ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಕೇಂದ್ರ ಬಜೆಟ್ 2026ರಲ್ಲಿ ರೈತರು ಹಾಗೂ ಕೃಷಿ ಕ್ಷೇತ್ರಕ್ಕೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಕೃಷಿ ಉತ್ಪಾದನೆ ಹೆಚ್ಚಿಸುವುದು, ಮಾರುಕಟ್ಟೆ ಸುಧಾರಣೆ, ರೈತರಿಗೆ ನೇರ ನೆರವು ನೀಡುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ಪರಿಚಯಿಸಲಾಗಿದೆ.
ಕೃಷಿ ಮತ್ತು ಗ್ರಾಮೀಣ ಆರ್ಥಿಕತೆ ಭಾರತದ ಆಧಾರಸ್ತಂಭವಾಗಿದ್ದು, ಈ ಬಾರಿಯ ಬಜೆಟ್ನಲ್ಲಿ ಕೃಷಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವಿದೆ ಎಂದು ಸಚಿವರು ತಿಳಿಸಿದ್ದಾರೆ.
ಭಾರತೀಯ ಕೃಷಿ ವಲಯದಲ್ಲಿ ಮಹತ್ವದ ಬದಲಾವಣೆ ತರುವ ನಿಟ್ಟಿನಲ್ಲಿ ಸಮಗ್ರ ಕಾರ್ಯತಂತ್ರವನ್ನು ರೂಪಿಸಿದೆ. ಕೇವಲ ಸಾಂಪ್ರದಾಯಿಕ ಕೃಷಿಗೆ ಸೀಮಿತವಾಗದೆ, ಕೃತಕ ಬುದ್ಧಿಮತ್ತೆ (AI) ಮತ್ತು ಉದ್ಯಮಶೀಲತೆಗೆ ಆದ್ಯತೆ ನೀಡುವ ಮೂಲಕ ರೈತರನ್ನು ‘ಉದ್ಯಮಿ’ಗಳನ್ನಾಗಿ ಮಾಡುವ ಗುರಿಯನ್ನು ಈ ಬಜೆಟ್ ಹೊಂದಿದೆ. ಈ ಬಾರಿಯ ಬಜೆಟ್ನಲ್ಲಿ ರೈತರ ಆದಾಯ ಹೆಚ್ಚಿಸಲು ಘೋಷಿಸಲಾದ ಪ್ರಮುಖ ಅಂಶಗಳು ಇಲ್ಲಿವೆ:
- ಜಾಗತಿಕ ಬ್ರ್ಯಾಂಡಿಂಗ್ ಮತ್ತು ಮೌಲ್ಯವರ್ಧನೆ : ಭಾರತೀಯ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ತಂದುಕೊಡಲು ಸರ್ಕಾರ ವಿಶೇಷ ಒತ್ತು ನೀಡಿದೆ. 2030ರ ವೇಳೆಗೆ ಭಾರತೀಯ ಗೋಡಂಬಿ ಮತ್ತು ಕೋಕೋವನ್ನು ಜಾಗತಿಕ ಪ್ರೀಮಿಯಂ ಬ್ರ್ಯಾಂಡ್ಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ. 10 ಮಿಲಿಯನ್ ರೈತರು ಸೇರಿದಂತೆ ಒಟ್ಟು 30 ಮಿಲಿಯನ್ ಜನರಿಗೆ ಬೆಂಬಲ ನೀಡಲು ತೆಂಗಿನ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಈ ಯೋಜನೆ ರೂಪಿಸಲಾಗಿದೆ. ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಭಾರತೀಯ ಶ್ರೀಗಂಧದ ಪರಿಸರ ವ್ಯವಸ್ಥೆಯನ್ನು ಮರುಸ್ಥಾಪಿಸಲು ನಿರ್ಧರಿಸಲಾಗಿದೆ.
- ಭಾರತ್-ವಿಸ್ತಾರ್ (Bharat-VISTAAR): ಕೃಷಿಯಲ್ಲಿ AI ಕ್ರಾಂತಿ – ರೈತರಿಗೆ ತಾಂತ್ರಿಕ ನೆರವು ನೀಡಲು ‘ಭಾರತ್-ವಿಸ್ತಾರ್’ ಎಂಬ ಬಹುಭಾಷಾ AI (ಕೃತಕ ಬುದ್ಧಿಮತ್ತೆ) ಉಪಕರಣವನ್ನು ಪರಿಚಯಿಸಲಾಗಿದೆ. ಇದು ರೈತರಿಗೆ ಕೃಷಿ ಸಂಪನ್ಮೂಲಗಳ ಬಗ್ಗೆ ಮಾಹಿತಿ ನೀಡುತ್ತದೆ. ಹವಾಮಾನ ಮತ್ತು ಮಣ್ಣಿನ ಸ್ಥಿತಿಗೆ ಅನುಗುಣವಾಗಿ ಸಲಹೆಗಳನ್ನು ನೀಡುವ ಮೂಲಕ ಕೃಷಿಯಲ್ಲಿನ ಅಪಾಯವನ್ನು ಕಡಿಮೆ ಮಾಡಲು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- ಪಶುಸಂಗೋಪನೆ ಮತ್ತು ಮೀನುಗಾರಿಕೆ ಅಭಿವೃದ್ಧಿ : ಕೃಷಿಯ ಜೊತೆಗೆ ಉಪಕಸುಬುಗಳಿಗೂ ಬಜೆಟ್ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮೀನುಗಾರಿಕೆ ವಲಯವನ್ನು ಬಲಪಡಿಸಲು 500 ಜಲಾಶಯಗಳು ಮತ್ತು ಅಮೃತ್ ಸರೋವರಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಪಶುಸಂಗೋಪನೆ ವಲಯದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಮೂಲಕ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುವುದು.
- ಗ್ರಾಮೀಣ ಮಹಿಳಾ ಉದ್ಯಮಿಗಳಿಗೆ ‘SHE-Marts’ : ‘ಲಖ್ಪತಿ ದೀದಿ’ ಕಾರ್ಯಕ್ರಮದ ಯಶಸ್ಸಿನ ನಂತರ, ಮಹಿಳಾ ಸ್ವಸಹಾಯ ಸಂಘಗಳನ್ನು ಉದ್ದಿಮೆದಾರರನ್ನಾಗಿ ಮಾಡಲು SHE-Marts (Self-Help Entrepreneur Marts) ಸ್ಥಾಪಿಸಲಾಗುವುದು. ಇದು ಮಹಿಳೆಯರು ಕೇವಲ ಸಾಲ ಪಡೆಯುವವರಾಗದೆ, ಸ್ವಂತ ಉದ್ಯಮದ ಮಾಲೀಕರಾಗಲು ವೇದಿಕೆ ಕಲ್ಪಿಸುತ್ತದೆ.
ಒಟ್ಟಾರೆಯಾಗಿ, ಈ ಬಾರಿಯ ಬಜೆಟ್ ಕೃಷಿಯನ್ನು ಆಧುನೀಕರಣದತ್ತ ಕೊಂಡೊಯ್ಯುವ ಮತ್ತು ರೈತರ ಆರ್ಥಿಕ ಭದ್ರತೆಯನ್ನು ಖಚಿತಪಡಿಸುವ ಭರವಸೆಯನ್ನು ನೀಡಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಕೃಷಿಗೆ ಬಜೆಟ್ನ ಪ್ರಮುಖ ಘೋಷಣೆಗಳು
-
ರೈತರ ಆದಾಯ ಹೆಚ್ಚಿಸಲು ಹೊಸ ಕೃಷಿ ಬೆಂಬಲ ಯೋಜನೆಗಳು
-
ನೀರಾವರಿ ಮತ್ತು ಕೃಷಿ ಮೂಲಸೌಕರ್ಯಕ್ಕೆ ಹೆಚ್ಚಿನ ಹಣಕಾಸು ಹೂಡಿಕೆ
-
ಬೆಳೆ ವಿಮೆ ಹಾಗೂ ಬೆಲೆ ಸ್ಥಿರತೆಯತ್ತ ಸರ್ಕಾರದ ಹೊಸ ಹೆಜ್ಜೆ
-
ಆಹಾರ ಸಂಸ್ಕರಣಾ ಘಟಕಗಳಿಗೆ ಉತ್ತೇಜನ
-
ಗ್ರಾಮೀಣ ಸಾಲ ಸೌಲಭ್ಯ ವಿಸ್ತರಣೆ
ಹೊಸ ಯೋಜನೆಗಳ ಪರಿಚಯ : ಈ ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ನೇರ ಪ್ರಯೋಜನವಾಗುವಂತೆ ಹೊಸ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಘೋಷಿಸಲಾಗಿದ್ದು, ರೈತರಿಗೆ ತಾಂತ್ರಿಕ ಸಹಾಯ ಹಾಗೂ ಮಾರುಕಟ್ಟೆ ಸಂಪರ್ಕವನ್ನು ಹೆಚ್ಚಿಸುವ ಗುರಿ ಹೊಂದಿದೆ.


