ತ್ಯಾಜ್ಯದಿಂದ ಉತ್ಕೃಷ್ಟ ಗೊಬ್ಬರ : ಯಶಸ್ವಿಯಾಗಿದೆ ಕೃಷಿಕನ ಪ್ರಯೋಗ

May 1, 2019
5:42 AM

ಸುಳ್ಯ: ಸುಳ್ಯ ನಗರಾಡಳಿತಕ್ಕೆ ನಗರದ ಕಸವನ್ನು ವಿಲೇವಾರಿ ಮಾಡುವುದು ದೊಡ್ಡ ತಲೆನೋವಿನ ವಿಷಯ. ಈ ಕಸವನ್ನು ಏನು ಮಾಡಬೇಕೆಂದೇ ತಿಳಿಯದ ಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಂದರ್ಭದಲ್ಲಿ ಕಸವನ್ನು ಬಳಸಿ ಗೊಬ್ಬರವನ್ನು ತಯಾರಿಸಿ ಗಮನ ಸೆಳೆಯುತ್ತಾರೆ ಸುಳ್ಯ ಜಯನಗರದ ಕೃಷಿಕ ವಿನೋದ್ ಲಸ್ರಾದೋ.

ಕಲ್ಚರ್ಪೆಯ ತ್ಯಾಜ್ಯ ವಿಲೇವಾರಿ ಘಟಕ ತುಂಬಿ ತುಳುಕಿದ ಸಂದರ್ಭದಲ್ಲಿ ಸುಳ್ಯ ನಗರದ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಸುಳ್ಯ ನಗರ ಪಂಚಾಯತ್‍ಗೆ ದೊಡ್ಡ ಸವಾಲಿನ ವಿಷಯವಾಗಿತ್ತು. ಕಸ ಸಾಗಾಟಕ್ಕೆಂದು ಪ್ರತಿ ತಿಂಗಳು ಲಕ್ಷಾಂತರ ರೂಗಳನ್ನು ಖರ್ಚು ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ನಗರ ಪಂಚಾಯತ್‍ನ ಕಸವನ್ನು ಪಡೆದು ತನ್ನದೇ ತೋಟದಲ್ಲಿ ಗೊಬ್ಬರ ತಯಾರು ಮಾಡಿ ತೋಟಕ್ಕೆ ಬಳಸುವ ಉದ್ದೇಶ ವಿನೋದ್ ಲಸ್ರಾದೋ ಅವರು ಮಾಡಿದ ಪ್ರಯೋಗ ಯಶ ಕಂಡಿದೆ.

 

ಗೊಬ್ಬರ ತಯಾರಿ ಹೇಗೆ ?
ನಗರ ಪಂಚಾಯತ್ ಮನೆ ಮನೆಗಳಿಂದ ಮತ್ತು ನಗರದಿಂದ ಸಂಗ್ರಹಿಸುವ ಕಸವನ್ನು ಒಣ ಕಸ ಮತ್ತು ಹಸಿ ಕಸ ಎಂದು ಬೇರ್ಪಡಿಸಲಾಗುತ್ತದೆ. ಹಸಿಕಸವನ್ನು ವಿನೋದ್ ಲಸ್ರಾದೋ ಅವರ ತೋಟಕ್ಕೆ ಕೊಂಡೊಯ್ಯಲಾಗುತ್ತದೆ. ಏರೋಲಿಕ್ ಕಂಪೋಸ್ಟಿಂಗ್ ಸಿಸ್ಟಂ ಮೂಲಕ ಇಲ್ಲಿ ಕಸವನ್ನು ಗೊಬ್ಬರವಾಗಿ ಮಾರ್ಪಾಡಿಸುತ್ತಾರೆ. ವಿನೋದ್ ಅವರ ತೋಟದಲ್ಲಿ ಕಂಗಿನ ಬಿದಿರನ್ನು ಬಳಸಿ ಗಾಳಿ ಮತ್ತು ತೇವಾಂಶ ಹರಿದಾಡುವಂತೆ ನಿರ್ಮಿಸಿದ ತೊಟ್ಟಿಯಲ್ಲಿ ಈ ಕಸವನ್ನು ಹರಡಲಾಗುತ್ತದೆ. ಅದರ ಮೇಲೆ ಬೆಲ್ಲ ಮತ್ತು ವೇಸ್ಟ್ ಡಿ ಕಂಪೋಸರ್ ಸೇರಿಸಿದ 100 ಲೀಟರ್ ಮಿಶ್ರಣವನ್ನು ಸಿಂಪಡಿಸಲಾಗುತ್ತದೆ. ಕಸವನ್ನು ಹುಡಿ ಮಾಡಿ ಗೊಬ್ಬರವಾಗಿ ಪರಿವರ್ತಿಸಲು ಈ ಡಿ ಕಂಪೋಸರ್ ಮಿಶ್ರಣ ಸಹಾಯಕವಾದರೆ, ವಾಸನೆ, ನೊಣ, ಸೊಳ್ಳೆಗಳು ಬಾರದಂತೆ ಇಎಂ-1 ಎಂಬ ದ್ರಾವಣವನ್ನು ಇದರ ಮೇಲೆ ಸಿಂಪಡಿಸಲಾಗುತ್ತದೆ. ಅದರ ಮೇಲೆ ಒಣಗಿದ ತರಗೆಲೆಗಳನ್ನು ಹಾಸಲಾಗುತ್ತದೆ. ಪ್ರತಿ ನಿತ್ಯ ಹೀಗೆ ಹಾಕಿದ ಕಸವು ಎರಡು ತಿಂಗಳಲ್ಲಿ ಉತ್ಕೃಷ್ಟ  ಗೊಬ್ಬರವಾಗಿ ಪರಿವರ್ತನೆಯಾಗುತ್ತಿದೆ. ಕಸಕ್ಕೆ ಸೆಗಣಿ ಬೆರೆಸಿದರೆ 40 ದಿನದಲ್ಲೇ ಗೊಬ್ಬರ ದೊರೆಯಲು ಸಾಧ್ಯ ಎನ್ನುತ್ತಾರೆ ವಿನೋದ್. ಪ್ರತಿ ದಿನ ಒಂದು ಟನ್‍ನಂತೆ ಕಸ ಬಂದು ಇವರ ತೋಟದ ತೊಟ್ಟಿಯಲ್ಲಿ ಸೇರುತ್ತದೆ. ಒಂದು ತಿಂಗಳಲ್ಲಿ ಒಂದು ತೊಟ್ಟಿ ತುಂಬುತ್ತದೆ. ಕಳೆದ ಐದು ತಿಂಗಳಿನಿಂದ ಇವರು ಈ ಪ್ರಯೋಗ ಮಾಡಿದ್ದು ಗೊಬ್ಬರ ತಯಾರಾಗಿದೆ.

ಕಡಿಮೆ ದರದಲ್ಲಿ ಉತ್ತಮ ಗೊಬ್ಬರ:
ತ್ಯಾಜ್ಯವನ್ನು ಬಳಸಿ ಅತೀ ಕಡಿಮೆ ದರದಲ್ಲಿ ಗೊಬ್ಬರ ತಯಾರಿಸಬಹುದು. ಪ್ರತಿ ದಿನ ಸುಮಾರು ಒಂದು ಟನ್ ಕಸ ಇವರ ತೋಟಕ್ಕೆ ಬಂದು ಸೇರುತ್ತದೆ. ಇದರಲ್ಲಿ ಶೇ.60ರಷ್ಟು ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ಒಂದು ಟನ್ ಕಸದಲ್ಲಿ ಕಡಿಮೆ ಎಂದರೂ ಆರು ಕ್ವಿಂಟಲ್ ಗೊಬ್ಬರ ಸಿಗುತ್ತದೆ. ಡಿಕಂಪೋಸರ್, ಇಎಂ1 ದ್ರಾವಣ, ಕೆಲಸದವರ ಸಂಬಳ ಸೇರಿ ಪ್ರತಿ ದಿನ ಸುಮಾರು 1500 ರೂನಷ್ಟು ಇವರಿಗೆ ಖರ್ಚು ತಗುಲುತ್ತದೆ. ಹಾಗಿದ್ದರೂ ಎರಡು ರೂಗೆ ಒಂದು ಕೆ.ಜಿ ಗೊಬ್ಬರ ತಯಾರಿಸಲು ಸಾಧ್ಯವಾಗುತ್ತದೆ ಎಂದು ವಿನೋದ್ ವಿವರಿಸುತ್ತಾರೆ. ಸಾಕಷ್ಟು ಗೊಬ್ಬರ ತಯಾರಾಗಿದ್ದು ಖರ್ಚು ವೆಚ್ಚವನ್ನು ಪಡೆದು ಇದನ್ನು ಅಗತ್ಯವಿರುವ ಕೃಷಿಕರಿಗೆ ವಿತರಿಸಲಾಗುವುದು ಎಂದು ಅವರು ಹೇಳುತ್ತಾರೆ. ಯೂಟ್ಯೂಬ್, ಗೂಗಲ್‍ನಲ್ಲಿ ಮಾಹಿತಿ ಪಡೆದು ಗಾಝಿಯಾಬಾದ್‍ನಿಂದ ಡಿ ಕಂಪೋಸರ್ ಮತ್ತು ಕೇರಳದಿಂದ ಇಎಂ-1 ಮಿಶ್ರಣಗಳನ್ನು ತರಿಸಿ ಇವರು ಕಸದಿಂದ ಗೊಬ್ಬರ ತಯಾರಿಸುವ ಪ್ರಯೋಗವನ್ನು ಮಾಡುತ್ತಿದ್ದಾರೆ.

“ವ್ಯವಸ್ಥಿತವಾಗಿ ಮಾಡಿದರೆ ತ್ಯಾಜ್ಯವನ್ನು ಕೂಡ ಸಂಪನ್ಮೂಲವಾಗಿಸಬಹುದು. ಕಸವನ್ನು ಪಡೆದು ಉತ್ತಮ ಗೊಬ್ಬರವನ್ನು ತಯಾರಿಸಿ ಕೃಷಿಗೆ ಬಳಸಬಹುದು. ಸ್ಥಳೀಯಾಡಳಿತ ಸರಿಯಾದ ಸಹಕಾರ, ಸಹಾಯ ನೀಡಿದರೆ ಯಂತ್ರೋಪಕರಣಗಳನ್ನು ಬಳಸಿ ಕಸದಿಂದ ಇನ್ನಷ್ಟು ಪರಿಣಾಮಕಾರಿಯಾಗಿ ಗೊಬ್ಬರ ತಯಾರು ಮಾಡಿ ಕೃಷಿಕರಿಗೆ ಉಪಯೋಗವಾಗುವ ರೀತಿಯಲ್ಲಿ ಬಳಸಬಹುದು. ಇದರಿಂದ ನಗರದ ತ್ಯಾಜ್ಯ ವಿಲೇವಾರಿ ಸಮಸ್ಯೆಯೂ ಪರಿಹಾರವಾಗುತ್ತದೆ” ಎಂದು ಕೃಷಿಕ ವಿನೋದ್ ಲಸ್ರಾದೋ “ಸುಳ್ಯನ್ಯೂಸ್.ಕಾಂ” ಜೊತೆ ಮಾಹಿತಿ ಹಂಚಿಕೊಂಡರು.

 

ವಿನೋದ್ ಲಸ್ರಾದೋ ಅವರ ಸಂಪರ್ಕ ಸಂಖ್ಯೆ : 9449103500 , 9741168867

* ಸ್ಪೆಷಲ್ ರಿಪೋರ್ಟರ್ , ಸುಳ್ಯನ್ಯೂಸ್.ಕಾಂ , ಸುಳ್ಯ

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೇರಳದಲ್ಲಿ ಹೀಟ್‌ ವೇವ್‌ ಎಲರ್ಟ್‌ | 10 ಜಿಲ್ಲೆಗಳಿಗೆ ಎಲ್ಲೋ ಎಲರ್ಟ್‌ |
March 14, 2025
11:36 PM
by: ದ ರೂರಲ್ ಮಿರರ್.ಕಾಂ
ಮೆಣಸಿನಕಾಯಿ ಬೆಲೆ ಕುಸಿತ | ಒಣ ಮೆಣಸಿನಕಾಯಿ ಖರೀದಿಸುವಂತೆ ಬಸವರಾಜ ಬೊಮ್ಮಾಯಿ ಪತ್ರ
March 14, 2025
11:03 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆ ಏರಿಕೆ ಮಾಡಲು ಸರ್ಕಾರ ಚಿಂತನೆ
March 14, 2025
10:57 PM
by: The Rural Mirror ಸುದ್ದಿಜಾಲ
ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ
March 14, 2025
6:57 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror