ಅಡಿಕೆ ಬೆಳೆವಿಸ್ತರಣೆಗೆ ಪರಿಹಾರ ಏನು ? | ಅಡಿಕೆ ಧಾರಣೆ ಉಳಿಸಿಕೊಳ್ಳಲು ಬೆಳೆಗಾರರು ಏನು ಮಾಡಬಹುದು ?

October 11, 2023
11:01 AM
ಇತ್ತೀಚೆಗೆ ಅಡಿಕೆ ಬೆಳೆ ವಿಸ್ತರಣೆ ಭಾರೀ ಸದ್ದು ಮಾಡುತ್ತಿರುವ ವಿಷಯ. ಅದೇ ವೇಳೆ ಈಚೆಗೆ ಮೇಘಾಲಯದ ವಿಜ್ಞಾನಿಗಳು‌ ಅಡಿಕೆ ಸಿಪ್ಪೆಯಿಂದ ಕೋಟ್ ಮಾಡಿದ್ದು ಸುದ್ದಿಯಾಗಿತ್ತು. ಅಡಿಕೆ ಚೊಗರಿನಲ್ಲಿ ಸೀರೆಗೆ ಬಣ್ಣ ಹಾಕಿದ್ದೂ ಹೊಸ ಪ್ರಯೋಗವೆನಿಸಿತ್ತು. ಇದೀಗ ಬೆಳೆ ವಿಸ್ತರಣೆ, ಧಾರಣೆ ಸಮಸ್ಯೆ ನಡುವೆ ಹೊಸದೊಂದು ಚಿಂತನೆಯನ್ನು ಪ್ರಬಂಧ ಅಂಬುತೀರ್ಥ ಅವರು ಹೇಳಿದ್ದಾರೆ ಇಲ್ಲಿ...

ಇತ್ತೀಚೆಗೆ ಅಡಿಕೆ ಬೆಳೆ ವಿಸ್ತರಣೆ ಭಾರೀ ಸದ್ದು ಮಾಡುತ್ತಿರುವ ವಿಷಯ. ಅದೇ ವೇಳೆ ಈಚೆಗೆ ಮೇಘಾಲಯದ ವಿಜ್ಞಾನಿಗಳು‌ ಅಡಿಕೆ ಸಿಪ್ಪೆಯಿಂದ ಕೋಟ್ ಮಾಡಿದ್ದು ಸುದ್ದಿಯಾಗಿತ್ತು. ಅಡಿಕೆ ಚೊಗರಿನಲ್ಲಿ ಸೀರೆಗೆ ಬಣ್ಣ ಹಾಕಿದ್ದೂ ಹೊಸ ಪ್ರಯೋಗವೆನಿಸಿತ್ತು. ಬಹಳ ವರ್ಷಗಳ ಹಿಂದೆ ಮಲೆನಾಡು ಮೂಲದ ಯುವ ಸಂಶೋಧಕರಿಂದ ಅಡಿಕೆ ಟೀ ಕೂಡ ತಯಾರಾಗಿ ಅಡಿಕೆ ಬೆಳೆಗಾರರ ಮನದಲ್ಲಿ ಹೊಸ ಸಾದ್ಯತೆಯ ಬರವಸೆ ಮೂಡಿತ್ತು. ಆದರೆ ಬೃಹತ್ ಪ್ರಮಾಣದಲ್ಲಿ ವಿಸ್ತರಣೆಯಾಗುವ ಅಡಿಕೆ ಬೆಳೆ “ಬೆಲೆ ” ನಿಯಂತ್ರಣವಾಗಿಡುವಲ್ಲಿ ಈ ಯಾವ ಪ್ರಯತ್ನ ಪ್ತಯೋಗಗಳೂ ಯಶಸ್ವಿಯಾಗಿಲ್ಲ…!. 

Advertisement
Advertisement

ಅಡಿಕೆಯು ತತ್ಸಮ ವಾದರೆ ತದ್ಬವ ಗುಟಕಾ , ಅಷ್ಟೇ…!. ಒಂದು ಪೌಚ್ ಪ್ಯಾಕೆಟ್ ನಲ್ಲಿ ಮೂರು ಗ್ರಾಂ ಅಡಿಕೆ ಪುಡಿ ಗುಟ್ಕಾ ಮಾಧ್ಯಮ ಸೇರುವುದೊಂದೇ ಅಡಿಕೆಯ ಬೆಳೆ ಬೆಲೆಗೆ ಆಧಾರ….!. ಅಡಿಕೆ ಬೆಳೆಗಾರರೆಲ್ಲಾ ‘”ಗುಟ್ಕಾದಾತ” ರು ಅಷ್ಟೇ.
ಇದನ್ನು ನಾನೂ ಒಬ್ಬ ಅಡಿಕೆ ಬೆಳೆಗಾರನಾಗಿ ಬಹಳ ದುಃಖ ದಿಂದ ಹೇಳಿಕೊಳ್ಳುತ್ತಿದ್ದೇನೆ.

Advertisement

ಇಪ್ಪತ್ತು ವರ್ಷಗಳ ಹಿಂದೆ ಗುಟ್ಕಾ ಬ್ಯಾನ್ ಮುನ್ನೆಲೆಗೆ ಬಂದಾಗ ಸಾಗರದ ಹೆಗ್ಗೋಡಿನ ನೀನಾಸಂ ಸ್ಥಾಪಕ ದಿವಂಗತ ಕೆ ವಿ ಸುಬ್ಬಣ್ಣ ರವರು “ಅಡಿಕೆ ಗೆ ಗುಟ್ಕಾ ಆಧಾರವಾಗಿರುವುದಾದರೆ ನಮಗೆ ಅಡಿಕೆ ಬೆಳೆಯೇ ಬೇಡ ” ಎಂಬಂತಹ ಹೇಳಿಕೆಯನ್ನು ನೀಡಿದ್ದರು. ಅಂದರೆ ಗುಟ್ಕಾ ಹಾನಿಕಾರಕ .; ಅಂತಹ ಗುಟ್ಕಾ ಮಾರಾಟದ ಲಾಭ ನಮ್ಮ “ಅನ್ನದ ಮೂಲ” ವಾಗುವುದು ಬೇಡ ಎಂಬ ನಿಲವು ಅವರದಾಗಿತ್ತು.

ಗುಟ್ಕಾ ತಿಂದವ “ಗುಟ್ಕಾ ದಾತೋ ಸುಖಿ ಭವ” ಎಂದು ಹಾರೈಸಿ ಗುಟ್ಕಾದಾತ ನ ಕುಟುಂಬಕ್ಕೆ ಸುಖ ನೆಮ್ಮದಿ ಬಯಸುತ್ತಾನಾ…?. ಆದರೆ ನಾವು ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರು ಈ ಗುಟ್ಕಾ ಬರುವ ಮುಂಚೆಯೇ ಅಡಿಕೆ ಬೆಳೆಯುತ್ತಿದ್ದೆವು.
ಈಗಲೂ ಬೆಳೆಯುತ್ತಿದ್ದೇವೆ.ನಮ್ಮ ಮಲೆನಾಡಿನಲ್ಲಿ ಅಡಿಕೆ ಈ ಇಪ್ಪತ್ತೈದು ವರ್ಷಗಳ ಹಿಂದಿನ ತನಕವೂ ಸಂಪೂರ್ಣ
ಕೈ ಸುಲಿತದಲ್ಲಿ ಸಂಸ್ಕರಣೆಯಾಗುತ್ತಿತ್ತು.

Advertisement

ಮಲೆನಾಡು ತೀರ್ಥಹಳ್ಳಿಯ ಅಡಿಕೆಯಲ್ಲಿ ಮೊದಲ ಮಾದರಿ ಹಸ -ಹಗುರ ತೂಕದ ಕರ್ಜೂರದ ನಮೂನೆಯ ಎಳೆ ಅಡಿಕೆ. ಇದು ರಾಶಿ ಇಡಿ ಮಾದರಿಯ ಅಡಿಕೆಯ ಲೆಕ್ಕಾಚಾರ ಹಾಕಿದರೆ ಸುಮಾರು ಎರಡು ಪಟ್ಟಿಗಿಂತ ತುಸು ಹೆಚ್ಚೇ ಅಡಿಕೆ ಬೇಕಾಗುತ್ತದೆ. ಇದು ಅಡಿಕೆ ಮಾದರಿಯಲ್ಲಿ ಎಲ್ಲಕ್ಕಿಂತ ಹೆಚ್ಚು ದರ ಮಾರುಕಟ್ಟೆಯಲ್ಲಿ ನಮೂದಾಗುತ್ತದೆ.

ಬೆಟ್ಟೆ – ಇದು ಎರಡನೇ ದರ್ಜೆ ಅಡಿಕೆ.ಇದು ಹಸಿ ಅಡಿಕೆಯನ್ನ “ಹೆಚ್ಚುವಷ್ಟು” ಗಟ್ಟಿ ಇರುತ್ತದೆ. ಇದು ಅಡಿಕೆಯಲ್ಲಿ ಎರಡನೇ ಅತಿ ಹೆಚ್ಚು ಬೆಲೆಯುಳ್ಳದ್ದಾಗಿದೆ. ಇಡಿ ಅಥವಾ ರಾಶಿ ಇಡಿ – ಇದು ಹೆಚ್ಚಲು ಬರದಷ್ಟು ಗಟ್ಟಿ ಆದರೆ ಸುಲಿಯಲು ಬರುವ ಗಟ್ಟಿ ಅಡಿಕೆ ಮಾದರಿ.

Advertisement

ಇದು ಅಡಿಕೆ ದರ ದ ಲೆಕ್ಕಾಚಾರದಲ್ಲಿ ಮೂರನೇ ದರ್ಜೆ. ಗೊರಬಲು – ಇದು ಹಸಿ ಅಡಿಕೆ ಸುಲಿಯುವ ಸಂಧರ್ಭದಲ್ಲಿ ಅತ್ತ ಚಾಲಿ ಸಿಪ್ಪೆ ಗೋಟು ಅಲ್ಲದ ಇತ್ತ ರಾಶಿ ಇಡಿಯೂ ಅಲ್ಲದ ಹಸಿ ಅಡಿಕೆಯ ಸುತ್ತಲಿನ ಹೊದಿಕೆ ಯ ಸಹಿತ ಬರುವ ಒರಟಾದ ಅಡಿಕೆ.
ಇದು ಅಡಿಕೆ ಮಾದರಿಯಲ್ಲಿ ನಾಲ್ಕನೇ ದರ್ಜೆ ಅಡಿಕೆ. ಬೆಲೆಯೂ ಕಡಿಮೆ.

ಸಿಪ್ಪೆ ಗೋಟು – ಇದು ಸುಲಿಯಲು ಬಾರದ ಅಡಿಕೆ. ಇದಕ್ಕೆ ಸುಲಿದ ಒಣ ಅಡಿಕೆ ಚಾಲಿ ಯ ಅರ್ಧ ದಷ್ಟು ಬೆಲೆ ಇರುತ್ತದೆ.
ಚಾಲಿ – ಒಣ ಸಿಪ್ಪೆ ಗೋಟು ಸುಲಿದರೆ ಸಿಗುವ ಬೇಯಿಸದ ಆದರೆ ಸುಲಿದ ಒಣ ಅಡಿಕೆ. ಇದಕ್ಕೆ ಸಾಮಾನ್ಯವಾಗಿ ಸಿಪ್ಪೆ ಗೋಟಿನ‌ ಎರಡು ಪಟ್ಟು ಬೆಲೆ ಇರುತ್ತದೆ.

Advertisement

ಕರಾವಳಿಯ ಅಡಿಕೆ ಸಾಮಾನ್ಯವಾಗಿ ಚಾಲಿ ಮಾದರಿಯೇ ಹೆಚ್ಚು. ಆದರೆ ಅಲ್ಲಿ ಸಿಗುವ ಬೆಲೆ ಮಲೆನಾಡಿನಲ್ಲಿ ಇಲ್ಲ. ಮಲೆನಾಡಿನಲ್ಲಿ ಹಸಿ ಸುಲಿದೇ ಸಂಸ್ಕರಣೆ ಮಾಡುವುದು.

ಗುಟ್ಕಾ ಕಂಪನಿಯ ಗ್ರಾಹಕ ಅಡಿಕೆ ಗೆ ಬರುವ ಮುಂಚೆ ತುಂಬಾ ಶಿಸ್ತಾಗಿ ಹಸ ಬೆಟ್ಟೆ ರಾಶಿ ಇಡಿ ಮಾದರಿಗೆ ಬಣ್ಣ ಗುಣಮಟ್ಟದ ಆಧಾರದ ಮೇಲೆ ಬೆಲೆ ಇರುತ್ತಿತ್ತು.

Advertisement

ಬಹುಶಃ ಉತ್ತರ ಭಾರತದ ವ್ಯಾಪಾರಿಗಳು ಅಡಿಕೆಯನ್ನ ಇಲ್ಲಿಂದ ಖರೀದಿಸಿ ಅಲ್ಲಿಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದರು.
ಅಲ್ಲಿ ಆ ಅಡಿಕೆ ಯನ್ನು ನೇರವಾಗಿಯೇ ಬಳಸುತ್ತಿದ್ದರು. ಹಾಗಾಗಿ ಮಲೆನಾಡಿನ ಅಡಿಕೆಯ ರುಚಿ‌ ಬಣ್ಣಕ್ಕೆ ವಿಶೇಷ ಬೆಲೆ ಇರುತ್ತಿತ್ತು.

ಯಾವಾಗ ಗುಟ್ಕಾ ಕಂಪನಿ ಅಡಿಕೆ ಯನ್ನು ಔದ್ಯಮಿಕ ಕಚ್ಚಾ ವಸ್ತುಗಳಾಗಿ‌ ಖರೀದಿಸ ತೊಡಗಿತೋ ಆಗ ಅಡಿಕೆ ಬೆಲೆ ಬಂತು. ಆದರೆ ಅಡಿಕೆಯ “ಗುಣಮಟ್ಟ ” ಕೇಳುವವರಿಲ್ಲವಾಯಿತು. ಇದೇ ಸಾಂಪ್ರದಾಯಿಕ ಅಡಿಕೆ ಬೆಳೆಗಾರರಿಗೆ ದೊಡ್ಡ ಆಘಾತವಾಗಿರುವುದು….!!

Advertisement

ಗುಟ್ಕಾ ತಯಾರಿಕನಿಗೆ ವಿಷಯುಕ್ತ ಚೋದಕ ಡ್ರಗ್ಸ್ ಸೇರಿಸಿ‌ , ಆ ಡ್ರಗ್ಸ್ ಚೋದಕಗಳನ್ನ‌ ಆ ಅಡಿಕೆ ಪುಡಿ‌ ಬಹುಕಾಲ ಉಳಿಸಿಕೊಳ್ಳಲು durability  ಇರುವ ಏಕೈಕ ಮಾದ್ಯಮ “ಅಡಿಕೆ”ಮಾತ್ರ.

ಈ ಗುಟ್ಕಾಕ್ಕೂ expiry  ಇರುತ್ತದೆ. ‌ ‌expiry ಮುಗಿದ ಮೇಲೆ ಈ ಗುಟ್ಕಾ ಪುಡಿ ವಿಷ ಯುಕ್ತವಾಗುತ್ತದೆ…‌ ಕಹಿಯಾಗುತ್ತದೆ.
ಹೆಚ್ಚು ಕಾಲ ಚೋದಕವನ್ನ ಇಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಏಕೈಕ ಮಾದ್ಯಮ ಅಡಿಕೆಯಾಗಿರುವುದೂ ಮತ್ತು ಸಮಾಜದಲ್ಲಿ ಅಡಿಕೆ ಗೊಂದು ಗೌರವಯುತ ಪೂಜನೀಯ ಸ್ಥಾನ ಇರುವುದರಿಂದ ಗುಟ್ಕಾ ದೊರೆಗಳು ಅಡಿಕೆಯನ್ನು ಗುರಾಣಿ ಯಾಗಿಟ್ಟುಕೊಂಡು ಅಡಿಕೆಯನ್ನು ಸಾಕಷ್ಟು ಬೆಲೆ ಕೊಟ್ಟು ಖರೀದಿಸುತ್ತಿದ್ದಾರೆ. ಇಲ್ಲ ಅಂದರೆ ಈ ನಿಷೇಧಿತ ಚೋದಕವನ್ನು ಮುಕ್ತವಾಗಿ ಮಾರಾಟ ಮಾಡಲು ಇವರಿಗೆ ಹೇಗೆ ಸಾದ್ಯವಾಗುತ್ತಿತ್ತು….?

Advertisement

ಈ ಗುಟ್ಕಾದವರು ಅಡಿಕೆಯ ವಿಷಯದಲ್ಲಿ ನೋಡುವ ಏಕೈಕ ಗುಣ ಎಂದರೆ ಅಡಿಕೆಯ‌” ಗಟ್ಟಿ ತನ ಮಾತ್ರ”. ಅಡಿಕೆ ಕನಿಷ್ಠ ಮೂರು ವರ್ಷಗಳ ತನಕ ಉತ್ತಮ ವಾತಾವರಣದಲ್ಲಿ self life  ಹೊಂದಿದೆ.

ಹಿಂದೆ ಭಾರತದಾದ್ಯಂತ ಎಲ್ಲರ ಕೈಲೂ‌ ‘ಎಲೆ ಅಡಿಕೆ ಚೀಲ” ಸಾಮಾನ್ಯವಾಗಿರುತ್ತಿತ್ತು. ಎರಡು ಜನ ಬಸ್ನಲ್ಲಿ ಅಕ್ಕ ಪಕ್ಕ ಕೂತಿದ್ದರು ಒಬ್ಬರಿಗೊಬ್ಬರು ಸ್ನೇಹಿತರಾಗಲು ಒಂದು ವೀಳ್ಯದೆಲೆ ಯೋ, ಒಂದು ಅಡಿಕೆ ಯೋ , ಒಂದು ಚೂರು ಸುಣ್ಣ ವೋ ,ಒಂದು ಚಿಕ್ಕ ತುಂಡು ಹೊಗೆಸೊಪ್ಪೋ ಕಾರಣವಾಗುತ್ತಿತ್ತು. ಹಿಂದಿನ ಕಾಲದ ನಾಣ್ಯ ವರಹ ಗಳನ್ನು ಇಟ್ಟುಕೊಳ್ಳುವಂತಹ ಒಂದು ಬಟ್ಟೆಯ ಚೀಲ. ಅದರಲ್ಲಿ ಎಲೆ ಅಡಿಕೆ ಸುಣ್ಣದ ಡಬ್ಬಿ ಇರುತ್ತಿತ್ತು.

Advertisement

ಕಾಲ ಬದಾಲಾಯಿತು., ಈಗ ಬಹುತೇಕ ಅಡಿಕೆ ಬೆಳೆಗಾರರ ಮನೆಯ ಟಿಪಾಯಿ ಮೇಲೆ ಎಲೆ ಅಡಿಕೆ ತಟ್ಟೆ ಇರುವುದಿಲ್ಲ.
ಸ್ವಚ್ಛ ಹಲ್ಲುಗಳು , ಉಗಳುವ ಜಾಗದ ಕೊರತೆ… .ಹೀಗಿನೆಲ್ಲಾ ಕಾರಣಕ್ಕೆ ಎಲೆ ಅಡಿಕೆ ಹಾಕುವವರ ಸಂಖ್ಯೆ ಗಂಭೀರ ಪ್ರಮಾಣದಲ್ಲಿ ಕಡಿಮೆಯಾತು. ಆದರೆ ಪವಿತ್ರ ತಾಂಬೂಲದ ಸ್ಥಾನದಲ್ಲಿ ‌ ಗುಟ್ಕಾ ಬಂದಿದೆ.

ಸಾಂಪ್ರದಾಯಿಕ ಅಡಿಕೆ ಬೆಳೆಗಾರರ ಮಹಾ ಶತ್ರು “ಗುಟ್ಕಾ”…!!!!. ಆಶ್ಚರ್ಯ ವಾದರೂ ಪರಮ ಸತ್ಯದ ಮಾತಿದು.

Advertisement

ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ಗಲ್ಲಿ ಗಲ್ಲಿಯಲ್ಲೂ ಪಾನ್ ಬೀಡಾ ಶಾಪ್ ಗಳು ಇರುತ್ತಿತ್ತು. ‌ಇದೀಗ ಒಂದೂರಿಗೆ ಒಂದೆರಡೂ ಪಾನ್ ಶಾಪ್ ಗಳಿಲ್ಲ…!! ಈ ಪಾನ್ ಶಾಪ್ ಗಳು ಸಾಂಪ್ರದಾಯಿಕ ಅಡಿಕೆ ಉತ್ಪನ್ನ ದ ಮುಖ್ಯ ಖರೀದಿದಾರರಾಗಿದ್ದರು.

ಗುಟ್ಕಾ ಪ್ಯಾಕೆಟ್ ಗಳು ಇವತ್ತು ಅಂಗಡಿ ಗಳಲ್ಲಿ ಮಾವಿನ ತೋರಣ ಹಾಕಿದಂತೆ ಹಾಕಿರುತ್ತಾರೆ.‌ ಕಮಟು ವಾಸನೆಯ ಗುಟ್ಕಾ ಖಂಡಿತವಾಗಿಯೂ ಅನಾರೋಗ್ಯ ಕಾರಿಯೇ… ಅದೇಕೋ ಗೊತ್ತಿಲ್ಲ… ಎಲೆ ಅಡಿಕೆ ತಾಂಬೂಲ ಆಧುನಿಕೀಕರಣವಾಗಲೇ ಇಲ್ಲ….!!

Advertisement

ಅಕಸ್ಮಾತ್ತಾಗಿ ಮಾರುಕಟ್ಟೆಗೆ ಗುಟ್ಕಾ ಬರದೇ ಎಲೆ ಅಡಿಕೆ ತಾಂಬೂಲ ವೇ ಇದ್ದಿದ್ದರೆ ಇಂದು ಸಾಂಪ್ರದಾಯಿಕ ಅಡಿಕೆಗೆ ಬಂಗಾರದ ಬೆಲೆ ಇರುತ್ತಿತ್ತು.

Native Arecanut….. ಹೌದು‌‌‌‌… ಶಿರಸಿ ಸಿದ್ದಾಪುರ ದಿಂದ ಕಾಸರಗೋಡಿನ ತನಕ ಪ್ರತಿ ಐವತ್ತು ಕಿಲೋಮೀಟರ್ ಗೆ ಒಂದು ಮಾದರಿಯ ಅಡಿಕೆ ಉತ್ಪನ್ನ ಬರುತ್ತದೆ. ಇದು ಅತ್ಯಂತ ವೈಶಿಷ್ಟ್ಯ ಪೂರ್ಣ…

Advertisement

ತೀರ್ಥಹಳ್ಳಿ ಟಾಲ್ ತಳಿಯ ಅಡಿಕೆ ಬೀಜವನ್ನು ನೀವು ದಾವಣಗೆರೆಯೋ ಮೈಸೂರಿಗೆ ತೆಗೆದುಕೊಂಡು ಹೋಗಿ ನೆಟ್ಟು ತೋಟ ಮಾಡಿದರೆ ಆ ಅಡಿಕೆ ಮರದಲ್ಲಿ ಮಲೆನಾಡಿನ ಮಣ್ಣಿನ ಘಮದ ಸ್ವಾದದ ಅಡಿಕೆ ಬರುವುದಿಲ್ಲ.

ತೀರ್ಥಹಳ್ಳಿಯಿಂದ ಅರವತ್ತು ಕಿಲೋಮೀಟರ್ ದೂರದ ಸಾಗರದ ಅಡಿಕೆ ಮಾದರಿ ರುಚಿ ಬೇರೆ. ಸಾಗರದಿಂದ ಅರವತ್ತು ಕಿಲೋಮೀಟರ್ ದೂರದ ಶಿರಸಿ ಯ ಅಡಿಕೆ ಮಾದರಿ ರುಚಿ ಬೇರೆ. ಮಂಗಳೂರು ಪುತ್ತೂರಿನ ಅಡಿಕೆ ಮಾದರಿ ರುಚಿ ಬೇರೆ…

Advertisement

ಇದರಲ್ಲೂ ಒಂದು ವಿಶೇಷವೆಂದರೆ ಮಲೆನಾಡು ಕರಾವಳಿಯ ಹೊರತಾಗಿ ದಾವಣಗೆರೆ, ಚಿತ್ರದುರ್ಗ, ತುಮಕೂರು ,‌ ಮೈಸೂರು ಮುಂತಾದ ಬಯಲು ಸೀಮೆ ಪ್ರದೇಶದ ಅಡಿಕೆ ಮಾದರಿ ಸಾಮಾನ್ಯವಾಗಿ ಒಂದೇ ಬಗೆಯಲ್ಲಿ ಇರುತ್ತದೆ.

ಈಗ ನಾನು ಮೊದಲು ಪ್ರಸ್ತಾಪ ಮಾಡಿದ ತೀರ್ಥಹಳ್ಳಿ ಮಾದರಿ ಅಡಿಕೆಯ ಬಗ್ಗೆ ಒಂದು ಚಿಕ್ಕ ಚಿಂತನೆ ಮಾಡೋಣ..
ಈಗ್ಗೆ ಮೂರು ತಿಂಗಳ ಹಿಂದೆ ಅಡಿಕೆ ರಾಶಿ ಇಡಿ ಗೆ ಕ್ವಿಂಟಾಲ್ ಗೆ 56000 ರೂಪಾಯಿಗೆ ಏರಿಕೆಯಾಗಿತ್ತು.‌ ಇದೇ ಸಂdರ್ಭದಲ್ಲಿ ಕೈ ಸುಲಿತದ ಬೆಟ್ಟೆ ಅಡಿಕೆ ಗೆ ಕ್ವಿಂಟಾಲ್ ಗೆ 51000 ರೂಪಾಯಿ ಇತ್ತು. ಇದರಲ್ಲೂ ತೀರ್ಥಹಳ್ಳಿ ಶಿವಮೊಗ್ಗ ಸಾಗರ ಪ್ರಾಂತ್ಯದ ಸಾಂಪ್ರದಾಯಿಕ ಗುಣಮಟ್ಟದ ರಾಶಿ ಇಡಿ ಅಡಿಕೆ ಯ ಮಾರುಕಟ್ಟೆ”ಬೆಲೆ” ಗಿಂತ ಚೆನ್ನಾಗಿರಿ‌ ದಾವಣಗೆರೆ ಚಿತ್ರದುರ್ಗ ದ ಮಾರುಕಟ್ಟೆಯ ರಾಶಿ ಇಡಿ ಬೆಲೆ ಹೆಚ್ಚಿನ ಬೆಲೆಗೆ ವ್ಯಾಪಾರವಾಯಿತು.! ಇದು ಅಡಿಕೆ ಗುಣಮಟ್ಟಕ್ಕೆ ಬೆಲೆ ಇಲ್ಲ ಎಂಬುದಕ್ಕೆ ಉದಾಹರಣೆಯಾಗಿದೆ.

Advertisement

ಮಲೆನಾಡಿನ ಅಡಿಕೆಯನ್ನು ಕೈಯಲ್ಲಿ ಸುಲಿದರೂ , ಮಿಷನ್ ನಲ್ಲಿ ಸುಲಿದರೂ ಒಂದೇ ಬೆಲೆ. ಕೈಯಿಂದ ಸುಲಿದ ಅಡಿಕೆಗೂ ಮಿಷನ್ ‌ನಲ್ಲಿ ಸುಲಿದ ಅಡಿಕೆಗೂ ರುಚಿಯಲ್ಲಿ ವ್ಯತ್ಯಾಸ ವಿರುತ್ತದೆ, ಬಣ್ಣದಲ್ಲೂ ವ್ಯತ್ಯಾಸ ಇರುತ್ತದೆ. ಆದರೂ ಮಲೆನಾಡಿನ ಚೊಗರಿನ‌ ಗುಣಮಟ್ಟ ಮತ್ತು ಭೂಮಿಯ ಮಣ್ಣಿನ ಆಧಾರಿದ ಸ್ವಾದಕ್ಕೆ ಮಾರುಕಟ್ಟೆಯಲ್ಲಿ ಯಾವುದೇ ಬೆಲೆಯೂ ಇಲ್ಲ…!! ಮಲೆನಾಡು ಅಡಿಕೆ- ಕರಾವಳಿ‌ ಅಡಿಕೆ ಎಂಬ native  ಮಾನ್ಯತೆ ಗೆ ವಿಶೇಷ “ಬೆಲೆ” ಇಲ್ಲ…!!

ಇದು ಚಿಂತನೆ ಮಾಡಬೇಕಾದ ವಿಚಾರ ಅಲ್ವ..?! . ಅಡಿಕೆ ಮಾಗಿ ಬೆಳೆದರೆ ಎರಡು ಕ್ವಿಂಟಾಲ್ “ರಾಶಿ ಇಡಿ” ಆಗುತ್ತಿದ್ದ “ಹಸ ಮಾದರಿ” ಗೆ ಶಿವಮೊಗ್ಗ ತೀರ್ಥಹಳ್ಳಿ ಯಲ್ಲಿ ಎಪ್ಪತ್ತು ಸಾವಿರದಿಂದ ಎಂಬತ್ತು ಸಾವಿರದ ತನಕ‌ ಟೆಂಡರುದಾರರು ದರ ಬರೆದರೂ ಖರೀದಿ ಯಾಗುವ “ಹಸ” ದ ಬೆಲೆ ರೂಪಾಯಿ 54000 ದಿಂದ 64000 ಮಾತ್ರ…!!! ಇವತ್ತು ಅತ್ಯಂತ ಸೂಕ್ಷ್ಮತಮವಾಗಿ‌ ಓಜೋನ್ ಪದರದಂತಹ ಅಡಿಕೆ ಮೇಲು ಹೊದಿಕೆ ಇರುವ ಚೊಗರು ಹಿಂಡದ ಮೂಲ ಸ್ವಾದ ಇರುವ “ಸುಲಿದ ಅಡಿಕೆ ”
ಯಾರಿಗೂ ಬೇಡ…!!!

Advertisement

“ಕುಟ್ಟಿ ಪುಡಿ ಮಾಡುವ ಗುಟ್ಕಾ ಕಂಪನಿಯ ಅಡಿಕೆ ಖರೀದಿದಾರನಿಗೆ ಅಡಿಕೆ Quantity  ಮಾತ್ರ ಮುಖ್ಯ…!! ಇದೇ ಸಾಂಪ್ರದಾಯಿಕ ಅಡಿಕೆ ಬೆಳೆಗಾರರ ಸೋಲು…

ಅಕಸ್ಮಾತ್ತಾಗಿ ಸಾಂಪ್ರದಾಯಿಕ ಅಡಿಕೆ ಗೆ ಬೇಡಿಕೆಯಿದ್ದಿದ್ದರೆ ನಮ್ಮ ಹಸ ಬೆಟ್ಟೆ ಇಡಿ ಅಡಿಕೆಗೆ ಕ್ವಿಂಟಾಲ್ ಗೆ ಒಂದು ಲಕ್ಷ ರೂಪಾಯಿ ಮಾರುಕಟ್ಟೆ ಮೌಲ್ಯ ಸಿಗುತ್ತಿತ್ತು….!! ಮತ್ತು ಮಲೆನಾಡು ಕರಾವಳಿಯ ಅಡಿಕೆ ಗೆ ಅಡಿಕೆ ಬೆಳೆ ಸಾಂಪ್ರದಾಯಿಕೇತರ ಜಾಗದಲ್ಲಿ ಎಷ್ಟೇ ವಿಸ್ತರಣೆ ಯಾದರೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಯಾವತ್ತೂ ಇರುತ್ತಿತ್ತು…

Advertisement

ಮಲೆನಾಡು ಕರಾವಳಿಯಲ್ಲಿ ಸಾವಿರ ಸಾವಿರ ವರ್ಷಕ್ಕೂ ಅಡಿಕೆ /ಅಡಿಕೆ ಬೆಳೆಗಾರರು ಉಳಿಯುತ್ತಿದ್ದರು.
ಮಲೆನಾಡು ಕರಾವಳಿಯ ಯುವಕರು‌ ನಗರ ಪ್ರದೇಶಕ್ಕೆ ವಲಸೆ ಹೋಗಿ‌ ಮಲೆನಾಡು ಕರಾವಳಿ ಸ್ವಾತಂತ್ರ್ಯ ವೃದ್ದಾಶ್ರಮ ವಾಗುತ್ತಿರಲಿಲ್ಲ. ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರ ಮನೆಯ ಯುವಕರಿಗೆ ಮದುವೆಗೆ ಹೆಣ್ಣು ಸಿಕ್ಕಿ ಮದುವೆ ಆಗುತ್ತಿತ್ತು.ಮಲೆನಾಡು ಕರಾವಳಿಯ ಅಡಿಕೆಯ ಎಲೆಚುಕ್ಕಿ ರೋಗ ಮತ್ತು ಹಳದಿ ಎಲೆ ರೋಗಕ್ಕೆ ರೈತರು ಪರಿಹಾರ ಮತ್ತು ಜಾಗೃತೆಯನ್ನ ಇನ್ನಷ್ಟು ಮಾಡಿ ಅಡಿಕೆ ಯನ್ನು ಉಳಿಸಿ ಕೊಳ್ಳುತ್ತಿದ್ದರು ಎನಿಸುತ್ತದೆ…

ಇದೇ ಗುಟ್ಕಾ ಕಂಪನಿಯಿಂದ ಸಾಂಪ್ರದಾಯಿಕ ಅಡಿಕೆ ಬೆಳೆಗಾರರ ಮೇಲಿನ‌ ಪ್ರಹಾರ…!! ಅಕಸ್ಮಾತ್ತಾಗಿ ಅಡಿಕೆ ಉತ್ಪನ್ನ ಕ್ಕೆ ಗುಟ್ಕಾ ವೇ ಅಂತಿಮ ಪರಮೋಚ್ಚ ಆಧಾರ ವಾಗದಿದ್ದಲ್ಲಿ ಅಡಿಕೆ ಈ ಪರಿ ವಿಸ್ತರಣೆ ಯಾಗುತ್ತಿರಲಿಲ್ಲ.

Advertisement

ಅಡಿಕೆ ಬಯಲು ಸೀಮೆಗೆ ಯಾಕೆ ವಿಸ್ತರಣೆಯಾಯಿತು…?:

ಇಪ್ಪತ್ತೈದು ವರ್ಷಗಳ ಹಿಂದೆ ಭದ್ರಾವತಿ ಯ ಖಾಸಗಿ ಸಕ್ಕರೆ ಕಾರ್ಖಾನೆ ನಿಲುಗಡೆಯಾದದ್ದು ಮತ್ತು ತಾಳೆ ಎಣ್ಣೆ ಕಾರ್ಖಾನೆ ವಿವಾದವಾಗಿ ನಿಂತು ಹೋಗಿದ್ದು.. ರೈತರು ಕಬ್ಬು ಬಿಟ್ಟು , ನೆಟ್ಟು ಎತ್ತರ ವಾಗಿದ್ದ ತಾಳೆ ಕಿತ್ತೊಗೆದು ಅಡಿಕೆ ನೆಟ್ಟರು.
ಭದ್ರೆಯ ಸುಭದ್ರ ನೀರಾವರಿಯ ಬತ್ತ ಬೆಳೆವ ಬಂಗಾರದ ಭೂಮಿಯಲ್ಲಿ ಸುಪುಷ್ಟಿಯಾಗಿ ಅಡಿಕೆ ಬೆಳೆದು ಬಯಲು ಸೀಮೆಯ ಕೃಷಿಕರಿಗೆ ಅಡಿಕೆ ಹೊಸ ಬರವಸೆಯ ಬೆಳೆ ಎನಿಸಿತು.

Advertisement

ಇದಕ್ಕೆ ಸರಿಯಾಗಿ‌ ಗುಟ್ಕಾ ಕಂಪನಿಯ ಖರೀದಿದಾರನಿಗೆ ಅಡಿಕೆ ಗುಣಮಟ್ಟ ಬೇಡವಾಗಿತ್ತು. ಎಲ್ಲಾ ಒಟ್ಟಾಗಿ ಅಡಿಕೆ ವಿಸ್ತರಣೆ ನಾಗಾಲೋಟದಿಂದ ಆಯಿತು….!! ಇವತ್ತು ಚೆನ್ನಾಗಿರಿ ಅಡಿಕೆ ಚಿತ್ರದುರ್ಗ ಅಡಿಕೆಯ ನಾಡಾಗಿದೆ.‌‌ ಮಲೆನಾಡು ಎಲೆಚುಕ್ಕಿ ಬೀಡಾಗಿದೆ…!! ಇದೆಲ್ಲಾ ಕೇವಲ ಇಪ್ಪತ್ತೈದು ವರ್ಷಗಳಲ್ಲಿ ಆದ ಬೆಳವಣಿಗೆ.

ಇರಲಿ…., ಈಗಲೂ‌ ಸಾಂಪ್ರದಾಯಿಕ ಅಡಿಕೆ ಬೆಳೆಗಾರರು ತಮ್ಮ ಅಡಿಕೆ ಉತ್ಪನ್ನವನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಲು ಯತ್ನಿಸಲು ಸಾಧ್ಯವೇ …? ಬೆಳೆಗಾರ ಒಂಟಿಯಾಗಿ ಈ ಪ್ರಯತ್ನ ಮಾಡಲಾರ‌..‌‌‌ ಮ್ಯಾಮ್ಕೋಸ್ ಮತ್ತು ಕ್ಯಾಂಪ್ಕೋ ಗಳು ಈ ಮೌಲ್ಯವರ್ಧನೆ ಯ ಬಗ್ಗೆ ಪ್ರಯೋಗ ಪ್ರಯತ್ನ ಮಾಡಬೇಕಿದೆ.

Advertisement

ಕ್ಯಾಂಪ್ಕೋ ಅಡಿಕೆ ಮೌಲ್ಯವರ್ಧನೆಯ ಅನೇಕ ಪ್ರಯತ್ನ ಮಾಡಿದೆ. ಆದರೆ ಎಲೆ ಅಡಿಕೆ ಸುಣ್ಣ ಹಾಕಿ ಸಾಂಪ್ರದಾಯಿಕವಾಗಿ ಮೆಲ್ಲುವ ಬಗೆಯಲ್ಲಿ ಮೌಲ್ಯವರ್ಧನೆ ಯಾಗಬೇಕು.

ಈಗ ಮಾರುಕಟ್ಟೆಯಲ್ಲಿರುವುದು “ಸುಗಂಧಿತ ಅಡಿಕೆ ಪುಡಿ” … ಆದರೆ ಇದಕ್ಕಿಂತ ಭಿನ್ನವಾಗಿ‌ ಅಡಿಕೆಯನ್ನು ಯಾರು ಬೇಕಾದರೂ ಅಗೆದು ನುಂಗುವುದು ಅಥವಾ ಅಗೆದು ಉಗುಳುವ ಮಾದರಿಯ ಚಾಕೊಲೇಟ್ , ಬಿಸ್ಕೇಟ್ ಮಾದರಿಯ ತಿನಿಸು ತಯಾರಿಸಿ “ದೇಸಿ” ಅಡಿಕೆ ಉಳಿಸಬೇಕಿದೆ.

Advertisement

ಈ ಕಾಲದವರು ಮೆಲ್ಲಲು ಅನುಕೂಲ ಆಕರ್ಷಣೀಯವಾಗಿ ರುಚಿಕರ ವಾಗಿ , ಒಂದು ವೇಳೆ ಅಡಿಕೆ ಯನ್ನು ನುಂಗಿದರೂ ಜೀರ್ಣವಾಗವಂತೆ ಇಲ್ಲವೇ ಅಡಿಕೆ ಚಾಕಲೇಟ್ ಮಾದರಿಯಲ್ಲಿ ಚೀಪುವಂತೆ ಅಡಿಕೆ ಸಂಸ್ಕರಣೆ ಆಗಬೇಕು.ಇದು ಯಾವುದೇ ಹೊರಗಿನ ಚೋದಕವನ್ನ ಬೆರಸದ “ಸ್ವಾಭಾವಿಕ ತಾಂಬೂಲ” ವಾಗ ಬೇಕು.

ಮಲೆನಾಡು ಕರಾವಳಿಯ ಸಾಂಪ್ರದಾಯಿಕ ಅಡಿಕೆ ದೇಶದಾದ್ಯಂತ ವ್ಯಾಪಾರವಾಗುತ್ತಿತ್ತು. ಆಗ ಚೆನ್ನಗಿರಿ , ದಾವಣಗೆರೆ, ಚಿತ್ರದುರ್ಗ ದ ಅಡಿಕೆ ಮಾರುಕಟ್ಟೆಯಲ್ಲಿ ಇರಲಿಲ್ಲ. ಅಕಸ್ಮಾತ್ತಾಗಿ ಆಗಲೂ ಈ ಬಯಲು ಸೀಮೆಯ ಅಡಿಕೆ ಇದ್ದಿದ್ದರೆ ಖಂಡಿತವಾಗಿಯೂ ನೇರವಾಗಿ ತಿನ್ನುವ ಗ್ರಾಹಕರು ಆ ಬಯಲು ಸೀಮೆಯ ಅಡಿಕೆಯನ್ನ ಖಂಡಿತವಾಗಿಯೂ ತಿನ್ನುತ್ತಿರಲಿಲ್ಲ.
ಇದೇ ಸಾಂಪ್ರದಾಯಿಕ ಅಡಿಕೆಗಿರುವ ಮಹತ್ವ…

Advertisement

ಮಲೆನಾಡಿನ ಸಾಂಪ್ರದಾಯಿಕವಾಗಿ ಕೈಯಿಂದ ಸುಲಿದ ಚೊಗರುಯುಕ್ತ ಅಡಿಕೆ ಅತ್ಯಂತ ಆರೋಗ್ಯವರ್ಧಕ‌. ಹಿಂದಿನವರು ಅಡಿಕೆಯನ್ನ ಕೇವಲ ಚಟಕ್ಕೆ ತಿನ್ನುತ್ತಿರಲಿಲ್ಲ. ಅಡಿಕೆ ಯಲ್ಲಿನ ಮನುಷ್ಯನನ್ನು ಆರೋಗ್ಯವಂತನನ್ನಾಗಿ ಉತ್ಸಾಹಿಯನ್ನಾಗಿ ಮಾಡುವ ಅಂಶಗಳು ಅಡಿಕೆ ಯಲ್ಲಿದ್ದದ್ದನ್ನ ಗಮನಿಸಿಯೇ ಅಡಿಕೆ ಯನ್ನು ಪೂಜನೀಯ ವಾಗಿ ಬಳಸಿ ತಾಂಬೂಲ ಮೆಲ್ಲುತ್ತಿದ್ದರು.

ಅಡಿಕೆಯಿಂದ ಏನೆಲ್ಲಾ ಸಂಸ್ಕರಣೆ ಮಾಡಿ ಮೌಲ್ಯವರ್ಧಿತ ಉತ್ಪನ್ನ ತಯಾರಿಸಿದರೂ ಅಡಿಕೆ ಯನ್ನು ಎಲೆ ಅಡಿಕೆ ಸುಣ್ಣ ದ ಪ್ರಾಥಮಿಕ ಬಳಕೆಯ ಯಥಾವತ್ ಸಂಸ್ಕರಿತ ಉತ್ಪನ್ನ ತಯಾರಿಸಲಿಲ್ಲ..!!

Advertisement

ಆಹಾರ ಸಂಶೋಧಕರು ಅಡಿಕೆಯ ಈ ಮಲೆನಾಡು ಕರಾವಳಿಯ ಪ್ರಾದೇಶಿಕ ವೈವಿಧ್ಯಮಯ ಅಡಿಕೆ ಉತ್ಪನ್ನ ಗಳನ್ನು ಬೇರೆ ಬೇರೆ ಮಾಡಿ ದೇಶ ವಿದೇಶಗಳಲ್ಲಿ ಆರೋಗ್ಯ ವರ್ದಕ ಆಹಾರೋತ್ಪನ್ನ ವಾಗಿ ಬಳಸಲು ಅನುಕೂಲವಾಗುವಂತಹ ಉತ್ಪನ್ನ ತಯಾರಿಸಿ ಮಾರುಕಟ್ಟೆ ವಿಸ್ತರಣೆ ಮಾಡಿದರೆ ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರು ಉಳಿತಾರೆ.‌

ಮ್ಯಾಮ್ಕೋಸ್  ಕ್ಯಾಂಪ್ಕೋಗಳು ಈ ತಾಂಬೂಲವನ್ನ‌ ಪ್ರತಿ‌ ಅಡಿಕೆ ವಲಯಕ್ಕೆ ತಕ್ಕಂತೆ ಪ್ರತ್ಯೇಕ ಉತ್ಪನ್ನ ತಯಾರಿಸಿ ಅದನ್ನು ದೇಶದ ಮೂಲೆ ಮೂಲಗೂ ತಲುಪಿಸಿ ಮಾರುಕಟ್ಟೆ ವಿಸ್ತರಣೆ ಮಾಡ ಬೇಕು. ಈ ಗುಟ್ಕಾ ಬರುವ ಮುಂಚೆ ಮಲೆನಾಡಿನ ಹಸ , ಮಲೆನಾಡಿನ ಬೆಟ್ಟೆ ಯನ್ನು ಯಾವ ಭಾಗದವರು ಖರೀದಿಸು ತ್ತಿದ್ದರು ಎಂಬ ಬಗ್ಗೆ ಅಧ್ಯಯನ ಮಾಡಿ ಆ ದಿಕ್ಕಿನಲ್ಲಿ ಪ್ರಯತ್ನ ಪಟ್ಟು ಮರಳಿ ಮಾರುಕಟ್ಟೆ ಹೊಂದಾಣಿಕೆ ಮಾಡಿಕೊಳ್ಳ ಬೇಕು. ಇದಕ್ಕೆಲ್ಲ ಈಗಿನ ಆಧುನಿಕ online ಮಾರುಕಟ್ಟೆ ಯನ್ನೂ ಬಳಸಿಕೊಳ್ಳ ಬೇಕಿದೆ.

Advertisement

ಕ್ಯಾಂಪ್ಕೋ ಈಗ ತಯಾರಿಸುವ ಚಾಕೊಲೇಟ್ ಗಳು ಕೂಡ ಅತ್ಯುತ್ತಮ ವಾಗಿದೆ . ಆದರೆ ಬಹುರಾಷ್ಟ್ರೀಯ ಕಂಪನಿಗಳ ಚಾಕೊಲೇಟ್ ಗಳು ನಮ್ಮಲ್ಲಿ ಮೂಲೆ ಮೂಲೆಗಳಲ್ಲೂ ಸಿಗುತ್ತದೆ. ಈ ದೃಷ್ಟಿಯಿಂದ ನೋಡಿದರೆ ನಮ್ಮ ಕ್ಯಾಂಪ್ಕೋ ಮಾರುಕಟ್ಟೆ ವಿಸ್ತರಣೆ ಏನೇನೂ ಸಾಲದು.

ಕ್ಯಾಂಪ್ಕೋ ಚಾಕೊಲೇಟ್ ಉತ್ಪನ್ನವನ್ನು ಹಳ್ಳಿ ಹಳ್ಳಿಗೂ ತಲುಪಿಸಿ ಬಹುರಾಷ್ಟ್ರೀಯ ಕಂಪನಿಗಳಿಗೆ ಖಂಡಿತವಾಗಿಯೂ ಪೈಪೋಟಿ ನೀಡಿ ಮೇಲ್ಮೈ ಸಾಧಿಸಲು ಸಾದ್ಯ. ಹಾಗೆಯೇ ಮುಂದೆ ಅಡಿಕೆ ಚಾಕೊಲೇಟ್ ಉತ್ಪನ್ನ ವನ್ನೂ ದೇಶದ ಮೂಲೆ ಮೂಲೆಗೂ ತಲುಪಿಸಿ ಜಯಿಸಿ ಸಾಂಪ್ರದಾಯಿಕ ಅಡಿಕೆ ಗೆ ಅಡಿಕೆ ಬೆಳೆಗಾರರಿಗೆ ಬೆಲೆ ಮಾನ ತಂದು ಕೊಡಬಹುದು.

Advertisement

ಮಲೆನಾಡು ಕರಾವಳಿಯ ಅಡಿಕೆ ಉತ್ಪನ್ನಗಳು ಮೊದಲು ಗುಟ್ಕಾ ಉತ್ಪನ್ನ ತಯಾರಿಕೆಯಿಂದ ಬೇರಾದರೆ ಮಾತ್ರ ಅಡಿಕೆ ಗೆ ಭವಿಷ್ಯವಿದೆ….ಗುಟ್ಕಾ ದ ಜೊತೆಗೇ ಮಲೆನಾಡು ಕರಾವಳಿ ಅಡಿಕೆ ಮತ್ತು ಅಡಿಕೆ ಬೆಳೆಗಾರರು ಇದ್ದರೆ ಅಧೋಗತಿ…

ಅಡಿಕೆ ಸಾಂಪ್ರದಾಯಿಕ ತಾಂಬೂಲವಾಗಿ ಮೌಲ್ಯವರ್ಧನೆಯಾಗಲಿ….. ಮಲೆನಾಡು ಕರಾವಳಿಯ ಸಾಂಪ್ರದಾಯಿಕ ಅಡಿಕೆ ಬೆಳೆ -ಬೆಳೆಗಾರರು ಉಳಿದು ಬಾಳಲಿ…

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಹವಾಮಾನ ವೈಪರೀತ್ಯ | ಕೃಷಿ ಕಾರ್ಮಿಕರಿಗೆ ಈಗ ಬಿಸಿಗಾಳಿ ಸಂಕಷ್ಟ | ಕೃಷಿಗೂ ಸಮಸ್ಯೆ-ಕೃಷಿ ಬೆಳವಣಿಗೆ ಕುಂಠಿತ |
April 28, 2024
4:01 PM
by: ಮಹೇಶ್ ಪುಚ್ಚಪ್ಪಾಡಿ
ಮಳೆಗಾಗಿ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ |
April 28, 2024
2:36 PM
by: ದ ರೂರಲ್ ಮಿರರ್.ಕಾಂ
ವಾರದ ಅತಿಥಿ | ರಾಜಕಾರಣದಲ್ಲಿ “ನೈತಿಕ ಮೌಲ್ಯ” ತುಂಬಬೇಕು | ಸಮಾಜದಲ್ಲಿ”ಅನೇಕಾಂತವಾದ” ಬೆಳೆಯಬೇಕು |
April 28, 2024
1:07 PM
by: ಮಹೇಶ್ ಪುಚ್ಚಪ್ಪಾಡಿ
ಮೇ.1 | ಮಳೆಗಾಗಿ ನಡೆಯಲಿದೆ ಪಂಜದಲ್ಲಿ ಪ್ರಾರ್ಥನೆ
April 28, 2024
12:20 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror