Advertisement
ಕೃಷಿ-ಮಾರುಕಟ್ಟೆ

ಭಾರತದಲ್ಲಿ ಅಡಿಕೆಯ ಬಳಕೆ ಹೇಗೆ..? ಯಾವುದೆಲ್ಲಾ ವಿಭಾಗಗಳು ಇವೆ..? ಮಾರುಕಟ್ಟೆ ಹೇಗೆ..?

Share

ನಮ್ಮಲ್ಲಿ ಬೆಳೆಯುತ್ತಿರುವ ಅಡಿಕೆಯ ಬಹು ಪಾಲು ಬೀಡ, ಸಿಹಿ ಸುಪಾರಿ, ಗುಟ್ಕಾ,ಪಾನ್ ಮಸಾಲ ಇತ್ಯಾದಿಗಳ ತಯಾರಿಯಲ್ಲಿ ಬಳಕೆ ಮಾಡುತ್ತಾರೆ. ಇದರೊಂದಿಗೆ ಎಲ್ಲಾ ಸಾಮಾಜಿಕ,ದಾರ್ಮಿಕ ಹಾಗೂ ರಾಜಕೀಯ ಕಾರ್ಯಕ್ರಮಗಳಲ್ಲಿ ಉಪಯೋಗಿಸಲಾಗುತ್ತಿದೆ. ಬಳಕೆಯಲ್ಲಿರುವ ಅಡಿಕೆಯ ವಿಧಗಳು ಬೇರೆ ಬೇರೆ ಇವೆ.

ಬಳಕೆಗಾಗಿರುವ ಅಡಿಕೆಯ ನಮೂನೆಗಳು:

  1. ಹಣ್ಣು ಅಡಿಕೆ : ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ,ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಇದರ ಉಪಯೋಗ ಅಧಿಕವಾಗಿದೆ. ಇವುಗಳೊಂದಿಗೆ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಇದರ ಉಪಯೋಗವಿದೆ.ಈ ಅಡಿಕೆಯನ್ನು ಸ್ಥಳೀಯವಾಗಿ ಲಭ್ಯವಿರುವ ವೀಳ್ಯದ ಎಲೆ ಒಂದಿಗೆ ತಿನ್ನಲು ಬಳಸಲಾಗುತ್ತಿದೆ.ಇದನ್ನು ಬಳಸುವವರಲ್ಲಿ ಅಧಿಕ ಪಾಲು ಕೂಲಿ ಕಾರ್ಮಿಕರು ಆಗಿದ್ದಾರೆ.ಸಾಂಪ್ರದಾಯಿಕವಾಗಿ ಅಡಿಕೆ ಬೆಳೆಸುವ ಎಲ್ಲಾ ಮನೆಗಳಲ್ಲೂ ಅಡಿಕೆ ,ವೀಳ್ಯದ ಎಲೆ,ಸುಣ್ಣ,ತಂಬಾಕು ಇತ್ಯಾದಿಗಳ ತಟ್ಟೆ ಇದ್ದುದು ಈಗ ಕಣ್ಮರೆಯಾಗುತ್ತಿದೆ.ಇದರೊಂದಿಗೆ ಸಾಮಾನ್ಯವಾಗಿ ಎಲ್ಲಾ ಗೂಡಂಗಡಿ ಯಾ ಸಣ್ಣ ಅಂಗಡಿಗಳಲ್ಲಿ ಬೀಡಾ ಲಭ್ಯವಿದ್ದು,ಇತ್ತೀಚಿನ ದಿನಗಳಲ್ಲಿ ಇಲ್ಲಿ ಈ ಬೀಡಾಕ್ಕೆ ಬೇಡಿಕೆ ಕುಸಿಯುತ್ತಿದೆ.ಇದಕ್ಕೆ ಮುಖ್ಯ ಕಾರಣ ಅಡಿಕೆಯ ಮೌಲ್ಯ ವರ್ಧಿತ ಉತ್ಪನ್ನಗಳ ಲಭ್ಯತೆ.
    ಕರಾವಳಿ ಜಿಲ್ಲೆಗಳಲ್ಲಿ ಲಭ್ಯ ಇರುವ ಹಣ್ಣು ಅಡಿಕೆಯನ್ನು ಹೆಚ್ಚಾಗಿ ವಾರದ ಸಂತೆಗಳಲ್ಲಿ ಸ್ಥಳೀಯ ಮತ್ತು ದೂರದ ಊರಿನ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ.ಅವು ಮುಂದೆ ಬೇಡಿಕೆಯ ಪ್ರದೇಶಗಳಿಗೆ ರವಾನೆಯಾಗುತ್ತದೆ.ಮಳೆಗಾಲದ ಆರಂಭದಲ್ಲಿ ಭತ್ತದ ಕೃಷಿ ಮಾಡುವ ಕೇರಳದ ಪ್ರದೇಶಗಳಿಗೆ ಇದಕ್ಕೆ ಬೇಡಿಕೆ ಜಾಸ್ತಿ.ಆದರೆ ಇತ್ತೀಚಿನ ವರ್ಷಗಳಲ್ಲಿ ಭತ್ತದ ಕೃಷಿ ಕಡಿಮೆಯಾಗುತ್ತಿದ್ದು ಇದರಿಂದಾಗಿ ಬೇಡಿಕೆ ಏರು ಪೇರು ಆಗುತ್ತಿದೆ.ಇದರೊಂದಿಗೆ ಗುಟ್ಕಾ ಮಾರುಕಟ್ಟೆಯಲ್ಲಿ ಲಭ್ಯ ಆಗಲು ಶುರು ಆದ ಬಳಿಕ ಹಣ್ಣು ಅಡಿಕೆಗೆ ಬೇಡಿಕೆ ಕಡಿಮೆ ಆಗುತ್ತಿದೆ.
    ಹಣ್ಣು ಅಡಿಕೆ ವರ್ಷ ಪೂರ್ತಿ ದೊರಕದೇ ಇದ್ದ ಸಂದರ್ಭದಲ್ಲಿ ಅಂತಿಮ ಕೊಯ್ಲಿನ ಅಡಿಕೆಯನ್ನು ನೀರು ತುಂಬಿದ ಮಡಕೆ ಇಲ್ಲವೇ ಹೊಂಡದಲ್ಲಿ ಅಥವಾ ಮರಳಲ್ಲಿ ಹಾಕಿ ಇಡುವ ಪದ್ಧತಿ ನಮ್ಮಲ್ಲಿ ಇದೆ.ಆದರೆ ಈಗ ಲಭ್ಯ ಇರುವ ವಿವಿಧ ತಳಿಗಳಿಂದಾಗಿ ವರ್ಷ ಪೂರ್ತಿ ಅಡಿಕೆ ಲಭ್ಯ ಆಗುತ್ತಿರುವುದರಿಂದ ಈ ಪದ್ಧತಿ ಮಹತ್ವ ಕಳಕೊಳ್ಳುತ್ತಿದೆ.
  2. ಚಾಲಿ ಅಡಿಕೆ : ಚಾಲಿ ಅಥವಾ ಬಿಳಿ ಅಡಿಕೆಯನ್ನು ,ಬೆಳೆದು ಹಣ್ಣಾದ ಕೊಯ್ಲು ಮಾಡಿದ ಇಲ್ಲವೇ ಹೆಕ್ಕಿದ ಅಡಿಕೆಯನ್ನು 55 ರಿಂದ 60 ಬಿಸಿಲಿನಲ್ಲಿ ಒಣಗಿಸಿ ಸುಲಿದು ಗಳಿಸಿಕೊಳ್ಳಲಾಗುತ್ತದೆ.ಈ ಅಡಿಕೆಯನ್ನು ಐದಾರು ತಿಂಗಳುಗಳ ಒಳಗೆ ಮಾರಾಟಕ್ಕೆ ಬಿಡುಗಡೆ ಮಾಡಿದರೆ ಅದಕ್ಕೆ ಹೊಸ ಅಡಿಕೆ ಎಂದೂ,ಅದಕ್ಕಿಂತ ಹೆಚ್ಚು ಸಮಯ ಶೇಖರಣೆ ಮಾಡಿ ಬಳಿಕ ಸುಲಿದು ಮಾರಾಟ ಮಾಡಿದಾಗ ಅದು ಹಳೆ ಅಡಿಕೆ ಎಂದೂ,ಒಂದು ವರ್ಷಕ್ಕಿಂತ ಹೆಚ್ಚು ಇತ್ತು ಮಾರಾಟ ಮಾಡಿದಾಗ ಅದನ್ನು ಡಬ್ಬಲ್ ಚಾಲಿ ಎಂದೂ ಕರೆಯಲಾಗುತ್ತದೆ.ಅಡಿಕೆ ಹಳತಾದಷ್ಟು ಅದರ ರುಚಿ ಹೆಚ್ಚಾಗುವ ಕಾರಣ ಇದಕ್ಕೆ ಗುಜರಾತಿನಲ್ಲಿ ಬೇಡಿಕೆ ಹೆಚ್ಚು.
    ಚಾಲಿ ಅಡಿಕೆಯನ್ನು ಕರ್ನಾಟಕದ ದಕ್ಷಿಣ ಕನ್ನಡ,ಉಡುಪಿ,ಉತ್ತರ ಕನ್ನಡ,ಶಿವಮೊಗ್ಗ ಕೇರಳದ ಕಾಸರಗೋಡು,ಕಣ್ಣೂರು ಇತ್ಯಾದಿ ಜಿಲ್ಲೆಗಳು,ತಮಿಳುನಾಡು,ಮಹಾರಾಷ್ಟ್ರದ ರತ್ನಗಿರಿ,ಕೋಲಾಬ ಮತ್ತು ಪಶ್ಚಿಮ ಬಂಗಾಳ ದಲಿ ತಯಾರಿಸಲಾಗುತ್ತಿದೆ.ಈ ಎಲ್ಲಾ ಪ್ರದೇಶಗಳ ಪೈಕಿ ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ಚಾಲಿ ಅಡಿಕೆಗೆ ದೇಶದಾದ್ಯಂತ ಅಧಿಕ ಬೇಡಿಕೆ ಇದೆ.ಇದಕ್ಕೆ ಮುಖ್ಯ ಕಾರಣ ಇದರ ರುಚಿ,ಗುಣಮಟ್ಟ ಮತ್ತು ಗಾತ್ರ.
    ಚಾಲಿ ಅಡಿಕೆಯನ್ನು ಅದರ ಗುಣಮಟ್ಟಕ್ಕೆ ಅನುಗುಣವಾಗಿ ಉತ್ತಮ ಚಾಲಿ, ಪಠೋರ , ಉಳ್ಳಿ ಮತ್ತು ಕರಿಗೋಟು ಎಂಬುದಾಗಿ ವಿಂಗಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ.ಚಾಲಿ ಅಡಿಕೆಗೆ ಪಶ್ಚಿಮ ಮತ್ತು ಉತ್ತರ ಭಾರತದಲ್ಲಿ ಬೇಡಿಕೆ ಇದ್ದು,ಇಲ್ಲಿ ಮಂಗಳೂರು ಮತ್ತು ಕಾಸರಗೋಡು ಚಾಳಿಗೆ ಗುಜರಾತ್ನಲ್ಲಿ ಅಧಿಕ ಬೇಡಿಕೆ ಇದೆ.  ಸಾಮಾನ್ಯ ದರ್ಜೆಯ ಅಡಿಕೆಗೆ ಹೆಚ್ಚಾಗಿ ಬಿಹಾರ,ಒಡಿಶಾ,ಉತ್ತರ ಪ್ರದೇಶದ ಕೆಲ ಭಾಗಗಳು ಇತ್ಯಾದಿಗಳಲ್ಲಿ ಬೇಡಿಕೆ ಇದೆ.ಈ ಎಲ್ಲಾ ಅಡಿಕೆಯನ್ನು ಬೀಡಾದ ತಯಾರಿ,ಬೀದರಹಿತವಾಗಿ ತಿನ್ನಲು,ಹುರಿದ ಅಡಿಕೆ ತಯಾರಿ,ದಾರ್ಮಿಕ ಕಾರ್ಯಕ್ರಮಗಳಿಗೆ,ಸುಗಂಧ ಸುಪಾರಿ,ಪಾನ್ ಮಸಾಲ,ಗುಟ್ಕಾ ಮತ್ತು ಹಲ್ಲು ಪುಡಿ ಇತ್ಯಾದಿಗಳನ್ನು ತಯಾರಿಸಲು ಬಳಸಲಾಗುತ್ತಿದೆ.
    ಬೆಳೆಗಾರರಿಂದ ಖರೀದಿಯಾದ ಅಡಿಕೆಯನ್ನು ಸಂಸ್ಥೆಗಳು ಮತ್ತು ವ್ಯಾಪಾರಸ್ಥರು ತಮ್ಮ ಸಂಸ್ಕರಣಾ ಘಟಕಗಳಲ್ಲಿ ಗ್ರಾಹಕ ಪ್ರದೇಶಗಳ ಬೇಡಿಕೆಗೆ ಅನುಗುಣವಾಗಿ ನಿಗದಿಪಡಿಸಿದ ಗಾತ್ರಗಳಲ್ಲಿ ವಿಂಗಡಿಸಿ ಮೋರ,ಮೋಟಿ,ಸೇವರ್ಡನ್,ಜಾಮ್, ಜೀನೀ ಮತ್ತು ಲಿಂಡಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ.
  3. ಕೆಂಪು ಅಡಿಕೆ : ಎಳೆ ಕಾಯಿಯನ್ನು ಕೊಯಿದು ನಂತರ ಅದರ ಸಿಪ್ಪೆಯನ್ನು ತೆಗೆದು ಒಳಭಾಗದಲ್ಲಿರುವ ತಿರುಳು ಅಥವಾ ಅಡಿಕೆಯನ್ನು ಚೋಗರಿನಲ್ಲಿ ಬೇಯಿಸಿ ಬಳಿಕ ಸೂರ್ಯನ ಬಿಸಿಲಿನಲ್ಲಿ ಒಣಗಿಸಿ ಸಿಗುವ ಉತ್ಪನ್ನವೇ ಕೆಂಪು ಅಡಿಕೆ. ಇದನ್ನು ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹೊರತು ಪಡಿಸಿ ಉಳಿದ ಅಡಿಕೆ ಬೆಳೆಯುವ ಎಲ್ಲಾ ಜಿಲ್ಲೆಗಳಲ್ಲಿ ಉತ್ಪಾದಿಸಲಾಗುತ್ತದೆ.ಕೇರಳದಲ್ಲೂ ಇದರ ಉತ್ಪಾದನೆ ಆಗುತ್ತಿದೆ.
    ಇಲ್ಲಿ ಎಳೆ ಕಾಯಿಯನ್ನು ಬೇಯಿಸಿದಾಗ ಅದನ್ನು ಉಂಡೆ ಎನ್ನುತ್ತಾರೆ.ಉಂಡೆಯಲ್ಲಿ ಅಪಿ, ಚಿಕಣಿ, ಬರ್ದ, ಗೊಟ್ ಎಂದು 4 ವರ್ಗಗಳಾಗಿ ವಿಂಗಡಿಸಲಾಗುತ್ತದೆ.ಇವಕ್ಕೆ ಉತ್ತರ ಕರ್ನಾಟಕ, ಮಹಾರಾಷ್ಟ್ರ ಆಂಧ್ರ ಪ್ರದೇಶಗಳಲ್ಲಿ ಬೇಡಿಕೆ ಇದೆ.ಕರ್ನಾಟಕದ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಈ ಅಡಿಕೆಯನ್ನು ಅಪೀ, ಇಡಿ, ಸರಕು,ಬೆಟ್ಟೆ ಇತ್ಯಾದಿಗಳ ರೂಪದಲ್ಲಿ ಮಾರಾಟ ಮಾಡುತ್ತಾರೆ.ಈ ಎಲ್ಲಾ ರೀತಿಯ ಅಡಿಕೆಗೆ ಉತ್ತರ ಭಾರತದಲ್ಲಿ ಬೇಡಿಕೆ ಇದೆ.ಇವನ್ನು ಮೌಲ್ಯ ವರ್ಧಿತ ಉತ್ಪನ್ನಗಳ ತಯಾರಿಗೆ ಮತ್ತು ಬೀಡಾ ತಯಾರಿಯಲ್ಲಿ ಬಳಕೆ ಮಾಡಲಾಗುತ್ತಿದೆ.ಇದರೊಂದಿಗೆ ಅಲ್ಲ್ಪ ಪ್ರಮಾಣ ಬಣ್ಣದ ತಯಾರಿಗೂ ಹೋಗುತ್ತದೆ.
    ಒಟ್ಟಾರೆಯಾಗಿ ನಮ್ಮಲ್ಲಿ ಇಂದು ಉತ್ಪಾದನೆ ಆಗುತ್ತಿರುವ ಹಣ್ಣು ಅಡಿಕೆ,ಚಾಲಿ ಮತ್ತು ಕೆಂಪು ಅಡಿಕೆ ವಿವಿಧ ರೂಪದಲ್ಲಿ ತಿನ್ನಲು ಬಳಕೆ ಆಗುತ್ತಿದ್ದು,ಮುಂದೆ ಇದರ ಇತರೇ ಬಳಕೆ ಬಗ್ಗೆ ಆಸಕ್ತಿ ವಹಿಸ ಬೇಕಾಗಿದೆ. ಈ ನಿಟ್ಟಿನಲ್ಲಿ ಸಂಶೋಧನೆಗಳು,ಸಂಸ್ಥೆಗಳ ಆಸಕ್ತಿ ಮತ್ತು ಬೆಳೆಗಾರರ ಬೆಂಬಲ ಅನಿವಾರ್ಯ ಮತ್ತು ಅತ್ಯಗತ್ಯ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

ಡಾ|ವಿಘ್ನಶ್ವರ ಭಟ್ ವರ್ಮುಡಿ ಅವರು ಕೃಷಿಕರು. ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದವರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯದ ಪೆರ್ಲದ ನಲಂದಾ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಂಶೋಧನಾ ಬರಹಗಳು ಪ್ರಕಟವಾಗಿದೆ. ಅಡಿಕೆ ಮಾರುಕಟ್ಟೆ ಬಗ್ಗೆ ಅಧಿಕೃತವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ. ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಅಡಿಕೆಯ ಬಗ್ಗೆ ವಿವಿಧ ಬರಹಗಳನ್ನು ಪ್ರಕಟಿಸಿದ್ದಾರೆ.

Published by
ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

Recent Posts

ಮುಂಗಾರು ಬೇಗನೆ ವಿದಾಯ ಹೇಳುತ್ತಿದೆಯೇ..? ಸೆಪ್ಟೆಂಬರ್‌ನಲ್ಲಿ ಮಳೆ ಕಡಿಮೆಯಾಗುವ ಮುನ್ಸೂಚನೆ..?

ಸೆಪ್ಟೆಂಬರ್ 5–10ರ ನಂತರ ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಗಣನೀಯವಾಗಿ ಕಡಿಮೆಯಾಗುವ…

10 hours ago

ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ

ಕರ್ನಾಟಕದಲ್ಲಿ ಆಗಸ್ಟ್ 23ರಿಂದ 25ರವರೆಗೆ ಹಲವೆಡೆ ಅಲ್ಲಲ್ಲಿ ಸಾಮಾನ್ಯ ಮಳೆಯಷ್ಟೇ ನಿರೀಕ್ಷಿಸಲಾಗಿದ್ದು, ಕರಾವಳಿ…

18 hours ago

ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ

PM-Kisan ಯೋಜನೆಯ 24ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಬಯೋಮೆಟ್ರಿಕ್ ಅಥವಾ…

1 day ago

ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ

ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ…

2 days ago

ಹವಾಮಾನ ವರದಿ | 21-08-2026 | ಕರಾವಳಿಯಲ್ಲಿ ಆ.23–25 ರಂದು ಮಳೆ ಹೆಚ್ಚಳ ಸಾಧ್ಯತೆ – ಆ.26ರವರೆಗೆ ಮೋಡ–ಮಳೆ

ಕರಾವಳಿ ಕರ್ನಾಟಕದಲ್ಲಿ ಆ.23ರಿಂದ 25ರವರೆಗೆ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದ್ದು, ಆ.26ರವರೆಗೂ…

2 days ago

ನಿಮ್ಮ ಹೆಸರಲ್ಲಿ 9 ಸಿಮ್‌ಗಳಿವೆಯೇ? ಆಗಸ್ಟ್ 24ರಿಂದ ಹೊಸ ನಿಯಮ – ಹೆಚ್ಚುವರಿ ನಂಬರ್‌ಗೆ ಬ್ರೇಕ್

ಆಗಸ್ಟ್ 24ರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9 ಮೊಬೈಲ್ ಸಂಪರ್ಕಗಳ ಮಿತಿಯನ್ನು ಮೀರಿ…

2 days ago