮೆ ಗೂಡಿಗೆ 800 ರೂ.ವರೆಗೆ ಬೆಲೆ | ಚಾಮರಾಜನಗರದಲ್ಲಿ ರೈತರಿಗೆ ಲಾಭದಾಯಕ ಹಾದಿ
February 11, 2026
7:11 AM
by: ದ ರೂರಲ್ ಮಿರರ್.ಕಾಂ
ಸ್ಥಳೀಯ ಚುನಾವಣೆಗಳಲ್ಲಿ ಇವಿಎಂಗೆ ಬ್ರೇಕ್ | ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕೆ ಸಚಿವ ಸಂಪುಟ ಹಸಿರು ನಿಶಾನೆ
February 11, 2026
7:04 AM
by: ಮಿರರ್‌ ಡೆಸ್ಕ್
ಕೇಂದ್ರವು ಕೇರಳದ ರಬ್ಬರ್ ಕ್ಷೇತ್ರವನ್ನು ದುರ್ಬಲಗೊಳಿಸುತ್ತಿದೆ – ಆರೋಪ
February 11, 2026
7:01 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror