#TomatoPrice | ಅಂದು ಬಂಗಾರದ ಬೆಲೆ : ಇಂದು ಟೊಮ್ಯಾಟೋ ಯಾರಿಗೂ ಬೇಡ…! | ಟೊಮೆಟೋ ಕೆಜಿಗೆ 4 ರೂ.ಗೆ ದರ ಇಳಿಕೆ |

October 9, 2023
2:38 PM
ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಬೇಡಿಕೆಗಿಂತ ಅತಿ ಹೆಚ್ಚಿನ ಟೊಮೆಟೋ ಪೂರೈಕೆಯಾಗುತ್ತಿದೆ. ಈ ಕಾರಣದಿಂದಲೇ ಟೊಮೆಟೋ ಬೆಲೆ ಕಳೆದುಕೊಂಡಿದೆ. ಕೆಜಿ ಟೊಮೆಟೋ 3 ರಿಂದ 4 ರೂಪಾಯಿಗೆ ಬಿಕರಿಯಾಗುತ್ತಿದೆ.

ಕಳೆದ ಮೂರು ತಿಂಗಳ ಹಿಂದೆ ಟೊಮೆಟೋಗೆ (Tomato) ಬಂಗಾರದ ಬೆಲೆ ಬಂದಿತ್ತು. ಟೊಮೆಟೋ ಬೆಳೆದ ರೈತನಿಗೆ ಬಂಪರ್‌ ಹೊಡೆದಿತ್ತು. ಆದರೆ ತರಕಾರಿ ಬೆಲೆ ಶಾಶ್ವತ ಅಲ್ಲ. ಇದೀಗ ಟೊಮೆಟೋ ಬೆಳೆದ ರೈತನೇ ದುರಾದೃಷ್ಟವಂತ ಎನ್ನುವಂತ ಸ್ಥಿತಿಗೆ ಬಂದು ನಿಂತಿದೆ. ಟೊಮೆಟೋಗೆ ಬೆಲೆ ಬಂದರೆ ಬಂಪರ್, ಇಲ್ಲವಾದರೆ ಬೆಳೆ ಬೆಳೆದ ರೈತರ ಪಾಪರ್ ಎನ್ನುವಂತಾಗಿದೆ. ಸದ್ಯ ಒಂದು ತಿಂಗಳು ಕಳೆದರೂ ಕೂಡ ಟೊಮೆಟೋ ಬೆಲೆ ಮಾತ್ರ ಚೇತರಿಕೆ ಕಂಡಿಲ್ಲ.

ಒಂದೆಡೆ ಕೋಲಾರದಲ್ಲಿ ಮಳೆ ಇಲ್ಲದೆ ಬರ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಇನ್ನೊಂದೆಡೆ ಕಷ್ಟಪಟ್ಟು ಬೋರ್‌ವೆಲ್‌ ನೀರು ತೆಗೆದು ಬೆಳೆದ ತೋಟಗಾರಿಕಾ ಬೆಳೆ ಕೂಡ ಬೆಲೆ ಇಲ್ಲದೆ ಕೈಕೊಟ್ಟಿದೆ. ಇದರಿಂದ ಕೋಲಾರ ಜಿಲ್ಲೆಯ ರೈತರ ಪರಿಸ್ಥಿತಿ ಮಾತ್ರ ಹೇಳತೀರದಾಗಿದೆ. ಒಂದು ಎಕರೆ ಟೊಮೆಟೋ ಬೆಳೆಯಲು ಸುಮಾರು ಒಂದೂವರೆ ಲಕ್ಷ ರೂಪಾಯಿ ರೈತರಿಗೆ ಖರ್ಚು ಬರುತ್ತದೆ. ಆದರೆ ಸದ್ಯ ಮಾರುಕಟ್ಟೆಯಲ್ಲಿರುವ ಬೆಲೆ ನೋಡಿದರೆ ರೈತರು ಮಾಡಿದ ಖರ್ಚಿನ ಅರ್ಧದಷ್ಟು ಹಣವೂ ರೈತರಿಗೆ ಸಿಗುತ್ತಿಲ್ಲ. ಹಾಗಾಗಿ ಬೆಳೆದ ಟೊಮೆಟೋವನ್ನು ಹೊಲದಲ್ಲೇ ಬಿಟ್ಟರೆ ರೈತ ನಷ್ಟದಿಂದ ತಪ್ಪಿಸಿಕೊಳ್ಳಬಹುದು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಸರ್ಕಾರ ರೈತರ ನೆರವಿಗೆ ಬರಬೇಕು ಅನ್ನೋದು ರೈತರ ಮನವಿ.

ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಅತಿಹೆಚ್ಚು ಟೊಮೆಟೋ ಬೆಳೆಯುತ್ತಾರೆ. ಇಲ್ಲಿ ಬೆಳೆಯುವ ಟೊಮೆಟೋವನ್ನು ದೇಶದ ಬಹುತೇಕ ಎಲ್ಲಾ ರಾಜ್ಯಗಳಿಗೆ ಹಾಗೂ ಬಾಂಗ್ಲಾ, ಪಾಕಿಸ್ತಾನ, ದುಬೈ, ಸೇರಿ ಹೊರ ದೇಶಗಳಿಗೂ ರಫ್ತು ಮಾಡುತ್ತಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನೋಡೋದಾದ್ರೆ ಈಗ ಎಲ್ಲಿಂದಲೂ ಕೂಡಾ ಟೊಮೆಟೋಗೆ ಡಿಮ್ಯಾಂಡ್ ಇಲ್ಲ. ಆದರೆ ರೈತರು ಕಳೆದ ಮೂರು ತಿಂಗಳ ಹಿಂದೆ ಟೊಮೆಟೋಗೆ ಬಂಗಾರದ ಬೆಲೆ ಬಂದಿದ್ದ ಕಾರಣದಿಂದ ಒಳ್ಳೆಯ ಬೆಲೆಯ ನಿರೀಕ್ಷೆಯಲ್ಲಿ ಬಹುತೇಕ ರೈತರು ಟೊಮೆಟೋ ಬೆಳೆದಿದ್ದಾರೆ. ಪರಿಣಾಮ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಬೇಡಿಕೆಗಿಂತ ಅತಿ ಹೆಚ್ಚಿನ ಟೊಮೆಟೋ ಪೂರೈಕೆಯಾಗುತ್ತಿದೆ. ಈ ಕಾರಣದಿಂದಲೇ ಟೊಮೆಟೋ ಇಂದು ಬೆಲೆ ಕಳೆದುಕೊಂಡಿದೆ. ಕೆಜಿ ಟೊಮೆಟೋ 3 ರಿಂದ 4 ರೂಪಾಯಿಗೆ ಬಿಕರಿಯಾಗುತ್ತಿದೆ. ಅಂದರೆ ಹದಿನೈದು ಕೆಜಿಯ ಒಂದು ಬಾಕ್ಸ್ ಟೊಮೆಟೋ ಸರಿ ಸುಮಾರು 50 ರಿಂದ 80 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನು ಕೆಲವು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

ಒಟ್ಟಿನಲ್ಲಿ ಟೊಮೆಟೋ ಬೆಳೆಯುವ ರೈತರ ಪರಿಸ್ಥಿತಿ ಹಾಗೂ ಟೊಮೆಟೋ ಬೆಲೆಯನ್ನು ನೋಡಿದ್ರೆ ಇದು ಟೊಮೆಟೋ ಹಾಗೂ ರೈತರ ನಡುವಿನ ಜೂಜಾಟದಂತೆ ಭಾಸವಾಗುತ್ತಿದೆ. ಟೊಮೆಟೋ ಬೆಳೆದ ರೈತರಿಗೆ ಯಾವಾಗಲೂ ಬೆಲೆ ಸಿಗೋದಿಲ್ಲ. ರೈತರಿಗೆ ಅದೃಷ್ಟ ಬಂದಾಗ ಮಾತ್ರವೇ ಅವರಿಗೆ ಬೆಲೆ ಸಿಗೋದು ಅನ್ನೋದು ಮಾತ್ರ ಖಚಿತ.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಮಾರುಕಟ್ಟೆ ಸುದ್ದಿ | ಅಡಿಕೆ ಧಾರಣೆ ಇಳಿಕೆಯಿಂದ ಸ್ಥಿರತೆಯತ್ತ ಮುಂದುವರಿಕೆ
March 3, 2026
2:15 PM
by: ದ ರೂರಲ್ ಮಿರರ್.ಕಾಂ
2030ರೊಳಗೆ 5 ಟ್ರಿಲಿಯನ್ ಆರ್ಥಿಕತೆ ಮೀರಿದ ರಾಷ್ಟ್ರವಾಗಲಿದೆ ಭಾರತ
March 3, 2026
9:53 AM
by: ಮಿರರ್‌ ಡೆಸ್ಕ್
ರೈತರ ಹಿತಕ್ಕಾಗಿ ಎರಡು ಮಹತ್ವದ ಸುಧಾರಣೆಗಳು | ಹೊಸ ಬೀಜ ಕಾಯ್ದೆ, ಪರಿಷ್ಕೃತ ಕೀಟನಾಶಕ ಕಾಯ್ದೆ ಜಾರಿಗೆ ಕೇಂದ್ರ ಸಿದ್ಧತೆ
March 3, 2026
9:37 AM
by: ಮಿರರ್‌ ಡೆಸ್ಕ್
ಇನ್ನೆರಡು ದಿನಗಳಲ್ಲಿ ತಂಬಾಕು ಬೆಳೆಗಾರರ ಸಮಸ್ಯೆಗೆ ಪರಿಹಾರ : ಕುಮಾರಸ್ವಾಮಿ ಭರವಸೆ
March 3, 2026
9:31 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror