ಹಬ್ಬ, ಸಮಾರಂಭದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುವ ಮಾವಿನ ತೋರಣ | ಈ ಮಾವಿನ ತೋರಣದ ಮಹತ್ವವೇನು..? |

August 20, 2023
11:28 AM
ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಮಾವಿನ ತಳಿರು ತೋರಣ ಕಣ್ಣಿಗೆ ಎದ್ದು ಕಾಣುತ್ತಿರುತ್ತದೆ. ಇದರಲ್ಲಿ ಅನೇಕ ಉತ್ತಮ ಅಂಶಗಳು ಇವೆ.

ಶ್ರಾವಣ ಆರಂಭವಾಗಿದೆ. ಇನ್ನೇನು ಸಾಲು ಸಾಲು ಹಬ್ಬಗಳದ್ದೇ ಸಂಭ್ರಮ. ನಾಗರ ಪಂಚಮಿ ಮೊದಲ ಹಬ್ಬವಾಗಿ ಸೋಮವಾರ ಬಂದ್ರೆ, ಬರುವ ಶುಕ್ರವಾರವೇ ವರಮಮಹಾಲಕ್ಷ್ಮಿ ಹಬ್ಬ. ನಂತರ ಗೌರಿ ಗಣೇಶ ಹಬ್ಬ, ನವರಾತ್ರಿ, ದೀಪಾವಳಿ ಹೀಗೆ ಒಂದಾದ ಮೇಲೊಂದರಂತೆ ಹಬ್ಬಗಳು ಬರುತ್ತವೆ. ಹಬ್ಬಗಳು ಮಾತ್ರವಲ್ಲ, ಅದೆಲ್ಲೇ ಪೂಜೆ, ಸಮಾರಂಭ, ಮದುವೆ ಹರಿದಿನ ಈ ಎಲ್ಲಾ ಕಡೆ ಬೇಕಾಗುವ ಬಹುಮುಖ್ಯ ವಸ್ತು ಅಂದರೆ ಅದು ಮಾವಿನ ಎಲೆ ತೋರಣ.

Advertisement
Advertisement

ಮಾವಿನ ತೋರಣ ಎಂಬುದು ಒಟ್ಟು ಕುಟುಂಬದ ಸಂಕೇತ. ಹಸಿರಾದ ಮಾವಿನ ಎಲೆಗಳನ್ನು ತಂದು ಅದನ್ನು ತೋರಣ ಕಟ್ಟಿ ಮನೆಯ ದ್ವಾರ ಬಾಗಿಲಿಗೆ ಹಾಕುವುದು ಪದ್ಧತಿ. ಈ ಹಸಿರಾದ ಮಾವಿನ ಎಲೆ ಶುಭ ಸೂಚನೆಯ ಸಂಕೇತ. ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ, ಸಕಾರಾತ್ಮಕ ವಾತಾವರಣ ಚೆಲ್ಲುತ್ತದೆ. ಕೆಟ್ಟ ದೃಷ್ಟಿಯಿಂದ ಮನೆಯನ್ನು, ಕುಟುಂಬವನ್ನು ರಕ್ಷಿಸುತ್ತದೆ. ಹಿಂದೆಲ್ಲಾ ಈಗಿನಂತೆ ಮನೆ ಅಲಂಕಾರ ಮಾಡುವುದಕ್ಕೆ ದುಡ್ಡು ಕೊಟ್ಟು ರಾಶಿ, ರಾಶಿ ಹೂವು ತರುವವರು ಯಾರೂ ಇಲ್ಲ. ಆಗ ಮನೆಯ ಹಿತ್ತಲಲ್ಲಿರುವ ಮಾವಿನ ಮರವೇ ಶೃಂಗಾರ ಸಾಧನ. ಕಾರ್ಯಕ್ರಮ ಅಂದವಾಗಿ ಕಾಣಲಿ, ಮನೆ ಶೃಂಗಾರಗೊಳ್ಳಲಿ ಎಂಬ ಕಾರಣಕ್ಕೆ ಕಟ್ಟುತ್ತಿದ್ದರು.ಹಿಂದುಗಳಿಗೆ ಅಮಾವಾಸ್ಯೆ ಹುಣ್ಣಿಮೆಯಿಂದ ಹಿಡಿದು ಪ್ರತಿದಿನವೂ ಒಂದು ರೀತಿಯ ಹಬ್ಬವೇ ಸರಿ.

ವರ್ಷದಲ್ಲಿ ಹೆಚ್ಚಿನ ಹಬ್ಬಗಳನ್ನ ಆಚರಿಸುವವರು ಕೂಡ ಇವರೇ, ಪ್ರತಿ ಹಬ್ಬಗಳು ಸಹ ಒಂದೊಂದು ವಿಶೇಷತೆಯನ್ನ ಹೊಂದಿವೆ ಎಂದರೆ ಖಂಡಿತ ತಪ್ಪಾಗಲಾರದು. ಹಿಂದೂಗಳು ಹೆಚ್ಚಾಗಿ ಸಂಪ್ರದಾಯಗಳನ್ನ ಇನ್ನು ಸಹ ಆಚರಣೆಯಲ್ಲಿಟ್ಟಿದ್ದರೆ, ಒಂದೊಂದು ಆಚರಣೆಗಳಿಗೂ ಸಹ ಒಂದೊಂದು ಮಹತ್ವವಿದೆ. ನಮ್ಮ ಭಾರತೀಯ ಹಿಂದೂ  ಸಂಸ್ಕೃತಿಯಲ್ಲಿ ಹಬ್ಬ ಹರಿದಿನಗಳು ಸಹಜ ಮತ್ತು ಸರ್ವೇ ಸಾಮಾನ್ಯ. ಅದರಂತೆ   ಊರ ಹಬ್ಬ, ಜಾತ್ರೆ, ಸಾಮೂಹಿಕ ಸಮಾರಂಭಗಳಾಗಲೀ  ಅಥವಾ ಮನೆಗಳಲ್ಲಿ   ಮದುವೆ,ಮುಂಜಿ, ನಾಮಕರಣ ಮುಂತಾದ  ಧಾರ್ಮಿಕ ಕಾರ್ಯಕ್ರಮಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಎಲ್ಲಾ ಕಾರ್ಯಕ್ರಮಗಳ ವಿಧಿ ವಿಧಾನಗಳು ಬೇರೆ ಬೇರೆ ತರಹದ್ದಾದರೂ, ಎಲ್ಲದರಲ್ಲೂ ಸಾಮಾನ್ಯವಾಗಿ ಎದ್ದು ಕಾಣುವ ಒಂದು ಅಂಶವೆಂದರೆ ಮಾವಿನ ತಳಿರು ತೋರಣ.

ಅದು ಊರ ಹೆಬ್ಬಾಗಿಲೇ ಆಗಿರಬಹುದು, ದೇವಸ್ಥಾನದ ಮುಖ್ಯಾದ್ವಾರವಾಗಿರಬಹುದು,  ಮನೆಯ ಮುಂಬಾಗಿಲಾಗಿರಬಹುದು, ದೇವರ ಕೋಣೆಯ ಬಾಗಿಲಾಗಿರಬಹುದು ಅಥವಾ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಮಾವಿನ ತಳಿರು ತೋರಣ ಕಣ್ಣಿಗೆ ಎದ್ದು ಕಾಣುತ್ತಿರುತ್ತದೆ ಮತ್ತು ಅತ್ಯಂತ ಮಹತ್ವವನ್ನು ಪಡೆದಿರುತ್ತದೆ. ಮರಗಳ ಹಸಿರು ಎಲೆಗಳು ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ  ಇಂಗಾಲದ ಡೈಆಕ್ಸೈಡನ್ನು  ಹೀರಿಕೊಂಡು ಅದರ ಬದಲಿಗೆ ಶುಧ್ಧವಾದ  ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ.  ಶುಭ ಸಮಾರಂಭಗಳಲ್ಲಿ ಅತಿ ಹೆಚ್ಚಿನ ಜನರು  ಒಂದೆಡೆ ಸೇರಿದಾಗ, ಜನದಟ್ಟಣೆಯಿಂದ ಆಮ್ಲಜನಕದ ಕೊರತೆ ಉಂಟಾಗಬಹುದು. ಹಾಗಾಗಿ ಅಂತಹ  ಆಮ್ಲಜನಕದ ಕೊರತೆಯನ್ನು ನೀಗಿಸಲು ಸಮಾರಂಭದ  ಮಂಟಪದ ಸುತ್ತಮುತ್ತಲೂ  ತೋರಣ ಕಟ್ಟುವ ಸಂಪ್ರದಾಯವಿದೆ. ಅದರಲ್ಲೂ   ಮಾವಿನ ಎಲೆಯನ್ನೇ  ತೋರಣವನ್ನಾಗಿ ಏಕೆ  ಕಟ್ಟುತ್ತಾರೆಂದರೆ ಉಳಿದೆಲ್ಲಾ ಎಲೆಗಳಿಗಿಂತ ಮಾವಿನ ಎಲೆಯು ಅತ್ಯಂತ ಹೆಚ್ಚು ಕಾಲ ಹಚ್ಚ ಹಸಿರಾಗಿರುತ್ತದೆ ಮತ್ತು ಮರದಿಂದ ಕಿತ್ತು ತಂದ ಬಹಳ ಕಾಲಗಳ ನಂತರವೂ ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ ಆಮ್ಲಜನಕವವನ್ನು ಉತ್ಪತ್ತಿ ಮಾಡುವ ಶಕ್ತಿಯನ್ನು ಹೊಂದಿದೆ.  ಹಾಗಾಗಿ ಉಳಿದೆಲ್ಲಾ ಎಲೆಗಳಿಗಿಂತ ಮಾವಿನ ಎಲೆಗಳನ್ನೇ ತೋರಣಕ್ಕಾಗಿ ಬಳಸುತ್ತೇವೆ.

ಇನ್ನು  ಮನೆಯ ಮುಂಬಾಗಿಲು ಮತ್ತು ದೇವರ ಮನೆಯ ಬಾಗಿಲಿಗೆ  ಮಾವಿನ ತೋರಣ ಕಟ್ಟುವುದರಿಂದ  ಮನೆಯಲ್ಲಿ ಹಬ್ಬದ ವಾತಾವರಣ ಮೂಡಿ ಎಲ್ಲರ ಮನಸ್ಸು ಉತ್ಸಾಹ ಮತ್ತು ಆಹ್ಲಾದಕರವಾಗಿಡಲು ಸಹಾಯ ಮಾಡುತ್ತದೆ.  ಅದೆ ರೀತಿ ಮನೆಯನ್ನು ಪ್ರವೇಶಿಸುತಿದ್ದಂತೆಯೇ ಹಚ್ಚ ಹಸಿರ ತೋರಣ ಕಣ್ಣಿಗೆ ತಂಪನ್ನು ನೀಡುತ್ತದೆ ಮತ್ತು ಮನೆಯ ವಾತವಾರಣ ಶುಭ್ರವಾಗಿದ್ದು ಆ ವ್ಯಕ್ತಿಯ ಮನಸ್ಸು  ತಾಜಾತನವಾಗಿ ಮತ್ತು ಧನಾತ್ಮಕವಾಗಿ ಯೋಚಿಸಲು ಸಹಕಾರಿಯಾಗಿರುತ್ತದೆ. ಹಾಗೆಯೇ ಮನೆಯ ಬಾಗಿಲಿಗೆ ಮಾವಿನ ತಳಿರು ತೋರಣದ ಜೊತೆಗೆ  ಬೇವಿನ ಸೊಪ್ಪಿನ ಎಲೆ ಅಥವಾ  ಟೊಂಗೆಗಳನ್ನು ಸಿಕ್ಕಿಸುವುದರಿಂದ,  ಮಾವು ಮತ್ತು ಬೇವಿನ ಎಲೆಯಲ್ಲಿ  ಔಷಧೀಯ ಗುಣಗಳು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ,  ಮನೆಯ ದ್ವಾರದ ಮೂಲಕ ಪ್ರವೇಶಿಸುವ ಗಾಳಿಯೊಂದಿಗೆ  ಮನೆಯೊಳಗೆಲ್ಲಾ ಹರಡಿ ಆರೋಗ್ಯ ದೃಷ್ಟಿಯಿಂದ ಮನೆಯಲ್ಲಿ ಉತ್ತಮ ವಾತಾವರಣ ಮೂಡಿಸುತ್ತದೆ.

ಮಾವಿನ ತೋರಣದ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಮನೆಯೊಳಗೆ ಪ್ರವೇಶಿಸುವ ಸಣ್ಣ ಸಣ್ಣ ಕ್ರಿಮಿ ಕೀಟಗಳನ್ನು ಆಕರ್ಷಿಸಿ ಅವುಗಳನ್ನು ತೋರಣದ ತುದಿಯಲ್ಲಿಯೇ  ಇರುವಂತೆ  ಮಾಡಿ, ಅವುಗಳು  ಮನೆಯೊಳಗೆ ಪ್ರವೇಶಿಸದಂತೆ ಬಾಗಿಲಿನ ಹೊರಗೇ ತಡೆಗಟ್ಟುತ್ತವೆ. ಮಾವು ನಿದ್ರಾಹೀನತೆಯನ್ನು ದೂರ ಮಾಡುತ್ತದೆ. ಹಬ್ಬದ ಸಂದರ್ಭದಲ್ಲಿ ಕೆಲಸದ ಒತ್ತಡವನ್ನು, ಶ್ರಮವನ್ನು ಹೋಗಲಾಡಿಸುವುದು ಮಾವಿನ ತೋರಣ. ಮಾವು ಬಯಕೆಗಳನ್ನು ತೀರಿಸುತ್ತದೆ ಎಂದು ಭಾವಿಸುತ್ತಾರೆ. ಮನೆಯ ದೇವರ ಕೋಣೆ ಯ ಬಾಗಿಲ ಹೊಸ್ತಿಲಲ್ಲಿ ಶ್ರೀ ನರಸಿಂಹ ದೇವರು ಸ್ಥಿತ ರಾಗಿರುತ್ತಾರೆ ಎಂಬ ನಂಬಿಕೆಯಿಂದ ಮನೆಯ ಹೊರ ಬಾಗಿಲಿಗೆ / ದೇವರ ಕೋಣೆ ಯ ಬಾಗಿಲಿಗೆ ತೋರಣ ಕಟ್ಟಿ ಹೊಸ್ತಿಲ ಪೂಜೆ ಮಾಡುವುದು ರೂಢಿಯಲ್ಲಿದೆ.

ಹೀಗೆ ನಾವು  ಅನುಸರಿಸುವ  ಪ್ರತಿಯೊಂದು ಧಾರ್ಮಿಕ ವಿಧಿವಿಧಾನಗಳ ಅಥವಾ ಪದ್ದತಿಗಳ  ಮೂಲ ಆಶಯ ವೈಜ್ಞಾನಿಕ ಪ್ರಯೋಜನಗಳೇ ಆಗಿರುತ್ತವೆ. ನಮಗೆ ಅವುಗಳ ಕುರಿತಾಗಿ ಸರಿಯಾದ ಮಾಹಿತಿಯ ಕೊರತೆಯಿಂದಾಗಿ ಮೂಢನಂಬಿಕೆ ಎಂದು ತಿಳಿದು ಸರಿಯಾಗಿ ಆಚರಿಸದೇ ಹಬ್ಬ ಹರಿದಿನಗಳ  ಸದುಪಯೋಗ  ಪಡೆದುಕೊಳ್ಳಲು ಸಾಧ್ಯವಾಗದಿರುವುದು ನಿಜಕ್ಕೂ ನಮ್ಮ ದೌರ್ಭಾಗ್ಯವೇ ಸರಿ. ಮಾವು ಮತ್ತು ಬೇವಿನ ತೋರಣದ ಇಷ್ಟೋಂದು  ಮಹತ್ವ ತಿಳಿದ ಮೇಲೆಯಾದರೂ  ಅಲಂಕಾರಕ್ಕೆಂದು ನಮ್ಮೆಲ್ಲರ ಮನೆಯ ಮಂದೆ ಕಟ್ಟಿರುವ ನಿಶ್ಪ್ರಯೋಜಕ ಪ್ಲಾಸ್ಟಿಕ್  ತೋರಣಗಳ ಜಾಗದಲ್ಲಿ  ಇಂದೇ ಹಚ್ಚ ಹಸಿರಿನ ಮಾವಿನ ಮತ್ತು ಬೇವಿನ ತೋರಣವನ್ನು ಕಟ್ಟೋಣ. ಹಾಗೆ ತೋರಣ ಕಟ್ಟುವಾಗ ಸುಲಭ ಮತ್ತು ಅನುಕೂಲ ಎಂದು ಸ್ಟಾಪ್ಲರ್ ಪಿನ್ ಬಳಸದೆ, ಹಂಚಿ ಕಡ್ಡಿಯನ್ನೋ ಇಲ್ಲವೇ ಉಪಯೋಗಿಸಿದಂತಹ ಊದುಕಡ್ಡಿಯ ತುದಿಯನ್ನೋ ಬಳಸೋಣ. . ತಲೆಮಾರುಗಳಿಂದ ನಡೆಸಿಕೊಂಡು ಬಂದಿರುವ ನಮ್ಮ ಸಂಸ್ಕೃತಿಯನ್ನು ಬೆಳೆಸೋಣ.

Source : Digital Media

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ
February 12, 2026
7:04 AM
by: ಮಿರರ್‌ ಡೆಸ್ಕ್
ಜಾಗತಿಕ ಒತ್ತಡ – ಗ್ರಾಮೀಣ ಜೀವನೋಪಾಯ | ಅಡಿಕೆ ಕುರಿತ ನಿಜವಾದ ಚರ್ಚೆ ಈಗ ಆರಂಭವಾಗಬೇಕು
February 12, 2026
6:30 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಅಡಿಕೆ ಮಾರುಕಟ್ಟೆ ಸಮೀಕರಣ : ಬೆಲೆ ನಿರ್ಧಾರದ ಹಿಂದಿನ ಅರ್ಥಶಾಸ್ತ್ರ ಮತ್ತು ಮನೋವಿಜ್ಞಾನ
February 10, 2026
10:34 PM
by: ಅರುಣ್‌ ಕುಮಾರ್ ಕಾಂಚೋಡು
2030 ರೊಳಗೆ 5 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಗುರಿ | ರಾಜ್ಯಸಭೆಯಲ್ಲಿ ಕೇಂದ್ರದ ಘೋಷಣೆ
February 10, 2026
6:43 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror