ಕೆಲವು ದಿನಗಳ ಹಿಂದೆ ಸುಳ್ಯ ವಿಧಾನಸಭಾ ಕ್ಷೇತ್ರದ ಹಲವು ಕಡೆಗಳಲ್ಲಿ ವಿದ್ಯುತ್ ಸಮಸ್ಯೆಯ ಬಗ್ಗೆ ಚರ್ಚೆಯಾಗುತ್ತಿತ್ತು, ಇದೀಗ ರಸ್ತೆ ಹಾಗೂ ಸೇತುವೆಗಳ ಬಗ್ಗೆ ಚರ್ಚೆ ಆರಂಭವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವು ರಸ್ತೆ ಸಂಬಂಧಿತ ವಿಡಿಯೋಗಳು ವೈರಲ್ ಆಗುತ್ತಿವೆ, ಇನ್ನೂ ಕೆಲವು ಗ್ರಾಮೀಣ ರಸ್ತೆಗಳ ಬಗ್ಗೆ ಪ್ರಧಾನಿ ಕಚೇರಿಗೂ ತಲಪುತ್ತಿದೆ. ಮಳೆಗಾಲದಲ್ಲಿ ಹಲವು ಕಡೆ ಸೇತುವೆಗಳದ್ದೇ ಸುದ್ದಿಯಾಗುತ್ತಿದೆ. ಇನ್ನೀಗ ಭಾರೀ ಮಳೆ ಎರಡು ದಿನ ಸುರಿದರೆ ಸೇತುವೆಗಳ ಫಲಾನುಭವಿಗಳ ಕೂಗು ಆರಂಭವಾಗುತ್ತದೆ. ಬಹಳ ಅಚ್ಚರಿ ಎಂದರೆ ಇದೆಲ್ಲಾ ಸಮಸ್ಯೆಗಳು ಇಂದು ನಿನ್ನೆಯಲ್ಲ, ಆದರೆ ಈ ಬಗ್ಗೆ ಮಾತನಾಡಿದವರೇ “ವಿಲನ್” ಆಗುತ್ತಿದ್ದಾರೆ, ಸಮಸ್ಯೆ ಬಗೆಹರಿಸುವ ಮನಸ್ಸುಗಳಿಗಿಂತ ಧ್ವನಿ ಎತ್ತಿದವರನ್ನು ವಿರೋಧಿಸುವುದೇ ಸಾಧನೆಯಾಗುತ್ತಿದೆ..!.…… ಮುಂದೆ ಓದಿ……
ಮಳೆಗಾಲದ ಆರಂಭದಲ್ಲಿ ಸುಳ್ಯದ ವಿದ್ಯುತ್ ಸಮಸ್ಯೆ ಬಗ್ಗೆ ಭಾರೀ ಚರ್ಚೆಯಾಯ್ತು. ಹಲವು ಗ್ರಾಮೀಣ ಭಾಗಗಳಲ್ಲಿ ಮೂರು-ನಾಲ್ಕು ದಿನ ವಿದ್ಯುತ್ ಇಲ್ಲವಾಗಿತ್ತು. ಆದರೆ ಈ ಬಾರಿ ಮಳೆಗಾಲ ಬೇಗನೆ ಆರಂಭವಾದ್ದರಿಂದ ಸಹಜವಾಗಿಯೇ ಸಮಸ್ಯೆಯಾದ್ದು ಹೌದು. ಅದು ಪ್ರಾಕೃತಿಕವಾದ ಸಮಸ್ಯೆ. ಆದರೆ ಸುಳ್ಯಕ್ಕೆ ಅಗತ್ಯವಾದ 110 ಕೆವಿ ವಿದ್ಯುತ್ ಸರಬರಾಜು ವ್ಯವಸ್ಥೆ ಇಂದಿಗೂ ಆಗಿಲ್ಲ. ಇನ್ನೂ ಸಮಸ್ಯೆ ಬಗೆಹರಿದಿಲ್ಲ. ಸಭೆಯ ಮೇಲಿಂದ ಸಭೆ ಈ ಹಿಂದೆ ಆಗಿತ್ತು,ಆದರೆ ಫಲಿತಾಂಶ ಕಾಣಲಿಲ್ಲ..!. ಸುಳ್ಯಕ್ಕೆ ನಿರಂತರ ಗುಣಮಟ್ಟದ ವಿದ್ಯುತ್ ಏಕೆ ಅಗತ್ಯ ಎಂಬುದರ ಬಗ್ಗೆಯೂ ಗಮನಹರಿಸಿದ ಹಾಗಿಲ್ಲ.
ಇದಾದ ಬಳಿಕ ವಾರದಿಂದ ಭಾರೀ ಸದ್ದು ಮಾಡುತ್ತಿರುವುದು ಎಲಿಮಲೆ-ಮರ್ಕಂಜ ರಸ್ತೆಯ ವಿಡಿಯೋ. ತೀರಾ ಹೊಂಡಗುಂಡಿಯ ರಸ್ತೆಗೆ ಯಕ್ಷಗಾನದ ಹಾಡೊಂದನ್ನು ಅಳವಡಿಸಿ ರಸ್ತೆ ಅವ್ಯವಸ್ಥೆಯ ಬಗ್ಗೆ ಧ್ವನಿ ಎತ್ತಿದ್ದಾರೆ, ವಿಡಿಯೋ ವೈರಲ್ ಆಗಿದೆ. ಎಲಿಮಲೆ-ಸಂಪಾಜೆ ರಸ್ತೆ ಅವ್ಯವಸ್ಥೆ ಬಗ್ಗೆ ಈಗಲ್ಲ ಹಲವು ವರ್ಷದ ಹೋರಾಟ ಇದೆ, ರಸ್ತೆ ದುರಸ್ತಿಯಾಗದೇ ಇದ್ದರೆ ಮತದಾನ ಬಹಿಷ್ಕಾರ ಸೇರಿದಂತೆ ವಿವಿಧ ಹೋರಾಟ ಈ ಹಿಂದೆ ಆಗಿತ್ತು. ಆ ಸಂದರ್ಭ ಅನುದಾನ ಭರವಸೆ ಹಾಗೂ ಲಭ್ಯ ಅನುದಾನದಲ್ಲಿ ರಸ್ತೆ ಅಗಲೀಕರಣ ಹಾಗೂ ದುರಸ್ತಿ ನಡೆಯಿತು. ನಂತರ ಬಾಕಿ ಉಳಿದಿದೆ, ಚುನಾವಣೆ ಮುಗಿದ ವರ್ಷಗಳು ಕಳೆದವು..!. ಈಗ ಅದೇ ರಸ್ತೆಯ ಒಂದು ವಿಡಿಯೋ ವೈರಲ್ ಆಗಿದೆ.
ಅದರ ಬೆನ್ನಿಗೇ ಸುಳ್ಯದ ಇನ್ಸ್ಟಾಗ್ರಾಂ ತಾಣವೊಂದರಲ್ಲಿ “ರಸ್ತೆ ಹಾಗೂ ಚೋಳು” ಬಗ್ಗೆ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ಉಲ್ಲೇಖಿಸಿದ ಹಾಗೆ, ರಸ್ತೆಯನ್ನು ನೀರಿನ ಪೈಪ್ಗಾಗಿ ಅಗೆಯಲಾಗಿದೆ, ಈಗ ಚರಂಡಿಯೂ ಸರಿ ಇಲ್ಲ ರಸ್ತೆ ಇಡೀ ಕೆಸರು. ರಸ್ತೆಯೂ ಹಾಳಾಗಿದೆ. ಹೀಗಾಗಿ ನಮಗೆ ಹೋಗಲು ಅಸಾಧ್ಯ ಎಂದು ವಿಡಿಯೋ ವೈರಲ್ ಆಗಿದೆ.
ಇನ್ನು ಸುಳ್ಯ-ಜಟ್ಟಿಪಳ್ಳ-ದುಗಲಡ್ಕ ರಸ್ತೆ. ಹಲವು ವರ್ಷಗಳಿಂದ ಸಮಸ್ಯೆ ಇದೆ. ಕಳೆದ ಕೆಲವು ವರ್ಷಗಳ ಹೋರಾಟ ಇದೆ. ರಸ್ತೆ ತಡೆ-ಉಪವಾಸ-ಮತದಾನ ಬಹಿಷ್ಕಾರ ಕೂಡಾ ನಡೆದಿದೆ. ಆದರೆ ಇಂದಿಗೂ ದುರಸ್ತಿಯಾಗಿಲ್ಲ, ಅಲ್ಲಿನ ನಾಗರಿಕರ ವ್ಯಾಟ್ಸಪ್ ಗುಂಪುಗಳಲ್ಲಿ ಇಂದಿಗೂ ರಸ್ತೆ ಬಗ್ಗೆ ಮಾತನಾಡುತ್ತಾರೆ..!. ಆದರೂ ದುರಸ್ತಿ ಕಂಡಿಲ್ಲ..!.…… ಮುಂದೆ ಓದಿ……
ಇದೀಗ ಸುಳ್ಯ ತಾಲೂಕಿನ ಕಳಂಜ ಗ್ರಾಮ ವ್ಯಾಪ್ತಿಯ ಕೆದಿಲ- ಮಾಪಲಗುಂಡಿ ರಸ್ತೆ ಯ ಬಗ್ಗೆ ಪ್ರಧಾನಿ ಕಚೇರಿವರೆಗೂ ಸುದ್ದಿ ತಲಪುತ್ತಿದೆ. ಜಾಲತಾಣ ಎಕ್ಸ್ ಮೂಲಕ ಪ್ರಧಾನಿ ಕಚೇರಿಗೆ ಮಾಹಿತಿ ನೀಡಿದ್ದಾರೆ ಅಲ್ಲಿನ ಯುವಕ ಚೈತನ್ಯ. ಯಾವುದೇ ಕಾಳಜಿ ಇಲ್ಲದ ಜನಪ್ರತಿನಿಧಿಗಳು ಎನ್ನುವುದನ್ನೂ ಉಲ್ಲೇಖಿಸಲಾಗಿದೆ.
ಚುನಾವಣಾ ಸಂದರ್ಭದಲ್ಲಿ ಮನೆಗೆ ಮತ ಕೇಳಲು ಬರುತ್ತಾರೆ. ಈಗ ಮಳೆಗಾಲ ಬಂದು ನೋಡಿ ಹೋಗಲಿ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. 2024 ರಲ್ಲಿ ಇಲ್ಲಿಯ ರಸ್ತೆಯ ಅವ್ಯವಸ್ಥೆಯ ಬಗ್ಗೆ ಊರವರೆಲ್ಲ ಸೇರಿ ಸಹಿ ಮಾಡಿ ಮಾನ್ಯ ಸುಳ್ಯದ ಶಾಸಕರಲ್ಲಿ ಕೊಟ್ಟು ಬಂದರೂ ಈ ಭಾಗದ ಸಮಸ್ಯೆಯ ಆಲಿಸುವ ಕಾರ್ಯಕ್ರಮ ಇದುವರೆಗೆ ಆಗಿಲ್ಲ. ಚುನಾವಣೆಯಲ್ಲಿ ಗೆದ್ದ ನಂತರ “ಅಲ್ಲಿನ ಲೀಡರ್ ಜೊತೆಗೆ ಬನ್ನಿ” ಎನ್ನುತ್ತಾರೆ. ಹಾಗಿದ್ದರೆ ಚುನಾವಣೆಯ ವೇಳೆ ಮಾಡಿರುವ ಕೆಲಸಗಳು ವ್ಯರ್ಥವೇ ಎನ್ನುತ್ತಾರೆ ಜನರು. ಹೀಗಾಗಿ ಜನರು ಚುನಾವಣೆ ಸಂದರ್ಭ ಮತ ಹಾಕಿ ಗೆಲ್ಲಿಸುವ ಮೊದಲು ಯೋಚಿಸಬೇಕಾದ ಅನಿವಾರ್ಯತೆ ಎನ್ನುತ್ತಾರೆ ಜನರು.…… ಮುಂದೆ ಓದಿ……
ಇಲ್ಲಿನ ಜನರು ಮತ್ತಷ್ಟು ವಿಷಾದ ವ್ಯಕ್ತಪಡಿಸಿದ್ದು ಇಲ್ಲಿನ ಜನರಿಗೆ ಜೀಪ್ ಹೊರತು ಇನ್ನು ಯಾವುದೇ ವಾಹನ ಹೋಗದ ಸ್ಥಿತಿ ಇದೆ. ಇನ್ನು ಚುನಾವಣಾ ಬಹಿಷ್ಕಾರ ,ನಿರಂತರ ಹೋರಾಟ, ದಿನಾ ಟ್ವಿಟ್ಟರ್ ಮೂಲಕ ಜನಪ್ರತಿನಿಧಿಗಳಿಗೆ ಟ್ಯಾಗ್ ಮಾಡಿ ಎಚ್ಚರಿಸುವ ಪ್ರಯತ್ನ ಮಾಡುತ್ತೇವೆ ಎನ್ನುತ್ತಾರೆ ಇಲ್ಲಿನ ನಿವಾಸಿ ಚೈತನ್ಯ ಕೆದಿಲ.
ಇದೊಂದೇ ಅಲ್ಲ, ಇಲ್ಲೇ ಇನ್ನೊಂದು ರಸ್ತೆಯೂ ಈಗ ಸದ್ದು ಮಾಡುತ್ತಿದೆ.ಕಾಯಾರ – ಕಾಂಚೋಡು ರಸ್ತೆಯ ಅವ್ಯವಸ್ಥೆಯೂ ಇದೇ ಕತೆ. ಸುಮಾರು 18-20 ಮನೆಗಳಿಗೆ ಸರಿಯಾದ ಸಂಪರ್ಕ ರಸ್ತೆ ಇಲ್ಲ. ಈಗಲೂ ಸುಮಾರು 70 ಮೀಟರ್ ನಷ್ಟು ಹೊಳೆಯಲ್ಲಿ ನಡೆದುಕೊಂಡು ಶಾಲಾ ಮಕ್ಕಳೂ ಸಾಗಬೇಕು. ಸ್ಥಳೀಯ ಪಂಚಾಯತ್ ಇಲ್ಲಿ ಫಲಕವೊಂದು ಹಾಕಿದೆ,”ನೀರು ಹರಿಯುವಾಗ ದಾಟಬೇಡಿ” ಎಂದು ಎಚ್ಚರಿಕೆ ಫಲಕ ಹಾಕಿದೆ. ಆದರೆ ಶಾಶ್ವತವಾದ ಸೇತುವೆ ಮಾಡಲು ಯಾವುದೇ ಇಲಾಖೆಗಳು ಗಮನ ಸೆಳೆದಂತೆ ಕಾಣುತ್ತಿಲ್ಲ. ಇಂದಿಗೂ ಇಲ್ಲಿನ ಜನರು ಪರದಾಟ ನಡೆಸುತ್ತಿದ್ದಾರೆ.
ಇಷ್ಟೇ ಅಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಲ್ಮಕಾರು-ಬಾಳುಗೋಡು ಮೊದಲಾದ ಕಡೆಗಳಲ್ಲೂ ರಸ್ತೆ, ಸೇತುವೆ ಸಮಸ್ಯೆಗಳು ಇದೆ. ಸುಮಾರು 4 ವರ್ಷಗಳ ಹಿಂದೆ ಆರಂಭಗೊಂಡ , ತಾಲೂಕು ಮಾತ್ರವಲ್ಲ ರಾಜ್ಯದಲ್ಲಿಯೇ ಸುದ್ದಿಯಾದ ಗುತ್ತಿಗಾರಿನ ಮೊಗ್ರ ಸೇತುವೆ ಇನ್ನೂ ಪೂರ್ತಿಯಾಗಿಲ್ಲ. ಮಳೆಗಾಲ ವಾಹನ ಓಡಾಟ ಇಲ್ಲೂ ಸಾಧ್ಯವಾಗದೆ ಜನರು ಪರದಾಟ ಮುಂದುವರಿಸಿದ್ದಾರೆ.
ಹೀಗೇ ಸಮಸ್ಯೆಗಳ ಸುಳಿಯಲ್ಲೇ ಇರುವ ಇದೇ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ಕೆಲವು ಪ್ರದೇಶಗಳಿಗೆ ಮಾಜಿ ಸಚಿವ ಬೆಂಗಳೂರಿನ ಶಾಸಕ ಸುರೇಶ್ ಕುಮಾರ್ ಅವರು ಸೇತುವೆ ನಿರ್ಮಾಣಕ್ಕೆ ಪ್ರಯತ್ನಿಸಿ ಯಶಸ್ಸು ಕಂಡಿದ್ದಾರೆ. ಹೀಗಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳಿಗೆ ಯಾರಾದರೂ ಒಬ್ಬರು ಸ್ಪಂದಿಸಿದರೂ ಇಷ್ಟೂ ವರ್ಷಗಳಲ್ಲಿ ಕೆಲಸಗಳು ಮುಗಿದಿರುತ್ತಿದ್ದವು.…… ಮುಂದೆ ಓದಿ……
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸಮಸ್ಯೆ ಇರುವುದು ನಿಜ. ಏಕೆಂದರೆ ಸುಳ್ಯದ ಬಹುತೇಕ ಪ್ರದೇಶ ಅರಣ್ಯದಿಂದ ಕೂಡಿದೆ. ಮಲೆನಾಡು ತಪ್ಪಲು ಪ್ರದೇಶವಾದ್ದರಿಂದ ಮಳೆಯೂ ಹೆಚ್ಚು, ಗುಡ್ಡಗಾಡು ಪ್ರದೇಶವೂ ಇದೆ. ಹೀಗಾಗಿ ಇಲ್ಲಿನ ಗ್ರಾಮೀಣ ಭಾಗಗಳಿಗೆ ಹಲವು ಕಡೆ ಸೇತುವೆಗಳು ಬೇಕಾದ್ದು ನಿಜ, ರಸ್ತೆಯೂ ಅತಿ ಬೇಗನೆ ಹಾಳಾಗುವುದೂ ಹೌದು. ಆದರೆ ಜನಪ್ರತಿನಿಧಿಗಳು ಒತ್ತಾಯ, ಅಭಿವೃದ್ಧಿಗಾಗಿ ಹೋರಾಟ, ಬೇಡಿಕೆ ಇಡಬೇಕಾದ ಕೆಲಸ, ಅಗತ್ಯ ಬಿದ್ದರೆ ಹೋರಾಟ ಮಾಡಲೇಬೇಕಾದ ಅನಿವಾರ್ಯತೆ ಇದೆಯಲ್ಲ. ಅದರ ಹೊರತಾಗಿ ಮತದಾನ ಮಾಡಿ ಅಭಿವೃದ್ಧಿಗಾಗಿಯೂ ಜನರೇ ಹೋರಾಟ ಮಾಡಬೇಕಾದರೆ ಪ್ರತಿನಿಧಿಗಳ ಅವಶ್ಯಕತೆಯ ಬಗ್ಗೆಯೇ ಪ್ರಶ್ನಿಸಬೇಕಾಗುತ್ತದೆ. ಇಂದು ಸಿದ್ಧರಾಮಯ್ಯ ಅವರಂತಹ ಮುಖ್ಯಮಂತ್ರಿಗಳು ಮೀಸಲು ಕ್ಷೇತ್ರ ಯಾವ ಶಾಸಕರಿಗೂ ಅನುದಾನದ ಕೊರತೆ ಮಾಡಿದ್ದು ಕಡಿಮೆ. ಹೀಗಾಗಿ ಕ್ಷೇತ್ರದ ಶಾಸಕರು ಮುಖ್ಯಮಂತ್ರಿಗಳ ಬಳಿಯಲ್ಲಿಯೇ ಕ್ಷೇತ್ರದ ಸರ್ವಪಕ್ಷದ ನಿಯೋಗದೊಂದಿಗೆ ತೆರಳಿ ಅನುದಾನಗಳನ್ನು ಏಕೆ ತರಿಸಬಾರದು..?
ಸುಳ್ಯದಂತಹ ಕ್ಷೇತ್ರಕ್ಕೆ ರಸ್ತೆ, ವಿದ್ಯುತ್, ನೆಟ್ವರ್ಕ್ ಏಕೆ ಬೇಕು ಎನ್ನುವುದು ಕೂಡಾ ಇಂದು ಯೋಚಿಸಬೇಕಾಗಿದೆ. ಸುಳ್ಯ ಪ್ರದೇಶದಲ್ಲಿ ಅಡಿಕೆಯೇ ಪ್ರಮುಖ ಬೆಳೆ. ಈಚೆಗೆ ಸುಳ್ಯದ ಸಂಪಾಜೆ, ಅರಂತೋಡು, ಮರ್ಕಂಜ, ಕಲ್ಮಕಾರು, ಕಾಣಿಯೂರು ಪ್ರದೇಶದ ಕೆಲವು ಕಡೆ ಅಡಿಕೆಗೆ ಹಳದಿ ಎಲೆರೋಗ ಬಾಧಿಸಿದೆ. ತಾಲೂಕಿನ ವಿವಿಧ ಕಡೆ ಎಲೆಚುಕ್ಕಿ ರೋಗ ಬಾಧಿಸಿದೆ. ಇಂತಹ ಸಂದರ್ಭದಲ್ಲಿ ಭವಿಷ್ಯದಲ್ಲಿ ಅಡಿಕೆಯನ್ನು ನಂಬಿ ಇರಲು ಸಾಧ್ಯವಿಲ್ಲ ಎಂದು ಬಹುತೇಕ ಯುವಕರು ಕೃಷಿಯಿಂದ ಹೊರಬರುವ ಸಾಧ್ಯತೆ ಹೆಚ್ಚಿದೆ. ಆದರೆ ಕೃಷಿ ಮತ್ತು ಮನೆಯಿಂದಲೇ ಉದ್ಯೋಗ ಮಾಡುವ ಅವಕಾಶಗಳನ್ನು ಕಲ್ಪಿಸಲು , ಉದ್ಯಮಗಳನ್ನು ಬೆಳೆಸಲು, ಕೃಷಿ ಸಂಬಂಧಿತ ಉದ್ಯಮಗಳ ಸ್ಥಾಪನೆಗೆ ಬೆಂಬಲ ಬೇಕಾಗಿದೆ. ಈ ಮೂಲಕ ಕೃಷಿಯ ಉಳಿವು ಹಾಗೂ ಗ್ರಾಮೀಣ ಭಾಗದ ಅಭಿವೃದ್ಧಿಯನ್ನೂ ಮಾಡಬೇಕಿದೆ.
ಇದಕ್ಕಾಗಿ ಯುವಕರು ಕೃಷಿಯಲ್ಲಿ, ಗ್ರಾಮೀಣ ಭಾಗದಲ್ಲಿ ಉಳಿದುಕೊಳ್ಳಬೇಕಾದರೆ ರಸ್ತೆ, ನೆಟ್ವರ್ಕ್ ಹಾಗೂ ವಿದ್ಯುತ್ ವ್ಯವಸ್ಥೆ ಸರಿಯಾಗಿ ಬೇಕಾಗಿದೆ. ಈ ಮೂಲಕ ಸುಳ್ಯದ ಗ್ರಾಮೀಣ ಭಾಗವನ್ನು ಉಳಿಸುವ ಕೆಲಸ ಪ್ರತಿನಿಧಿಗಳಿಂದ ಆಗಬೇಕಿದೆ.
In numerous areas within the Sullia assembly constituency, there are ongoing discussions regarding the state of electricity, roads, and bridges. Concerned citizens have been compelled to approach the Prime Minister’s Office, submitting detailed reports about the deteriorating condition of rural roads. Particularly during the rainy season, the issues surrounding infrastructure, such as bridges, become more pronounced and frequently headline news in various locales. Despite these persistent concerns and public attention, there appears to be a significant lack of developmental progress in addressing these infrastructural challenges.
ಕೇರಳದಲ್ಲಿ ಸುಮಾರು ಒಂದು ಲಕ್ಷ ಹೆಕ್ಟೇರ್ ಪ್ರದೇಶದ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಸ್ಥಗಿತವಾಗಿದೆ.
ಕರಾವಳಿ ಹಾಗೂ ಮಲೆನಾಡು ಭಾಗರದಲ್ಲಿ ಜುಲೈ 6 ರಿಂದ ಮಳೆಯ ಪ್ರಮಾಣ ಸ್ವಲ್ಪ…
ನಾವೊಂದು ಯೋಚನೆ ಮಾಡಿದ್ದೇವೆ. ಎಲ್ಲಾ ಕಡೆ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ನಗರ…
ವೃಷಭ ರಾಶಿಯಲ್ಲಿ ಶುಕ್ರನ ಸಂಚಾರ ಒಂದು ಶುಭಕರವಾದ ಮತ್ತು ಧನವೃದ್ಧಿಯ ತತ್ವವನ್ನು ಸಾರುವ…
ಅನೇಕ ವರ್ಷಗಳ ಬೇಡಿಕೆ-ಹೋರಟದ ಬಳಿಕ ಬೃಹತ್ ಸೇತುವೆಯೊಂದು ನಿರ್ಮಾಣವಾಗಿದೆ. ಅಂಬಾರಗೂಡ್ಲು-ಕಳಸವಳ್ಳಿ ಸೇತುವೆಯ ಹೋರಾಟದ…
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಗ್ರಾಮೀಣ ಪ್ರದೇಶಗಳ ಗ್ರಾಮ ಪಂಚಾಯತಿ…