ಘನತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ : ಮಡಿಕೇರಿಯಲ್ಲಿ ಸ್ವಚ್ಛತಾ ಕ್ರಾಂತಿಗೆ ಯೋಜನೆ

June 4, 2019
10:00 AM

ಮಡಿಕೇರಿ: ಘನತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ಮೂಲಕ ಕೊಡಗು ಜಿಲ್ಲೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಹಾಗೂ ರಾಷ್ಟ್ರೀಯ ಹಸಿರು ನ್ಯಾಯ ಪೀಠದ ಆದೇಶವನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಜಿಲ್ಲಾಡಳಿತ ಜಿಲ್ಲಾ ಮಟ್ಟದ ವಿಶೇಷ ಕಾರ್ಯಪಡೆಯನ್ನು ರಚಿಸಿದೆ.

ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧ್ಯಕ್ಷರು, ಮಡಿಕೇರಿ ಗ್ರೀನ್ ಸಿಟಿ ಫೋರಂನ ಅಧ್ಯಕ್ಷರು ಸದಸ್ಯರುಗಳಾಗಿ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಕೊಡಗು ಫಾರ್ ಟುಮಾರೊ ಸಂಘಟನೆ ವಿಶೇಷ ಆಹ್ವಾನಿತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.

ಮಡಿಕೇರಿಯಲ್ಲಿ ಸ್ವಚ್ಛತಾ ಕ್ರಾಂತಿ:

ಮೊದಲ ಹಂತದಲ್ಲಿ ಮಡಿಕೇರಿ ನಗರದಲ್ಲಿ ಸ್ವಚ್ಛತೆ ಮತ್ತು ಘನ ತ್ಯಾಜ್ಯ ನಿರ್ವಹಣೆ ಮಾಡಲು ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ. ಹಸಿಕಸ, ಒಣಕಸ ಮತ್ತು ನೈರ್ಮಲ್ಯ ಕಸ(ಟಾಕ್ಸಿಕ್)ವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡುವ ವೈಜ್ಞಾನಿಕ ಕ್ರಮವನ್ನು ತಕ್ಷಣದಿಂದಲೇ ಜಾರಿ ಮಾಡಲಾಗುತ್ತಿದ್ದು, ಸಾರ್ವಜನಿಕರು ತ್ಯಾಜ್ಯ ವಿಲೇವಾರಿಯ ಪ್ರಯತ್ನಗಳಿಗೆ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮನವಿ ಮಾಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ನಗರದಾದ್ಯಂತ ಸಂಗ್ರಹವಾಗುವ ಹಸಿಕಸ, ಒಣಕಸವನ್ನೆಲ್ಲ ಒಟ್ಟಾಗಿ ಬೆಟ್ಟ ಪ್ರದೇಶದಲ್ಲಿ ವಿಲೇ ಮಾಡುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಇದರ ಬಗೆಹರಿಕೆಗೆ ಪ್ರಸ್ತುತ ಆದ್ಯತೆಯ ಮೇರೆ ಘನತ್ಯಾಜ್ಯ ನಿರ್ವಹಣೆಯನ್ನು ವ್ಯವಸ್ಥಿತವಾಗಿ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ತ್ಯಾಜ್ಯ ವಿಲೇವಾರಿ ಸಂಕಷ್ಟ ಕೇವಲ ವಾರ, ತಿಂಗಳಲ್ಲಿ ಬಗೆಹರಿಯುವಂತದ್ದಲ್ಲವೆಂದು ಸ್ಪಷ್ಟಪಡಿಸಿದರು. ಕಸ ವಿಲೇವಾರಿಯ ಸಮಸ್ಯೆ ಬಗೆಹರಿಕೆಗೆ ಶಾಶ್ವತ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ತ್ಯಾಜ್ಯ ವಿಲೇವಾರಿ ಕಾರ್ಯಕ್ಕೆ ನಗರಸಭೆಯ ಮೂಲಕ ಹೆಚ್ಚುವರಿ 20 ಕಾರ್ಮಿಕರನ್ನು ನಿಯುಕ್ತಿಗೊಳಿಸಲಾಗಿದೆ ಎಂದರು.

Advertisement

ಜೂ.4 ರಿಂದಲೇ ನಗರ ವ್ಯಾಪ್ತಿಯಲ್ಲಿ ಪ್ರತಿದಿನ ಹಸಿ ಕಸವನ್ನು ಸಂಗ್ರಹಿಸುವ ಕಾರ್ಯ ನಡೆಯಲಿದೆ. ನೂತನ ತಾಂತ್ರಿಕತೆಯನ್ನು ಬಳಸಿ ಹಸಿಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತದೆ ಮತ್ತು ಒಣಕಸವನ್ನು ಬೇರ್ಪಡಿಸಲಾಗುತ್ತದೆ. ಹೀಗೆ ಬೇರ್ಪಟ್ಟ ಪ್ಲಾಸ್ಟಿಕ್ ಹಾಗೂ ಬಟ್ಟೆಗಳನ್ನು ಸಿಮೆಂಟ್ ಸಂಸ್ಥೆಗಳಿಗೆ ಖರೀದಿ ಮಾಡಲು ಕಾನೂನಿನಡಿ ಅವಕಾಶ ನೀಡಲಾಗುವುದು.  ನಗರದಲ್ಲಿ ತ್ಯಾಜ್ಯದಿಂದ ಉತ್ಪತ್ತಿಯಾಗುವ ಗೊಬ್ಬರವನ್ನು ಕೃಷಿಕರಿಗೆ ಮಾರಾಟ ಮಾಡುವ ಜವಬ್ದಾರಿಯನ್ನು ಮಳೆಹಾನಿ ಸಂತ್ರಸ್ತರು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಕಾಲೂರಿನ ಪ್ರಾಜೆಕ್ಟ್ ಕೂರ್ಗ್‍ಗೆ ವಹಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮನೆಗಳಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಮೊದಲಾದ ಘನ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿಟ್ಟುಕೊಳ್ಳಬೇಕು. ಇದನ್ನು ವಾರದ ಬುಧವಾರ ಮತ್ತು ಶನಿವಾರಗಳಂದು ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗಿದೆ. ಇದೇ ರೀತಿ ಸ್ಯಾನಿಟರಿ ನ್ಯಾಫ್‍ಕಿನ್ಸ್ ಮೊದಲಾದ ನೈರ್ಮಲ್ಯ ಕಸವನ್ನು ವಾರಕ್ಕೆ ಎರಡು ಬಾರಿ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ, ಈ ನೈರ್ಮಲ್ಯ ಕಸ ವಿಲೇವಾರಿಗೆ ಯಾರೂ ಮುಂದೆ ಬಾರದಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯ ತ್ಯಾಜ್ಯ ವಿಲೇವಾರಿಯ ಜವಾಬ್ದಾರಿ ನಿರ್ವಹಿಸುತ್ತಿರುವವರನ್ನು ಸಂಪರ್ಕಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಹಸಿಕಸ ಮತ್ತು ಒಣಕಸವನ್ನು ಬೇರ್ಪಡಿಸಿ ನೀಡಲು ಜಿಲ್ಲಾಡಳಿತ ಹಾಗೂ ನಗರಸಭೆ ಗೊತ್ತು ಮಾಡಿರುವ ಸೂಚನೆಯಂತೆ ಸಾರ್ವಜನಿಕರು ನಡೆದುಕೊಳ್ಳಬೇಕು. ಇದನ್ನು ಪಾಲಿಸಲು ಎರಡು ವಾರಗಳ ಕಾಲಾವಕಾಶ ನೀಡಲಾಗುತ್ತದೆ. ನಿಯಮ ಮೀರಿದರೆ ಅಂತಹ ಮನೆಗಳಿಂದ ಕಸ ಸಂಗ್ರಹಿಸುವುದನ್ನು ಸ್ಥಗಿತಗೊಳಿಸಲಾಗುವುದು. ರಸ್ತೆಬದಿ ಕಸ ಹಾಕುವುದನ್ನು ತಪ್ಪಿಸಲು ಅಗತ್ಯ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಕೋಳಿ ಮಾಂಸದ ಅಂಗಡಿಗಳ ತ್ಯಾಜ್ಯದಿಂದ ಉಂಟಾಗುತ್ತಿರುವ ಅಶುಚಿತ್ವದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಆಸ್ಪತ್ರೆಗಳ ತ್ಯಾಜ್ಯ ಸಂಗ್ರಹವಿಲ್ಲ :

ನಗರ ವ್ಯಾಪ್ತಿಯ ಖಾಸಗಿ ಆಸ್ಪತ್ರೆ ಮತ್ತು ಕ್ಲೀನಿಕ್‍ಗಳ ತ್ಯಾಜ್ಯವನ್ನು ಸಾರ್ವಜನಿಕ ಕಸ ಸಂಗ್ರಹದೊಂದಿಗೆ ಸಂಬಂಧಪಟ್ಟವರು ಹಾಕುವಂತಿಲ್ಲ. ಆಸ್ಪತ್ರೆಗಳ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ತನ್ನದೇ ಆದ ನಿಯಮಗಳಿದ್ದು, ಆ ಪ್ರಕಾರವಾಗಿ ಖಾಸಗಿ ಆಸ್ಪತ್ರೆ ಮತ್ತು ಕ್ಲೀನಿಕ್‍ಗಳು ನಡೆದುಕೊಳ್ಳಬೇಕಾಗುತ್ತದೆ. ಒಂದೊಮ್ಮೆ ಆಸ್ಪತ್ರೆಯಿಂದ ನೈರ್ಮಲ್ಯ ತ್ಯಾಜ್ಯ ಹಾಕಿದಲ್ಲಿ ಆಸ್ಪತ್ರೆ ವಹಿವಾಟಿನ ಪರವಾನಗಿ ರದ್ದು ಪಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗ್ರೀನ್ ಸಿಟಿ ಫೋರಂ ಸ್ಥಾಪಕ ಅಧ್ಯಕ್ಷ ಚೆಯ್ಯಂಡ ಸತ್ಯ ಮಾತನಾಡಿ, ಸ್ವಚ್ಛತಾ ಕಾರ್ಯಗಳಿಗೆ ಗ್ರೀನ್ ಸಿಟಿ ಫೋರಂ ಕೈಜೋಡಿಸಲಿದ್ದು, ತ್ಯಾಜ್ಯ ವಿಲೇವಾರಿ ಬಗ್ಗೆ ಜನ ಸಮುದಾಯದಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿದ್ಯಾರ್ಥಿಗಳನ್ನೊಳಗೊಂಡ ಸುಮಾರು 200 ಮಂದಿಯ ‘ಹಸಿರುಪಡೆ’ ರಚಿಸಲಾಗಿದೆ. ಈ ತಂಡ ಪ್ರತಿ ಎರಡನೇ ಶವಿವಾರಗಳಂದು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಿದೆ ಎಂದು ತಿಳಿಸಿದರು.

Advertisement

ಫೋರಂ ಅಧ್ಯಕ್ಷ ಕುಕ್ಕೆರ ಬಿ.ಜಯಾಚಿಣ್ಣಪ್ಪ ಮಾತನಾಡಿ, ಪ್ರತಿ ಮನೆಗಳಲ್ಲಿ ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಮಹತ್ವ ಮತ್ತು ಹಸಿ ಕಸವನ್ನು ಮನೆಯಲ್ಲೆ ಗೊಬ್ಬರವನ್ನಾಗಿ ಪರಿವರ್ತಿಸಿಕೊಳ್ಳುವ ಸುಲಭ ವಿಧಾನದ ಬಗ್ಗೆ ಮಾಹಿತಿ ನೀಡಿದರು.

ಮಡಿಕೇರಿ ನಗರದ ಪ್ರತಿ ಮನೆಗಳಲ್ಲಿ ಹಸಿ ಕಸ ಮತ್ತು ಒಣ ಕಸಗಳನ್ನು ಬೇರ್ಪಡಿಸಿ ವಿಲೇವಾರಿ ಮಾಡುವ ಕಾರ್ಯಕ್ಕೆ ಹಸಿರುದಳ ಕೈಜೋಡಿಸಲಿದೆ. ಪ್ರತಿ ಮನೆಗೆ ಹಸಿ ಕಸ ಮತ್ತು ಒಣಕಸವನ್ನು ಬೇರೆ ಬೇರೆಯಾಗಿ ಹಾಕಲು ತಲಾ ಎರಡು ಬ್ಯಾಗ್ ಅಥವಾ ಬಾಸ್ಕೆಟ್‍ಗಳನ್ನು ನೀಡಲಾಗುತ್ತದೆ. ಹಸಿಕಸವನ್ನು ಮನೆಯಲ್ಲಿಯೇ ಗೊಬ್ಬರವನ್ನಾಗಿ ಪರಿವರ್ತಿಸಲು ಅಗತ್ಯ ಸಲಹೆ ಮತ್ತು ಸಣ್ಣ ಗೊಬ್ಬರ ಪರಿವರ್ತಕ ಯಂತ್ರದ ಮಾದರಿಯನ್ನು ಪರಿಚಯಿಸಲಾಗುತ್ತದೆ. ಇದರ ಮೂಲಕ ತಯಾರಾಗುವ ಗೊಬ್ಬರವನ್ನು ಸಂಗ್ರಹಿಸಲೂ ಸಹಕಾರ ನೀಡಲಾಗುತ್ತದೆ ಎಂದರು.

ಸ್ವಚ್ಛತಾ ಆಂದೋಲನದಲ್ಲಿ ಕೈಜೋಡಿಸಿರುವ ಕೊಡಗು ಫಾರ್ ಟುಮಾರೋ ಸಂಘಟನೆಯ ಪದಾಧಿಕಾರಿ ಪಿ.ಸಿ.ಕಾವೇರಪ್ಪ ಹಾಗೂ ಧನ್ಯ ಮಾತನಾಡಿ, ಕಸದ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡದಿದ್ದಲ್ಲಿ ಮುಂದಿನ ಹತ್ತು ವರ್ಷಗಳಲ್ಲಿ ಕೊಡಗು ಕಸದ ತೊಟ್ಟಿಯಾಗಿ ಪರಿವರ್ತನೆÀಯಾಗಬಹುದೆಂದು ಆತಂಕ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆ ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತವಾಗಬೇಕು. ಇದಕ್ಕಾಗಿ ಸಂಘಟನೆ ತ್ಯಾಜ್ಯ ವಿಲೇವಾರಿ ಕಾರ್ಯಕ್ಕೆ ಕೈಜೋಡಿಸಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಆಯುಕ್ತ ರಮೇಶ್, ಸ್ವಚ್ಛತಾ ಆಂದೋಲನದ ರಾಯಭಾರಿ ಮೋಂತಿಗಣೇಶ, ಗ್ರೀನ್ ಸಿಟಿ ಫೋರಂ ಮತ್ತು ಕೊಡಗು ಫಾರ್ ಟುಮಾರೋ ಸಂಘಟನೆಗಳ ಪದಾಧಿಕಾರಿಗಳು ಮಾತನಾಡಿದರು.

Advertisement

 

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಲಬುರ್ಗಿಯಲ್ಲಿ ಬೆಳೆ ಹಾನಿ ಪ್ರದೇಶ ವೀಕ್ಷಿಸಿದ ಮುಖ್ಯಮಂತ್ರಿ | ಸಮರ್ಪಕ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ
September 17, 2025
8:08 PM
by: The Rural Mirror ಸುದ್ದಿಜಾಲ
ತಿಪಟೂರಿನಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆಗೆ ಒತ್ತು | ವೈಜ್ಞಾನಿಕವಾಗಿ ಕಾಂಪೋಸ್ಟ್ ತಯಾರಿಕೆ
September 17, 2025
7:06 AM
by: The Rural Mirror ಸುದ್ದಿಜಾಲ
ಅತಿವೃಷ್ಟಿಯಿಂದ ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ನೀಡಲು ಸಚಿವ ಶರಣಬಸಪ್ಪ ದರ್ಶನಾಪುರ ಸೂಚನೆ
September 17, 2025
6:53 AM
by: The Rural Mirror ಸುದ್ದಿಜಾಲ
ರೈತರಿಬ್ಬರ ಮೇಲೆ ಕರಡಿ ದಾಳಿ  – ರೈತರು ಗಂಭೀರ
September 17, 2025
6:50 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group