ಇದು “ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಅಚ್ರಪ್ಪಾಡಿ”

July 28, 2019
8:00 AM

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಲನಚಿತ್ರವಾಗಿ ಭಾರೀ ಫೇಮಸ್ಸಾಯಿತು. ಜನಮೆಚ್ಚುಗೆ ಪಡೆಯಿತು. ಏಕೆಂದರೆ ಕಾಸರಗೋಡಿನ ವಾಸ್ತವ ಸ್ಥಿತಿಯೇ ಹಾಗಿತ್ತು, ಈ ಕಾರಣದಿಂದ ಜನರಿಗೆ ಮೆಚ್ಚುಗೆಯಾಯ್ತು. ಇದೂ ಹಾಗೆಯೇ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಅಚ್ರಪ್ಪಾಡಿ.  ಕನ್ನಡ ಶಾಲೆಯನ್ನು ಕನ್ನಡದ ನೆಲದಲ್ಲಿ ಉಳಿಸಲು ಊರಿನ ಮಂದಿ, ಶಾಲೆಯ ಶಿಕ್ಷಕಿ ನಡೆಸುತ್ತಿರುವ ಒಂದು ಮಾದರಿಯ ಹೋರಾಟ ಅಥವಾ ಆಂದೋಲನ ಅಂತಲೂ ಕರೆಯಬಹುದು.  ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಅಚ್ರಪ್ಪಾಡಿ ಶಾಲೆಯ ಕತೆ ಇದು.  ಒಂದು ಕಾಲದಲ್ಲಿ ಇನ್ನೇನು ಶಾಲೆ ಮುಚ್ಚಿಯೇ ಬಿಡುತ್ತದೆ ಎಂಬ ಹಂತದಲ್ಲಿತ್ತು. 1 ನೇ ತರಗತಿಯ ದಾಖಲಾತಿ ಶೂನ್ಯಕ್ಕೆ ತಲಪಿತ್ತು. ಇಂದು ಅದೇ ಶಾಲೆಯಲ್ಲಿ 1 ನೇ ತರಗತಿಗೆ ದಾಖಲಾತಿ 9. ಒಟ್ಟು ಮಕ್ಕಳ ಸಂಖ್ಯೆ 22. 

Advertisement
Advertisement

 

ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಅಚ್ರಪ್ಪಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಮಕ್ಕಳ ಸಂಖ್ಯೆ 22. 1 ನೇ ತರಗತಿಯಿಂದ 5 ನೇ ತರಗತಿವರೆಗೆ ಇಲ್ಲಿ ಶಾಲೆ ನಡೆಯುತ್ತದೆ. ಒಂದು ಕಾಲದಲ್ಲಿ 100 ಕ್ಕೂ ಅಧಿಕ ಮಕ್ಕಳಿದ್ದ ಶಾಲೆ. 1954 ರಿಂದ ಊರಿನ ಬಹುಪಾಲು ಮಂದಿಗೆ ಅ…ಆ..ಇ..ಈ ಕಲಿಸಿದ ಶಾಲೆ ಇದು. ಅಂತಹ ಶಾಲೆ 2011 ರ ವೇಳೆಗೆ ಮುಚ್ಚುವ ಸ್ಥಿತಿಗೆ ಬಂದಿತು. ಆಗ ಒಟ್ಟು ಮಕ್ಕಳ ಸಂಖ್ಯೆ ಇದ್ದದ್ದು 7. ಆ ನಂತರ ಹಂತ ಹಂತವಾಗಿ ಪ್ರಯತ್ನ ನಡೆಯಿತು. ಇಂದು ಮಕ್ಕಳ ಸಂಖ್ಯೆ 22.

 

ಏನೇನು ಪ್ರಯತ್ನ ಮಾಡಿದರು ?:

ಈ ಶಾಲೆಗೆ ಉಳಿಯಬೇಕು ಎಂದು ಶಾಲೆಯ ಶಿಕ್ಷಕಿಗೆ ಮಾತ್ರವಲ್ಲ ಸ್ಥಳೀಯರಿಗೂ ಈ ಆಸಕ್ತಿ ಇತ್ತು. ಹೀಗಾಗಿಯೇ ಇಲ್ಲಿನ ನಿವೃತ್ತ ಶಿಕ್ಷಕ ಬಾಬು ಮಾಸ್ತರ್ ಅಚ್ರಪ್ಪಾಡಿ ಹಾಗೂ ಅಂದಿನ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ನಿರ್ಮಲ ಅವರನ್ನೊಳಗೊಂಡ ಶಾಲೆ ಉಳಿಸುವ ಹಿತರಕ್ಷಣಾ ಸಮಿತಿ ಮಾಡಿ ಕೆಲಸ ಆರಂಭಿಸಿದರು. ಊರಿನ ಮಂದಿ ಎಲ್ಲರೂ ಸಹಕಾರ ಮಾಡಿದರು. ಕರಪತ್ರ ಮಾಡಿ ಮನೆಮನೆಗೆ ಹಂಚಿ ಆಂದೋಲನ ಮಾದರಿಯಲ್ಲಿ ತೆರಳಿ ಶಾಲೆ ಉಳಿಸುವ ಬಗ್ಗೆ ಮಾಹಿತಿ ನೀಡಿದರು. ಶಾಲೆಯ ಮುಂದೆಯೇ 4-5  ಹಳದಿ ಬಣ್ಣದ ಶಾಲೆಯ ವಾಹನಗಳು ಓಡಾಡುವ ಸಂದರ್ಭ ಸವಾಲಿನಲ್ಲಿಯೇ ಕೆಲಸ ಮುಂದುವರಿಸಿ ಗುಣಮಟ್ಟದ ಶಿಕ್ಷಣ ಅಚ್ರಪ್ಪಾಡಿ  ಸರಕಾರಿ ಶಾಲೆಯಲ್ಲೂ ನೀಡುವ ಬಗ್ಗೆ ಭರವಸೆ ನೀಡಿದರು.ಪಾಠದ ಜೊತೆಗೆ ಪಾಠೇತರ ಚಟುವಟಿಕೆ, ಇಂಗ್ಲಿಷ್ ಪಾಠ, ಓದಲು ಕಲಿಸುವುದು ಸೇರಿದಂತೆ ಮಕ್ಕಳ ವಿಕಾಸದ ಶಿಕ್ಷಣ ನೀಡುವ ಬಗ್ಗೆಯೂ ವಿವರ ನೀಡಿದರು. ಹೀಗಾಗಿ ಕೆಲವೊಂದು ಜನರು ಆಸಕ್ತರಾಗಿ ಶಾಲೆಗೆ ಸೇರಿಸಿದರು. ಇದೇ ವೇಳೆ ಸ್ವಚ್ಛ ಶಾಲೆ ಬಹುಮಾನ ಸೇರಿದಂತೆ ಕೆಲವೊಂದು ಬಹುಮಾನ ಸಿಕ್ಕಿದ್ದು ಕೂಡಾ ಶಾಲೆಗೆ ಗೌರವ ಹೆಚ್ಚಾಯಿತು. ಊರೆಲ್ಲಾ ಸುದ್ದಿಯಾಯಿತು.ಈ ಕಾರಣದಿಂದ ಒಮ್ಮೆಲೇ 12 ಮಂದಿ ವಿದ್ಯಾರ್ಥಿಗಳು ಶಾಲೆಗೆ ಬಂದರು. ಶಾಲೆ ಬೆಳೆಯಿತು. ಈಗಿನ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಕಡಪಳ ಅವರ ಪ್ರಯತ್ನವೂ ಮುಂದುವರಿದಿದೆ.

 

 

ಮಕ್ಕಳ ಹೆಸರಲ್ಲಿ ಠೇವಣಿ ಇಟ್ಟರು ಊರವರು..!

ಆರಂಭದಲ್ಲಿ ಒಂದನೇ ತರಗತಿಗೆ ಸೇರುವ ವಿದ್ಯಾರ್ಥಿಯ ಹೆಸರಲ್ಲಿ 1 ಸಾವಿರ ರೂಪಾಯಿ ಠೇವಣಿಯನ್ನು ಊರಿನ ಮಂದಿ ಇಡುವ ಬಗ್ಗೆಯೂ ಹೇಳಿದ್ದರು. ಇದಕ್ಕಾಗಿ ಶಾಲೆಯ ಶಿಕ್ಷಕಿಯೂ ಸೇರಿದಂತೆ ಊರಿನ ಕೆಲವು ಮಂದಿ ಸಹಕಾರ ನೀಡಿದರು. ಹೊಸದಾಗಿ ಸೇರುವ ವಿದ್ಯಾರ್ಥಿಯ ಹೆಸರಲ್ಲಿ ಠೇವಣಿ ಇರಿಸಿದರು. 5 ನೇ ತರಗತಿ ಬಿಡುವ ವೇಳೆ ಈ ಠೇವಣಿ ಹಣ ಸಿಗುವಂತೆ ವ್ಯವಸ್ಥೆ ಮಾಡಿದರು. ಇದರಲ್ಲಿ ವೇಣುಗೋಪಾಲ ಮಂಗಳೂರು  ಹಾಗೂ  ರೋಹಿತ್ ಎಂಬವರು ಹೆಚ್ಚಿನ ಆಸಕ್ತಿ ತೋರಿದರು.

 

ಕೊಡುಗೆಗಳಿಗೆ ಮನೆಮನೆ ತೆರಳಿದರು:

ಮುಚ್ಚುವ ಹಂತದಲ್ಲಿದ್ದ ಈ  ಸರಕಾರಿ ಶಾಲೆಗೆ ಸಹಜವಾಗಿಯೇ ಸೌಲಭ್ಯಗಳ ಕೊರತೆ ಇತ್ತು. ವ್ಯವಸ್ಥೆಗಳು ಇಲ್ಲವಾಗಿತ್ತು. ಇದಕ್ಕಾಗಿ ಊರಿನ ಮಂದಿಯೇ ಮುಂದೆ ನಿಂತು ಸಹಕಾರ ನೀಡಿದರು. ಇಲ್ಲೂ ಶಾಲೆಯ ಶಿಕ್ಷಕಿ ಶ್ವೇತಾ,  ಬೇಕುಗಳ ಪಟ್ಟಿ ಮಾಡಿದರೆ ಅವರ ಮನೆಯವರ ಸಹಕಾರದಿಂದ ತೊಡಗಿ ಊರಿನ ಮಂದಿಯ ಬಹುಪಾಲು ಸಹಕಾರ ಪಡೆದು ವ್ಯವಸ್ಥೆಗಳನ್ನು  ಮಾಡಲಾಯಿತು.

ಕೊಡುಗೆ… ಕೊಡುಗೆ…

ಆರಂಭದಲ್ಲಿ ಶಾಲೆಗೆ ಫ್ಯಾನ್, ಡೆಸ್ಕ್ , ನಲಿಕಲಿಗೆ ವ್ಯವಸ್ಥೆ , ಮಕ್ಕಳಿಗೆ ಸಮವಸ್ತ್ರ, ಕೊಡೆ, ಪುಸ್ತಕ, ಬಟ್ಟಲು, ಬಟ್ಟಲು , ಬಟ್ಟಲು ಇಡಲು ರಾಕ್ ,  ಗೋದ್ರೆಜ್…. ಹೀಗೆ ಊರಿನ ಮಂದಿ, ಪರವೂರಿನ ಮಂದಿ ಕೊಡುಗೆಗಳನ್ನು ನೀಡಿ ಶಾಲೆಗೆ ಬೆಳಕಾದರು.

ಸಹಕಾರದ ಹೆಸರು ಒಂದೆರಡಲ್ಲ….

ಅಚ್ರಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಉಳಿವಿಗೆ ಊರವರ, ಪರವೂರ ಮಂದಿಯ ಕೊಡುಗೆ ಒಂದೆರಡಲ್ಲ. ಹೆಸರುಗಳ ಪಟ್ಟಿಯೇ ಇದೆ. ಅದರ ಜೊತೆಗೆ ವಿವಿಧ ಟ್ರಸ್ಟ್ ಗಳು, ಸಂಘಸಂಸ್ಥೆಗಳು ಸಹಕಾರ ನೀಡಿವೆ. ಸ್ಥಳೀಯ ಗ್ರಾಮ ಪಂಚಾಯತ್, ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ. ಈಗಲೂ ಈ ಶಾಲೆಯ ಅಭಿವೃದ್ಧಿಗೆ ಕೊಡುಗೆಗಳು, ದಾನಿಗಳ ನೆರವು ಬೇಕಾಗಿದೆ.

 

 

ಹೆಲ್ಪಿಂಗ್ ಹ್ಯಾಂಡ್ ಹೀಲಿಂಗ್ ಹಾರ್ಟ್ ಸಂಸ್ಥೆಯಿಂದ ಸಮವಸ್ತ್ರ ಕೊಡುಗೆ

ಹುಬ್ಬಳ್ಳಿ ಯ ಹೆಲ್ಪಿಂಗ್ ಹ್ಯಾಂಡ್ ಹೀಲಿಂಗ್ ಹಾರ್ಟ್ (4H) ಸಂಸ್ಥೆ ವಿಧ್ಯಾರ್ಥಿಗಳಿಗೆ ಸಮವಸ್ತ್ರ ಕೊಡುಗೆಯಾಗಿ ನೀಡಿದೆ. ದೇವ ರವಿಶಂಕರ್ ಅವರ ಪುತ್ರ ಹುಬ್ಬಳ್ಳಿ ಯಲ್ಲಿ ಆಕ್ಸಿಸ್ ಬ್ಯಾಂಕ್ ನ ಕ್ರೆಡಿಟ್ ಹೆಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲಿ ತನ್ನ ಸ್ನೇಹಿತರನ್ನು ಒಳಗೊಂಡಿರುವ 4H ಸಂಸ್ಥೆಯ ಕಾರ್ಯದರ್ಶಿಯಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
4H ನ ಧ್ಯೆಯ ಹೆಲಪಿಂಗ್ ಹ್ಯಾಂಡ್ಸ್ ಹೀಲಿಂಗ್ ಹಾರ್ಟ್ಸ್ ಎಂದು ಆಗಿದ್ದು ತೀರ ಅಗತ್ಯತೆ ಉಳ್ಳ ಸಂಸ್ಥೆಗಳಿಗೆ ನೆರವಾಗುವುದು ಇದರ ಮುಖ್ಯ ಉದ್ದೇಶವಾಗಿದೆ. ಆದುದರಿಂದ ಅಚ್ರಪ್ಪಾಡಿ ಶಾಲೆಗೆ ಸುಮಾರು ರೂ.11000 ಮೌಲ್ಯದ ಸಮವಸ್ತ್ರಗಳನ್ನು ಶಾಲಾ ವಿಧ್ಯಾರ್ಥಿಗಳಿಗೆ ನೀಡಿ, ಶಾಲಾ ಮಕ್ಕಳು ಮತ್ತು ಪೋಷಕರ ಮೆಚ್ಚುಗೆಗೆ ಸಂಸ್ಥೆ ಪಾತ್ರವಾಗಿದೆ.

 

 

 

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಕಡಲಾಮೆಗಳ ಸಂತಾನೋತ್ಪತ್ತಿಗೆ ಅರಣ್ಯ ಇಲಾಖೆ ರಕ್ಷಣೆ | ಬಾವಳ ಕಡಲತೀರದಲ್ಲಿ ಸಂತೋಷದ ಕ್ಷಣ
February 14, 2026
7:55 AM
by: ದ ರೂರಲ್ ಮಿರರ್.ಕಾಂ
ಮಂಗಳೂರಿನಲ್ಲಿ ಸಮುದ್ರ ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆಗೆ ಸಂಸದರಿಂದ ಒತ್ತಾಯ
February 14, 2026
7:45 AM
by: ದ ರೂರಲ್ ಮಿರರ್.ಕಾಂ
ಕರಾವಳಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಆಗ್ರಹ | ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಮಗ್ರ ದೃಷ್ಟಿ ಅಗತ್ಯ
February 13, 2026
10:24 AM
by: ದ ರೂರಲ್ ಮಿರರ್.ಕಾಂ
ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!
February 12, 2026
7:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror