ಉಜಿರೆ: ವನರಂಗ ಬಯಲು ರಂಗ ಮಂದಿರ ಉದ್ಘಾಟನೆ

December 9, 2019
9:01 PM

ಉಜಿರೆ: ಕಲಾವಿದರು ಮತ್ತು ಸಹೃದಯ ಕಲಾಭಿಮಾನಿಗಳಿಂದ ಕಲೆ ಉಳಿಯುತ್ತದೆ, ಬೆಳೆಯುತ್ತದೆ. ಕಲೆಗಳು ದೈವತ್ವದ ಕಲ್ಪನೆಯೊಂದಿಗೆ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸಿ ಸುಸಂಸ್ಕೃತ, ಸಭ್ಯ ನಾಗರಿಕರನ್ನು ರೂಪಿಸಿ ಮಾನಸಿಕ ನೆಮ್ಮದಿ ಹಾಗೂ ಸಂತೋಷವನ್ನು ನೀಡುತ್ತವೆ ಎಂದು ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆಯವರು ಹೇಳಿದರು.

Advertisement
Advertisement

ಉಜಿರೆಯಲ್ಲಿ ನಿರ್ಮಿಸಲಾದ “ವನರಂಗ” ನೂತನ ಬಯಲು ರಂಗಮಂದಿರವನ್ನು ಅವರು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಸಂಗೀತ, ನೃತ್ಯ, ನಾಟಕ, ಯಕ್ಷಗಾನ ಮೊದಲಾದ ಕಲೆಗಳು ಮನೋರಂಜನೆಯೊಂದಿಗೆ ಸಾರ್ಥಕ ಬದುಕಿಗೆ ಉಪಯುಕ್ತವಾದ ಮೌಲಿಕ ಸಂದೇಶವನ್ನು ನೀಡುತ್ತವೆ. ನೂತನ ರಂಗಮಂದಿರದಿಂದಾಗಿ ಬಹುದಿನಗಳ ಕನಸು ನನಸಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಇದು ಸದಾ ಬಿಡುವಿಲ್ಲದ ರಂಗಮಂದಿರವಾಗಲಿ ಎಂದು ಹಾರೈಸಿದ ಅವರು ಇಲ್ಲಿ ಪ್ರಶಾಂತ ಪ್ರಾಕೃತಿಕ ಪರಿಸರವಿದ್ದು ಬೆಳದಿಂಗಳು ಹಾಗೂ ತಂಗಾಳಿಯೊಂದಿಗೆ ಪ್ರಾಕೃತಿಕ ಸೊಗಡನ್ನುಆಸ್ವಾದಿಸಲು ಸೂಕ್ತ ಜಾಗವಾಗಿದೆ. ಹಲವು ಪರಕೀಯರ ದಾಳಿಗೆ ತುತ್ತಾದರೂ ನಮ್ಮದೇಶದಲ್ಲಿ ಸನಾತನ ಧರ್ಮ, ಸಂಸ್ಕೃತಿ ಹಾಗೂ ಆಚಾರ– ವಿಚಾರಗಳು ಇಂದಿಗೂ ಜೀವಂತಿಕೆಯಿಂದ ಉಳಿಯಲು ಕಲೆಗಳು ಹಾಗೂ ಕಲಾವಿದರೇ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.

ಗಾಢವಾದ ತತ್ವ-ಸಿದ್ಧಾಂತಗಳನ್ನು, ಗಹನವಾದ ವಿಚಾರಗಳನ್ನು, ನೈತಿಕ ಸಂದೇಶವನ್ನು ನೃತ್ಯ, ನಾಟಕ, ಯಕ್ಷಗಾನದ ಮೂಲಕ ಕಲಾವಿದರು ಹೃದಯಸ್ಪರ್ಶಿಯಾಗಿ ಸಾದರಪಡಿಸುತ್ತಾರೆ. ರಾಮಾಯಣ, ಮಹಾಭಾರತದಂತಹ ಪುರಾಣಗಳು ಕಲೆಗಳ ಮೂಲಕ ದೈವತ್ವದ ಕಲ್ಪನೆಯನ್ನು ಸಾಕಾರಗೊಳಿಸುತ್ತವೆ. ಕಲೆಯ ಮಹತ್ವವನ್ನು ಶಬ್ದಗಳಿಂದ ವಿವರಿಸಲು ಸಾಧ್ಯವಿಲ್ಲ. ಆಸ್ವಾದಿಸಿ ಆನಂದಿಸಬಹುದು.ಆಂಗ್ಲ ಮಾಧ್ಯಮ ಶಿಕ್ಷಣದ ಪ್ರಭಾವದಿಂದ ಹಾಗೂ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದ ಕನ್ನಡ ಇಂದು ಅನ್ನದ ಭಾಷೆಯಾಗಿ, ಜ್ಞಾನದ ಭಾಷೆಯಾಗಿ ಉಳಿದಿಲ್ಲ. ಕಡಲತೀರದ ಭಾರ್ಗವ ಶಿವರಾಮ ಕಾರಂತರು, ಬೇಂದ್ರೆ, ಮಾಸ್ತಿ, ಕುವೆಂಪು, ಗಿರೀಶ್‍ ಕಾರ್ನಾಡು ಮೊದಲಾದ ಸಾಹಿತ್ಯ ದಿಗ್ಗಜರು ಇಂದಿನ ಮಕ್ಕಳಿಗೆ ಅಪರಿಚಿತರಾಗಿರುವುದು ದುರಂತವಾಗಿದೆ. ಮಕ್ಕಳು ಕಲೆಗಳಲ್ಲಿ ಆಸಕ್ತಿ, ಅಭಿರುಚಿ ಹೊಂದುವುದರಿಂದ ಮೊಬೈಲ್ ಫೋನ್ ಗೀಳಿನಿಂದ ದೂರವಾಗಬಹುದು ಎಂದು ಅವರು ಸಲಹೆ ನೀಡಿದರು.

ಶಾಸಕ ಹರೀಶ್ ಪೂಂಜ ಶುಭಾಶಂಸನೆ ಮಾಡಿ, ನೂತನ ರಂಗಮಂದಿರ ರಾಜ್ಯದಲ್ಲೇ ಶ್ರೇಷ್ಠ ವಿನ್ಯಾಸದಿಂದ ರೂಪುಗೊಂಡಿದೆ. ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗಕ್ಕೆ ಧರ್ಮಸ್ಥಳದ ಕೊಡುಗೆಯನ್ನುಅವರು ಕೃತಜ್ಞತೆಯಿಂದ ಸ್ಮರಿಸಿ ಅಭಿನಂದಿಸಿದರು. ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ತಾನು ಬಾಲ್ಯದಲ್ಲಿ ಅಜ್ಜಿ ಕಮಲಮ್ಮನವರ ಪ್ರೇರಣೆಯಿಂದ ಕೃಷ್ಣ ಹಾಗೂ ಪ್ರಹ್ಲಾದನ ಪಾತ್ರವನ್ನು ನಾಟಕದಲ್ಲಿ ಅಭಿನಯಿಸಿರುವುದನ್ನು ಸ್ಮರಿಸಿದರು. ಹೇಮಾವತಿ ಹೆಗ್ಗಡೆಯವರ ಕಲ್ಪನೆ ಹಾಗೂ ಪ್ರೇರಣೆಯಂತೆ ನೂತನರಂಗಮಂದಿರ ನಿರ್ಮಿಸಲಾಗಿದೆ. ಶಾಲಾ – ಕಾಲೇಜುಗಳ ವಿದ್ಯಾರ್ಥಿಗಳು ಬಯಲು ರಂಗಮಂದಿರದ ಸದುಪಯೋಗ ಪಡೆದು ತಮ್ಮಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.

Advertisement

ಎಸ್.ಡಿ.ಎಮ್.ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಜೊತೆಗೆ ಕ್ರೀಡೆಗಳು, ಸಾಂಸ್ಕೃತಿಕ ಚಟುವಟಿಕೆಗಳು, ಜೀವನ ಮೌಲ್ಯಗಳು, ಯೋಗ ಮತ್ತು ನೈತಿಕ ಶಿಕ್ಷಣದ ಮೂಲಕ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರನ್ನು ರೂಪಿಸಲಾಗುತ್ತದೆ ಎಂದು ಅವರು ಹೇಳಿದರು. ಎಸ್.ಡಿ.ಎಮ್.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ್ ಮತ್ತು ಕಾರ್ಯದರ್ಶಿ ಡಿ. ಹರ್ಷೇಂದ್ರಕುಮಾರ್ ಹಾಗೂ ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಶ್ರೀಧರ ಪೂಜಾರಿ ಉಪಸ್ಥಿತರಿದ್ದರು. ಎಸ್.ಡಿ.ಎಮ್.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ. ಬಿ. ಸೋಮಶೇಖರ ಶೆಟ್ಟಿ ಧನ್ಯವಾದವಿತ್ತರು. ಡಾ.ಬಿ.ಎ. ಕುಮಾರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ | ಈ ವರ್ಷ ಅದೃಷ್ಟವೋ ಅದೃಷ್ಟ!
May 18, 2025
10:50 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಹಾಳೆ ಉದ್ದಿಮೆ-ಮಾರುಕಟ್ಟೆ ಮತ್ತು ಪರಿಣಾಮ
May 18, 2025
8:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ | ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
May 17, 2025
10:22 PM
by: The Rural Mirror ಸುದ್ದಿಜಾಲ
ವಾಯುಭಾರ ಕುಸಿತ | ಕೇರಳದಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ | ಆರು ಜಿಲ್ಲೆಗಳಲ್ಲಿ ಎಲ್ಲೋ ಎಲರ್ಟ್‌ | ರಾಜ್ಯದಲ್ಲೂ ಮಳೆ ಸಾಧ್ಯತೆ |
May 17, 2025
8:27 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group