ಭಾರತವು ಕೃಷಿ ಪ್ರಧಾನವಾದ ದೇಶ. ಇದನ್ನು ಸಣ್ಣ ತರಗತಿಯಿಂದಲೇ ಹೇಳಲಾಗಿದೆ, ಹೇಳಲಾಗುತ್ತಿದೆ. ಇಂತಹದ್ದರಲ್ಲಿ ಈಗ ಭಾರತದಲ್ಲಿ ಹವಾಮಾನ ವೈಪರೀತ್ಯ ಕೃಷಿಗೆ ಸಂಕಷ್ಟ ತಂದುಕೊಟ್ಟಿದೆ. ಹಾಗಿದ್ದರೆ ಈ ಬಾರಿಯ ಚುನಾವಣೆಯಲ್ಲಿ ಪಕ್ಷಗಳು ಹವಾಮಾನ ವೈಪರೀತ್ಯ ನಿಯಂತ್ರಣಕ್ಕೆ ಏನಾದರೂ ಮಾರ್ಗಸೂಚಿಯನ್ನು ತಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದಾರಾ…?
ಭಾರತದ ಕೃಷಿ ಕ್ಷೇತ್ರವು ಭವಿಷ್ಯದಲ್ಲಿ ಸಂಕಷ್ಟದ ಹಾದಿಯನ್ನು ತುಳಿಯಬೇಕಾಗಬಹುದು. ಕಾಲಕ್ಕೆ ಮಳೆಯಾಗುತ್ತಿಲ್ಲ, ಅಕಾಲದಲ್ಲಿ ಮಳೆಯಾಗುತ್ತಿದೆ. ಕೃಷಿಕರ ಸಂಕಷ್ಟ ಹೇಳತೀರದು. ಕರ್ನಾಟಕವನ್ನೇ ತೆಗೆದುಕೊಂಡರೆ ಎಲ್ಲಾ ಬೆಳೆಯೂ ಸರಿಯಾಗಿ ಬೆಳೆಯಲಾಗುತ್ತಿಲ್ಲ, ಕೆಲವು ವಾಣಿಜ್ಯ ಬೆಳೆಗಳು ವಿಪರೀತವಾಗಿ ವಿಸ್ತರಣೆಯಾಗಿದೆ. ಇವುಗಳು ಮಾರುಕಟ್ಟೆ, ಮಾರಾಟ ವ್ಯವಸ್ಥೆ ಇದೂ ಸಂಕಷ್ಟವೇ ಆಗಿದೆ. ಅಷ್ಟೇ ಅಲ್ಲ, ಹವಾಮಾನದ ಕಾರಣದಿಂದ ನೀರಿನ ಕೊರತೆಯೂ ಎಲ್ಲೆಡೆ ಕಾಡುತ್ತಿದೆ. ಇಂತಹ ಸಂದಿಗ್ಧತೆಯ ನಡುವೆ ಕೃಷಿ ಕ್ಷೇತ್ರಕ್ಕೆ ಪಕ್ಷಗಳ ಕೊಡುಗೆಯ ಜೊತೆಗೆ ಹವಾಮಾನ ವೈಪರೀತ್ಯ ನಿಯಂತ್ರಣಕ್ಕೆ ಏನಿದೆ..?. ಭಾರತವು ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಳ್ಳುತ್ತದೆಯೇ ಅಥವಾ ಸುಸ್ಥಿರ ಭವಿಷ್ಯದ ಕಡೆಗೆ ಚಳುವಳಿಯನ್ನೇ ನಡೆಸಬೇಕಾಗಿದೆಯೇ..?
ಇಂದು ಉಳಿದೆಲ್ಲಾ ಸಮಸ್ಯೆಗಳಿಗಿಂತಲೂ ಪರಿಸರದ ಸವಾಲುಗಳು ಹೆಚ್ಚಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಚರ್ಚೆಗಳು ನಡೆದಿವೆ. ಮುಂದಿನ 10 ವರ್ಷದಲ್ಲಿ ಕೇವಲ 2 ಡಿಗ್ರಿಯಷ್ಟು ವಾತಾವರಣದ ಉಷ್ಣತೆ ಇಳಿಸಲು ಪ್ರಯತ್ನಗಳು ನಡೆಯಬೇಕು ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆದಿದೆ, ಭಾರತವೂ ಇದಕ್ಕೆ ಸಮ್ಮತಿಸಿದೆ. ಇಂದು ಹೆಚ್ಚುತ್ತಿರುವ ಪರಿಸರ ಸವಾಲುಗಳ, ಹವಾಮಾನ ಬದಲಾವಣೆಯ ಸ್ಥಿತಿಗೆ ರಾಜಕೀಯ ಪಕ್ಷಗಳು ದೃಢವಾದ ಕಾರ್ಯತಂತ್ರಗಳನ್ನು ರೂಪಿಸುವ ಅನಿವಾರ್ಯತೆ ಇದೆ. ಇಂದು ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಸಮಾನತೆ ಸೇರಿದಂತೆ ಇತರ ಎಲ್ಲಾ ನೀತಿ ನಿರ್ಧಾರಗಳ ಜೊತೆಯಲ್ಲೇ ಪರಿಸರದ ಬಗ್ಗೆ ಆಳವಾಗಿ ನೀತಿ ರೂಪಿಸುವ ಪ್ರಮುಖ ಘಟ್ಟದಲ್ಲಿ ಭಾರತ ಬಂದು ನಿಂತಿದೆ.
ಈ ಹಿನ್ನೆಲೆಯಲ್ಲಿ, ದೇಶದ ಪ್ರಮುಖ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳೂ ಪ್ರಮುಖವಾಗಿದೆ. ವಿಜ್ಞಾನಿಗಳು, ನೀತಿ ನಿರೂಪಕರು ಮತ್ತು ನಾಗರಿಕರು ಈ ಪ್ರಣಾಳಿಕೆಗಳನ್ನು ಪರಿಶೀಲಿಸಿದಾಗ, ಸ್ಪಷ್ಟವಾದ ಯೋಜನೆಗಳ ಕೊರತೆ ಎದ್ದು ಕಾಣುತ್ತಿದೆ. ಯಾವುದೇ ಪ್ರಣಾಳಿಕೆಯು ಹವಾಮಾನ ಬದಲಾವಣೆಯನ್ನು ಎದುರಿಸಲು ಜಿಲ್ಲಾ ಮಟ್ಟದ ಯೋಜನೆಯ ಬಗ್ಗೆ ಹೇಳಿಲ್ಲ.
ಬಿಜೆಪಿಯ ತನ್ನ ಪ್ರಣಾಳಿಕೆಯಲ್ಲಿ, ಸೋಲಾರ್ ಇಂಧನ ಸೇರಿದಂತೆ ನವೀಕರಿಸಬಹುದಾದ ಇಂಧನಗಳು, ನದಿ ಪುನರುಜ್ಜೀವನ ಸೇರಿದಂತೆ ವಿವಿಧ ಕ್ರಮಗಳನ್ನು ಹೇಳಿದೆ.ಕೃಷಿ ಅರಣ್ಯವನ್ನು ಉತ್ತೇಜಿಸಲು ಪಕ್ಷವು ಒತ್ತು ನೀಡುತ್ತದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯು ಹವಾಮಾನ ಬದಲಾವಣೆಯನ್ನು ಪರಿಹರಿಸಲು ಮತ್ತು ಭಾರತದಲ್ಲಿ ಪರಿಸರ ಸುಸ್ಥಿರತೆಯನ್ನು ಉತ್ತೇಜಿಸುವ ಭರವಸೆ ನೀಡಿದೆ. ಹವಾಮಾನ ಬದಲಾವಣೆ ಪ್ರಾಧಿಕಾರವನ್ನು ಸ್ಥಾಪಿಸುವುದರ ಬಗ್ಗೆಯೂ ಹೇಳಿದೆ. ಎರಡೂ ಪಕ್ಷಗಳು ಗಾಳಿ ಮತ್ತು ನೀರಿನ ಗುಣಮಟ್ಟವನ್ನು ಸುಧಾರಿಸುವುದರ ಬಗ್ಗೆ ಹೇಳಿದೆ.
ವಿಶೇಷವಾಗಿ, ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮವನ್ನು ಬಲಪಡಿಸಲು, ನದಿಗಳಿಗೆ ತ್ಯಾಜ್ಯವನ್ನು ಬಿಡುವುದನ್ನು ತಡೆಯಲು ಮತ್ತು ಕಾಡುಗಳು, ಜೀವವೈವಿಧ್ಯತೆ ಮತ್ತು ಕರಾವಳಿ ವಲಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷವು ಭರವಸೆ ನೀಡಿದೆ. ಎರಡೂ ಪಕ್ಷಗಳ ಪ್ರಣಾಳಿಕೆ ಗಮನಿಸಿದರೆ, ಕಾಂಗ್ರೆಸ್ ಪರಿಸರ ಸಂರಕ್ಷಣೆ ಹಾಗೂ ಹವಾಮಾನ ವೈಪರೀತ್ಯ ನಿಯಂತ್ರಣದ ಕಡೆಗೆ ಹೆಚ್ಚಿನ ಆದ್ಯತೆ ನೀಡಿದಂತಿದೆ.