ಅಡಿಕೆ ಬೆಳೆಯುವ ಪ್ರದೇಶದಲ್ಲಿ ಕಂಡುಬಂದಿರುವ ಎಲೆಚುಕ್ಕಿ ರೋಗ ಹಾಗೂ ಕೆಲವು ಕಡೆಗಳಲ್ಲಿ ವ್ಯಾಪಕವಾಗಿರುವ ಹಳದಿ ಎಲೆರೋಗಕ್ಕೆ ಸದ್ಯಕ್ಕೆ ಇರುವ ಪರಿಹಾರಗಳ ಬಗ್ಗೆ ಕೃಷಿ ಸಚಿವಾಲಯವು ಮಾಹಿತಿ ನೀಡಿದೆ. ಕಾಸರಗೋಡು ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಅವರು ಅಡಿಕೆ ಎಲೆಚುಕ್ಕಿ ರೋಗದಿಂದ ಕೃಷಿಕರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಹಾಗೂ ಕೈಗೊಂಡಿರುವ ಪರಿಹಾರ ಕ್ರಮಗಳ ಬಗ್ಗೆ ಅಧಿವೇಶನದಲ್ಲಿ ಪ್ರಶ್ನೆಯನ್ನು ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವಾಲಯವು,“ಅಡಿಕೆ ಗಿಡಗಳಿಗೆ ಸರಿಯಾದ ಮಾದರಿಯಲ್ಲಿ ಪೋಷಕಾಂಶಗಳು ನೀಡುವುದು ಮತ್ತು ಶಿಲೀಂಧ್ರನಾಶಕಗಳನ್ನು 4 ಬಾರಿ ಸಿಂಪಡಣೆ ಮಾಡುವುದರ ಮೂಲಕ ಎಲೆಚುಕ್ಕಿ ರೋಗ ನಿಯಂತ್ರಣಕ್ಕಾಗಿ ರಾಷ್ಟ್ರೀಯ ವೈಜ್ಞಾನಿಕ ಸಮಿತಿ ತನ್ನ ಅಂತಿಮ ವರದಿಯನ್ನುಶಿಫಾರಸು ನೀಡಿದೆ. ಹಳದಿ ಎಲೆರೋಗ ನಿಯಂತ್ರಣಕ್ಕಾಗಿ, ರೋಗ ನಿರೋಧಕ ಅಡಿಕೆ ಮರಗಳನ್ನು ಗುರುತಿಸುವ ಮತ್ತು ಟಿಶ್ಯುಕಲ್ಚರ್ ಮೂಲಕ ಅದನ್ನು ವೃದ್ಧಿಸುವ ದೀರ್ಘಕಾಲೀನ ಯೋಜನೆಯನ್ನು ರೂಪಿಸಲಾಗಿದೆ” ಎಂದು ಉತ್ತರಿಸಿದೆ.
ಕೇರಳದಲ್ಲಿ, ಅದರಲ್ಲೂ ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿದ ನೀಡಿದ ಇಲಾಖೆಯ ಮಾಹಿತಿ ಪ್ರಕಾರ ಎಲೆ ಚುಕ್ಕೆ ರೋಗದಿಂದ 5% ರಿಂದ 20% ವರೆಗಿನ ಇಳುವರಿ ನಷ್ಟವನ್ನು ಅಂದಾಜಿಸಿದೆ. ಹೀಗಾಗಿ ಆರ್ಥಿಕ ಮಿತಿಗಿಂತ ಹೆಚ್ಚಿನ ರೋಗದ ವರದಿಯಾಗಿಲ್ಲ ಎಂದು ಸಚಿವಾಲಯ ತಿಳಿಸಿದೆ.
ರಾಷ್ಟ್ರೀಯ ಮಟ್ಟದಲ್ಲಿ ಅಡಿಕೆಯ ಒಟ್ಟಾರೆ ಅಭಿವೃದ್ಧಿಯನ್ನು ಭಾರತ ಸರ್ಕಾರದ ಕೃಷಿ ಸಚಿವಾಲಯದ ಅಧೀನ ಕಚೇರಿಯಾದ ಕ್ಯಾಲಿಕಟ್ನ ಅಡಿಕೆ ಮತ್ತು ಸಾಂಬಾರ ಮಂಡಳಿಯು ವಿವಿಧ ಕಾರ್ಯಕ್ರಮ ಆಯೋಜಿಸಿದೆ. ಅಡಿಕೆ ರೈತರು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು, ಬೆಳೆ ನಿರ್ವಹಣೆಗೆ ಸುಧಾರಿತ ತಂತ್ರಜ್ಞಾನಗಳ ಪ್ರಸರಣಕ್ಕಾಗಿ ಕ್ರಮಗಳನ್ನು ಕೂಡಾ ಕೈಗೊಂಡಿದ್ದು, ರೋಗನಿರ್ವಹಣೆಗೆ ಕೆಲವು ಶಿಫಾರಸುಗಳನ್ನು ಮಾಡಿದೆ ಎಂದು ಸಚಿವಾಲಯ ಉತ್ತರದಲ್ಲಿ ತಿಳಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ಇದರ ಜೊತೆಗೆ ಅಡಿಕೆ ಬೆಳೆಯಲ್ಲಿನ ಇತರ ಅಧ್ಯಯನ ಹಾಗೂ ಪ್ರಯೋಗಗಳ ಬಗ್ಗೆ ಇಲಾಖೆ ಮಾಹಿತಿ ನೀಡಿದ್ದು, ಅಡಿಕೆ ಜೊತೆಗೆ ಮಿಶ್ರ ಕೃಷಿಯನ್ನೂ ಬೆಳೆಸುವ ಬಗ್ಗೆ ಈಗಾಗಲೇ ಸಲಹೆ ನೀಡಿದೆ. 2024-25 ರಿಂದ ಕರ್ನಾಟಕದ 10 ಎಲೆಚುಕ್ಕಿ ರೋಗ ಪೀಡಿತ ಅಡಿಕೆ ಬೆಳೆಯುವ ತಾಲೂಕುಗಳಲ್ಲಿ ಅಡಿಕೆಯಲ್ಲಿ ಎಲೆ ಚುಕ್ಕಿ ರೋಗದ ಸಮುದಾಯ ಆಧಾರಿತ ನಿರ್ವಹಣೆಯ ಕುರಿತು ಆಯ್ದ ರೈತರ ತೋಟಗಳಲ್ಲಿ ಕೆಲಸ ಮಾಡಲಾಗುತ್ತಿದೆ. ಪ್ರತಿ ತಾಲ್ಲೂಕಿನಲ್ಲಿ 5 ಹೆಕ್ಟೇರ್ಗಳಂತೆ 50 ಹೆಕ್ಟೇರ್ ಪ್ರದೇಶವನ್ನು ಒಳಗೊಂಡು ಕೆಲಸ ಮಾಡಲಾಗುತ್ತಿದೆ. ಎಲೆಚುಕ್ಕಿ ರೋಗ ನಿಯಂತ್ರಣಕ್ಕಾಗಿ ಶಿಫಾರಸು ಮಾಡಲಾದ ವೈಜ್ಞಾನಿಕ ನಿರ್ವಹಣಾ ಕ್ರಮಗಳನ್ನು ನಡೆಸಲಾಗುತ್ತಿದೆ. ಈ ಮೂಲಕ ಕೃಷಿಕರ ಗಮನ ಸೆಳೆಯುವ ಕೆಲಸ ಮಾಡಲಾಗುತ್ತಿದೆ.
ಕೊಳೆರೋಗ ನಿರ್ವಹಣೆಗೆ ಹೊಸದಾದ ಶಿಲೀಂದ್ರನಾಶಕವಾದ ಮಂಡಿಪ್ರೊಪಮೈಡ್ನ ಪರಿಣಾಮವನ್ನು ತಿಳಿಯಲು ಮಾದರಿ ತೋಟಗಳ ಕಡೆಗೆ ಗಮನಹರಿಸಲಾಗಿದೆ. ಅಡಿಕೆಯ ಕುಬ್ಜ ಹೈಬ್ರಿಡ್ ತಳಿಯ ಕಡೆಗೆ ಆದ್ಯತೆ ನೀಡಲಾಗುತ್ತಿದೆ. ಅಡಿಕೆಯಲ್ಲಿ ಹಳದಿ ಎಲೆರೋಗ ನಿರ್ವಹಣೆಯಲ್ಲಿ ಪ್ಲಾಸ್ಟಿಕ್ ಮಲ್ಚಿಂಗ್ನ ಪರಿಣಾಮವನ್ನು ಪ್ರದರ್ಶಿಸಲು ಮಾದರಿ ತೋಟಗಳನ್ನು ಸಿದ್ಧ ಮಾಡಲಾಗಿದೆ.
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆಗೆ , ಡಿಸೆಂಬರ್ ನಲ್ಲಿ ತೀವ್ರವಾಗಿ ಸೋಂಕಿತವಾದ ಅಡಿಕೆ ಮರದ ಸೋಗೆಗಳನ್ನು ಸಾಧ್ಯವಾದಲ್ಲೆಲ್ಲಾ ತೆಗೆದುಹಾಕುವುದು ಮತ್ತು ಸುಡುವುದು. ನಂತರ ಶಿಲೀಂಧ್ರನಾಶಕ ಸಿಂಪರಣೆ ಮಾಡಬೇಕಿದೆ. ಮಳೆಗಾಲದಲ್ಲಿ (ಜುಲೈ-ಆಗಸ್ಟ್) ಅಡಿಕೆಯ ಗೊನೆಯ ಮೇಲೆ ಸಿಂಪಡಿಸುವಾಗ ಬೋರ್ಡೆಕ್ಸ್ ಮಿಶ್ರಣವನ್ನು (1%) ಎಲೆಗಳ ಮೇಲೆ ಸಿಂಪಡಿಸಬಹುದು. ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ರೋಗ ಕಂಡುಬಂದರೆ, ಮೊದಲ ಸುತ್ತಿನ ಸಿಂಪಡಣೆಯನ್ನು ಪ್ರೊಪಿಕೊನಜೋಲ್ 25% ಇಸಿ (ಪ್ರತಿ ಲೀಟರ್ ನೀರಿಗೆ 1 ಮಿಲಿ) ಅಥವಾ ಟೆಬುಕೊನಜೋಲ್ (ಪ್ರತಿ ಲೀಟರ್ಗೆ 1 ಮಿಲಿ) ಸಿಂಪಡಿಸಬಹುದು, ನಂತರ ರೋಗದ ತೀವ್ರತೆಯನ್ನು ಅವಲಂಬಿಸಿ 25-30 ದಿನಗಳಲ್ಲಿ ಪ್ರೊಪಿನೆಬ್ 70% WP (ಪ್ರತಿ ಲೀಟರ್ ನೀರಿಗೆ 2 ಗ್ರಾಂ) ಎರಡನೇ ಸುತ್ತಿನ ಸಿಂಪಡಣೆಯನ್ನು ಮಾಡಬಹುದು. 200 ಲೀಟರ್ ದ್ರಾವಣದಲ್ಲಿ 100 ಮಿಲಿ ದ್ರಾವಣದೊಂದಿಗೆ ಸರ್ಫ್ಯಾಕ್ಟಂಟ್ಗಳು/ಸ್ಟಿಕ್ಕರ್ಗಳನ್ನು ಸೇರಿಸಬಹುದು. ಸಸ್ಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಬಾಧಿತ ಮರಗಳ ತ್ವರಿತ ಚೇತರಿಕೆಗೆ ಮಣ್ಣು ಪರೀಕ್ಷೆ ಆಧಾರಿತ ಸಮತೋಲಿತ ಪೋಷಕಾಂಶ ನಿರ್ವಹಣೆಯನ್ನು ಅನುಸರಿಸಬೇಕು ಎಂದು ಸಚಿವಾಲಯವು ಉತ್ತರದಲ್ಲಿ ತಿಳಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.


