ಪುಣ್ಚಪ್ಪಾಡಿಯಲ್ಲೊಂದು ಅಪೂರ್ವ ಜೈನ ಸಂಸ್ಕಾರ ಶಿಬಿರ

May 27, 2019
11:00 AM

ಸವಣೂರು : ಅದು ಮುಸ್ಸಂಜೆಯ ಹೊತ್ತು.. ಅಡಿಕೆಯ ಮರದ ಸಲಾಕೆಯಿಂದ ನಿರ್ಮಿಸಲ್ಪಟ್ಟ ಆಕರ್ಷಕ ಚೌಕಟ್ಟು, ಇದರ ನಡುವೆ ದೀಪ ಕಲಶಗಳಿಂದ ನಿರ್ಮಿಸಲ್ಪಟ್ಟ ಆಕರ್ಷಕ ದೀಪ ರಥ…ಇದರ ಸುತ್ತ ಬೆಳಗುವ ನೂರಾರು ಹಣತೆಗಳು….ಇದರ ಮುಂದೆ ಕೃತಕವಾಗಿ ನಿರ್ಮಿಸಲ್ಪಟ್ಟ ಸುಂದರ ಕೆರೆ…. ಕೆರೆಯ ಮಧ್ಯದಲ್ಲಿ ಮತ್ತದೇ ದೀಪಗಳ ಅಲಂಕಾರ…. ಹೀಗೆ ಕಣ್ಣ ನೋಟ ಹಾಯಿಸಿದಲ್ಲೆಲ್ಲಾ ದೀಪವೇ ದೀಪ…ಈ ಸಾಲು ದೀಪಗಳ ಮಂದ ಬೆಳಕಿನಲ್ಲಿ ಕರುಣಾಳು ಬಾ ಬೆಳಕೇ ಎಂಬ ಕೊಳಲ ಧ್ವನಿ..ಈ ಕೊಳಲ ಧ್ವನಿಯ ನಡುವೆ ಸುಶ್ರಾವ್ಯವಾಗಿ ಕೇಳಿ ಬಂದ ಆದಿಪುರಾಣದ ಗಮಕ ವಾಚನ …ಇದೆಲ್ಲವನ್ನು ಮಂತ್ರಮುಗ್ಧವಾಗಿ ಕೇಳುತ್ತಿದ್ದ ಮಕ್ಕಳು ಒಂದೆಡೆ ಕೊಳಲ ಧ್ವನಿಗೆ ತಲೆಯಲ್ಲಾಡಿಸಿದ ಹಿರಿಯರು ಒಂದೆಡೆ… ಈ ಅಪೂರ್ವ ದೃಶ್ಯ ಕಂಡುಬಂದದ್ದು ಪುಣ್ಚಪ್ಪಾಡಿಯ ನೇರೋಳ್ತಡ್ಕ ಎಂಬಲ್ಲಿಯ ಗೌರಿ ಸದನದಲ್ಲಿ ನಡೆದ ಜೈನ ಸಂಸ್ಕಾರ ಶಿಬಿರದಲ್ಲಿ.

Advertisement
Advertisement

 

ಭಾರತೀಯ ಜೈನ್ ಮಿಲನ್ ಮಂಗಳೂರು ಮತ್ತು ಭಾರತೀಯ ಯುವ ಜೈನ್ ಮಿಲನ್ ಮಂಗಳೂರು ವಲಯ 8 ಇವರ ಆಶ್ರಯದಲ್ಲಿ ಮಂಗಳೂರಿನಲ್ಲಿ ಆಯೋಜಿಸಿದ ಶಿಬಿರದ ಒಂದು ಭಾಗವಾಗಿ ಶಿಬಿರಾರ್ಥಿ ಮಕ್ಕಳು ಪುತ್ತೂರಿಗೆ ಆಗಮಿಸಿದ್ದು ಶಿಬಿರದ ವಿಶೇಷವಾಗಿ ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯ ವೀಕ್ಷಣೆ , ಸವಣೂರಿನ ಉದ್ಯಮಿ ಸೀತಾರಾಮ ರೈ,ವಿದ್ಯಾರಶ್ಮಿ ವಿದ್ಯಾಲಯದ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿಯವರಿಂದ ಹೈನುಗಾರಿಕೆಯ ಬಗ್ಗೆ ಮಾಹಿತಿಯೊದಿಗೆ… ಮಕ್ಕಳು ಆಗಮಿಸಿದ್ದು ಪುಣ್ಚಪ್ಪಾಡಿಯ ನೇರೋಳ್ತಡ್ಕದ ಗೌರಿ ಸದನಕ್ಕೆ…. .ಪಟ್ಟಣದ ಮಕ್ಕಳಿಗೆ ಹಳ್ಳಿ ಜೀವನದ ಸೊಗಡನ್ನು ತಿಳಿಸುವ ಉದ್ದೇಶ ಹೊತ್ತ ಈ ಶಿಬಿರವು ಮಕ್ಕಳನ್ನು ಸ್ವಾಗತಿಸಿದ ರೀತಿ ವಿಶೇಷವಾಗಿತ್ತು. ತುಳುನಾಡಿನ ಕೃಷಿ ವ್ಯವಸ್ಥೆಯ ಪ್ರತೀಕವಾದ ರೈತನ ಕಿರೀಟವೆಂದು ಪರಿಗಣಿಸಲ್ಪಟ್ಟ ಕಂಗಿನ ಹಾಳೆಯ ಮುಟ್ಠಾಳೆಯನ್ನು ಮಕ್ಕಳಿಗೆ ತೊಡಿಸಿ, ಪಂಚಭೂತಗಳ ಸಂಕೇತವಾದ ವೀಳ್ಯೆಯನ್ನು ನೀಡಿ ಊರಿನ ಹಿರಿಯರಾದ ಬಾಲಕೃಷ್ಣ ರೈ ದೇವಸ್ಯ,ಶೀನಪ್ಪ ಶೆಟ್ಟಿ ನೆಕ್ರಾಜೆ ಸ್ವಾಗತಿಸಿದ್ದು ವಿಶೇಷವಾಗಿತ್ತು.

ನಂತರ ಮಕ್ಕಳಿಗೆ ಹುತ್ತಗಳ ಊರಾದ ಪುಣ್ಚಪ್ಪಾಡಿ ಊರಿನ ಮಾಹಿತಿಯನ್ನು ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನ ಮುಖ್ಯಗುರು ಗಿರಿಶಂಕರ ಸುಲಾಯರು ತಮ್ಮ ಮಾತಿನ ಮೂಲಕ ಇಡೀ ಪುಣ್ಚಪ್ಪಾಡಿ ಗ್ರಾಮವನ್ನು ಮಕ್ಕಳ ಮುಂದೆ ತೆರೆದಿಟ್ಟರು.

Advertisement

ಮುಂದೆ ಮಕ್ಕಳಿಗೆ ತುಳುನಾಡಿನ ಪ್ರಸಿದ್ಧ ಜನಪದ ಕಲೆಗಳನ್ನು ಪರಿಚಯಿಸಿಕೊಟ್ಟವರು ಕಣ್ವರ್ಷಿ ಸಾಂಸ್ಕೃತಿಕ ಕಲಾ ಕೇಂದ್ರದ ಸದಾನಂದ ಅಬೀರ, ರಾಕೇಶ್ ಬನಾರಿ, ಯತಿನ್‍ರವರು. ಕಂಗೀಲು, ಕರಂಗೋಲು, ಚೆನ್ನು ಕುಣಿತಗಳನ್ನು ಪಾಡ್ದನಗಳ ಮೂಲಕ, ತಾಸೆ ಡೋಲಿನ ಧ್ವನಿಯ ಮೂಲಕ ಮಕ್ಕಳಿಗೆ ಕುಣಿತವನ್ನು ಕಲಿಸಿಕೊಡುವುದರ ಮೂಲಕ ಪರಿಚಯ ಮಾಡಲಾಯಿತು. ಜನಪದ ಕುಣಿತಗಳಿಗೆ ಹೆಜ್ಜೆ ಹಾಕಿದ ಪೇಟೆ ಮಕ್ಕಳ ಖುಷಿಗೆ ಪಾರವಿರಲಿಲ್ಲ.

 

 

ಮುಸ್ಸಂಜೆಯಲ್ಲಿ ನಡೆದದ್ದು ದೀಪ ಚಿಂತನ ಕಾರ್ಯಕ್ರಮ. ನೂರಾರು ಹಣತೆಗಳಿಂದ ರಚಿತವಾದ ಆಕರ್ಷಕವಾದ ದೀಪರಥ. ಅಡಿಕೆ ಸಲಾಕೆಯಿಂದ ನಿರ್ಮಿಸಿದ ದೀಪ ಮಂಟಪ…ಕೃತಕವಾಗಿ ರಚಿಸಿದ ಕೆರೆ..ಮಂದ ಬೆಳಕಿನ ನಡುವೆ ಆದಿಕವಿ ಪಂಪನ ಆದಿಪುರಾಣದ ಭಾಗವನ್ನು ಗಮಕ ವಾಚನವನ್ನು ಮಾಡಿದವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕವಿ ಸಾಹಿತಿ ರಮೇಶ್ ಉಳಯ, ಇವರೊಂದಿಗೆ ಕೊಳಲು ಹಾಗೂ ಕೀಬೋರ್ಡ ಸಾಥ್ ನೀಡಿದವರು ಜಿಲ್ಲೆಯ ಪ್ರಸಿದ್ಧ ಕೊಳಲು ಕಲಾವಿದರಾದ ಲಿಂಗಪ್ಪ ಗೌಡ ಕಲ್ಲಾರೆ. ಜೈನ ಧರ್ಮದ ಮೂಲ ತತ್ವವಾದ ಅಹಿಂಸಾ ತತ್ವವನ್ನು ಸಾರುವ ಬಾಹುಬಲಿಯ ಕಥಾ ವೃತ್ತಾಂತವನ್ನು ಒಳಗೊಂಡ ಆದಿಕವಿ ಪಂಪನ ಆದಿಪುರಾಣದ ಭರತ ಬಾಹಿಬಲಿ ವ್ಯಾಯೋಗದ ಭಾಗವನ್ನು ಗಮಕದ ಮೂಲಕ ಮಕ್ಕಳಿಗೆ ಪರಿಚಯಿಸಿಕೊಡುವ ಈ ಕಾರ್ಯಕ್ರಮವು ನಿಜವಾಗಿಯೂ ಮಕ್ಕಳಿಗೆ ವಿಸ್ಮಯವೆನಿಸಿತು. ದೀಪ ಚಿಂತನದ ಮೊದಲ ದೀಪವನ್ನು ಉರಿಸಿದವರು ಊರಿನ ಗಣ್ಯರಾದ ನಾಗರಾಜ ನಿಡ್ವಣ್ಣಾಯ, ಸಿ.ಎ. ಬ್ಯಾಂಕ್ ನ ಅಧ್ಯಕ್ಷರಾದ ಗಣೇಶ್ ನಿಡ್ವಣ್ಣಾಯ, ಶೀನಪ್ಪ ಶೆಟ್ಟಿ ನೆಕ್ರಾಜೆ, ಸತೀಶ್ ಪೂಜಾರಿ ನೇರೋಳ್ತಡ್ಕ, ಯುವರಾಜ ಕಡಂಬ, ಮಲ್ಲಿಕಾ ಯುವರಾಜ ಕಡಂಬ, ಸರಿತಾ ಸುಮಾರು 2 ಗಂಟೆಗಳ ಕಾಲ ನಡೆದ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.

Advertisement

ಊಟದ ವಿರಾಮದ ನಂತರ ಪುಣ್ಚಪ್ಪಾಡಿ ಶಾಲೆಯ ಮುಖ್ಯಗುರು ರಶ್ಮಿತಾ ನರಿಮೊಗರು ನಡೆಸಿಕೊಟ್ಟ ಜೈನ ಧರ್ಮದ ಬಗೆಗಿನ ರಸಪ್ರಶ್ನೆ ಮತ್ತು ದೇವರ ಡಬ್ಬ ಎಂಬ ವಿಶಿಷ್ಟ ಆಟಗಳು ಮಕ್ಕಳ ಮನಸೂರೆಗೊಂಡವು.

 

ಸುರೇಖಾ ಜೈನ್ ಮಂಗಳೂರು ಇವರು ನಡೆಸಿಕೊಟ್ಟ ಯೋಗಭ್ಯಾಸದೊಂದಿಗೆ ಆರಂಭಗೊಂಡ 2ನೇ ದಿನದ ಶಿಬಿರದ ಅಂಗವಾಗಿ ಇತಿಹಾಸ ಪ್ರಸಿದ್ಧ ಪುದುಬೆಟ್ಟು ಸವಣೂರು ಬಸದಿಗೆ ಭೇಟಿ ನೀಡಿ ತಾಯಿ ಪದ್ಮಾಂಬೆಯ ದರ್ಶನ ಮಕ್ಕಳ ಹೃದಯದಲ್ಲಿ ಆಧ್ಯಾತ್ಮದ ಭಾವ ಬೆಳೆಸಿತು. ನಂತರ ಮಕ್ಕಳು ಸಂಭ್ರಮಿಸಿದ್ದು ಸಚಿನ್ ಕುಮಾರ್ ಜೈನ್ ಇವರ ತೋಟದಲ್ಲಿ. ತೋಟದ ಪರಿಚಯ, ಕೃಷಿ ಬದುಕಿನ ಸೌಂದರ್ಯಗಳ ಬಗ್ಗೆ ತಿಳಿದುಕೊಂಡ ಮಕ್ಕಳು ಸಂಯೋಜಕ ಸುಕುಮಾರ ಬಲ್ಲಾಳ್ ನಡೆಸಿದ ಕುರುಡು ನಡಿಗೆ, ರಶ್ಮಿತಾ ನರಿಮೊಗರು ನಡೆಸಿಕೊಟ್ಟ ರೈತನ ಬಯಕೆ, ಹಗ್ಗಜಗ್ಗಾಟ, ಹಾಳೆಯ ವಾಹನ ಮುಂತಾದ ತುಳುನಾಡಿನ ಪ್ರಸಿದ್ಧ ಜನಪದ ಅಟಗಳೊಂದಿಗೆ ಇಡಿಯ ದಿನವನ್ನು ಸಂಭ್ರಮಿಸಿದರು. ಮಕ್ಕಳಿಗೆ ಮನಸೋ ಇಚ್ಛೆ ಖುಷಿ ಪಡಿಸಿದ ಸಂಗತಿಯೆಂದರೆ ರೈನ್ ಡ್ಯಾನ್ಸ್. ಸಚಿನ್ ಕುಮಾರ್ ಇವರ ಮನೆಯಂಗಳದಲ್ಲಿ ಸುಮಾರು 40 ಕ್ಕೂ ಹೆಚ್ಚು ಶವರ್ಗಳನ್ನು ಕಟ್ಟಿ ಅದಕ್ಕೆ ನೀರು ಸರಬರಾಜು ಮಾಡಿಸಿ ಕೃತಕ ಮಳೆಯನ್ನು ನಿರ್ಮಿಸಿ ಆ ಮಳೆಯಲ್ಲಿ ಹಾಡಿನ ನೃತ್ಯ ಮಾಡುವುದೇ ರೈನ್ ಡ್ಯಾನ್ಸ್. ನೀರಿನೊಂದಿಗೆ ಆಟವಾಡುತ್ತಾ ಮಕ್ಕಳು ಮನಸೋ ಇಚ್ಛೆಖುಷಿ ಪಟ್ಟರು. ನೀರಾಟ ಮುಗಿದೊಡನೆ ಪ್ರಕೇತಿಯ ಮಡಿಲಲ್ಲಿ ನಡೆದ ವನಭೋಜನ ಮಕ್ಕಳ ಹಸಿವನ್ನು ನೀಗಿಸುವುದರೊಂದಿಗೆ ಮನಸ್ಸಿಗೆ ಮುದ ನೀಡಿತು.

 

Advertisement

 

ಶಿಬಿರದ ಕೊನೆಯಲ್ಲಿ ಶಿಬಿರದ ಸಂಯೋಜಕ ಸಚಿನ್ ಕುಮಾರ್ ಜೈನ್ ಪುಣ್ಚಪ್ಪಾಡಿ ಮಾತನಾಡಿದರು. ಈ ಶಿಬಿರದಲ್ಲಿ ಭಾರತೀಯ ಯುವ ಜೈನ್ ಮಿಲನ್ ಮಂಗಳೂರು ವಲಯ 8ರ ರಾಜ್ಯ ಜೊತೆ ಕಾರ್ಯದರ್ಶಿಗಳಾದ ಸುಕುಮಾರ ಬಲ್ಲಾಳ್, ಅರಿಂಜಯ ಜೈನ್, ಸಚಿನ್ ಕುಮಾರ್ ಜೈನ್, ಮಂಗಳೂರು ಜೈನ್ ಮಿಲನ್ ನ ಸಂಘಟನಾ ಕಾರ್ಯದರ್ಶಿಯಾದ ಸನತ್ ಕುಮಾರ್ ಜೈನ್, ನಿರ್ಮಲ್ ಕುಮಾರ್ ಜೈನ್ ,ಪ್ರಶಾಂತ್ ಜೈನ್, ಸಂತೋಷ್ ಕುಮಾರ್ ಜೈನ್, ಶಿಲ್ಪಾ ಮುನಿರಾಜ್, ಶರಣ್ಯ ಅರಿಂಜಯ್, ಐಶ್ವರ್ಯ ಪ್ರಶಾಂತ್, ಶಾಶ್ವತಿ ಸಚಿನ್ ಕುಮಾರ್, ಪವನ್ ಕುಮಾರ್ ಜೈನ್, ಸಂಜಿತ್ ಕುಮಾರ್ ಜೈನ್, ಹಾಗೂ 45 ಮಕ್ಕಳು ಭಾಗವಹಿಸಿದರು.

 

Advertisement

ದೂರದ ಮಂಗಳೂರಿನ ಮಕ್ಕಳನ್ನು ಒಂದು ದಿನದ ಮಕ್ಕಳ ಕೂಟದಲ್ಲಿ ಸೇರಿಸಿ ಹಳ್ಳಿ ಬದುಕಿನ ಸೊಗಡನ್ನು ತಿಳಿಸುವ ನೆಲ ಜಲದ ಪ್ರೀತಿಯನ್ನು ಬೆಳೆಸುವ ಕೈಂಕರ್ಯ ನಿಜಕ್ಕೂ ಶ್ಲಾಘನೀಯ. ಈ ಪ್ರಯತ್ನವನ್ನು ಮಾಡಿದ ಭಾರತೀಯ ಜೈನ್ ಮಿಲನ್ ಮಂಗಳೂರು ಮತ್ತು ಭಾರತೀಯ ಯುವ ಜೈನ್ ಮಿಲನ್ ಮಂಗಳೂರು ವಲಯ 8ರ ಕಾರ್ಯ ಅಭಿನಂದನಾರ್ಹ.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?
May 6, 2025
7:44 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಅಡಿಕೆ ಬೆಳೆಗೆ ಉತ್ತಮ ಧಾರಣೆಯ ಸಂತಸದಲ್ಲಿ ಚಾಮರಾಜನಗರ ರೈತರು | ಚಾಲಿ ಅಡಿಕೆ ಧಾರಣೆ ಏರಿಕೆಯ ನಿರೀಕ್ಷೆಯಲ್ಲಿ ಮಲೆನಾಡು ಭಾಗದ ಬೆಳೆಗಾರರು | ಧಾರಣೆ ಏರಿಕೆಯ ಬಗ್ಗೆ ತಜ್ಞರ ಅಭಿಪ್ರಾಯ |
May 3, 2025
7:01 AM
by: ದ ರೂರಲ್ ಮಿರರ್.ಕಾಂ
ಕಣ್ಣಿಗೆ ಬಟ್ಟೆ ಕಟ್ಟಿ 6 ನಿಮಿಷದಲ್ಲಿ 112 ವಸ್ತುಗಳನ್ನು ಗುರುತಿಸಿದ ಬಾಲಕಿ | ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆ |
April 27, 2025
11:17 AM
by: The Rural Mirror ಸುದ್ದಿಜಾಲ
ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕತೆ ಮೇಳೈಸಿದ ಸ್ಥಳ ನಾಕೂರುಗಯ | ಭಕ್ತಿ ಪ್ರಕೃತಿಗಳ ಸಂಗಮ
April 24, 2025
6:05 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group