20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡು ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಈಗಾಗಲೆ ರಾಜ್ಯದ ಪೂರ್ವ ಒಳನಾಡು ಭಾಗಗಳಲ್ಲಿ ಮುಂಜಾನೆ ಮಳೆ ಆರಂಭವಾಗಿದೆ.
ಈ ಭಾಗದ ಕೃಷಿಕರು, ರೈತರು ತಮ್ಮ ಕೊಯ್ಲಾದ ಬೆಳೆಗಳನ್ನು ಮುಚ್ಚಿ ರಕ್ಷಿಸಿಕೊಳ್ಳುವುದೊಳಿತು. ಇವತ್ತು ಮಾತ್ರ.
ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಮಧ್ಯಾಹ್ನ ನಂತರ, ಸಂಜೆ ಹಾಗೂ ರಾತ್ರಿ ತುಂತುರು ಹಾಗೂ ಒಂದೆರಡು ಕಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಸುಳ್ಯ ಹಾಗೂ ಸುಬ್ರಹ್ಮಣ್ಯ ಸುತ್ತಮುತ್ತ ಮಧ್ಯಾಹ್ನ ನಂತರ ಆರಂಭವಾಗುವ ಲಕ್ಷಣಗಳಿವೆ. ಉತ್ತರ ಕನ್ನಡ ಅಲ್ಲಲ್ಲಿ ಮೋಡ ಮಾತ್ರ ಇರಬಹುದು. ಈಗಿನಂತೆ ಜ. 20ರಂದು ಅಲ್ಲಲ್ಲಿ ಮೋಡ ಇದ್ದು 21ರಿಂದ ಒಣ ಹವೆ ಆವರಿಸುವ ಸಾಧ್ಯತೆಗಳಿವೆ.
ಕೊಡಗು ಮಧ್ಯಾಹ್ನ ನಂತರ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಧ್ಯಾಹ್ನ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಚಿಕ್ಕಮಗಳೂರಿನ ಮೂಡಿಗೆರೆ, ಬಾಳೆಹೊನ್ನೂರು, ಶೃಂಗೇರಿ, ಕುದುರೆಮುಖ, ಆಗುಂಬೆ ಸುತ್ತಮುತ್ತ ಸ್ವಲ್ಪ ಜಾಸ್ತಿ ಇರಬಹುದು. ಶಿವಮೊಗ್ಗದ ಉಡುಪಿ ಜಿಲ್ಲೆಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆ ಇದೆ. ಉಳಿದ ಭಾಗಗಳಲ್ಲಿ ಮೋಡ ಮಾತ್ರ ಇರಬಹುದು.
ಈಗಿನಂತೆ ಜ.20ರಿಂದ ಒಣಹವೆ ಆವರಿಸುವ ಲಕ್ಷಣಗಳಿವೆ.
ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಒಣಹವೆ ಮುಂದುವರಿಯಲಿದೆ. ಒಂದೆರಡು ಕಡೆ ಹಗುರ ಮೋಡದ ವಾತಾವರಣದ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನ ಕೋಲಾರ, ಚಿಕ್ಕಬಳ್ಳಾಪುರ ತುಮಕೂರು, ಬೆಂಗಳೂರು ಭಾಗಗಳಲ್ಲಿ ಮುಂಜಾನೆಯೇ ಮಳೆ ಆರಂಭವಾಗಿದ್ದು, ರಾಮನಗರ, ಚಾಮರಾಜನಗರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಮಧ್ಯಾಹ್ನ ಒಳಗಾಗಿ ಮಳೆಯ ಮುನ್ಸೂಚನೆ ಇದೆ. ರಾತ್ರಿ ವೇಳೆ ಮೈಸೂರು ಸುತ್ತ ಮುತ್ತ ಮತ್ತೆ ಮಳೆಯ ಸಾಧ್ಯತೆ ಇದೆ. ಚಿತ್ರದುರ್ಗ ಮೋಡ ಮಾತ್ರ ಇರಬಹುದು.
ಈಗಿನಂತೆ ಜ.20ರಿಂದ ಒಣಹವೆ ಆವರಿಸುವ ಸಾಧ್ಯತೆಗಳಿವೆ.