ದಮ್ಮಾಮ್: ಇಂಡಿಯನ್ ಸೋಷಿಯಲ್ ಫೋರಂ ವತಿಯಿಂದ ಅಭೂತ ಪೂರ್ವ ಕನ್ನಡ ರಾಜ್ಯೋತ್ಸವ ಆಚರಣೆ

November 5, 2019
1:42 PM

ದಮ್ಮಾಮ್: “ಭಾರತ ವಿವಿಧ ಜಾತಿ, ಧರ್ಮ, ಭಾಷೆ, ಮತ್ತು ಸಂಸ್ಕೃತಿಗೆ ತಾಯ್ನೆಲವಾಗಿದೆ. ಸ್ವಾತಂತ್ರ್ಯೋತ್ತರ  1950ರ ದಶಕದಲ್ಲಿ ರಾಜ್ಯ ರಚನೆಯ ವಿಷಯ ಪ್ರಸ್ತಾಪವಾದಾಗ ಆಯಾ ರಾಜ್ಯಗಳಲ್ಲಿ ಭಾಷಾವಾರು ವಿಂಗಡಣೆಗಾಗಿ ಚಳುವಳಿಗಳು ನಡೆದು ಭಾಷೆಯ ಆಧಾರದಲ್ಲಿ ರಾಜ್ಯಗಳು ಸ್ಥಾಪನೆಯಾದವು. ಆದರೆ ಇಂದು ದೇಶದಲ್ಲಿ ಭಾಷಾ ವೈವಿಧ್ಯತೆಯನ್ನು ನಾಶ ಪಡಿಸಿ  ಏಕ ಭಾಷೆ, ಏಕಸಂಸ್ಕೃತಿಯನ್ನು ಹೇರುವಂತಹ ಪ್ರಯತ್ನಗಳು ನಡೆಯುತ್ತಿದ್ದು, ನಾವೆಲ್ಲರೂ ಒಕ್ಕೊರಲಿನ ದನಿಯೊಂದಿಗೆ ಇದನ್ನು ವಿರೋಧಿಸಬೇಕಾಗಿದೆ” ಎಂದು ಇಂಡಿಯನ್ ಸೋಶಿಯಲ್ ಫಾರಂ ಕರ್ನಾಟಕ ಇದರ ಪೂರ್ವ ಪ್ರಾಂತ್ಯದ ಅಧ್ಯಕ್ಷ ಮುಹಮ್ಮದ್ ಷರೀಫ್ ಜೋಕಟ್ಟೆ ತಿಳಿಸಿದರು.

ಅವರು ಕೆ.ಎಂ.ಟಿ. ಹಾಗೂ ಅಡ್ವಾನ್ಸಡ್ ಬ್ಲೂ ಲೈನ್ (ಎ. ಬಿ. ಎಲ್. ಗ್ರೂಪ್) ಪ್ರಾಯೋಜಕತ್ವದೊಂದಿಗೆ ಇಂಡಿಯನ್ ಸೋಷಿಯಲ್ ಫಾರಂ ವತಿಯಿಂದ, ರಾಯಲ್ ಝಯ್ಕಾ ರೆಸ್ಟೋರೆಂಟ್ ಸಭಾಂಗಣದಲ್ಲಿ ನ.1ರಂದು ಆಯೋಜಿಸಲಾಗಿದ್ದ  ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.

“ಭಾರತದ ಸಾಮಾಜಿಕ, ಆರ್ಥಿಕ, ರಾಜಕೀಯ, ಕಲೆ ಮತ್ತು ಸಾಹಿತ್ಯ ಕ್ಷೇತ್ರಗಳಿಗೆ ಅಗಾಧ ಕೊಡುಗೆಯನ್ನು ಕರ್ನಾಟಕ ನೀಡಿದೆ. ಕರ್ನಾಟಕ ಏಕೀಕರಣ ಚಳುವಳಿಯ ನಾಯಕರ  ಪ್ರಯತ್ನದಿಂದಾಗಿ ಕರ್ನಾಟಕ ಹುಟ್ಟಿಕೊಂಡಿತು” ಎಂದರು. ಸೌದಿ ಅರೇಬಿಯಾದಲ್ಲಿರುವ ಅನಿವಾಸಿ ಭಾರತೀಯರ ಮಕ್ಕಳು ಇಂಗ್ಲಿಷ್ ಭಾಷೆಯಲ್ಲಿ ಕಲಿಯುವುದರಿಂದಾಗಿ ಕನ್ನಡದಿಂದ ದೂರವುಳಿಯುತ್ತಿದ್ದಾರೆ. ನಾವು ಎಲ್ಲೇ ಹೋದರೂ ನಮ್ಮ  ಮಾತೃ ಭಾಷೆಯನ್ನು ಮರೆಯಕೂಡದು. ‘ನೀನು ಇಂಗ್ಲಿಷ್ ಭಾಷೆಯನ್ನು ಕಲಿ. ಆದರೆ ಅದನ್ನು ಕನ್ನಡದಲ್ಲಿ ಕಲಿ’ ಎಂಬ ಯು. ಆರ್. ಅನಂತ ಮೂರ್ತಿಯವರ ಉಕ್ತಿಯನ್ನು ನಾವು ಅಳವಡಿಸಿಕೊಳ್ಳಬೇಕು” ಎಂದು ಅವರು  ಕಿವಿ ಮಾತು ಹೇಳಿದರು. ಕರ್ನಾಟಕ ಏಕೀಕರಣ ಚಳುವಳಿಯ ಚುಟುಕು ಇತಿಹಾಸವನ್ನು ವಿವರಿಸಿದ ಅವರು ಅನಿವಾಸಿ ಭಾರತೀಯರಲ್ಲಿ ಕನ್ನಡವನ್ನು ಪ್ರಚುರಪಡಿಸುವ ತನ್ನ ಪ್ರಯತ್ನವನ್ನು ಐ ಎಸ್ ಎಫ್ ಮುಂದುವರಿಸಲಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಯಲ್ ಝಯ್ಕಾ ಉಪಹಾರ ಗೃಹದ ಸತೀಶ್ ಕುಮಾರ್ ಮಾತನಾಡಿ ದೇಶದಲ್ಲಿ ಹಿಂದಿ ಹೇರಿಕೆಯ ಪ್ರಯತ್ನವನ್ನು ವಿಫಲಗೊಳಿಸಬೇಕು ಮತ್ತು ಕರುನಾಡ ನೈಜ ಜಾತ್ಯತೀತತೆಯನ್ನು ಮರಳಿ ಪಡೆಯಲು ಪಣ ತೊಡಬೇಕು ಎಂದು ಕರೆ ನೀಡಿದರು.

ಇನ್ನೋರ್ವ ಮುಖ್ಯ ಅತಿಥಿ ಇಂಡಿಯಾ ಫ್ರಾಟರ್ನಿಟಿ ಫೋರಂನ ಪೂರ್ವ ವಲಯ ಜಿಲ್ಲಾಧ್ಯಕ್ಷ ಅತಾವುಲ್ಲಾ ಉಚ್ಚಿಲ ಮಾತನಾಡುತ್ತ, ಪ್ರಾಂತೀಯ ಭಾಷಾ ಪ್ರೇಮದೊಂದಿಗೆ ವಿವಿಧತೆಯಲ್ಲಿ ಏಕತೆಯನ್ನು ಕಾಣಲು ಸಾಧ್ಯವಾಗಬೇಕು ಎಂದು ನುಡಿದರು.

ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು , ಈ ವೇಳೆ ಕನ್ನಡದ ಇತಿಹಾಸವನ್ನು ಆಧರಿಸಿದ ಕಿರು ಪ್ರಹಸನಗಳು ನೆರೆದವರ ಮನಸೂರೆಗೊಳಿಸಿತು. ಐ.ಎಸ್.ಎಫ್ ಜುಬೈಲ್ ತಂಡವು ಕರ್ನಾಟಕದ ಐತಿಹಾಸಿಕ ವ್ಯಕ್ತಿಗಳನ್ನು ನೆನಪಿಸುತ್ತಾ ನಡೆಸಿದ ಸ್ವಾಗತ ಶೈಲಿಯು ಅತ್ಯಾಕರ್ಷಕ ವಾಗಿತ್ತು. ಕರ್ನಾಟಕದ ಪ್ರಮುಖ ಇತಿಹಾಸ ಪುರುಷರಾದ ರಾಷ್ಟ್ರ ಕವಿ ಕುವೆಂಪು, ಕಿತ್ತೂರು ಚೆನ್ನಮ್ಮ, ಹಾಗೂ ಕರ್ನಾಟಕ ದ ಪುರಾತನ ಕಲೆಯಾದ ಕುಂಬಾರನ ವೇಷ ಧರಿಸಿ ವೇದಿಕೆಯಲ್ಲಿ ಹೆಜ್ಜೆ ಇಟ್ಟ ಪುಟಾಣಿ ಮಕ್ಕಳು ಆಕರ್ಷಣೆಯ ಕೇಂದ್ರ ಬಿಂದುವಾದರು.

ಕಾರ್ಯಕ್ರಮದಲ್ಲಿ ಕರ್ನಾಟಕದ ಇತಿಹಾಸ ಮತ್ತು ಕನ್ನಡ ಭಾಷೆಯ ಕುರಿತ ರಸ ಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕರ್ನಾಟಕದ ಇತಿಹಾಸವನ್ನು ತಿಳಿಸುವ ಚಿತ್ರ ಮತ್ತು ಬರಹಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಸಮಾರಂಭಕ್ಕೆ ಬರುವ ಕನ್ನಡಾಭಿಮಾನಿಗಳಿಗೆ ಸ್ವಾಗತ ಕೋರುತ್ತಾ ನಿಂತಿರುವ ರೈತರ ನೇಗಿಲ ಯೋಗಿಯ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯಿತು.

ಐ.ಎಸ್. ಎಫ್. ಪ್ರತಿ ವರ್ಷ ನಡೆಸಿಕೊಂಡು ಬರುವ ರಾಜ್ಯೋತ್ಸವ ಸನ್ಮಾನ ಕಾರ್ಯವನ್ನು ಪ್ರಸಕ್ತ ವರ್ಷದಲ್ಲಿ ಶಿಕ್ಷಣಕ್ಷೇತ್ರಕ್ಕೆ ಮೀಸಲಿಟ್ಟಿದ್ದು, ಅದರಂತೆ ಕಳೆದ ಹತ್ತು ವರುಷಗಳಿಂದ ದಮ್ಮಾಮ್ ಭಾರತೀಯ ರಾಯಭಾರಿ ಶಾಲೆಯಲ್ಲಿ ಕರುನಾಡ ಮಕ್ಕಳಿಗೆ ಕನ್ನಡ ಭಾಷಾ ಶಿಕ್ಷಣವನ್ನು ನೀಡುತ್ತಿರುವ ಶಿಕ್ಷಕಿ ಸಂಧ್ಯಾ ಶಿರ್ವರನ್ನು ಐ ಎಸ್ ಎಫ್ ಮಹಿಳಾ ಘಟಕದ ಸದಸ್ಯೆಯರು ಸನ್ಮಾನಿಸಿದರು. `


ಐ ಎಸ್ ಎಫ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಮುಕ್ವೆ, ಎಬಿಎಲ್ ಗ್ರೂಪ್ ನ ಸಿಇಓ ಅಬೂಬಕ್ಕರ್ ಸಿದ್ದೀಕ್, ಕೆಎಂಟಿ ಸಿಇಓ ಅಬ್ದುಲ್ ರಹ್ಮಾನ್, ಐ ಎಸ್ ಎಫ್ ದಮ್ಮಾಮ್ ಘಟಕ ಅಧ್ಯಕ್ಷ ಶಬೀರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾರಂಭದ ಮೊದಲಿಗೆ ದಮ್ಮಾಮ್ ಘಟಕ ಕಾರ್ಯದರ್ಶಿ ಸಾಭಿತ್ ಪುತ್ತೂರು ಸ್ವಾಗತಿಸಿ, ಫಾರಂ ಸದಸ್ಯ ಅಬ್ದುಲ್ ಹಮೀದ್ ವಂದಿಸಿದರೆ, ಝಯಿನುದ್ದೀನ್ ಸಜೀಪ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಅನನ್ಯ ರೂಪದಲ್ಲಿ ಸಮಾರಂಭ ನಡೆಸಿದಕ್ಕಾಗಿ ಸಭಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜ.26 | ಸಾರಡ್ಕದಲ್ಲಿ ಕೃಷಿ ಹಬ್ಬ | ವಿವಿಧ ಗೋಷ್ಠಿಗಳು |
January 25, 2025
5:01 PM
by: ದ ರೂರಲ್ ಮಿರರ್.ಕಾಂ
ಮಂಗಳೂರು | ಕದ್ರಿ ಉದ್ಯಾನದಲ್ಲಿ ಜ.23 ರಿಂದ  ಫಲಪುಷ್ಪ ಪ್ರದರ್ಶನ | 20 ಸಾವಿರಕ್ಕೂ ಅಧಿಕ ಹೂವಿನ ಗಿಡಗಳ ಪ್ರದರ್ಶನ |
January 11, 2025
7:18 AM
by: The Rural Mirror ಸುದ್ದಿಜಾಲ
ಡಿ. 29 | ಕುಂಬಳೆಯಲ್ಲಿ ಕಲಾವಿದ ಕುಂಬಳೆ ಶ್ರೀಧರ ರಾವ್ ಸ್ಮೃತಿ | ‘ಕಲಾ ಶ್ರೀಧರ’ ಕೃತಿ ಅನಾವರಣ |
December 26, 2024
11:28 AM
by: ದ ರೂರಲ್ ಮಿರರ್.ಕಾಂ
ನ.2 ರಿಂದ ಕಲರವ | ಹಕ್ಕಿ-ವನ್ಯ ಜೀವಿ – ಪಕೃತಿ ಛಾಯಾಚಿತ್ರ ಪ್ರದರ್ಶನ |
October 23, 2024
8:32 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror