ಭಾರತ(India) ದೇಶದಲ್ಲಿ ಕೇರಳ(Kerala) ರಾಜ್ಯವನ್ನು ದೇವರ ನಾಡು(God`s Country) ಸಂಭೋದಿಸುತ್ತೇವೆ. ದೈವ ದೇವರ ಉಗಮ ಭೂಮಿ, ಆರಾಧನೆಯ ಭೂಮಿ ಕೂಡ ಕೇರಳ ನಾಡು. ಹಾಗೆ ಕರ್ನಾಟಕದಲ್ಲಿ ದೈವ ದೇವರ ಪ್ರಮುಖ ಆರಾಧನೆ, ಮತ್ತು ಕೆಲವು ಭೂತ ದೇವರುಗಳು(Bhoota Kola) ಸಹ ಭೂಲೋಕದಲ್ಲಿ ಅವತಾರ ಎತ್ತುವಾಗ ಕಡಲ ತಡಿ ಪರಶುರಾಮನ(Parashurama) ಜಿಲ್ಲೆ ತುಳುನಾಡು ಕೇರಳದಂತೆ ಸಮಾನವಾಗಿ ನಿಲ್ಲಬಲ್ಲದು.
ವಾಡಿಕೆಯಂತೆ ಸರಿ ಸುಮಾರು ಎರಡು ಸಾವಿರದಷ್ಟು ಧಾರ್ಮಿಕ ವಿಧಿ ವಿಧಾನದ ಪ್ರಕ್ರಿಯೆ ಇಲ್ಲಿದೆ. ಇವುಗಳಲ್ಲಿ ಕರಾವಳಿ ಜಿಲ್ಲೆಯಲ್ಲಿ ತುಳುವರ ಅಗ್ರ ಆರಾಧನೆಯ ಭೂತವೇ ಪಾಷಣಮೂರ್ತಿ. (ಕಲ್ಲುರ್ಟಿ, ಕಲ್ಕುಡ ) ಪ್ರತಿ ಜಾತಿ ಪಂಗಡಗಳ ಕುಟುಂಬಗಳಲ್ಲಿಯೂ, ಅಲ್ಲದೇ ಊರಿನ ದೈವವಾಗಿ ಇಲ್ಲಿನ ಮಣ್ಣಿನಲ್ಲಿ ನೆಲೆನಿಂತ ದೈವಗಳಲ್ಲಿ ಒಂದು. ಇದೇ ಪಾಷಣಮೂರ್ತಿಯ ಆರಾಧನೆ ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದಲ್ಲಿ ವಾರ್ಷಿಕವಾಗಿ ಒಮ್ಮೆ ಭೂತದ ಕೋಲ, ಮೂರು ಬಾರಿ ದೈವಕ್ಕೆ ಸಮ್ಮಾನ (ಅಗೆಲು )ಬಳಸುವ ಧಾರ್ಮಿಕ ಆಚರಣೆ ಇದೆ.
ಹಾಗೆಯೇ, ಸುಳ್ಯ ತಾಲೂಕಿನ ಸೀಮೆ ದೇವಸ್ಥಾನ ಮಲ್ಲಿಕಾರ್ಜುನ ದೇವಸ್ಥಾನದ ಸಮೀಪದಲ್ಲಿ ನೆಲೆ ನಿಂತಿರುವ ಪಾಷಣಮೂರ್ತಿ ದೈವಸ್ಥಾನದಲ್ಲಿ ಹಗಲು ರಾತ್ರಿ ಅಗೆಲು ನೀಡುವ ಕಾರ್ಯಕ್ರಮವಿತ್ತು. ನಿನ್ನೆ ದಿನ ಪ್ರಕೃತಿಯ ಮಡಿಲಲ್ಲಿ ಮಲಗಿರುವ ಈ ಕ್ಷೇತ್ರಕ್ಕೆ ತೆರಳಿದ ನಾನು ಇಲ್ಲಿ ದೇವರಿಗೆ ಭಕ್ತರು ಸಲ್ಲಿಸುವ ಹರಕೆ ರೂಪವನ್ನು ಕಣ್ಣಾರೆ ಕಂಡು, ಇಲ್ಲಿನ ಭಯ ಭಕ್ತಿ, ನಂಬಿಕೆಗೆ ಹೆಸರಾದ ಪಾಷಣಮೂರ್ತಿಯ ಕೃಪೆಗೆ ಪಾತ್ರವಾಗಿ ಊಟದ ರೂಪದ ಪ್ರಸಾದ ಪಡೆದು ಬಂದೆ. ಭಕ್ತರ ಇಷ್ಟಾರ್ಥವನ್ನು ನೆರವೇರಿಸುವ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ನೆರೆದಿದ್ದರು.
ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಇಲ್ಲಿನ ದೇವಸ್ಥಾನವನ್ನು ಊರ ಪರಊರ ದಾನಿಗಳಿಂದ ದೇವಸ್ಥಾನ ನಿರ್ಮಿಸಲಾಗಿದೆ. ಪಾಷಣಮೂರ್ತಿ ದೈವಕ್ಕೆ ಹರಕೆ ಹೇಳಿದ ಭಕ್ತರು ಒಂದು ಹೇಂಟೆ, ಒಂದು ಹುಂಜ ಕೋಳಿಯನ್ನು ನೀಡಬೇಕು ನಿನ್ನೆ ದಿನ ನಾನೂರು ಕುಟುಂಬಗಳು ಎಂಟುನೂರು ಕೋಳಿಗಳನ್ನು ಇಲ್ಲಿ ಬಲಿ ಅರ್ಪಿಸಿದರು. ಈ ಸಾನಿಧ್ಯಕ್ಕೆ ಕೋಳಿಗಳನ್ನು ಅರ್ಪಿಸಿದವರಿಗೆ ಒಂದೊಂದು ಅಗೆಲು ನೀಡುತ್ತಾರೆ. ಇದರಲ್ಲಿ ಎರಡು ರೊಟ್ಟಿ ಮತ್ತು ಒಂದು ಕೆ. ಜಿ. ಯಷ್ಟು ಕೋಳಿ ಕೋಳಿ ಮಾಂಸದ ಪದಾರ್ಥ ಪ್ರಸಾದವಾಗಿ ಕೊಡುತ್ತಾರೆ.
ಉಳಿದ ನಾಲ್ಕು ಕ್ವಿಂಟಲ್ ಮಾಂಸವನ್ನು ಕಾರ್ಯಕ್ರಮದಲ್ಲಿ ನೆರೆದ ಭಕ್ತರಿಗೆ ಊಟದ ಪ್ರಸಾದ ನೀಡುತ್ತಾರೆ. ಒಂದು ವರ್ಷದಲ್ಲಿ ಮೂರು ಬಾರಿ ಅಗೆಲು ಕಾರ್ಯಕ್ರಮವಿರುವಾಗ ಊಹೆಯಂತೆ ವರ್ಷದಲ್ಲಿ ಸಾವಿರದ ಇನ್ನೂರು ಕುಟುಂಬಗಳು ಎರಡು ಎರಡು ಸಾವಿರದ ನಾನೂರು ಕೋಳಿ, ಇಲ್ಲವೇ ಇದಕ್ಕಿಂತ ಹೆಚ್ಚು ಭಕ್ತ ಕುಟುಂಬಗಳು ತಮ್ಮ ಮನದಾಳದ ಕಷ್ಟ ಪರಿಹಾರ ಮಾಡಿದ ಕಲ್ಲುರ್ಟಿ ದೈವಕ್ಕೆ ಹರಕೆ ಕೋಳಿ ಒಪ್ಪಿಸಿ ಕೃತಜ್ಞತೆ ಪಡೆಯುತ್ತಾರೆ.
ಐತಿಹಾಸಿಕ ಪುರಾಣದಲ್ಲಿ ಕಲ್ಲುರ್ಟಿ ನುರಿತ ಕಲ್ಲಿನ ಕೆತ್ತನೆಯ ಶಿಲ್ಪಿಯಾಗಿರುತ್ತಾನೆ. ಅಮ್ಮ ಈರಮ್ಮ, ಅಪ್ಪ ನಾರಾಯಣ ಆಚಾರಿಗೆ ಹುಟ್ಟಿದ ಒಂದು ಅವಳಿ ಮಕ್ಕಳಲ್ಲಿ ಈತನು ಮತ್ತು ತಂಗಿ ಕಾಳಮ್ಮ. ಇವರು ಬೆಳೆಯುತ್ತಾ, ಗುರುಕುಲದಲ್ಲಿ ವಿದ್ಯೆಬುದ್ಧಿ ಕಲಿಯುತ್ತಾರೆ. ಇವರು ಹುಟ್ಟುವ ಮೊದಲು ಈರಮ್ಮನ ಏಳು ತಿಂಗಳ ಗರ್ಭದ ಸಮಯದಲ್ಲಿ ಬೇಲೂರು ಭಾಗದ ಅಸ್ರಾಲೆ, ಮುಸ್ರಾಲೆ ಪಟ್ಟದ ಭೈರವ ಅರಸ ಶಂಬು ನಾರಾಯಣನನ್ನು ಒಂದು ದೇವಸ್ಥಾನ ಕಟ್ಟಲು ಕಲ್ಲು ಕೆತ್ತಿಕೊಡಲು ಬರುವಂತೆ ಕೇಳಿಕೊಳ್ಳುತ್ತಾನೆ.ಅರಸರ ಮಾತು ತಿರಸ್ಕಾರಮಾಡಿದರೆ ತನ್ನನ್ನು ಕೊಲ್ಲಬಹುದು ಎಂದು ಹೆದರಿ ಗರ್ಭಿಣಿ ಹೆಂಡತಿ ಈರಮ್ಮನ ಸಮಾಧಾನಪಡಿಸಿ ಘಟ್ಟ ಹತ್ತಿ ಬೇಲೂರು ಸೇರುತ್ತಾನೆ.
ಅಲ್ಲಿ ಮಹಾರಾಜರ ಆಜ್ಞೆಯಂತೆ ಜೈನಗೋಪುರ, ಸೂತ್ರದಗೊಂಬೆದ ಕೆಲಸ ದೇವಸ್ಥಾನದ ಅಂಗಳದಲ್ಲಿ ಸತ್ಯ ಪ್ರಮಾಣ ನೆರವೇರಿಸಲು ಆಣೆಕಲ್ಲು, ದೇವರನ್ನು ಬೀದಿಯಲ್ಲಿ ಕೂರಿಸಿ ಬೀದಿ ಸುತ್ತಲು ಬ್ರಹ್ಮರಥದ ಕೆಲಸ ಪೂರ್ಣಗೊಳಿಸಿ ದೊರೆಯಲ್ಲಿ ಕಲ್ಲಿನ ಕಾಮಗಾರಿ ಮುಗಿದ ನಂತರ ಸಂಬಳ ಮತ್ತು ಮೊದಲೇ ರಾಜ ಹೇಳಿದ ಇನಾಮ್ ಪಡೆಯುವ ಸಮಯ ಬಂದಿರುತ್ತದೆ. ಬೇಲೂರುಗೆ ರಾಜನ ಕೋರಿಕೆಯಂತೆ ಊರು ತೊರೆದ ಶಂಬು ನಾರಾಯಣ ಹಲವು ವರ್ಷ ಉರುಳಿದರು ಊರು ಸೇರುವುದಿಲ್ಲ. ಗುರುಕುಲದಲ್ಲಿ ವ್ಯಾಸಂಗ ಮಾಡುತಿದ್ದ ಈರಮ್ಮನ ಮಕ್ಕಳನ್ನು ಅಲ್ಲಿ ಗುರುಕುಲದಲ್ಲಿ ಇತರ ವಿದ್ಯಾರ್ಥಿಗಳು ತಂದೆ ಇಲ್ಲದ ಮಕ್ಕಳು ಎಂದು ಅಪಹಾಸ್ಯ ಮಾಡುತ್ತಾರೆ. ಇದರಿಂದ ನೊಂದ ಮಕ್ಕಳು ತಾಯಿಯಲ್ಲಿ ನಮ್ಮ ತಂದೆ ಎಲ್ಲಿ, ಈಗಲೇ ನೋಡಬೇಕೆಂದು ಹಟ ಹಿಡಿಯುತ್ತಾರೆ.
ಆಗ ನಾರಾಯಣನ ಹೆಂಡತಿ ಈರಮ್ಮ ನಡೆದ ಘಟನೆಯನ್ನು ಹೇಳುತ್ತಾಳೆ. ಇದರಿಂದ ಹಟ ಬಿದ್ದ ನಾರಾಯಣನ ಮಗ ಕಲ್ಲುಟ್ಟಿ ಅಮ್ಮನಲ್ಲಿ ಮಾಹಿತಿ ಪಡೆದು ಒಂದು ವೇಳೆ ಅಪ್ಪನಿಗೆ ಇನ್ನೂ ಒಂದು ವರ್ಷದ ಕೆಲಸವಿದ್ದರೆ ನಾನು ಅದನ್ನು ಆರು ತಿಂಗಳಲ್ಲಿ, ಆರು ತಿಂಗಳ ಕೆಲಸವಾದರೆ ಮೂರು ತಿಂಗಳಲ್ಲಿ, ಮೂರು ದಿನದ ಕೆಲಸ ಬಾಕಿ ಇದ್ದಲ್ಲಿ ಮೂರು ಗಂಟೆಯಲ್ಲಿ ಪೂರ್ತಿಗೊಳಿಸಿ ತಂದೆಯನ್ನು ಕರೆದುಕೊಂಡು ಬರುತ್ತೇನೆ ಎಂದು ಕಪ್ಪು ಕುದುರೆ ಏರಿ ಮುಸ್ರಾಲ ಕಡೆ ತೆರಳುತ್ತಾನೆ. ಸೇರಬೇಕಾದ ಊರು ತಲುಪಿದ ಮೇಲೆ ದಾರಿಯಲ್ಲಿ ಎದುರಾದ ಒಬ್ಬ ವ್ಯಕ್ತಿಯಲ್ಲಿ ಶಂಬು ನಾರಾಯಣ ಇರುವ ಸ್ಥಳ ವಿಚಾರಿಸುತ್ತಾನೆ. ಆಗ ಶಂಬು ನಾರಾಯಣ ನಾನೇ ಅವನು ಎನ್ನುತ್ತಾನೆ, ನನ್ನನ್ನು ಹುಡುಕಿಕೊಂಡು ಬಂದಿರುವ ನಿನ್ನ ಪರಿಚಯ ಹೇಳು ಎಂದಾಗ ಹುಡುಗ ನೀನು ಊರು ಬಿಟ್ಟು ಹೋಗುವ ಸಂಧರ್ಭದಲ್ಲಿ ತಾಯಿಯ ಏಳು ತಿಂಗಳ ಗರ್ಭದಲ್ಲಿ ಇದ್ದು ಜನಿಸಿದ ನಿನ್ನ ಮಗನೇ ನಾನು ಎಂದು ತನ್ನ ಪರಿಚಯ ಮಾಡುತ್ತಾನೆ.
ಆಕಸ್ಮಿಕವಾಗಿ ಒಂದಾದ ತಂದೆ ಮಗ ಸಂತೋಷದಿಂದ ಶಿಲ್ಪಿ ಶಂಬು ನಾರಾಯಣ ಕಲ್ಲಿನ ಕೆತ್ತನೆ ಮಾಡುವ ಸ್ಥಳ ಸೇರುತ್ತಾರೆ. ತಂದೆ ಮಾಡಿದ ಸೂರ್ಯನಾರಾಯಣ ದೇವರ ಕೆತ್ತನೆ ಕೆಲಸ ನೋಡಿದ ಮಗ ಸೂರ್ಯದೇವರ ಬಲ ಬುಜದ ಕೆತ್ತನೆ ಸರಿಯಾದ ರೂಪಕ್ಕೆ ಬಂದಿಲ್ಲ, ಇದರಿಂದ ಪ್ರತಿಮೆಗೆ ಜೀವಕಳೆ ಇಲ್ಲ ಎಂದ. ಆಗ ಮಗನ ಮಾತು ಕೇಳಿದ ತಂದೆ ಬಾಲ್ಯದಲ್ಲಿ ನನ್ನನ್ನೇ ಮೀರಿಸುವ ಕೆತ್ತನೆ ಜ್ಞಾನ ಸಂಪಾದಿಸಿದ ಮಗನ ಮೇಲೆ ಅತೀವ ಆನಂದ ವ್ಯಕ್ತ ಪಡಿಸುತ್ತಾನೆ ಶಂಬು ನಾರಾಯಣ. ಈ ಮೂರ್ತಿಯ ಬಲ ಕೈ ಕೆತ್ತನೆ ಕೆಲಸ ತಪ್ಪಿ ಹೋದ ಕಾರಣಕ್ಕೆ ಮಹಾರಾಜ ನನ್ನನ್ನೇ ಕೊಲ್ಲಬಹುದು ಎಂದು ಅಂಜಿದ ಶಂಬು ನಾರಾಯಣ ತನ್ನ ಕೈಯಲ್ಲಿದ್ದ ಹರಿತ ಉಳಿಯಿಂದ ತನ್ನ ಹೊಟ್ಟೆಗೆ ತಾನೇ ಕುತ್ತಿಕೊಂಡು ಅಲ್ಲಿಯೇ ಪ್ರಾಣ ಬುಡುತ್ತಾನೆ.
ಉಳಿದ ಕೆಲಸವನ್ನು ಮಗ ಬೀರು ಕಲ್ಕುಡ ಮುಂದುವರಿಸುತ್ತಾನೆ. ತಂದೆಯ ಕೆಲಸ ಶೀಘ್ರದಲ್ಲಿ ಮುಗಿಸಿದ ಕಲ್ಕುಡ ಸಂಬಳ ಕೇಳಿ ಊರು ಸೇರಲು ಬಯಸುತ್ತಾನೆ.
ಈತನನ್ನು ಊರಿಗೆ ಕಳುಹಿಸಿದರೆ ಈತ ಬೇರೆ ಊರಲ್ಲೂ ಇದಕ್ಕಿಂತ ಸುಂದರ ಕೆತ್ತನೆ ಕೆಲಸ ಮಾಡಬಹುದು ಎಂದು ನಂಜಿ ಕಾರಿದ ರಾಜ ಕಲ್ಕುಡನ ಒಂದು ಕಾಲು ಒಂದು ಕೈ ಕಡಿಯುತ್ತಾನೆ.
ಇದರಿಂದ ಕಣ್ಣೀರು ಹಾಕಿದ ಕಲ್ಕುಡ ನನ್ನ ಕಾಲು ಕೈ ಕಡಿದ ಊರಿನಲ್ಲಿ ಒಂದು ಗ್ಲಾಸ್ ನೀರು ಕುಡಿಯುವುದಿಲ್ಲ, ಇಲ್ಲಿ ನೆಲೆ ನಿಲ್ಲುವದಿಲ್ಲವೆಂದು ಆ ಊರು ಬಿಟ್ಟು ಘಟ್ಟ ಇಳಿದು ವೇಣೂರುಗೆ ಆಗಮಿಸಿ ಬರೀ ಒಂದು ಕೈ ಒಂದು ಕಾಲಿನಲ್ಲಿ ಗೋಮಟ ಕೆಲಸ ಮಾಡುತ್ತಾ ದಿನ ಕಳೆಯುತ್ತಾನೆ.
ಅಪ್ಪನನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಹೋದ ಅಣ್ಣ ಇನ್ನೂ ಬರಲಿಲ್ಲವೆಂದು ತಂಗಿ ಕಾಳಮ್ಮ ಮನಸ್ಸಿನಲ್ಲಿ ಬೇಜಾರು ಮಾಡಿಕೊಂಡು ಅಮ್ಮ ಈರಮ್ಮನಲ್ಲಿ ಹೇಳಿ ಚಕ್ಕುಲಿ, ಉಂಡೆ, ಇನ್ನಿತರ ತಿಂಡಿ ಕಟ್ಟಿಕೊಂಡು ಹುಡುಕಲು ಹೋಗುತ್ತಾಳೆ. ಪೆರ್ಡೂರ್ ಒಡಿಪು ಮಠಕ್ಕೆ ಬಂದು ಕೃಷ್ಣ ದೇವರಲ್ಲಿ ಹೇಳಿ ಕಾರ್ಲ ಪೇಟೆಗೆ ಬಂದು ಸೇರಿ ಪಕ್ಕದಲ್ಲಿ ದನಗಳನ್ನು ಮೇಯಿಸುತ್ತಿದ್ದ ಮಕ್ಕಳಲ್ಲಿ ವಿಚಾರಿಸುತ್ತಾಳೆ. ಮಕ್ಕಳು ಭೈರವ ಅರಸು ನಿಮ್ಮ ಅಣ್ಣನ ಕಾಲು ಕೈ ಕಡಿದಿದ್ದರು. ಅವರು ಈಗ ಅಜಿಲ ಸೀಮೆಯ ವೇಣೂರುನಲ್ಲಿ ಗೋಮಟದ ಕೆಲಸ ಮಾಡುತ್ತಿರುವ ವಿಚಾರ ತಿಳಿಸುತ್ತಾರೆ.
ವೇಣೂರುನಲ್ಲಿ ಅಣ್ಣನನ್ನು ನೋಡಿದ ತಂಗಿ ಕಾಳಮ್ಮ ಅಣ್ಣನ ಸ್ಥಿತಿ ಅಳುತ್ತಾಳೆ. ಅಲ್ಲಿಂದ ಅಣ್ಣ ಕಲ್ಕುಡ ತಂಗಿ ಕಾಳಮ್ಮ ಗಂಗೆ ನದಿಯಲ್ಲಿ ಇಳಿದು ತೀರ್ಥ ನೀರು ಸ್ನಾನ ಮಾಡಿ ಮೂರು ಕಡೆಗೆ ಮೂರು ಕಲ್ಲು ಬಿಸಾಡಿ ಮಾಯಾವಾಗುತ್ತಾರೆ. ನಾಗಲೋಕಕ್ಕೆ ಹೋಗಿ ನಾಗ ಕನ್ಯೆಯಾಗಿ, ಅಲ್ಲಿಂದ ತಿರುಪತಿ ಸೇರಿ ವೆಂಕಟ್ರಮಣ ದೇವರಲ್ಲಿ ಬೆತ್ತ ಬೇಡಿ, ಗೋವಿಂದ ರಾಜ್ಯ ಸೇರಿ ಪದ್ಮಾವತಿಯ ಆಶೀರ್ವಾದ ಪಡೆದು ಕೊಲ್ಲೂರು ತಲುಪಿ, ಮುಕಾಂಬಿಕೆಯ ಆಶೀರ್ವಾದ ಪಡೆದು ಭೈರವ ರಾಜನ ಆನೆಗೆ ಹುಚ್ಚು ಹಿಡಿಸಿ, ದೊರೆಯ ಹೆಂಡತಿ ಮಹಾರಾಣಿಯ ಬಟ್ಟೆಗಳಿಗೆ ಬೆಂಕಿ ಹಚ್ಚಿ ಎಲ್ಲವನ್ನು ಸುಡುತ್ತಾರೆ.
ಇದರಿಂದ ಬೆದರಿ ಭೈರವ ಅರಸು ಪ್ರಶ್ನೆ ಚಿಂತನೆ ನೆರವೇರಿಸಿದಾಗ ಕಲ್ಕುಡ, ಕಾಳಮ್ಮ ದೈವವಾಗಿ ಹಗೆ ತೀರಿಸಿದ್ದು ಕಂಡು ಬರುತ್ತದೆ. ಜೋತಿಷ್ಯನ ಮಂತ್ರದ ಓಡು ನೀರಿಗೆ ಹಾಕುತ್ತಾರೆ. ಅಲ್ಲಿಂದ ತುಳುನಾಡಿನಲ್ಲಿ ನಂಬಿದವರಿಗೆ ಇಂಬು ಕರುಣಿಸುತ್ತಾ ಸತ್ಯಕ್ಕೆ ಸತ್ಯ ದೇವತೆ, ಕಪಟಕ್ಕೆ ಕಲ್ಲುರ್ಟಿ, ಮಂತ್ರ ತಂತ್ರಕ್ಕೆ ಮಂತ್ರದೇವತೆ ಪಾಷಣಮೂರ್ತಿಯಾಗಿ ಕಲ್ಲುರ್ಟಿ ಕಲ್ಕುಡರಾಗಿ ನಂಬಿದ ತುಳುನಾಡ ಭಕ್ತರ ರೋಗ ರುಜಿನ ನಿವಾರಿಸುತ್ತಾ, ಕೋಲ, ತಂಬಿಲ, ಸೇವೆ ಕೊಡುವ ಸರ್ವ ಜನರ ರಕ್ಷಣೆ ಮಾಡುತ್ತಾರೆ ಎನ್ನುವ ನಂಬಿಕೆ ನಂಬಿದವರಿಗೆ.
–
ರಾಜ್ಯಾದ್ಯಂತ ಅಡಿಕೆ ಗಿಡಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು,ಕೆಲವು ಕಡೆ ಸಸಿಯ ಬೆಲೆ ₹100ಕ್ಕೆ…
ಕೇಂದ್ರ ಸರ್ಕಾರದ ವಿವಿಧ ಕೃಷಿ ಸೌಲಭ್ಯಗಳನ್ನು ಪಡೆಯಲು ‘ಕೇಂದ್ರ ರೈತ ಐಡಿ’ ಕಡ್ಡಾಯವಾಗುತ್ತಿದೆ.…
ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಕೆಜಿಗೆ ₹5 ಏರಿಕೆ ದಾಖಲಾಗಿದ್ದು, ಹೊಸ ಅಡಿಕೆ…
ಭಾರತದಲ್ಲಿ ಕೇವಲ ಒಂದು ದಿನದ ತೀವ್ರ ಬಿಸಿಲು ಸುಮಾರು 3,400 ಹೆಚ್ಚುವರಿ ಸಾವುಗಳಿಗೆ…
ದಕ್ಷಿಣ ಪೂರ್ವ ಏಷ್ಯಾ ರಾಷ್ಟ್ರಗಳು ಹವಾಮಾನ ಬದಲಾವಣೆ ಮತ್ತು ಆಹಾರ ಭದ್ರತೆ ಸವಾಲುಗಳನ್ನು…
ಈ ಬಾರಿ ಮುಂಗಾರು ತನ್ನ ಸಾಮಾನ್ಯ ಪ್ರವೇಶ ದಿನಾಂಕವನ್ನು ತಪ್ಪಿಸಿದೆ ಎಂದು ಸ್ಕೈಮೆಟ್…