ಉಳ್ಳವರು ಏನೂ ಮಾಡುವರು…! ಆಡಳಿತವೂ ಮೌನವಾಗಿರುವುದು…! | ನಾನೇನು ಮಾಡಲಯ್ಯಾ…. ಬಡವ…! |

July 21, 2023
9:33 PM
ಈ ದೇಶದಲ್ಲಿ ಕಾನೂನು, ಇಲಾಖೆಗಳ ನಿಯಮ ಎಲ್ಲರಿಗೂ ಒಂದೇ ಆಗಿರುತ್ತದೆಯೇ ? ಬಡವರಿಗೆ ಬೇರೆ, ಶ್ರೀಮಂತರಿಗೆ ಬೇರೆ ಆಗಿರುತ್ತದೆಯೇ ? ಹೀಗೊಂದು ಪ್ರಶ್ನೆ ಗ್ರಾಮವೊಂದರಿಂದ ಕೇಳಿದೆ. ಬಡವನೊಬ್ಬ ಪುಟ್ಟ ಅಂಗಡಿ ಕಟ್ಟಿದರೆ ಹತ್ತಾರು ಕಾನೂನು ತೊಡಕುಗಳು ಬಂದರೆ, ಇಲ್ಲೊಂದು ಕಟ್ಟಡ ಕಟ್ಟುವಾಗ ತೊಡಕಾಗುವ ಸಾರ್ವಜನಿಕ ಕೊಳವೆಬಾವಿಯೇ ಕಾಣೆಯಾಗಿದೆ. ಈಗ ಇದು ಚರ್ಚೆಯ ವಿಷಯ.

ಉಳ್ಳವರು, ಅಧಿಕಾರವಂತರು, ರಾಜಕೀಯ ಪಕ್ಷದ ನಾಯಕರು ಏನು ಮಾಡಿದರೂ ಕಾನೂನೇ ಮೌನವಾಗಿರುತ್ತದೆ. ಆಡಳಿತವೂ ಮೌನವಾಗಿರುತ್ತದೆ. ಬಡವನೊಬ್ಬ ಪುಟ್ಟ ಅಂಗಡಿ ತೆರೆದರೂ ಅದು ಕಾನೂನು ಬಾಹಿರ, ಅದು ಅನಧಿಕೃತ ಎಂದು ತೆಗೆದು ನಾಶ ಮಾಡುತ್ತಾರೆ. ಹಾಗಿದ್ದರೆ ಕಾನೂನು, ನ್ಯಾಯ ಯಾರಿಗೆ ? ಇಂತಹದ್ದೊಂದು ಘಟನೆ ಸುಳ್ಯದಲ್ಲಿ  ಕೇಳಿದೆ..!. ರಸ್ತೆ ಬದಿ ಇದ್ದ ಸಾರ್ವಜನಿಕ ಕೊಳವೆಬಾವಿಯನ್ನು ಮುಚ್ಚಲಾಗಿದೆ. ಹೀಗಿದ್ದರೂ ಆಡಳಿತ ಮೌನವಹಿಸಿದೆ. ಕಾರಣ ಉಳ್ಳವರು, ಅಧಿಕಾರವಂತರು…!

Advertisement

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದೀಗ ಒಂದು ಆಡಿಯೋ ಹಾಗೂ ಬರಹವೊಂದು ವೈರಲ್‌ ಆಗುತ್ತಿದೆ. ಗ್ರಾಮ ಪಂಚಾಯತ್‌ ಸದಸ್ಯ, ಬಿಜೆಪಿ ಮುಖಂಡರೊಬ್ಬರು ಕಟ್ಟಡ ನಿರ್ಮಾಣದ ಹಂತದಲ್ಲಿ ಈ ಕೊಳವೆಬಾವಿ ಮುಚ್ಚಿದ್ದಾರೆ ಎನ್ನುವುದು  ಆರೋಪ. ಹಾಗಿದ್ದರೆ ಕಟ್ಟಡ ಕಟ್ಟುವ ಮುನ್ನ ಅಥವಾ ಪಂಚಾಯತ್‌ ಅನುಮತಿ ನೀಡುವ ವೇಳೆ ಇದನ್ನು ಗಮನಿಸಲಿಲ್ಲವೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಏಕೆಂದರೆ ಇದೇ ಪ್ರಶ್ನೆ ಬಡವನೊಬ್ಬ ಅಂಗಡಿ ಹಾಕಿದರೆ, ಸಾಮಾನ್ಯ ವ್ಯಕ್ತಿಯೊಬ್ಬ ಮನೆ ಕಟ್ಟುವ ವೇಳೆ, ಸಾಮಾನ್ಯ ವ್ಯಕ್ತಿಯೊಬ್ಬ ಕಟ್ಟಡ ಕಟ್ಟುವ ವೇಳೆ ಅಧಿಕಾರಿಗಳು ಹತ್ತಾರು ಪ್ರಶ್ನೆಗಳನ್ನು ಕೇಳುತ್ತಾರೆ. ಆಗಾಗ ಪರಿಶೀಲನೆಯನ್ನೂ ಮಾಡುತ್ತಾರೆ. ಹಾಗಿದ್ದರೆ ಕಾನೂನುಗಳು ಬೇಕಾದಂತೆ ಬದಲಾಗುತ್ತದೆಯೇ ಎನ್ನುವುದು  ಸಾಮಾನ್ಯ ಜನರ ಪ್ರಶ್ನೆ.

ಲೋಕೋಪಯೋಗಿ ಇಲಾಖೆ, ಪಂಚಾಯತ್‌, ತಾಲೂಕು ಪಂಚಾಯತ್‌, ಜಿಲ್ಲಾಪಂಚಾಯತ್‌ , ಕಂದಾಯ ಇಲಾಖೆ ಹೀಗೇ ಹತ್ತಾರು ಇಲಾಖೆಗಳು ಸಾಮಾನ್ಯ ವ್ಯಕ್ತಿಯೊಬ್ಬ ಒಂದು ಅನುಮತಿಗೆ ಹೋದರೆ ಹತ್ತಾರು ಬಾರಿ ಅಲೆದಾಟ ನಡೆಸಬೇಕು. ಸಾರ್ವಜನಿಕ ಆಸ್ತಿಯನ್ನು ಮುಟ್ಟುವುದು  ಬಿಡಿ, ಅದರ ಪಕ್ಕ ಹೋಗುವುದನ್ನೂ ತಡೆಯುತ್ತವೆ. ಹಾಗಿದ್ದರೆ ಈಗ ಇಲ್ಲಿ ಕೊಳವೆಬಾವಿ ಮುಚ್ಚಿದರೂ ಇಲಾಖೆಗಳು ಏಕೆ ಮೌನ ವಹಿಸಿವೆ ಎಂದರೆ ಉಳ್ಳವರು, ಅಧಿಕಾರವಂತರು ಎನ್ನುವ ಕಾರಣಕ್ಕೆ ಎನ್ನುವುದು ಪ್ರಶ್ನೆ.

ಈ ಕಾರಣದಿಂದಲೇ ಅದೇ ಗ್ರಾಮದ ಯುವಕರೊಬ್ಬರು ಪತ್ರಿಕೆಯೊಂದರಲ್ಲಿ ಬಂದಿರುವ ವರದಿಯನ್ನು  ಹಂಚಿಕೊಳ್ಳುತ್ತಾರೆ. ಇದು ಈಗ ವಿವಾದಕ್ಕೆ, ಬೆದರಿಕೆಗೆ ಕಾರಣವಾಗಿದೆ.  ಈ ಬಗ್ಗೆ ಆಡಿಯೋ ಕೂಡಾ ವೈರಲ್‌ ಆಗಿದೆ. ಈ ಸಂಬಂಧ ಪಂಚಾಯತ್‌ ಪಿಡಿಒ ಅವರಿಗೆ ಕರೆ ಮಾಡಿ ಮಾತನಾಡಿರುವ ಆಡಿಯೋ ಕೂಡಾ ಅದರಲ್ಲಿದೆ. ಆದರೆ ಪಿಡಿಒ ಅವರೂ ಅಸಹಾಯಕರು..! ಏಕೆಂದರೆ ತಮ್ಮದೇ ಗ್ರಾಪಂ ಸದಸ್ಯ, ಅದರಲ್ಲೂ ಪ್ರಭಾವಿ ಸದಸ್ಯರೊಬ್ಬರ ಪರವಾಗಿ ಮಾತನಾಡಲೂ ಅಲ್ಲದೆ, ಕ್ರಮ ಕೈಗೊಳ್ಳಲೂ ಆಗದ ಸ್ಥಿತಿಯಲ್ಲಿದ್ದಾರೆ…!.

ವೈರಲ್‌ ಆಗಿರುವ ಬರಹದಲ್ಲಿ,  ಗ್ರಾಮದ ಒಬ್ಬ ನಾಗರಿಕನಾಗಿ ನನ್ನ ಗ್ರಾಮದ ವಿಚಾರ ಗಮನಕ್ಕೆ ಬಂದಾಗ ಅದನ್ನು ಹಂಚಿಕೊಳ್ಳುವುದು‌ ಕರ್ತವ್ಯ ಮತ್ತು ಹಕ್ಕು ಕೂಡ. ಹಾಗಿರುವಾಗ ನಾನು ಹಾಕಿದ ಆ ವಿಚಾರ ಈ ಗ್ರೂಪ್ ನ ಹಲವರಿಗೆ ಮನದಟ್ಟಾಗಿದೆ ಎಂದು ಅಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಓರ್ವ ‌ಗ್ರಾಮಸ್ಥನಾಗಿ ಗುತ್ತಿಗಾರು ಗ್ರಾ.ಪಂ ನ ಮಾನ್ಯ ಪಿಡಿಒರನ್ನು ಸಂಪರ್ಕಿಸಿದ್ದು, ಕಾರ್ಯಾಂಗದ ಅಡಿಯಲ್ಲಿ ನಿಜ ವಿಚಾರ ತಿಳಿಸಿದ್ದಾರೆ ಎಂದು ಬರಹದಲ್ಲಿ ತಿಳಿಸಿದ್ದಾರೆ. ಅದರಲ್ಲಿ ಪ್ರಶ್ನೆ ಮಾಡಿರುವ ವಿಚಾರ ಹೀಗಿದೆ, ” ಓರ್ವ ಪಂಚಾಯತ್ ಸದಸ್ಯ ತನಗೆ ಬೇಕಾದಂತೆ ಸಾರ್ವಜನಿಕ ಸೊತ್ತುಗಳನ್ನು ನಾಶ ಮಾಡಬಹುದೇ? ಒಂದು ವೇಳೆ ಮಾಡಿದರೆ ಅದನ್ನು ಗ್ರಾಮಸ್ಥರು ಪ್ರಶ್ನಿಸಬಾರದೇ? ಪಂಚಾಯತ್ ನ ಪ್ರಥಮ ಪ್ರಜೆಗೆ ಗೊತ್ತಿಲ್ಲದೆ ವೈಯಕ್ತಿಕ ಹಿತಾಸಕ್ತಿಗೆ ತಾನು ಏನು ಬೇಕಾದರೂ ಮಾಡುತ್ತೇನೆ, ಕೇಳಲು ನೀನ್ಯಾರು ಎಂಬ ವರ್ತನೆ ಇರುವ ಇಂತವರಿಂದ ಜನ ಸಾಮಾನ್ಯ, ಬಡವರ್ಗ ಯಾವ ನ್ಯಾಯ ನಿರೀಕ್ಷೆ ಮಾಡಬಹುದು? ಎಂದು ಪ್ರಶ್ನಿಸಿದ್ದಾರೆ.

ಚೌಕೀದಾರನಾಗಿ ಸಾರ್ವಜನಿಕ ಆಸ್ತಿಯನ್ನು, ತಪ್ಪನ್ನು ಪ್ರಶ್ನಿಸಿದರನ್ನು ಬದಿಗೆ ಸರಿಸುವುದು ಕಂಡಿದ್ದೇವೆ. ಈಗ ಅದೇ ಮಾದರಿಯಲ್ಲಿ ಇಲ್ಲಿ ಪ್ರಶ್ನೆ ಮಾಡಿದ ವ್ಯಕ್ತಿಯ ನೈಜ ಕಾಳಜಿ, ನ್ಯಾಯಯುತ ಪ್ರಶ್ನೆಗೆ ಅಧಿಕಾರಿಗಳು, ಸಮಾಜವು ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 26-04-2026 | ಸದ್ಯ ಸೆಖೆಯ ಉಗ್ರ ರೂಪ…! ಏಪ್ರಿಲ್ 28 ರಿಂದ ರಾಜ್ಯಾದ್ಯಂತ ಮಳೆ ಸಾಧ್ಯತೆ
April 26, 2026
1:54 PM
by: ಸಾಯಿಶೇಖರ್ ಕರಿಕಳ
ಅಡಿಕೆ ಎಲೆಚುಕ್ಕೆರೋಗ – ಸಿಪಿಸಿಆರ್‌ಐ ನೇತೃತ್ವದಲ್ಲಿ ಸುಳ್ಯದ ಗುತ್ತಿಗಾರಿನಲ್ಲಿ ಸಂವಾದ
April 26, 2026
7:33 AM
by: ದ ರೂರಲ್ ಮಿರರ್.ಕಾಂ
2026 ಎಲ್ ನಿನೊ ಎಚ್ಚರಿಕೆ..! ಭಾರತ ಸೇರಿ ಏಷ್ಯಾದಲ್ಲಿ ಬರ-ಬಿಸಿಲಿನ ಡಬಲ್ ಶಾಕ್
April 25, 2026
9:16 PM
by: ದ ರೂರಲ್ ಮಿರರ್.ಕಾಂ
ಭಾರೀ ಬಿಸಿ ಹೊಡೆತ..! ಜಗತ್ತಿನ 1 ಬಿಲಿಯನ್ ಜನರ ಬದುಕಿಗೆ ಬಿಸಿ ಹೊಡೆತ
April 25, 2026
9:04 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror