ಪಂಚಗವ್ಯ ಚಿಕಿತ್ಸೆ… | ಏನಿದು ಪಂಚಗವ್ಯ…? | ಈ ಚಿಕಿತ್ಸೆ ಪರಿಣಾಮಕಾರಿ ಹೇಗೆ..?

June 15, 2024
10:59 PM
ಪಂಚಗವ್ಯ ಚಿಕಿತ್ಸೆ ಎಂದರೆ ಏನು..? ಇದರ ಪ್ರಯೋಜನ ಏನು..?

ಉಜಿರೆಯಲ್ಲೊಂದು ಪಂಚಗವ್ಯ ಚಿಕಿತ್ಸಾ ಶಿಬಿರ ನಡೆಯಿತು. ಇದು ಸುರಕ್ಷಾ ಗೋ ಸೇವಾ ಚಾರಿಟೇಬಲ್ ಮತ್ತು ವೆಲ್ಫೇರ್ ಟ್ರಸ್ಟ್ ಮತ್ತು ಇತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಕಾರ್ಯಕ್ರಮ. ಸುರಕ್ಷಾ ಗೋ ಸೇವಾ ಬಳಗದ ಸದಸ್ಯನಾದ್ದರಿಂದ  ಪ್ರಾಸ್ತಾವಿಕವಾಗಿ ಕೆಲವು ನಿಮಿಷ ಮಾತನಾಡುವ ಜವಾಬ್ದಾರಿ ವಹಿಸಿದ್ದರು.

Advertisement
Advertisement

ಹಾಗೆ ಮಾತನಾಡುವಾಗ ಪಂಚಗವ್ಯದ ಉಲ್ಲೇಖ ಮಾಡಿ ಮಾತಾಡ್ತಿದ್ದಾಗ ಅನೇಕ ವಿಚಾರಗಳು ತಲೆಯಲ್ಲಿ ಹಾದು ಹೋದರೂ ಕೂಡ ಸಮಯಾವಕಾಶ ಕಡಿಮೆ ಇದ್ದುದರಿಂದ ಅದೆಲ್ಲವನ್ನೂ ವಿವರಿಸಲು ಸಾಧ್ಯವಾಗಲಿಲ್ಲ. ಅಂತಹ ಕೆಲವು ಸಂಗತಿಗಳನ್ನು ಲೇಖಿಸೋಣ ಅಂತ ಅನಿಸಿ ಬರೆಯುತ್ತಿದ್ದೇನೆ.

ಪಂಚಗವ್ಯ ಅಂದ್ರೆ ಹೆಸರೇ ಹೇಳುವಂತೆ ಪಂಚ ಅಂದ್ರೆ ಐದು. ಗವ್ಯ ಅಂದ್ರೆ ಗೋವಿನಿಂದ ಉತ್ಪನ್ನವಾಗುವ ಪದಾರ್ಥ.
ಶಾಸ್ತ್ರೀಯವಾಗಿ ಗೋಮೂತ್ರ,ಗೋವಿನ ಸೆಗಣಿ, ಹಾಲು,ಮೊಸರು,ತುಪ್ಪ  ಇವುಗಳನ್ನು ಪಂಚಗವ್ಯ ಎಂದು ಹೇಳುತ್ತಾರೆ. ಇತರ ಉತ್ಪನ್ನಗಳಾದ ಬೆಣ್ಣೆ,ಮಜ್ಜಿಗೆ,ಗಿಣ್ಣು,ಖೋವಾ ಇವೆಲ್ಲಾ ಗವ್ಯಗಳೇ ಆದರೂ ಪಂಚಗವ್ಯದಲ್ಲಿ ಸೇರುವುದಿಲ್ಲ.ಪಂಚಗವ್ಯದ ಪ್ರಯೋಜನ ತಿಳಿಸುವ ಶ್ಲೋಕದಲ್ಲಿ…

ಯತ್ ತ್ವಗಸ್ಥಿಗತಂ ಪಾಪಂ ದೇಹೇ ತಿಷ್ಠತಿ ಮಾಮಕೇ। ಪ್ರಾಶನಾತ್ ಪಂಚಗವ್ಯಸ್ಯ ದಹತ್ವಗ್ನಿರಿವೇಂಧನಂ॥
= ಯಾವುವೆಲ್ಲ ನನ್ನ ಚರ್ಮದಿಂದ ಮೂಳೆಯ ತನಕ ವ್ಯಾಪಿಸಿ ಸೇರಿಕೊಂಡಿರುವ ಪಾಪಗಳಿವೆಯೋ ಅವೆಲ್ಲವೂ ಕೂಡ ಪಂಚಗವ್ಯ ಸೇವನೆಯಿಂದ ಅಗ್ನಿಗೆ ಹಾಕಿದ ಇಂಧನವು ದಹಿಸುವಂತೆ ದಹಿಸಿ ಹೋಗಲಿ ಎಂಬುದು ಅರ್ಥ.

ಪಂಚಗವ್ಯ ಚಿಕಿತ್ಸೆಗೂ ಪಾಪಕ್ಕೂ  ಏನು ಸಂಬಂಧ ಅಂತ ವಿಮರ್ಶಿಸೋದಾದರೆ “ಪೂರ್ವಜನ್ಮ ಕೃತಂ ಪಾಪಂ ವ್ಯಾಧಿರೂಪೇಣ ಜಾಯತೇ” ಎಂಬುದಾಗಿ ಒಂದು ಉಕ್ತಿ ಇದೆ. ಅಂದ್ರೆ ಹಿಂದಿನ ಜನ್ಮದ ಪಾಪಗಳು ವ್ಯಾಧಿಗಳಾಗಿ ಈ ಜನ್ಮದಲ್ಲಿ ಕಾಡ್ತವೆ.
ಕೇವಲ ವ್ಯಾಧಿಗಳಾಗಿ ಕಾಡ್ತವೆ ಅನ್ನುವುದಕ್ಕಿಂದಲೂ ಒಂದಷ್ಟು ವ್ಯಾಧಿ ರೂಪದಲ್ಲೂ,ಒಂದಷ್ಟು ವೈಕಲ್ಯ,ವಿಪತ್ತು ,ದಾರಿದ್ರ್ಯಗಳ ರೂಪದಲ್ಲೂ  ಪಾಪದ ಫಲಗಳು ಕಾಡ್ತವೆ.

ಪಂಚಗವ್ಯ ಸೇವನೆಯಿಂದ ಚರ್ಮ-ಮಾಂಸ- ಮೂಳೆ ಮಜ್ಜೆಗಳ ತನಕ ವ್ಯಾಪಿಸಿರುವ ಪಾಪಪರಿಹಾರ ಅಂದ್ರೆ ಬೇರೇನಲ್ಲ ಅದು ವ್ಯಾಧಿ ಅಥವಾ ವ್ಯಾಧಿಜನಕ ಪ್ರಾರಂಭಿಕ ತೊಂದರೆಗಳ ಪರಿಹಾರಅಂತಲೇ ತಿಳಿದುಕೊಳ್ಳಬೇಕು. ಅಂತಹ ವ್ಯಾಧಿಗಳು ನಿವಾರಣೆಯಾಗುವುದು ಅಂದ್ರೆ ಪಾಪ ಪರಿಹಾರವಾಗುವುದು ಅಂತ ಕಾರ್ಯ ಕಾರಣ ಸಂಬಂಧವನ್ನು ಅರ್ಥಮಾಡಿಕೊಳ್ಳಬಹುದು. ಧರ್ಮಶಾಸ್ತ್ರ ಅಥವಾ ಕರ್ಮಸಿದ್ಧಾಂತಗಳು ಪಾಪವು ಅನುಭವಿಸುದರಿಂದಲೇ ಕ್ಷಯಿಸುವುದು ಅಂತಲೂ ಹೇಳ್ತವೆ. ಆದರೆ ಪ್ರಾಯಶ್ಚಿತ್ತ ಮತ್ತು ಔಷಧಗಳಿಂದಲೂ ಪಾಪಜನಿತ ವ್ಯಾಧಿಗಳನ್ನು  ಉಪಶಮನ ಮಾಡುವ ವಿಧಾನಗಳನ್ನೂ ಹೇಳಿವೆ.

ಪಂಚಗವ್ಯದಿಂದ ಹೇಗೆ ವ್ಯಾಧಿ ನಾಶವಾಗಬಹುದು ಅಂದ್ರೆ  ಗೋವಿನ ಸೆಗಣಿಯಲ್ಲಿ ಹಲವು ಬಗೆಯ ಪ್ರಯೋಜನಕಾರಿ ಜೀವಾಣುಗಳಿವೆ ಎಂಬುದು ಆಧುನಿಕ ಅಧ್ಯಯನದ ಫಲಿತಾಂಶಗಳು ಮನುಷ್ಯನಾಗಲಿ ಪ್ರಾಣಿಗಳಾಗಲಿ ಗಿಡಮರಗಳಾಗಲಿ ಸೇವಿಸುವ ಸೇವಿಸಲಿರುವ ಆಹಾರದ ಪಚನಕ್ರಿಯೆಗೆ ಜೀವಾಣುಗಳನ್ನು ,ವಿವಿಧ ಖನಿಜ-ಧಾತು-ಪೋಷಕಾಂಶಗಳ ಸೂಕ್ಷ್ಮ ವಸ್ತುಗಳನ್ನು ಅವಲಂಬಿಸಿವೆ.

ಪ್ರಕೃತಿಯಲ್ಲಿ ಗಿಡಮರಗಳ ಉದುರಿದ ಎಲೆ ರೆಂಬೆ ಇತ್ಯಾದಿ ಸಾವಯವ ವಸ್ತುಗಳ ವಿಘಟನೆಗೆ ಸೂಕ್ಷ್ಮ ಜೀವಿಗಳು ಹೇಗೆ ಕೆಲಸ ಮಾಡ್ತವೋ ಹಾಗೆ ನಮ್ಮ ಉದರದೊಳಗೂ ಆಹಾರದ ಪಚನಕ್ರಿಯೆಯಂತಹ ಒಂದಷ್ಟು ಜೈವಿಕ ಚಟುವಟಿಕೆಗಳಿಗೆ ಜೀವಾಣುಗಳು ಮತ್ತು ಅವುಗಳಿಗೆ ಪೂರಕ ಅಂಶಗಳು ಬೇಕೇ ಬೇಕು. ಸೆಗಣಿಯಲ್ಲಿರುವ ಜೀವಾಣುಗಳು ಈ ಪ್ರಕ್ರಿಯೆಯನ್ನು ಗೋಮೂತ್ರ,ಹಾಲು,ಮೊಸರು ತುಪ್ಪಗಳ ಪೋಷಕ ಅಂಶಗಳನ್ನು ಬಳಸಿಕೊಂಡು ಚಟುವಟಿಕೆಗೆ ನಡೆಸ್ತವೆ. ಆ ಚಟುವಟಿಕೆ ಹಾಳು ಮೂಳು ತಿಂದು ಹಾಳಾದ ಹೊಟ್ಟೆಯ ಪಚನಕ್ರಿಯೆಯನ್ನು ಸರಿಮಾಡ್ತದೆ. ಪಚನ ಸಮರ್ಪಕವಾದರೆ ವ್ಯಾಧಿಗಳಿಗೆ ಕಾರಣವಾದ  ವಾತ -ಪಿತ್ತ-ಕಫಗಳ ವ್ಯತ್ಯಾಸ ಸರಿಯಾಗ್ತದೆ.  ವ್ಯಾಧಿಗಳ ಹುಟ್ಟಿಗೆ ಕಾರಣವಾದ ವ್ಯತ್ಯಾಸ ಸರಿಯಾಗುವುದು ಎಂಬುದೇ ಒಂದು ಶುದ್ಧೀಕರಣ ಅಥವಾ ಪಾಪ ಪರಿಹಾರ ಆದ್ದರಿಂದ ಪಂಚಗವ್ಯ ಸೇವೆನೆಯಿಂದ ಶುದ್ಧಿಯಾಗ್ತದೆ  ಎಂಬುದರ ಅರ್ಥ, ಭಕ್ಷ್ಯ-ಅಭಕ್ಷ್ಯಗಳ ವಿವೇಚನೆಯಿಲ್ಲದೆ ಸೇವಿಸಿ ಉಂಟಾದ ಅವ್ಯವಸ್ಥೆ ಸರಿಯಾಗ್ತದೆ ಎಂಬುದೇ ಆಗಿದೆ.

ಆರೋಗ್ಯವಂತರಂತೆ ಕಾಣುವವರ ದೇಹದಲ್ಲೂ ವ್ಯತ್ಯಾಸಗಳ ಆರಂಭಿಕ ಹಂತ ಗೊತ್ತಾಗದಿರಬಹುದು,ಅಂತಹ ವ್ಯತ್ಯಾಸಗಳನ್ನು ಪಂಚಗವ್ಯದ ಸೇವನೆಯಿಂದ ಸರಿಪಡಿಸಬಹುದು ಅನ್ನುವ ಕಾರಣಕ್ಕೇ ಪ್ರತಿಯೊಂದು ಶುಭಾಶುಭ ಕರ್ಮಗಳಲ್ಲಿ ಶುದ್ಧಿಗಾಗಿ ಮೊದಲು ಪಂಚಗವ್ಯ ಸೇವನೆಗೆ ಪ್ರಾಧಾನ್ಯತೆ ಕೊಟ್ಟಿದ್ದಾರೆ.

ಯಾರಿಗೆ ಸರಿಯಾಗದಷ್ಟು ಕೆಟ್ಟಿದೆಯೋ ಅಂತಹವರಿಗೆ ಆಯುರ್ವೇದವನ್ನು ಚೆನ್ನಾಗಿ ತಿಳಿದಿರುವ ವೈದ್ಯರು ಇತರ ಗವ್ಯವಸ್ತುಗಳ ಮತ್ತು ಔಷಧಗಳ ಮಿಶ್ರಣದಿಂದ ಚಿಕಿತ್ಸೆ ಮಾಡುವ ಪದ್ಧತಿಯೇ ಪಂಚಗವ್ಯ ಚಿಕಿತ್ಸೆ. ಪಂಚಗವ್ಯದ ವಸ್ತುಗಳನ್ನು ನಿರ್ದಿಷ್ಟವಾದ ಬಣ್ಣದ ಹಸುಗಳಿಂದ ಪಡೆಯಬೇಕು ಅಂತ ಉಲ್ಲೇಖವಿದೆ. ಆದರೆ ಇಂದು ಎಲ್ಲ ಬಣ್ಣದ ಹಸು ಸಾಕಿದವರಿಗೆ ಪಂಚಗವ್ಯದ ಅಗತ್ಯ ಇರುವಾಗಲೇ ಹಾಲೂ ಕೊಡ್ತಾ ಇದ್ದರೆ ಮಾತ್ರ ಹಾಗೆ ಸಂಗ್ರಹಿಸಬಹುದೇ ಹೊರತು  ಅದಲ್ಲದಿದ್ದರೆ ಕರು ಇರುವ ಆರೋಗ್ಯವಂತ ದೇಶೀ ಹಸುವಿನ ಹಾಲು ಸೆಗಣಿ ಗೋಮೂತ್ರ ಮೊಸರು ತುಪ್ಪಗಳನ್ನು ಸಂಗ್ರಹಿಸಿಯೇ ತಯಾರಿಸಿದರೆ ಮಾತ್ರ ಪೂರ್ಣ ಪ್ರಯೋಜನ ಲಭ್ಯವಾದೀತು.

ಉಳಿದೆಲ್ಲ ಪ್ರಾಣಿಗಳ ಮಲಮೂತ್ರಗಳಿಗಿಂತಲೂ ಗೋವಿನ ಗೋಮಯ ಮತ್ತು ಗೋಮೂತ್ರವನ್ನು ಯಾಕೆ ಪವಿತ್ರವೆಂದು ಪರಿಗಣಿಸಿರುವುದು ಅಥವಾ ಸಕಲ ಪಾತಕ ಪಾಪಗಳ ಪರಿಹಾರ ಪಂಚಗವ್ಯದಿಂದ ಸಾಧ್ಯ. ಆದರೆ ಮಹಾಪಾತಕಗಳು ಮಹಾದುಷ್ಕೃತ್ಯಗಳ ಪಾಪದ ಫಲ ನಿವಾರಣೆ ಆಗದಿರಬಹುದು.

ಮಹಾರೋಗಗಳು ಎಂಬ ಯಾದಿಯಲ್ಲಿ ಬರುವ ಕ್ಯಾನ್ಸರ್ ಕೂಡ ಒಂದು ಮಹಾರೋಗ. ಅದನ್ನೂ ಕೂಡ ಗವ್ಯ ಔಷಧಗಳ ಮೂಲಕ ಗುಣಪಡಿಸಬಹುದು ಎಂದು ಸಾಧಿಸುತ್ತಿರುವ ಕ್ಯಾನ್ಸರ್ ಗೆ ಆನ್ಸರ್ ಖ್ಯಾತಿಯ ಡಾ.ಡಿ.ಪಿ ರಮೇಶ್ ಬೆಂಗಳೂರು ಇವರು ಉಜಿರೆಯಲ್ಲಿ ನಡೆದ ಪಂಚಗವ್ಯ ಚಿಕಿತ್ಸಾ ಶಿಬಿರದಲ್ಲಿ ಹಲವಾರ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.

ಸ್ವತಃ ಮಲೆನಾಡ ಗಿಡ್ಡ ಗೋವುಗಳನ್ನು ಸಾಕುತ್ತಾ ಆಯುರ್ವೇದ ಚಿಕಿತ್ಸೆ ನೀಡುವ ಇನ್ನಿಬ್ಬರು  ವೈದ್ಯರಾದ ಶಶಿಶೇಖರ ದರ್ಭೆ ಹಾಗೂ  ಸುಪ್ರೀತ ಲೋಬೋ ಉಪ್ಪಿನಂಗಡಿ ಇವರು ಸಹ ಉಳಿದ ಹಲವಾರು ವಿವಿಧ ರೋಗಿಗಳನ್ನು ಪರೀಕ್ಷಿಸಿ ಗವ್ಯ ಔಷಧಿಗಳನ್ನು ನೀಡಿದ್ದಾರೆ.

ರೋಗಿಗಳು ತಮ್ಮ ತ್ರಿದೋಷಗಳಲ್ಲಿ ಪ್ರಧಾನಪ್ರಕೃತಿಯನ್ನು  ಅರ್ಥಮಾಡಿಕೊಂಡು ಅದಕ್ಕೆ ಅನುಗುಣವಾಗಿ ನಿಯಮಿತ ಪಥ್ಯಪಾಲನೆ ಮಾಡಿಕೊಂಡರೆ ಹಾಗೂ ಚಿಕಿತ್ಸಾ ನಂತರದ ಪರಿಣಾಗಳನ್ನು ಸರಿಯಾಗಿ ಗಮನಿಸಿ ವೈದ್ಯರಿಗೆ ತಿಳಿಸಿದರೆ ಪಂಚಗವ್ಯ ಚಿಕಿತ್ಸಾ ಶಿಬಿರದ ಪ್ರಯೋಜನ ಮನವರಿಕೆಯಾದೀತು. ಗವ್ಯಸಿದ್ಧ ಶಶಿಶೇಖರ ದರ್ಭೆಯವರು ಹೇಳಿದಂತೆ ಚಲಿಸುವ ಔಷಧಾಲಯದಂತೆ ಇರುವ ಗೋವುಗಳು ಪ್ರಕೃತಿಯ ಒಳಿತಿಗಾಗಿ ಭಗವಂತನ ಸೃಷ್ಟಿ. ಗೋಸೇವೆಯನ್ನು ನಾವು ಮಾಡುವುದು ಎನ್ನುವುದಕ್ಕಿಂತ ಗೋವು ನಮ್ಮನ್ನು ಸಲಹುವುದು ಎಂಬುದೇ ಸೂಕ್ತ.

ಗೋವು ಗಿಡಮೂಲಿಕೆಗಳನ್ನು ಸೇವಿಸಿ ಅವುಗಳ ಸತ್ವವನ್ನು ತಮ್ಮ ಉತ್ಪನ್ನಗಳ ಮೂಲಕ ನೀಡ್ತವೆ. ಆ ಮಹತ್ವವನ್ನು ಮನಗಂಡು ದೇಶೀ ತಳಿಗಳಲ್ಲಿ ನಮ್ಮ ಪ್ರಾದೇಶೀಕ ತಳಿಯಾದ ಮಲೆನಾಡ ಗಿಡ್ಡಗಳು ಇನ್ನಷ್ಟು ವಿಶೇಷತೆಗಳಿಂದ ಕೂಡಿರುವ ಕಾರಣ ಅವುಗಳ ಸಂತತಿಯ ಉಳಿವಿಗೆ ನಾವು ತೊಡಗಿದರೆ ಅದು ಒಂದು ಮಹತ್ತರ ಸಾಧನೆಯೇ ಸರಿ. ಎಷ್ಟೇ ಕಷ್ಟ ಇದ್ದರೂ ಗೋವುಗಳನ್ನು ಸಾಕಿದರೆ ಆ ಎಲ್ಲ ಕಷ್ಟಗಳನ್ನು ಪರಿಹರಿಸುವ ಶಕ್ತಿ ಗೋವುಗಳಿಗಿವೆ. ಆದ್ದರಿಂದ ಪ್ರತಿಯೊಬ್ಬರೂ ಒಂದೆರಡು ಮಲೆನಾಡಗಿಡ್ಡಗಳನ್ನು ಸಾಕಲು ತೊಡಗುವುದಕ್ಕೆ ಇದು ಸಕಾಲ. ನಿರ್ಲಕ್ಷಿಸಿದರೆ ಮುಂದಕ್ಕೆ ಗೋವುಗಳು ಬೇಕು ಎಂದು ಲಕ್ಷ ಲಕ್ಷ ನೀಡಲು ತಯಾರಾದರೂ ಮಲೆನಾಡ ಗಿಡ್ಡಗಳು ಸಿಗುವುದು ಕಷ್ಟ.

ಸುರಕ್ಷಾ ಗೋಸೇವಾ ಚಾರಿಟೇಬಲ್ ಮತ್ತು ವೆಲ್ಫೇರ್ ಟ್ರಸ್ಟ್ (ರಿ) ಉಡುಪಿ ಎಂಬ ಹೆಸರಿನಲ್ಲಿ ಮಲೆನಾಡಗಿಡ್ಡ ಗೋ ಪಾಲಕರ ಸದಸ್ಯತನದ ಸಂಸ್ಥೆ  ಹೆಚ್ಚು ಮಂದಿ ಮಲೆನಾಡ ಗಿಡ್ಡ ಗೋಪಾಲನೆಗೆ ತೊಡುವ ನಿಟ್ಟಿನಲ್ಲಿ ಹಾಗೂ ಅವುಗಳ ಗವ್ಯೋತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಿ ಗೋಪಾಲಕರ ಸಮಸ್ಯೆಗಳಿಗೆ ಉತ್ತರದಾಯಿಯಾಗಿ  ಸಾಮಾಜಿಕವಾಗಿ ಗೋಸೇವೆಯ ಕೆಲಸಮಾಡಲು ತೊಡಗಿದೆ.ಅದರ ಪ್ರಾರಂಭಿಕ ಹಂತದಲ್ಲಿ ಶುದ್ಧಿಗಾಗಿ ಪಂಚಗವ್ಯದಿಂದಲೇ ತೊಡಗಿದೆ.

ಬರಹ :
 ಮುರಲೀಕೃಷ್ಣ.ಕೆ.ಜಿ.

 

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮುರಲೀಕೃಷ್ಣ ಕೆ ಜಿ

ಕಡಬ ತಾಲೂಕಿನ ಆಲಂತಾಯ ಗ್ರಾಮದ ಮುರಲೀಕೃಷ್ಣ ಕೆ ಜಿ ಅವರು ಕೃಷಿ ಮತ್ತು ಪೌರೋಹಿತ್ಯದ ವೃತ್ತಿಯನ್ನು ಮಾಡುತ್ತಾರೆ. ಹವ್ಯಾಸವಾಗಿ ಉಪನ್ಯಾಸ ಮತ್ತು ಲೇಖನ ಬರೆಯುತ್ತಾರೆ. ವೇದ ಮತ್ತು ಸಂಸ್ಕೃತ ಅಧ್ಯಯನ ಮಾಡಿ ಸಂಸ್ಕೃತದಲ್ಲಿ ಎಂ ಎ ಮಾಡಿದ್ದಾರೆ. ಭಾರತೀಯ ಗೋವಿನ ಬಗ್ಗೆ ಆಸಕ್ತಿಯಿಂದ ಕೆಲಸ ಮಾಡುತ್ತಾರೆ.

ಇದನ್ನೂ ಓದಿ

ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!
February 12, 2026
7:47 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ
February 12, 2026
7:04 AM
by: ಮಿರರ್‌ ಡೆಸ್ಕ್
ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ
February 12, 2026
6:54 AM
by: ದ ರೂರಲ್ ಮಿರರ್.ಕಾಂ
ಜಲಜೀವನ್ ಮಿಷನ್ ವೇಗಕ್ಕೆ ಕಟ್ಟುನಿಟ್ಟಿನ ಗಡಿ : ಉಳಿದ ಕಾಮಗಾರಿಗಳು ತ್ವರಿತ ಪೂರ್ಣಗೊಳಿಸಿ
February 12, 2026
6:47 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror