ಅಧಿಕಾರ ಬಂದ 5 ವರ್ಷದಲ್ಲಿ ಶಿವಸೇನೆ-ಬಿಜೆಪಿ ನಡುವೆ ಏಕಾಯಿತು ಮುನಿಸು ? 1995 ರ ನಂತರ 2014 ರಲ್ಲಿ ಅಧಿಕಾರಕ್ಕೆ ಬಂದ ಬಲಪಂಥೀಯ ಪಕ್ಷಗಳ ನಡುವೆ ವಿರಸವಾಗಿದೆ.ಕಟ್ಟರ್ ಹಿಂದೂವಾದಿ ಪಕ್ಷ ಶಿವಸೇನೆ ಹಾಗೂ ಬಿಜೆಪಿ ನಡುವೆ ಇಷ್ಟೊಂದು ವಿರಸವಾದರೂ ಅದೇ ರಾಜ್ಯದಲ್ಲಿ ಕೇಂದ್ರ ಸ್ಥಾನವನ್ನು ಹೊಂದಿರುವ ಆರ್ ಎಸ್ ಎಸ್ ಮೌನವಹಿಸಿತು. ಆರ್ ಎಸ್ ಎಸ್ ಮಧ್ಯಪ್ರವೇಶ ಮಾಡಬೇಕು ಎಂದು ಶಿವಸೇನೆ ಹೇಳಿದ ನಂತರವೂ ಪ್ರವೇಶ ಮಾಡಲಿಲ್ಲ. ಮೌನ ವಹಿಸಿತು. ಯಾಕೆ ಹೀಗಾಯಿತು? ಎಂಬ ಪ್ರಶ್ನೆ ಎದ್ದಿದೆ. ಏಕೆಂದರೆ ಕಳೆದ ಎರಡು ಚುನಾವಣೆಯಲ್ಲಿ ಆರ್ ಎಸ್ ಎಸ್ ಪ್ರಮುಖ ಪಾತ್ರ ವಹಿಸಿತ್ತು. ಕರ್ನಾಟಕದ ಚುನಾವಣೆ ಹಾಗೂ ಆ ಬಳಿಕ ಲೋಕಸಭಾ ಚುನಾವಣೆಯ ಸಮಯದಲ್ಲಿ ಕೂಡಾ ಆರ್ ಎಸ್ ಎಸ್ ಸಕ್ರಿಯವಾಗಿ ಕೆಲಸ ಮಾಡಿತ್ತು. ಈಗ ಮಹಾರಾಷ್ಟ್ರದಲ್ಲಿ ಏಕೆ ಮೌನವಾಗಿದೆ. ಅದೂ ತನ್ನ ಶಕ್ತಿ ಕೇಂದ್ರದಲ್ಲಿ ? .
ಹಿಂದೆಲ್ಲಾ ಯಾವುದೇ ಪ್ರಮುಖ ನಿರ್ಧಾರದ ಸಂದರ್ಭ ಬಿಜೆಪಿಯ ಯಾವುದೇ ಮುಖಂಡರು ಆರ್ ಎಸ್ ಎಸ್ ಕೇಂದ್ರ ಕಚೇರಿಗೆ ತೆರಳಿ ಮಾತುಕತೆ ನಡೆಸುತ್ತಿದ್ದರು. ಬಿ ಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಹಿರಿಯರು ಆರ್ ಎಸ್ ಎಸ್ ಪ್ರಮುಖರ ಜೊತೆ ಆಗಾಗ ದೇಶದ ಹಿತದೃಷ್ಠಿಯ ಬಗ್ಗೆ ಮಾತುಕತೆ ನಡೆಸುತ್ತಿದ್ದರು. ಈಚೆಗೆ ಕೆಲವು ಸಮಯಗಳಿಂದ ಇದ್ಯಾವುದೂ ಕಾಣುತ್ತಿಲ್ಲ. ಇದೆಲ್ಲಾ ಕಾರಣದಿಂದ ಕೆಲವು ಕಡೆ ಗೊಂದಲ ಆರಂಭವಾಗಿದೆಯೇ ಎಂಬ ಚರ್ಚೆ ಆರಂಭವಾಗಿದೆ.ಆರ್ ಎಸ್ ಎಸ್ ಹೀಗಾಗಿಯೇ ಮೌನವಾಗಿದೆಯೇ? ಎಂಬ ಚರ್ಚೆಯೂ ಇದೆ.
2014ಕ್ಕೂ ಮುನ್ನ ಬಿಜೆಪಿ 7 ರಾಜ್ಯಗಳಲ್ಲಿ ಅಧಿಕಾರ ಹೊಂದಿತ್ತು. 2014 ರಿಂದ ಬಿಜೆಪಿಯ ಗೆಲುವಿನ ಪರ್ವ ಆರಂಭವಾಯಿತು. ಅದೂ ಮಹಾರಾಷ್ಟ್ರದಿಂದಲೇ.ಈಗ ಪತನವೂ ಅದೇ ರಾಜ್ಯದಿಂದಲೇ ಆರಂಭವಾಗಿದೆಯೇ ಎಂಬುದೂ ಈಗ ಪ್ರಶ್ನೆಯಾಗಿದೆ. ಮಹಾರಾಷ್ಟ್ರದಿಂದ ಆರಂಭವಾದ ಗೆಲುವಿನ ನಾಗಾಲೋಟ ದೇಶದ 18 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುವಲ್ಲಿಗೆ ಬಂದಿತ್ತು. ಅದರಲ್ಲೂ 14 ರಾಜ್ಯಗಳಲ್ಲಿ ಬಿಜೆಪಿ ಅಥವಾ ಬಿಜೆಪಿ ಬೆಂಬಲಿತ ಪಕ್ಷದವರು ಮುಖ್ಯಮಂತ್ರಿ ಆಗಿದ್ದರು. ಕಾಂಗ್ರೆಸ್ ಮುಕ್ತ ಭಾರತ ಎಂಬಲ್ಲಿಗೆ ಬಂದಿತ್ತು. ಈಗ ಆ ಪ್ರಭಾವ ಕುಸಿಯುತ್ತಿದೆ. ಕಳೆದ ಲೋಕಸಭಾ ಚುನಾವಣೆಯ ವೇಳೆ ಮಹಾಘಟಬಂಧನ ರಚನೆಯಾದರೂ ಅದು ಯಶಸ್ವಿಯಾಗಲಿಲ್ಲ. ಈಗ ಹಂತ ಹಂತವಾಗಿ ಅದೆಲ್ಲಾ ಜಾರಿಯಾಗುತ್ತಿದೆಯೇ ಎಂಬ ಕುತೂಹಲ ಮೂಡಿದೆ. ಏಕೆಂದರೆ ಈಗ ಭಾರತ ಭೂಪಟದಲ್ಲಿ ಶೇ 40 ಭಾಗ ಮಾತ್ರ ಬಿಜೆಪಿ ಅಧಿಕಾರ ಹೊಂದಿದೆ.
ಯಾವುದೇ ತಂತ್ರಗಾರಿಕೆ ಇದ್ದರೂ ಸಂಘಟನೆಯೊಂದರ, ಸಂಘಟನೆಯ ಮೂಲ ಸಿದ್ಧಾಂತಗಳನ್ನು ಬಿಟ್ಟು ಅಧಿಕಾರವೇ ಮುಖ್ಯವಾದಾಗ , ಇಡೀ ಪಕ್ಷವನ್ನೇ ಮಿತಿಗಿಂತ ಅಧಿಕವಾಗಿ ಹಿಡಿತದಲ್ಲಿ ಇರಿಸಿಕೊಂಡಾಗ, ವ್ಯವಸ್ಥೆಯನ್ನು ಮಿತಿಗಿಂತ ಅಧಿಕವಾಗಿ ನಿಯಂತ್ರಿಸಲು ಹೊರಟಾಗ ವ್ಯವಸ್ಥೆಗಳೂ ಶಿಥಿಲವಾಗುತ್ತವೆ ಎನ್ನುವುದಕ್ಕೆ ಉದಾಹರಣೆ, ಸಾಕ್ಷಿ ದಾಖಲಾಗುತ್ತಿದೆಯೇ ? ಇಂತಹದ್ದು ಇತರ ರಾಜ್ಯಗಳಿಗೂ , ಗ್ರಾಮೀಣ ಭಾಗಗಳಿಗೂ ವಿಸ್ತರಣೆಯಾದರೆ ಅಚ್ಚರಿ ಇಲ್ಲ.