ಕರಾವಳಿ ಕರ್ನಾಟಕದಲ್ಲಿ ಅಡಿಕೆ ಕೃಷಿ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕಾಡು ಪ್ರಾಣಿಗಳ ಉಪಟಳ ಈ ಬೆಳೆಯನ್ನು ಉಳಿಸಿಕೊಳ್ಳುವುದು ಗಂಭೀರ ಸವಾಲಾಗಿ ಪರಿಣಮಿಸಿದೆ. ಮಂಗಗಳು, ಕಾಡು ಹಂದಿಗಳು, ನವಿಲುಗಳು ಮತ್ತು ಕೆಲವೆಡೆ ಜಿಂಕೆ, ಕಡವೆ ದಾಳಿ ಅಡಿಕೆ ತೋಟಗಳಿಗೆ ನಿರಂತರ ಹಾನಿ ಉಂಟುಮಾಡುತ್ತಿದೆ. ಇತ್ತೀಚೆಗೆ ಗೋವಾದ ಸತ್ತಾರಿ ಪ್ರದೇಶದಲ್ಲಿ ಮಂಗಗಳು ಗೇರು ತೋಟಗಳತ್ತ ತಿರುಗಿರುವುದು ಮತ್ತು ಪುತ್ತೂರು ತಾಲೂಕಿನಲ್ಲಿ ಕಾಡು ಹಂದಿಗಳಿಂದ ಅಡಿಕೆ ಗಿಡಗಳ ನಾಶವಾಗಿವೆ. ಇವು ಎರಡೂ ಒಂದೇ ಸರಣಿಯ ಎಚ್ಚರಿಕೆ ಘಟನೆಗಳು ಎನ್ನಬಹುದು.
ಕರಾವಳಿ ಜಿಲ್ಲೆಗಳ ವಾಸ್ತವ ಚಿತ್ರ : ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಲಕ್ಷಾಂತರ ಕುಟುಂಬಗಳು ಅಡಿಕೆ ಕೃಷಿಯ ಮೇಲೆ ಅವಲಂಬಿತವಾಗಿವೆ. ಆದರೆ, ಅರಣ್ಯ ಪ್ರದೇಶಗಳಿಗೆ ಸಮೀಪವಿರುವ ತೋಟಗಳು ಇಂದು ಮಾನವ–ವನ್ಯಜೀವಿ ಸಂಘರ್ಷದ ಪ್ರದೇಶಗಳು ಆಗಿವೆ.
ರೈತರ ಅಸಹಾಯಕತೆ : ಕಾಡು ಪ್ರಾಣಿಗಳನ್ನು ತಡೆಯಲು ರೈತರಿಗೆ ಪರಿಣಾಮಕಾರಿ ಕಾನೂನು ಮತ್ತು ತಾಂತ್ರಿಕ ಸಾಧನಗಳ ಕೊರತೆ ಇದೆ. ವಿದ್ಯುತ್ ಬೇಲಿ, ಸೌರ ಬೇಲಿ, ಸಮೂಹ ನಿಗಾ ವ್ಯವಸ್ಥೆಗಳು ಎಲ್ಲ ರೈತರಿಗೆ ಆರ್ಥಿಕವಾಗಿ ಸಾಧ್ಯವಿಲ್ಲ. ಇತ್ತ, ಕಾನೂನು ನಿರ್ಬಂಧಗಳು ರೈತರಿಗೆ ಸ್ವಯಂ ರಕ್ಷಣೆಯ ಅವಕಾಶವನ್ನೂ ಸೀಮಿತಗೊಳಿಸುತ್ತವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಆಡಳಿತಾತ್ಮಕ ಮೌನ? : ಪ್ರತಿ ಘಟನೆಯ ಬಳಿಕ ಪರಿಹಾರ ಘೋಷಣೆ, ಸಮಿತಿ ರಚನೆ, ಸಭೆಗಳಷ್ಟೇ ನಡೆಯುತ್ತಿವೆ ಎಂಬ ಆರೋಪ ರೈತರಿಂದ ಕೇಳಿಬರುತ್ತಿದೆ. ದೀರ್ಘಕಾಲೀನ ನೀತಿ ಮತ್ತು ಸ್ಥಳಾಧಾರಿತ ಪರಿಹಾರಗಳ ಕೊರತೆ ಈ ಸಮಸ್ಯೆಯನ್ನು ಮರುಮರು ಮರುಕಳಿಸುವಂತೆ ಮಾಡುತ್ತಿದೆ.
ಏಕೆ ಹೆಚ್ಚುತ್ತಿದೆ ಕಾಡು ಪ್ರಾಣಿಗಳ ದಾಳಿ? : ತಜ್ಞರ ಪ್ರಕಾರ, ಅರಣ್ಯ ಪ್ರದೇಶಗಳ ಕುಗ್ಗುವಿಕೆ, ಆಹಾರ ಮೂಲಗಳ ಕೊರತೆ, ತೋಟ ಬೆಳೆಗಳು ಸುಲಭ ಆಹಾರವಾಗಿ ಮಾರ್ಪಡುವುದು, ಹವಾಮಾನ ಬದಲಾವಣೆಯಿಂದ ಕಾಡಿನ ಆಹಾರ ಚಕ್ರದಲ್ಲಿ ವ್ಯತ್ಯಯ,ಇವು ಕಾಡು ಪ್ರಾಣಿಗಳನ್ನು ಕೃಷಿ ಭೂಮಿಗಳತ್ತ ಒತ್ತಾಯವಾಗಿ ತಳ್ಳುತ್ತಿದೆ. ಅಡಿಕೆ ತೋಟಗಳು ನೆರಳು, ತೇವಾಂಶ ಮತ್ತು ಆಹಾರ — ಮೂರು ಅಂಶಗಳೂ ಇರುವುದರಿಂದ ಕಾಡು ಪ್ರಾಣಿಗಳಿಗೆ ಆಕರ್ಷಕವಾಗಿವೆ.
ಮುಂದೆ ಏನು ಮಾಡಬೇಕು? : ತಜ್ಞರು ಮತ್ತು ರೈತ ಸಂಘಟನೆಗಳ ಸಲಹೆ ಪ್ರಕಾರ , ಕಾಡು ಪ್ರಾಣಿ ನಿರ್ವಹಣೆಗೆ ಪ್ರತ್ಯೇಕ ಕರಾವಳಿ ಕಾರ್ಯಯೋಜನೆ, ಅಡಿಕೆ ತೋಟಗಳಿಗೆ ಸರ್ಕಾರಿ ಸಹಾಯಧನದ ರಕ್ಷಣಾ ಬೇಲಿ, ನಷ್ಟಕ್ಕೆ ತ್ವರಿತ ಮತ್ತು ಯಥಾರ್ಥ ಪರಿಹಾರ ವ್ಯವಸ್ಥೆ, ಅರಣ್ಯ–ಕೃಷಿ–ಜಿಲ್ಲಾಡಳಿತ ನಡುವಿನ ಸಂಯೋಜಿತ ಕಾರ್ಯಾಚರಣೆ, ಇವು ತಕ್ಷಣ ಅಗತ್ಯವಾಗಿವೆ.
ಪಾಠ ಏನು? : ಗೋವಾ ಮತ್ತು ಪುತ್ತೂರಿನ ಘಟನೆಗಳು ಸ್ಪಷ್ಟಪಡಿಸುವುದೇನಂದರೆ , ಕಾಡು ಪ್ರಾಣಿ–ಅಡಿಕೆ ಸಂಘರ್ಷ ಇನ್ನು ಅಪರೂಪದ ಘಟನೆ ಅಲ್ಲ; ಇದು ಕರಾವಳಿ ಕೃಷಿಯ ಸಮಸ್ಯೆಯಾಗಿದೆ. ಇದನ್ನು ಈಗಲೂ ಗಂಭೀರವಾಗಿ ಪರಿಗಣಿಸದಿದ್ದರೆ, ಅಡಿಕೆ ಕೃಷಿ ಭವಿಷ್ಯದಲ್ಲಿ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಕೃಷಿಕರ ಗೋಳು ಏನು..? : ನಮ್ಮ ಅಡಿಕೆ ತೋಟ ಕಾಡಿಗೆ ಸೇರಿಲ್ಲ – ಆದರೂ ನಾವು ಅಸಹಾಯಕರು ಎನ್ನುವುದು ರೈತರ ಗೋಳು. ಅಡಿಕೆ ನಮ್ಮ ಪಾಲಿಗೆ ಕೇವಲ ಬೆಳೆ ಅಲ್ಲ. ಅದು ನಮ್ಮ ಮನೆ, ಮಕ್ಕಳ ಶಿಕ್ಷಣ, ಸಾಲದ ಹೊಣೆ, ಬದುಕಿನ ಭರವಸೆ. ಆದರೆ, ಇವತ್ತು ಕರಾವಳಿ ಕರ್ನಾಟಕದ ಅಡಿಕೆ ರೈತನು ತನ್ನ ತೋಟದಲ್ಲೇ ಭಯದಿಂದ ಬದುಕುವ ಸ್ಥಿತಿಗೆ ತಲುಪಿದ್ದಾನೆ.
ಕಾಡು ಹಂದಿಗಳು ರಾತ್ರಿ ಬಂದರೆ ಬೆಳಗಿನ ಜಾವ ಉಳಿದಿರುವುದು ನಾಶವಾದ ತೋಟ. ಮಂಗಗಳು ಹಗಲು ಬಂದರೆ ನೋಡುತ್ತಾ ನಿಲ್ಲುವುದೇ ನಮ್ಮ ವಿಧಿ. ತಡೆಯಲು ಕಾನೂನು ಇಲ್ಲ, ಓಡಿಸಲು ಸಾಧನವಿಲ್ಲ, ನಷ್ಟವಾದರೆ ಸಮಯಕ್ಕೆ ಪರಿಹಾರವಿಲ್ಲ. ಅರಣ್ಯ ಕುಗ್ಗುತ್ತಿದೆ ಎನ್ನುವುದು ನಿಜ. ಆದರೆ ಅದರ ಬೆಲೆ ರೈತ ಮಾತ್ರ ಏಕೆ ಕಟ್ಟಬೇಕು? ಕಾಡಿನ ಪ್ರಾಣಿಗಳು ತಿನ್ನುತ್ತಿವೆ, ರೈತ ಮಾತ್ರ ಕೈಕಟ್ಟಿ ನಿಲ್ಲಬೇಕು — ಇದು ಯಾವ ನ್ಯಾಯ?
ನಮ್ಮ ಬಳಿ ಇದ್ದ ಕೊವಿಯನ್ನು “ಕಾನೂನು” ಹೆಸರಿನಲ್ಲಿ ಸದ್ದಿಲ್ಲದೆ ಮಾಡಲಾಗುತ್ತಿದೆ. ಪರಿಹಾರ ಲಭ್ಯವಾದವರಿಗೆ ಮಾತ್ರವೇ ಕೋವಿ ಲೈಸನ್ಸ್ ನವೀಕರಣವಂತೆ, ಪರಿಹಾರ ಸಿಕ್ಕಬೇಕಾದರೆ ಕೋವಿ ಏಕೆ, ಕೃಷಿ ಏಕೆ..?, ಕೃಷಿ ಉಳಿಯಬೇಕು ಎನ್ನುವ ಕಾರಣದಿಂದಲೇ, ಬೆಳೆ ರಕ್ಷಣೆಗಾಗಿಯೇ ಕೃಷಿಕರಿಗೆ ಕೋವಿ ಎನ್ನುವ ಪ್ರಶ್ನೆಗಳಿಗೂ ಉತ್ತರವಿಲ್ಲ..!. ಆದರೆ, ಕಾಡು ಹಂದಿಗಳ ಹಿಂಡು, ಕಾಡು ಪ್ರಾಣಿಗಳ ಹಿಂಡು ಕಾನೂನು ಓದಿ ಬರುತ್ತದೆಯೇ?
ತಿಂದು ಕೊಬ್ಬಿ ಬೆಳೆದ ಹಂದಿಗಳನ್ನು ಖಾಲಿ ಕೈಯಲ್ಲಿ ಓಡಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಆಡಳಿತ ಅರ್ಥಮಾಡಿಕೊಳ್ಳಬೇಕು. ಪ್ರತಿ ಬಾರಿ ಸಮಸ್ಯೆ ಬಂದಾಗ “ಪರಿಶೀಲನೆ”, “ವರದಿ”, “ಸಭೆ” ಎಂಬ ಪದಗಳೇ ಕೇಳಿಸುತ್ತವೆ. ಆದರೆ ತೋಟದಲ್ಲಿ ನಿಂತು ನೋಡುವ ಜನಪ್ರತಿನಿಧಿಗಳು ಅಪರೂಪ.
ಒಂದು ದಿನ ನಮ್ಮ ಜೊತೆಗೆ ಕಳೆಯಿರಿ, ರಾತ್ರಿ ನಿದ್ರೆ ಇಲ್ಲದೆ ತೋಟ ಕಾಯುವುದು ಏನು, ಬೆಳಿಗ್ಗೆ ನಾಶವಾದ ಗಿಡ ನೋಡಿದಾಗ ಮನಸ್ಸು ಹೇಗೆ ಕುಸಿಯುತ್ತದೆ ಎಂಬುದು ಅರ್ಥವಾಗುತ್ತದೆ ಎನ್ನುತ್ತಾರೆ ರೈತರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ



