Advertisement
ಅನುಕ್ರಮ

ಯೇಸುಕ್ರಿಸ್ತ – ಕ್ರೈಸ್ತ ಧರ್ಮ – ಪ್ರೀತಿ – ಸೇವೆ – ಮತಾಂತರ | ಕೆಲವು ಹಿಂದೂಗಳ ವಿರೋಧ | ಹೊಸ ಕಾನೂನು…….. | ವಿವೇಕಾನಂದ ಎಚ್‌ ಕೆ ಬರೆಯುತ್ತಾರೆ… |

Share

ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯಗಳನ್ನು ಹೇಳುತ್ತಾ….. | ಒಂದು ವಿಚಿತ್ರ ಸನ್ನಿವೇಶದಲ್ಲಿ ನಾವಿದ್ದೇವೆ. ಜಗತ್ತಿಗೆ ಶಾಂತಿ ಪ್ರೀತಿ ಸೇವೆ ಎಂಬ ಮಹತ್ವದ ಮಾರ್ಗಗಳನ್ನು ಪರಿಣಾಮಕಾರಿಯಾಗಿ ಹೇಳಿದ ಜೀಸಸ್ ಜನ್ಮದಿನದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದಿಂದ ಮತಾಂತರ ನಿಷೇಧ ಕಾನೂನು ಜಾರಿ ಮಾಡಲಾಯಿತು ಮತ್ತು ಅದೂ ಬಹುತೇಕ ಕ್ರಿಶ್ಚಿಯನ್ ಧರ್ಮದ ಮೇಲಿನ ಆರೋಪಗಳಿಗೆ ಉತ್ತರ ಹಾಗು ಸವಾಲಿನ ರೂಪದಲ್ಲಿ…..

ಭಾರತದ ಮಟ್ಟಿಗೆ ಮತಾಂತರದ ಆರೋಪ ಹೆಚ್ಚಾಗಿ ಕೇಳಿಬರುತ್ತಿರುವುದು ಯೇಸುಕ್ರಿಸ್ತನ ಅನುಯಾಯಿಗಳ ಮೇಲೆಯೇ…… ಹಣ ಉದ್ಯೋಗ ಸಮಾನತೆ ಇತ್ಯಾದಿ ಇತ್ಯಾದಿ ಆಮಿಷಗಳಿಗೆ ಹಾಗು ಇದರ ಪರೋಕ್ಷ ಪರಿಣಾಮ ಕೆಲವು ಹಿಂದುಗಳ ತುಳಿತಕ್ಕೊಳಗಾದವರು ಸ್ವಯಂ ಪ್ರೇರಣೆಯಿಂದ ಮತಾಂತರವಾಗುತ್ತಿದ್ದಾರೆ. ಹೀಗೇ ಇದು ಮುಂದುವರಿದರೆ ಹಿಂದೂಗಳ ಜನಸಂಖ್ಯೆಗೆ ಅಪಾಯ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಒಂದು ಪ್ರಯತ್ನ ಎಂಬ ವಾದ. ಹಾಗೆಯೇ ಇದು ಕ್ರೈಸ್ತ ಸಮುದಾಯದ ಮೇಲಿನ ದೌರ್ಜನ್ಯ. ಅದನ್ನು ವಿರೋಧಿಸುತ್ತೇವೆ ಎಂಬುದು ಮತ್ತೆ ಕೆಲವರ ಅಭಿಪ್ರಾಯ…….

” ನಿಮ್ಮ ಶತ್ರುಗಳನ್ನು ಸಹ ಪ್ರೀತಿಸಿ,
ನಿಮ್ಮ ನೆರೆಹೊರೆಯವರನ್ನು ಪ್ರೀತಿಸಿ,
ಅಸಹಾಯಕರಿಗೆ ನಿಸ್ವಾರ್ಥ ಸೇವೆ ಸಲ್ಲಿಸಿ ” ಈ ಕೆಲವು ಸಂದೇಶಗಳು ಜೀಸಸ್ ಅವರ ಮನದಾಳದ ಮಾತುಗಳು.

ಹಾಗೆಯೇ ತನ್ನನ್ನು ಶಿಲುಬೆಗೇರಿಸಿದ ಜನರನ್ನೇ ಕ್ಷಮಿಸಿ, ಪಾಪ ಅವರಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಅರಿವಿಲ್ಲ. ಅವರು ಮುಗ್ಧರು ಮತ್ತು ಕ್ಷಮೆಗೆ ಅರ್ಹರು ಎಂದೇ ಪ್ರತಿಪಾದಿಸಿದ ಕ್ಷಮಾ ಗುಣದ ಪ್ರತಿರೂಪ – ಶಾಂತಿ ದೂತ ಜೀಸಸ್.

ಇಂತಹ ಶಾಂತಿ ದೂತನ ಅನುಯಾಯಿಗಳ ಮೇಲೆ ಮತಾಂತರದ ಆರೋಪ ಬಂದಾಗ ಅದನ್ನು ದಿಟ್ಟತನದಿಂದ ಎದುರಿಸಿ ” ನಮಗೆ ಮತಾಂತರ ಮುಖ್ಯವಲ್ಲ. ನಮಗೆ ಕ್ರಿಶ್ಚಿಯನ್ ಧರ್ಮ ಮುಖ್ಯವಲ್ಲ. ನಮಗೆ ಮನುಷ್ಯ ಮುಖ್ಯ. ಶೋಷಿತರು ಯಾರೇ ಆಗಲಿ ಅಸಹಾಯಕರು ಯಾರೇ ಇರಲಿ ಅವರ ಸೇವೆ ಮಾತ್ರ ನಮ್ಮ ಉದ್ದೇಶ. ಮತಾಂತರ ನಿಷೇಧ ಕಾನೂನು ಮಾತ್ರವಲ್ಲ ಅದಕ್ಕಿಂತ ಕಠಿಣ ಕಾನೂನು ಜಾರಿಯಾದರು ನಮಗೆ ಹೆದರಿಕೆ ಇಲ್ಲ. ನಮಗೆ ಸಮಾನತೆ ಮಾನವೀಯ ಮೌಲ್ಯಗಳ ಸೇವೆ ಮಾತ್ರ ಮುಖ್ಯ ” ಎನ್ನುವ ಔದಾರ್ಯ ಯೇಸುಕ್ರಿಸ್ತನ ಅನುಯಾಯಿಗಳಿಂದ ಬರಬೇಕಿತ್ತು. ಅದೇ ನಿಜವಾಗಿಯೂ ಶಾಂತಿ ಸೌಹಾರ್ದತೆಗೆ ಜೀಸಸ್ ಅನುಯಾಯಿಗಳು ಕೊಡಬಹುದಾದ ದೊಡ್ಡ ಕೊಡುಗೆ…….

ಒಂದು ವೇಳೆ ಹೀಗೆ ಹೇಳಿದ್ದರೆ ಖಂಡಿತ ಕರ್ಮಠ ಮೂಲಭೂತವಾದಿಗಳು ತಲೆ ತಗ್ಗಿಸುವಂತಾಗುತ್ತಿತ್ತು. ಧರ್ಮದ ನಿಜವಾದ ಪಾಲನೆ ಆಗುತ್ತಿತ್ತು. ಧರ್ಮದ ತಿಳಿವಳಿಕೆ ನಡವಳಿಕೆ ಆದಾಗ ಮಾತ್ರ ಅದಕ್ಕೆ ಅರ್ಥ. ಇಲ್ಲದಿದ್ದರೆ….

ಹಾಗೆಯೇ ಹಿಂದು ನಾವೆಲ್ಲರೂ ಒಂದು ಎಂದು ಅಭಿಮಾನದಿಂದ ಹೇಳುವವರು ಮತಾಂತರಕ್ಕೆ ಭಯಪಟ್ಟು ಕಾನೂನಿನ ಮೂಲಕ ನಿಯಂತ್ರಿಸುವಷ್ಟು ಹತಾಶರಾಗಿರುವುದು ಸಹ ಅತ್ಯಂತ ನಾಚಿಕೆಗೇಡು. ಹಿಂದುಗಳು ಮತಾಂತರ ಆಗಲು ಕಾರಣ ಹುಡುಕುವ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಜಾತಿಯ ಮೂಲಕ ಅಸ್ಪೃಶ್ಯತೆ ಆಚರಿಸುವುದು, ಜಾತಿಯ ಮೂಲಕ ಮೇಲು ಕೀಳು ವ್ಯಕ್ತಿತ್ವ ನಿರ್ಧರಿಸುವುದು, ಜಾತಿಯ ಮೂಲಕ ಮದುವೆ ಆಗುವುದು, ಜಾತಿಯ ಮೂಲಕ ಚುನಾವಣೆಗೆ ಸ್ಪರ್ಧಿಸುವುದು ಮತ್ತು ಮತ ಕೇಳುವುದು, ಜಾತಿಯ ಆಧಾರದ ಮೇಲೆ ಪಂಕ್ತಿ ಭೇದ ಮಾಡುವುದು ಮುಂತಾದ ಅನಿಷ್ಟಗಳು ಇನ್ನೂ ಈ ಸಮಾಜದಲ್ಲಿ ಜೀವಂತ ಇರುವಾಗ ಮತಾಂತರ ನಿಷೇಧಿಸುವ ನೈತಿಕತೆ ಎಲ್ಲಿದೆ..

ಇತರೆ ಧರ್ಮಗಳ ಕೆಲವು ಕೆಟ್ಟ ಆಚರಣೆಗಳನ್ನು ಉದಾಹರಿಸಿ ನಮ್ಮ ಧರ್ಮದ ಜಾತಿ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳುವುದು ಒಳ್ಳೆಯ ಬೆಳವಣಿಗೆಯಲ್ಲ. ಅದನ್ನು ಸಾಕಷ್ಟು ಜನ ನಿರಂತರವಾಗಿ ಮಾಡುತ್ತಲೇ ಇದ್ದಾರೆ.

ಒಂದು ಧರ್ಮದ ನಿಜವಾದ ಶಕ್ತಿ ಸಾಮರ್ಥ್ಯ ಆಕರ್ಷಣೆ ಇರುವುದೇ ಅದರ ಸರಳತೆ ಸಮಾನತೆ ಮಾನವೀಯತೆಯ ಆಚರಣೆಗಳಲ್ಲಿ. ಅದನ್ನು ಅನುಸರಿಸುವ ಆ ಧರ್ಮದ ಅನುಯಾಯಿಗಳ ನಡವಳಿಕೆಗಳಲ್ಲಿ. ಅದನ್ನು ಸರಿಯಾಗಿ ಪಾಲಿಸಿ ಇತರ ಧರ್ಮಗಳಿಗೆ ಮಾದರಿಯಾಗದೆ ಒಂದು ಧರ್ಮ ಮತಾಂತರಕ್ಕೆ ಪ್ರಚೋದಿಸುವುದು, ಇನ್ನೊಂದು ಧರ್ಮ ಅದನ್ನು ನಿಷೇಧಿಸುವುದು ಎರಡೂ ಒಳ್ಳೆಯ ನಡೆಯಲ್ಲ.

ಏಕೆಂದರೆ ಕಾನೂನಿನ ಮೂಲಕವೇ ಎಲ್ಲವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ. ಪಕ್ಷಾಂತರ ನಿಷೇಧ ಕಾನೂನಿನ ದುರುಪಯೋಗವಾದಂತೆ ನಾಳೆ ಈ ಮತಾಂತರ ನಿಷೇಧ ಕಾನೂನಿನ ಒಳ ಲಾಭ ಪಡೆದು ಇಡೀ ಸಮುದಾಯಗಳೇ ಕಾನೂನಿನ ಅಡಿಯಲ್ಲಿ ಮತಾಂತರವಾದರೆ ಏನು ಮಾಡುವುದು. ಅದಕ್ಕಾಗಿಯೇ ಮೊದಲು ಸಮ ಸಮಾಜದ ಮಾನವೀಯ ಹಿನ್ನೆಲೆಯ ಸರಳ ಧರ್ಮ ನಮ್ಮದಾಗಬೇಕು.

ಕ್ರಿಸ್ಮಸ್ ಹಬ್ಬದ ಈ ಸಂದರ್ಭದಲ್ಲಿ ಜಗತ್ತು ವೈರಸ್ ರೂಪಾಂತರ ತಳಿಗಳ ಅಬ್ಬರಕ್ಕೆ ಸಿಲುಕಿ ನಲುಗುತ್ತಿರುವಾಗ ಮತಾಂತರಗಳು ಮುಖ್ಯ ವಿಷಯವಾಗುತ್ತಿರುವುದು ಮಾನವ ಜನಾಂಗಕ್ಕೆ ” ವಿನಾಶ ಕಾಲೇ ವಿಪರೀತ ಬುದ್ದಿ ” ಎಂಬಂತಾಗಿದೆ. ಮಾಡಲು ಅತ್ಯಂತ ಪ್ರಮುಖ ಕೆಲಸಗಳು ನಮ್ಮ ಮುಂದೆ ಇರುವಾಗ ಎಲ್ಲಾ ಜನ ಪ್ರತಿನಿಧಿಗಳು ಮತಾಂತರದ ಬಗ್ಗೆ ಚರ್ಚೆ ಮಾಡುತ್ತಾ ಜನರ ಮೂಲಭೂತ ಸೌಕರ್ಯಗಳ ನಿರ್ಲಕ್ಷ್ಯ ಖಂಡಿತ ಒಂದು ದೊಡ್ಡ ಅಪರಾಧಕ್ಕೆ ಸಹ. ಮತಗಳನ್ನು ಉಳಿಸುವುದು ಬೆಳೆಸುವುದು ಅನಾಗರೀಕ ಸಮಾಜದ ಗುಣಲಕ್ಷಣ.

ಸಾಮಾನ್ಯ ಜನರಾದ ನಾವುಗಳು ಈಗ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ. ಜೀಸಸ್ ಅಥವಾ ಪೈಗಂಬರ್ ಅಥವಾ ಭಗವದ್ಗೀತೆ ಅಥವಾ ಬುದ್ಧ ಮಹಾವೀರ ಯಾರೇ ಹೇಳಿರಲಿ ಶಾಂತಿ ಸಮಾನತೆ ಸೇವೆ ಮಾನವೀಯ ಮೌಲ್ಯಗಳೇ ನಾಗರಿಕ ಸಮಾಜದ ಬಹುಮುಖ್ಯ ಗುಣಲಕ್ಷಣಗಳು. ಅದನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ ಎಂಬ ಆಶಯದೊಂದಿಗೆ…….

ಮತ್ತೊಮ್ಮೆ ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು……..

# ವಿವೇಕಾನಂದ. ಹೆಚ್.ಕೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

Published by
ವಿವೇಕಾನಂದ ಎಚ್‌ ಕೆ

Recent Posts

ಕೊಂಬೆಯಲ್ಲ, ಕಾಂಡದಲ್ಲೇ ಗೊಂಚಲು ಗೊಂಚಲಾಗಿ ಹಣ್ಣು! ಪಶ್ಚಿಮ ಘಟ್ಟದ ಅಪರೂಪದ ‘ಕೋಳಿಜುಟ್ಟು’ ಹಣ್ಣಿನ ಕಥೆ

ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಕಾಡು ಹಣ್ಣು ಇದೀಗ ರೈತರ ತೋಟಗಳಲ್ಲೂ ಫಲ…

5 hours ago

ಕಾಡು ಹಣ್ಣು…. ಕೋಳಿ ಜುಟ್ಟು ಹಣ್ಣು…!

ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಹಣ್ಣು ಕಾಂಡದ ಮೇಲೆಯೇ ಗೊಂಚಲು ಗೊಂಚಲಾಗಿ ಬೆಳೆಯುವ…

6 hours ago

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಒಡಿಶಾದಲ್ಲಿ ಭಾರಿ ಮಳೆ, ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…

15 hours ago

ಭರ್ತಿಯಾಗುವ ಹಂತಕ್ಕೆ ಆಲಮಟ್ಟಿ ಜಲಾಶಯ – 114.896 ಟಿಎಂಸಿ ನೀರು ಸಂಗ್ರಹ, 73 ಸಾವಿರ ಕ್ಯೂಸೆಕ್ ಒಳಹರಿವು

ಆಲಮಟ್ಟಿ ಕೃಷ್ಣಾ ಜಲಾಶಯದಲ್ಲಿ 114.896 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೆಲವೇ…

16 hours ago

ಹವಾಮಾನ ವರದಿ | 28-07-2026 | ಕರಾವಳಿ, ಮಲೆನಾಡಿನಲ್ಲಿ ಸಾಮಾನ್ಯ ಮಳೆ ಮುಂದುವರಿಕೆ

ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಬಿಟ್ಟುಬಿಟ್ಟು ಮಳೆ ಮುಂದುವರಿಯುವ…

16 hours ago

ಮಳೆ ಕೊರತೆ ತೀವ್ರ – ಬೆಂಗಳೂರು ಗ್ರಾಮಾಂತರದಲ್ಲಿ ಕೇವಲ ಶೇ. 3 ಬಿತ್ತನೆ; ನೀರಿನ ಬಳಕೆಗೆ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 66 ರಷ್ಟು ಮಳೆ ಕೊರತೆಯಿಂದ ಕೇವಲ ಶೇ.…

21 hours ago