ಪಾಸಿಟಿವ್ ನ್ಯೂಸ್ | ಗ್ರಾಮೀಣ ಭಾಗದ ಅಂಬುಲೆನ್ಸ್ ಸೇವೆ | ಲಾಕ್ಡೌನ್ ಸಂದರ್ಭ ನಿರಂತರ ಸೇವೆ | ಇದು ಪಂಜದ “ಯುವ ತೇಜಸ್ಸು” |

April 13, 2020
4:05 PM

ಪಂಜ: ನಗರ ಪ್ರದೇಶದಲ್ಲಿ ನಿರಂತರ ಅಂಬುಲೆನ್ಸ್ ಸೇವೆ ಇದ್ದೇ ಇರುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿ  ಎಲ್ಲಾ ಸವಾಲುಗಳ ನಡುವೆ ಅಂಬುಲೆನ್ಸ್ ಸೇವೆ ಅಷ್ಟು ಸುಲಭದ ಮಾತಲ್ಲ. ಆದರೆ ಇದನ್ನು  ಮಾಡಿ ತೋರಿಸಿದೆ ಪಂಜದ ಯುವಕರ ತಂಡ ನಡೆಸಿರುವ ಅಂಬುಲೆನ್ಸ್ ಸೇವೆ. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಂತೂ ಯುವಕರ ಸೇವೆ ಗಮನಾರ್ಹವಾಗಿದೆ. ಇದೀಗ ಸೇವೆಗಾಗಿಯೇ ನಿರಂತರ 600 ಕಿಮೀ ದೂರ ಸಾಗಿ ಮತ್ತೆ ಬಂದು ಗ್ರಾಮೀಣ ಭಾಗದಲ್ಲಿ  ಸೇವೆಗೆ ಸಿದ್ಧವಾಗಿರುವುದು  ಮತ್ತೊಮ್ಮೆ ಗುರುತಿಸುವಂತೆ ಮಾಡಿದೆ.

ಕೊರೊನಾ ಮಹಾಮಾರಿಗೆ ಇಡೀ ಜಗತ್ತೇ ನರಳುತ್ತಿರುವ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪುಟ್ಟ ಊರು ಸುಳ್ಯದ  ಯುವ ತೇಜಸ್ಸು ಟ್ರಸ್ಟ್ (ರಿ) ಹಾಗೂ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ (ರಿ) ಪಂಜದ ಸಹಯೋಗದೊಂದಿಗೆ ಎರಡು ತಿಂಗಳ ಹಿಂದಷ್ಟೇ ಲೋಕಾರ್ಪಣೆಗೊಂಡ ಅಂಬ್ಯುಲೆನ್ಸ್ ಇದೀಗ ಮತ್ತೊಮ್ಮೆ ಗುರುತಿಸಿದೆ. ಪಂಜದದಂತಹ ಗ್ರಾಮದಿಂದ ಪುತ್ತೂರು-ಮಂಗಳೂರುಗೆ ಲಾಕ್ಡೌನ್ ಸಂದರ್ಭದಲ್ಲಿ ರೋಗಿಗಳನ್ನು ಕರೆದೊಯ್ಯಲು ಹಾಗು ಮಂಗಳೂರಿನಿಂದ ಪಂಜಕ್ಕೆ ಅಗತ್ಯ ಔಷಧಿಗಳ ಸರಬರಾಜು ಮಾಡಲು ನೆರವಿಗೆ ಬಂದದ್ದು  ಪಂಚ ಶ್ರೀ ಅಂಬ್ಯುಲೆನ್ಸ್. ಸರಿಸುಮಾರು ಎರಡೂವರೆ ತಿಂಗಳ ಅವಧಿಯಲ್ಲೇ ಸುಮಾರು 75 ರೋಗಿಗಳಿಗೆ ನೆರವಾದ ಹೆಗ್ಗಳಿಕೆ ಈ ಅಂಬ್ಯುಲೆನ್ಸ್ ನದು.

ಯುವ ತೇಜಸ್ಸು ಸಂಸ್ಥೆ ಆರಂಭವಾದ ನಂತರ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದ ಯುವಕರನ್ನು ಒಗ್ಗೂಡಿಸಿಕೊಂಡು ಹಲವಾರು ಯೋಜನೆಗಳು, ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಸಂಪೂರ್ಣ ಯಶಸ್ವಿಯಾಗಿತ್ತು.‌ ಪಂಜ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಅಂಬ್ಯುಲೆನ್ಸ್ ನ ಈಡೇರಿಕೆಗೆ ಅದೇ ಯುವ ತೇಜಸ್ಸಿನ ಯುವಕರು ಹೆಗಲು ಕೊಡಲು ಮುಂದಾಗಿದ್ದು, ಪಂಚಶ್ರೀ ಪಂಜದ ಪಾಲಿಗೆ ಬಲು ಮಹತ್ವವೂ ಆಗಿತ್ತು, ಈಗಲೂ ಅಷ್ಟೇ ಪಂಚಶ್ರೀ ಪಂಜ ಮತ್ತು ಯುವ ತೇಜಸ್ಸು ಟ್ರಸ್ಟ್ ಒಂದು ನಾಣ್ಯದ ಎರಡು ಮುಖಗಳಿದ್ದಂತೆ.‌ ಹೆಸರು ಬೇರೆ ಬೇರೆಯಾದರೂ ಎರಡೂ ಸಂಸ್ಥೆಗಳಲ್ಲಿಯೂ ಇದೇ ಯುವಕರೇ ಸಕ್ರಿಯರಾಗಿದ್ದಾರೆ. ಅಂಬ್ಯುಲೆನ್ಸ್ ನ ಯಶಸ್ಸಿಗೆ ಇದೂ ಒಂದು ಪ್ರಮುಖ ಕಾರಣ, ಹಾಗಾಗಿ ಯಶಸ್ಸಿನ ಶ್ರೇಯ ಎರಡೂ ಸಂಸ್ಥೆಗೂ ಸಲ್ಲುತ್ತದೆ.

ಈ ಎಲ್ಲದರ ನಡುವೆ  ಕುಕ್ಕೆ ಸುಬ್ರಹ್ಮಣ್ಯ ದಿಂದ ಬೆಂಗಳೂರಿಗೆ ಚಿಕಿತ್ಸೆಗಾಗಿ ವ್ಯಕ್ತಿಯೊಬ್ಬರು ತೆರಳಲು ವಾಹನ ಸೇವೆಗಾಗಿ ಎಲ್ಲಾ ಪ್ರಯತ್ನ ಮಾಡಿ ಅದರಲ್ಲಿ ಯಾವುದೇ ಫಲ ಕಾಣದಾದಾಗ ಪಂಜ ಪಂಚಲಿಂಗೇಶ್ವರ ದೇವಾಲಯದ ಆಡಳಿತ ಅಧಿಕಾರಿಗಳಾದ ಡಾ.ದೇವಿಪ್ರಸಾದ್ ಕಾನತ್ತೂರು ಜೊತೆಯಲ್ಲಿ ಸಹಾಯ ಕೇಳಿದಾಗ ತಕ್ಷಣವೇ ಊರಿನ ಜನರಿಗೆ ತೊಂದರೆ ಆಗದಂತೆ ರಾತ್ರಿ 11 ರ ನಂತರ ಬೆಂಗಳೂರಿನ ಬನಶಂಕರಿ ಗೆ ಕಳುಹಿಸಿ ಪುನಃ ಬೆಳಗ್ಗೆ ಪಂಜದ ಜನತೆಯ ಸಹಾಯಕ್ಕಾಗಿ ಬೆಳಗ್ಗೆ 7 ಗಂಟೆಯ ಮೊದಲು ಪಂಜಕ್ಕೆ ತಲುಪುವಂತೆ ವ್ಯವಸ್ಥೆ ಮಾಡಿರುತ್ತಾರೆ. ಕೇವಲ 8 ಗಂಟೆಯಲ್ಲಿ ಸುಮಾರು 600 ಕಿಮೀ ಗಿಂತಲೂ ಹೆಚ್ಚು ದೂರವನ್ನು ಕ್ರಮಿಸಿದೆ. ಮರುದಿನ ಪಂಜದಂತಹ ಗ್ರಾಮೀಣ ಭಾಗದಲ್ಲಿ ಸೇವೆಗೆ ಸಿದ್ಧವಾಗಿ ನಿಂತಿದೆ. ಈ ಸಾಮಾಜಿಕ ಕಾಳಜಿ ಇದೀಗ ಗಮನಸೆಳೆದಿದೆ. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ನಿರಂತರ ಸೇವೆ ಮಾಡುತ್ತಿರುವ ಈ ತಂಡದ ಶ್ರಮ ಗುರುತಿಸಲಾಗುತ್ತಿದೆ.

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 19-03-2025 | ಇಂದು ಕೆಲವು ಕಡೆ ಮಳೆ ಸಾಧ್ಯತೆ | ಮಾರ್ಚ್ 22 ರಿಂದ ಬೇಸಿಗೆ ಮಳೆಯ ಮುನ್ಸೂಚನೆ |
March 19, 2025
12:46 PM
by: ಸಾಯಿಶೇಖರ್ ಕರಿಕಳ
ಮಲೆನಾಡು-ಕರಾವಳಿ ಭಾಗದ ಅಡಿಕೆ ಬೆಳೆಗಾರರಿಗೆ ಸಮಸ್ಯೆ ಎಲ್ಲಾಗುತ್ತಿದೆ…? | ಇಳುವರಿ ಕೊರೆತೆಯಾಗುತ್ತಿರುವುದು ಏಕೆ..? | ಏನು ಮಾಡಬಹುದು ಮುಂದೆ..?
March 19, 2025
11:23 AM
by: ಮಹೇಶ್ ಪುಚ್ಚಪ್ಪಾಡಿ
ಮಾರ್ಚ್ 19 ರಿಂದ 5 ರಾಶಿಗಳಿಗೆ ವಿಶೇಷ ಶುಭ ಸೂಚನೆ
March 19, 2025
6:41 AM
by: ದ ರೂರಲ್ ಮಿರರ್.ಕಾಂ
ನಗುವಿನೊಂದಿಗೆ ಭೂಮಿಗೆ ಇಳಿದ ಗಗನಯಾತ್ರಿ ಸುನಿತಾ ವಿಲಿಯಮ್ಸ್
March 19, 2025
6:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror