Advertisement
Opinion

#GreenRevolution | ಡಾ.ಎಂ.ಎಸ್. ಸ್ವಾಮಿನಾಥನ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾ.. : ಹಸಿವು ನಿವಾರಿಸುವ ಹೆಸರಲ್ಲಿ  ಉಸಿರು ತೆಗೆವ “ಪರಿಹಾರಗಳ ” ಕುರಿತು : ಭಾಗ -4

Share

ಹಸಿರುಕ್ರಾಂತಿಯ ಸಂಪೂರ್ಣ ಲಾಭ ಅನುಭವಿಸಿದ್ದು ಮಾತ್ರ ಅಮೆರಿಕದ ಮಾನ್ಸಾಂಟೋ, ಡು-ಪಾಂಟ್, ಫೋರ್ಡ್, ರಾಕ್‌ಫೆಲ್ಲರ್, ಸಿಬಾ-ಗೈಗಿ, ಕಾರ್ಗಿಲ್‌ನಂತಹ ಗೊಬ್ಬರ, ಬೀಜ, ಮತ್ತು ಕ್ರಿಮಿನಾಶಕ ಕಂಪನಿಗಳು. ಎರಡನೇ ಮಹಾಯುದ್ಧದಲ್ಲಿ ಇದೇ ಕಂಪನಿಗಳೇ ಹಿಟ್ಲರ್‌ಗೂ ಮತ್ತು ಆತನ ವಿರುದ್ಧ ಯುದ್ಧ ಮಾಡುತ್ತಿದ್ದ ಬ್ರಿಟನ್‌ ದೇಶಗಳಿಗೂ ಶಸ್ತ್ರಾಸ್ತ್ರಗಳನ್ನೂ, ರಾಸಾಯನಿಕಗಳನ್ನೂ ಸರಬರಾಜು ಮಾಡುತ್ತಿದ್ದವು. ಯುದ್ಧದ ನಂತರ ಅದೇ ಕಂಪನಿಗಳೇ ಇದ್ದಕ್ಕಿದ್ದಂತೆ ಕೃಷಿ ವಲಯಕ್ಕೆ ಕಾಲಿಟ್ಟು ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಸರಬರಾಜು ಮಾಡಲು ಪ್ರಾರಂಭಿಸಿ ಯುದ್ಧಾನಂತರವೂ ತಮ್ಮ ಮಾರುಕಟ್ಟೆಯನ್ನು ಬೇರೊಂದು ರೂಪದಲ್ಲಿ ಉಳಿಸಿಕೊಂಡವು.

ಅದಕ್ಕೆ ಮಾರುಕಟ್ಟೆ ಸೃಷ್ಟಿಸುವ ಹಸಿರು ಕ್ರಾಂತಿ ಜಗತ್ತಿನಾದ್ಯಂತ ಜಾರಿಗೆ ಬಂದದ್ದು ಕಾಕತಾಳೀಯವೇನಲ್ಲ. ಏಕೆಂದರೆ ನಾರ್ಮನ್ ಬೊರ್ಲಾಗ್ ಕೆಲಸ ಮಾಡುತ್ತಿದ್ದದ್ದು ಕೆಮಿಕಲ್ ಸಂಸ್ಥೆಯಾಗಿದ್ದ ಡು-ಪಾಂಟ್‌ನಲ್ಲಿ. ಆತನಿಗೆ ಫೆಲೋಶಿಪ್ ನೀಡಿ ಮೆಕ್ಸಿಕೋದಲ್ಲಿ ತಾವು ನಡೆಸುತ್ತಿದ್ದ ಕೃಷಿ ಸಂಶೋಧನೆಯಲ್ಲಿ ಸಹಾಯ ಮಾಡುವಂತೆ ಆಹ್ವಾನಿಸಿದ್ದು ಇದೇ ರಾಕ್‌ಫೆಲ್ಲರ್ ಕಂಪನಿಯೇ!

ಈಗ ಭಾರತ ಮತ್ತೆ ಆಹಾರ ಕೊರತೆಯನ್ನು ಅನುಭವಿಸಲು ಪ್ರಾರಂಭಿಸಿದ್ದು ನಾರ್ಮನ್ ಬೊರ್ಲಾಗ್ ಆದಿಯಾಗಿ ಎಲ್ಲರೂ ಅದಕ್ಕೆ ಜನಸಂಖ್ಯಾ ಸ್ಫೋಟವನ್ನು ಹೊಣೆ ಮಾಡುತ್ತಿದ್ದಾರೆ ಮತ್ತು ಅದನ್ನು ಎದುರಿಸಲು ಎರಡನೇ ಹಸಿರುಕ್ರಾಂತಿಯನ್ನು ಅಂದರೆ ಜೆನಿಟಿಕಲ್ ಮಾಡಿಫೈಡ್ ಕೃಷಿಯೆಂಬ ಅತ್ಯಂತ ವಿನಾಶಕಾರಿ ಪದ್ಧತಿಯನ್ನು ಅಳವಡಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ಜೆನಿಟಿಕಲ್ ಮಾಡಿಫೈಡ್ ಕೃಷಿಯ ಪ್ರಧಾನ ಫಲಾನುಭವಿಗಳೆಲ್ಲಾ ಮತ್ತೆ ಇದೇ ಕೃಷಿ ಬಹುರಾಷ್ಟ್ರೀಯ ಕಂಪನಿಗಳೇ!

ಹೀಗಾಗಿ ನಾರ್ಮನ್ ಬೊರ್ಲಾಗ್ ಎಂಬ ಒಬ್ಬ ವಿಜ್ಞಾನಿ ಹೇಗೆ ಸರ್ಕಾರಗಳ ಆರ್ಥಿಕ ಮತ್ತು ರಾಜಕೀಯ ನೀತಿಗಳಿಗೆ ಹೊಣೆಗಾರನಾಗುತ್ತಾನೆ ಎಂಬ ಪ್ರಶ್ನೆಯೇ ಅಸಂಬದ್ಧವಾಗುತ್ತದೆ. ನಾರ್ಮನ್ ಬೊರ್ಲಾಗ್‌ರನ್ನೂ ಒಳಗೊಂಡಂತೆ ಹಸಿರು ಕ್ರಾಂತಿಯೆಂಬ ಯೋಜನೆಯೇ ಎರಡನೇ ಮಹಾಯುದ್ಧದ ನಂತರ ಇಡೀ ಜಗತ್ತನ್ನೇ ತನ್ನ ನಿಯಂತ್ರಣದಲ್ಲಿ ತೆಗೆದುಕೊಳ್ಳಬೇಕೆಂಬ ಅಮೆರಿಕನ್ ಸಾಮ್ರಾಜ್ಯಶಾಹಿ ಆಸಕ್ತಿಯಿಂದ ಹುಟ್ಟಿಕೊಂಡಿದ್ದು ಎಂಬುದನ್ನು ಗಮನಿಸಿದಾಗ ಹಸಿರುಕ್ರಾಂತಿಯ ಅಸಲಿ ಸ್ವರೂಪ ಇನ್ನಷ್ಟು ಸ್ಪಷ್ಟವಾಗುತ್ತದೆ.

ಹಸಿರುಕ್ರಾಂತಿಯ ನೈಜ ಕಥೆ 1943 ರಲ್ಲಿ ರಾಕ್‌ಫೆಲ್ಲರ್ ಸಂಸ್ಥೆಯು ಕೃಷಿ ಪರಿಣಿತರ ಒಂದು ತಂಡವನ್ನು ಮೆಕ್ಸಿಕೋಗೆ ಅಲ್ಲಿನ ಸ್ಥಳೀಯ ಧಾನ್ಯಗಳ ಅಭಿವೃದ್ಧಿಯ ಬಗ್ಗೆ ಅಧ್ಯಯನ ಮಾಡಲು ಕಳಿಸುವುದರ ಮೂಲಕ ಪ್ರಾರಂಭವಾಗುತ್ತದೆ. ನಾರ್ಮನ್ ಬೊರ್ಲಾಗ್ ಈ ತಂಡಕ್ಕೆ 1944 ರಲ್ಲಿ ಸೇರ್ಪಡೆಯಾಗುತ್ತಾರೆ. ರಾಕ್‌ಫೆಲ್ಲರ್ ಈ ಅಧ್ಯಯನವನ್ನು ಕೈಗೆತ್ತಿಕೊಳ್ಳಲು ಪ್ರಧಾನ ಕಾರಣ 1939 ರಲ್ಲಿ ಮೆಕ್ಸಿಕೋದಲ್ಲಿ ಅಧಿಕಾರಕ್ಕೆ ಬಂದಿದ್ದ ಅಧ್ಯಕ್ಷ ಲಜಾರ್ದೋ ಕಾರ್ಡೆನೇಜ್‌ನ ರಾಷ್ಟ್ರೀಯವಾದಿ ಸರ್ಕಾರ ರಾಕ್‌ಫೆಲ್ಲರ್‌ನ ಸ್ಟಾಂಡರ್ಡ್ ಆಯಿಲ್ ಕಂಪನಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದು ಮತ್ತು ಎರಡನೆಯದಾಗಿ ಆ ದಕ್ಷಿಣಾರ್ಧ ಗೋಳದಲ್ಲಿ ನಾಜಿಗಳ ಕಾಲದಿಂದಲೂ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಳ್ಳಬೇಕೆಂಬ ಸತತ ಪ್ರಯತ್ನ ನಡೆಯುತ್ತಿದ್ದದ್ದು.

ಯುದ್ಧಕ್ಕಿಂತ ಅಭಿವೃದ್ಧಿಪರರೆಂಬ ಮುಖವಾಡ ತಮ್ಮ ಹೂಡಿಕೆಯನ್ನು ಮತ್ತು ಪ್ರಭಾವವನ್ನು ವಿಸ್ತರಿಸಲು ಸಹಾಯ ಮಾಡುತ್ತದೆಂದು ಎರಡನೇ ಮಹಾಯುದ್ಧ ಅವರಿಗೆ ಕಲಿಸಿಕೊಟ್ಟಿತ್ತು. 1956 ರ ಸುಮಾರಿಗೆ ಬೊರ್ಲಾಗ್ ತಂಡ ಈ ವಿಶೇಷ ಇಳುವರಿ ಪದ್ಧತಿಯನ್ನು ಕಂಡುಹಿಡಿದಿದ್ದರು. ಅದನ್ನು ನಾಲ್ಕು ವರ್ಷಗಳ ಕಾಲ ಮೆಕ್ಸಿಕೋದ ಮಣ್ಣಲ್ಲಿ ಪರೀಕ್ಷಿಸಿ ಅದಕ್ಕೆ ಬೇಕಾಗುವ ಅಗತ್ಯಗಳೇನೆಂದು ಗುರುತಿಸಲಾಯಿತು. ಈ ಹೈಬ್ರಿಡ್ ಕೃಷಿ ಹೊಸಬಗೆಯ ಬೀಜವನ್ನು ಮಾತ್ರವಲ್ಲದೆ ಬಡದೇಶಗಳ ಸ್ವಾವಲಂಬಿ ಕೃಷಿ ಪದ್ಧತಿಯನ್ನೇ ಸಂಪೂರ್ಣವಾಗಿ ನಾಶಮಾಡಿ ಬೀಜ, ಗೊಬ್ಬರ, ಕ್ರಿಮಿನಾಶಕಗಳೆಲ್ಲವಕ್ಕೂ ತಮ್ಮ ಮೇಲೆ ಅಂದರೆ ಬಂಡವಾಳಶಾಹಿ ಜಗತ್ತಿನ ಮೇಲೆ ಅವಲಂಬಿಸು ವಂತೆ ಮಾಡುತ್ತದೆಂದು ಖಾತ್ರಿ ಪಡಿಸಿಕೊಳ್ಳಲಾಯಿತು.

ಪ್ರಪಂಚವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕೆ ಯುದ್ಧದ ಅಗತ್ಯವೇ ಇಲ್ಲದ ಮತ್ತೊಂದು ಸಾಧನವಾಗಿ ಹಸಿರುಕ್ರಾಂತಿಯು ಸಾಮ್ರಾಜ್ಯಶಾಹಿಗಳಿಗೆ ದಕ್ಕಿತ್ತು. “  ಕೆಂಪು ಕ್ರಾಂತಿಯನ್ನು ಹತ್ತಿಕ್ಕಬೇಕೆಂದರೆ ಹಸಿರು ಕ್ರಾಂತಿ ಅತ್ಯಗತ್ಯ-ಚೆಸ್ಟರ್ ಬೌಲೆಸ್”. ಅದೇ ವೇಳೆಗೆ ಜಗತ್ತು ಹೊಸ ಬಗೆಯ ರಾಜಕೀಯ ಪಲ್ಲಟವನ್ನು ಕಾಣುತ್ತಿತ್ತು. ಏಷಿಯಾದ ಬೃಹತ್ ರಾಷ್ಟ್ರ ಚೀನಾದಲ್ಲಿ ಕಮ್ಯುನಿಸ್ಟ್ ಕ್ರಾಂತಿಯಾಗಿ ಭೂಮಾಲೀಕರನ್ನು ಮತ್ತು ಸಾಮ್ರಾಜ್ಯಶಾಹಿಗಳನ್ನು ಚೀನಾದಿಂದ ಹೊರಗಟ್ಟಲಾಗಿತ್ತು. ಕೊರಿಯಾದಲ್ಲಿ ಸಹ ಅಂತರ್ಯುದ್ಧ ಪ್ರಾರಂಭವಾಗಿ ಅರ್ಧ ಕೊರಿಯಾ ಕಮ್ಯುನಿಸ್ಟ್ ಪ್ರಭಾವಕ್ಕೊಳಗಾಗಿತ್ತು. ಮಲೇಷಿಯಾದಲ್ಲಿ ಬ್ರಿಟನ್ ಸಾಮ್ರಾಜ್ಯಶಾಹಿಗಳ ವಿರುದ್ಧ ಎಡಪಂಥೀಯ ಗೆರಿಲ್ಲಾಗಳ ಯುದ್ಧ ಪ್ರಾರಂಭವಾಗಿತ್ತು. ಕಾಂಬೋಡಿಯಾ, ಲಾವೋಸ್ ಇನ್ನಿತ್ಯಾದಿ ಇಂಡೋ-ಚೈನಾ ದೇಶಗಳಲ್ಲಿ ಕಮ್ಯುನಿಸ್ಟರ ಗೆರಿಲ್ಲಾಗಳು ಅಧಿಕಾರದ ಕದವನ್ನು ತಟ್ಟುತ್ತಿದ್ದರು. ಫಿಲಿಫೈನ್ಸ್ ದೇಶದಲ್ಲೂ ಎಡಪಂಥೀಯ ಗೆರಿಲ್ಲಾಗಳೂ ಸಶಕ್ತಗೊಳ್ಳುತ್ತಿದ್ದರು. ಭಾರತವೊಂದನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ಏಷಿಯಾ ದೇಶಗಳಲ್ಲಿ ಹೆಚ್ಚು ಕಡಿಮೆ ಕಮ್ಯುನಿಸ್ಟರ ಪ್ರಭಾವ ಹೆಚ್ಚುತ್ತಿತ್ತು. ಎರಡನೇ ಮಹಾಯುದ್ಧ ಕೊನೆಗೊಳ್ಳುವ ಜೊತೆಜೊತೆಗೆ ಅರ್ಧ ಯೂರೋಪೂ ಸಹ ಬಂಡವಾಳಶಾಹಿ ಜಗತ್ತಿನ ಪ್ರಭಾವವನ್ನು ಕಳಚಿಕೊಂಡು ಕಮ್ಯುನಿಸ್ಟರ ಪ್ರಭಾವದೆಡೆ ಸೆಳೆಯಲ್ಪಡುತ್ತಿತ್ತು.

ಅಮೆರಿಕ ಹಸಿರುಕ್ರಾಂತಿಯನ್ನು ಅನ್ವೇಷಿಸಿದ್ದು ಇಂಥಾ ರಾಜಕೀಯ ಸಂದರ್ಭದಲ್ಲಿ. ಕಮ್ಯುನಿಸಂ ಬಲಗೊಳ್ಳುವುದೇ ಹಸಿವಿರುವಾಗ ಎಂದು ಅರ್ಥಮಾಡಿಕೊಂಡ ಅಮೆರಿಕನ್ನರು ಹಸಿವಿಗೆ ತುತ್ತನ್ನ ಒದಗಿಸಿ ಕಮ್ಯುನಿಸ್ಟರ ಪ್ರಭಾವದಲ್ಲಿರುವ ದೇಶಗಳನ್ನು ಮತ್ತೆ ಬಂಡವಾಳಶಾಹಿ ಜಗತ್ತಿಗೆ ಎಳೆದು ತರುವ ಸಂಚಿನ ಭಾಗವಾಗಿಯೇ ಹಸಿರು ಕ್ರಾಂತಿ ರೂಪುಗೊಂಡಿತು. ಹೀಗಾಗಿಯೇ 1965 ರಲ್ಲಿ ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ಚೆಸ್ಟರ್ ಬೌಲೆಸ್ “ ಕೆಂಪು ಕ್ರಾಂತಿಯನ್ನು ಹತ್ತಿಕ್ಕಬೇಕೆಂದರೆ ಹಸಿರು ಕ್ರಾಂತಿ ಅತ್ಯಗತ್ಯ”  ಎಂದು ಘೋಷಿಸಿದ್ದರು. ಆದ್ದರಿಂದಲೇ 1970 ರಲ್ಲಿ ನಾರ್ಮನ್ ಬೊರ್ಲಾಗ್ ನೊಬೆಲ್ ಪ್ರಶಸ್ತಿ ಸಿಕ್ಕಿದ್ದು ಕೃಷಿ  ವಿಜ್ಞಾನಕ್ಕಲ್ಲ. ಬದಲಿಗೆ . ಶಾಂತಿಗಾಗಿ! ಆತಂಕದಲ್ಲಿದ್ದ ಬಂಡವಾಳಶಾಹಿ ಜಗತ್ತಿಗೆ ಶಾಂತಿ ತಂದುಕೊಟ್ಟಿದ್ದಕ್ಕಾಗಿ…

ಹೀಗಾಗಿ ಈ ಮೊದಲೇ ವಿವರಿಸಿದಂತೆ ಹಸಿರು ಕ್ರಾಂತಿಯ ತಂತ್ರಜ್ಞಾನವು ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳಿಗೆ ಹೊಸ ಮಾರುಕಟ್ಟೆ ತಂದುಕೊಡುವುದು ಎಂದು ಖಾತರಿಯಾದ ಮೇಲೆ ಅಮೆರಿಕಾ ಅದನ್ನು ಕಡ್ಡಾಯವಾಗಿ ಎಲ್ಲಾ ದೇಶಗಳ ಮೇಲೆ ಹೇರತೊಡಗಿತು. ಆವರೆಗೆ ಪ್ರಪಂಚದ ಎಲ್ಲಾ ಬಡ ದೇಶಗಳಿಗೆ ಪಿಎಲ್-480  ಯೋಜನೆಯಡಿಯಲ್ಲಿ ಗೋಧಿಯನ್ನು ಸಬ್ಸಿಡಿ ದರದಲ್ಲಿ ಸರಬರಾಜು ಮಾಡುತ್ತಿದ್ದ ಅಮೆರಿಕದ ನೀತಿಯನ್ನು 1965 ರಲ್ಲಿ ಅಧ್ಯಕ್ಷ ಲಿಂಡನ್ ಜಾನ್ಸನ್ ಬದಲಾಯಿಸಿದ. ಇನ್ನು ಮುಂದೆ ಅಮೆರಿಕದ ಸಬ್ಸಿಡಿ ಗೋಧಿ ಬೇಕೆಂದರೆ ಬಡ ದೇಶಗಳು ತಮ್ಮ ಕೈಗಾರೀಕರಣ ನೀತಿಯನ್ನು ಕೈಬಿಡಬೇಕು, ಹೈಬ್ರಿಡ್ ಕೃಷಿಯನ್ನು ಅನುಸರಿಸಬೇಕು ಮತ್ತು ಅಮೆರಿಕದ ಬಂಡವಾಳಕ್ಕೆ ತಮ್ಮ ದೇಶದ ಮಾರುಕಟ್ಟೆಯನ್ನು ತೆರೆದಿಡಬೇಕು ಎಂಬ ಶರತ್ತನ್ನು ವಿಧಿಸಿದ.

1965 ರಲ್ಲಿ ಭಾರತದಲ್ಲಿ ಹಿಂದೆಂದೂ ಕಾಣದ ಕ್ಷಾಮ ಡಾಮರ ಆವರಿಸಿ ಅಪಾರ ಆಹಾರ ಕೊರತೆ ಎದುರಾಗಿತ್ತು. ಈ ಅವಕಾಶವನ್ನು ಬಳಸಿಕೊಂಡ ಅಮೆರಿಕ ಭಾರತವೂ ಹಸಿರುಕ್ರಾಂತಿ ಯೋಜನೆಯನ್ನು ಜಾರಿ ಮಾಡಬೇಕೆಂದೂ, ಅಮೆರಿಕದ ಕೃಷಿ ಬಂಡವಾಳಕ್ಕೆ ಮಾರುಕಟ್ಟೆಯನ್ನು ತೆರೆಯಬೇಕೆಂದೂ, ಇಲ್ಲದಿದ್ದರೆ ಆಹಾರ ಸರಬರಾಜು ಮಾಡುವುದಿಲ್ಲವೆಂದೂ ಬ್ಲಾಕ್‌ಮೇಲ್ ಮಾಡಿ ಹಸಿರು ಕ್ರಾಂತಿ ಯೋಜನೆಯನ್ನು ಮಂಡಿ ಬಲವಿಲ್ಲದ ಭಾರತದ ಸರ್ಕಾರದ ಮೇಲೆ ಹೇರಿತು.

ಹೀಗಾಗಿ ಹಸಿರುಕ್ರಾಂತಿಯೆಂಬುದು ಭಾರತದಂತಹ ಕೃಷಿ ಪ್ರಧಾನ ದೇಶವನ್ನು ಅಮೆರಿಕನ್ ಸಾಮ್ರಾಜ್ಯಶಾಹಿ ನಿಯಂತ್ರಣಕ್ಕೆ ಒಳಪಡಿಸುವ ಸಂಚೇ ಹೊರತು ರೈತೋದ್ಧಾರದ ಯೋಜನೆಯಲ್ಲ. ಅದರ ಪರಿಣಾಮವೇ ಕೊನೆಯಿಲ್ಲದ ರೈತರ ಆತ್ಮಹತ್ಯೆಗಳು. ಹಸಿವಿನ ಸಾವುಗಳು. ಬತ್ತಿಹೋದ ಕೆರೆಗಳು. ಕುಸಿದುಬಿದ್ದಿರುವ ಅಂತರ್ಜಲದ ಮಟ್ಟ. ಕಂಡು ಕೇಳರಿಯದ ಬೆಳೆ ರೋಗಗಳು. ಅತಂತ್ರ ರೈತ. ಪರಾವಲಂಬಿ ದೇಶ…  ಇವೆಲ್ಲದರ ಮೂಲ ಸೂತ್ರಧಾರಿ ನಾರ್ಮನ್ ಬೊರ್ಲಾಗ್. ಆದ್ದರಿಂದಲೇ ಹೇಳಿದ್ದು ಈ ಮಹಾಶಯ ಸಾಮ್ರಾಜ್ಯಶಾಹಿಗಳ ಉಗ್ರಾಣ ತುಂಬಿಸಲು ಬಡದೇಶಗಳ, ಬಡರೈತರ ಕೈಯಲ್ಲಿದ್ದ ತಟ್ಟೆಯನ್ನೂ ಕಸಿದುಕೊಂಡ ಕೊಲೆಗಾರ ಎಂದು.

ಬರಹಗಾರರು – ಶಿವಸುಂದರ್, 9448659774

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

7 hours ago

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

16 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

20 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

2 days ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

2 days ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

2 days ago