ಮಕ್ಕಳಿಗೆ ಹೊಳೆ ದಾಟುವ ಚಿಂತೆ, ಹೆತ್ತವರಿಗೆ ಪ್ರಾಣ ಭೀತಿ…!!

June 26, 2019
8:00 AM

ಸುಬ್ರಹ್ಮಣ್ಯ :ಮುಂಗಾರು ಆರಂಭವಾಯಿತೆಂದರೆ ಇಲ್ಲಿಯವರಿಗೆ ಸಂಕಷ್ಟದ ಸರಮಾಲೆ. ಮಕ್ಕಳಿಗೆ ಹೊಳೆ ದಾಟುವ ಚಿಂತೆ. ಪೋಷಕರಿಗೆ ಮಕ್ಕಳ ಪ್ರಾಣದ ಭೀತಿ. ಅಲುಗಾಡುತ್ತಿರುವ ಬಿದಿರಿನ ತೂಗು ಸೇತುವೆ ಮೇಲೆ ಈ ಭಾರಿಯೂ ಪ್ರಾಣ ಒತ್ತೆಯಿಟ್ಟು ತೆರಳಬೇಕಾದ ಅನಿವಾರ್ಯತೆಯಲ್ಲಿ ಇದ್ದಾರೆ ಕಲ್ಮಕಾರು ಗ್ರಾಮದ ಶೆಟ್ಟಿಕಜೆ ನಿವಾಸಿಗಳು.

ಕಲ್ಮಕಾರು ಗ್ರಾಮದಿಂದ ಅಂಜನಕಜೆ ಕೊಪ್ಪಡ್ಕ ಗುಳಿಕಾನ ಗುಡ್ಡೆಕಾನ ಪೆರ್ಮುಕಜೆ ಭಾಗಗಳನ್ನು ತಲುಪಲು ಶೆಟ್ಟಿಕಜೆ ಎಂಬಲ್ಲಿ ಹರಿಯುವ ಹೊಳೆಗೆ ಸೇತುವೆ ನಿರ್ಮಿಸಬೇಕಿದೆ. ಮಳೆಗಾಲದಲ್ಲಿ ಈ ಹೊಳೆ ನೆರೆಯಿಂದ ತುಂಬಿ ಹರಿದು ಈ ಭಾಗದ ಜನತೆಯ ನಿತ್ಯ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಕಲ್ಮಕಾರು ಅಂಗನವಾಡಿ ಪ್ರಾಥಮಿಕ ಶಾಲೆ, ಹಾಗೂ ಇತರೆಡೆಯ ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳು ಈ ಹೊಳೆಯ ಆಚೆ ಬದಿಯಲ್ಲಿದ್ದು ಅವರೆಲ್ಲ ಪ್ರತಿ ಮಳೆಗಾಲ ಸಮಸ್ಯೆಗಳಿಗೆ ಒಳಗಾಗುತ್ತಿರುತ್ತಾರೆ.

ಮಳೆಗಾಲದ ವೇಳೆ ಸ್ಥಳಿಯರು ತಾತ್ಕಾಲಿಕ ಬಿದಿರಿನ ತೂಗು ಸೇತುವೆ ನಿರ್ಮಿಸಿಕೊಳ್ಳುತ್ತಾರೆ. ಇದು ಅಪಾಯಕಾರಿ ಸ್ಥಿತಿಯಲ್ಲಿದ್ದು ಪುಟ್ಟ ಮಕ್ಕಳು ಅಲುಗಾಡುವ ಈ ತಾತ್ಕಾಲಿಕ ಸೇತುವೆ ಮೇಲೆ ತೆರಳುವಾಗ ಭಯವಾಗುತ್ತದೆ. ಜೀವ ಕೈಯಲ್ಲಿ ಇಟ್ಟಕೊಂಡು ಸೇತುವೆ ದಾಟುವ ಸಾಹಸವನ್ನು ಮಕ್ಕಳು ಹೆತ್ತವರು ಮಾಡುತ್ತಾರೆ.

 

ಇಲ್ಲಿಗೆ ಶಾಶ್ವತವಾಗಿ ಸೇತುವೆಯೊಂದನ್ನು ನಿರ್ಮಿಸುವಂತೆ ನಲವತ್ತು ವರ್ಷಗಳಿಂದ ಬೇಡಿಕೆ ಇಟ್ಟಿದ್ದಾರೆ ಇಲ್ಲಿಯ ನಾಗರಿಕರು. ಹಲವು ಜನಪ್ರತಿನಿಧಿಗಳು ಇಲ್ಲಿಗೆ ಬಂದು ಭರವಸೆ ನೀಡಿ ತೆರಳಿದ್ದರು. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ಹೊತ್ತಲ್ಲಿ ಈ ಭಾಗದ ನಾಗರಿಕರು ಚುನಾವಣೆ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದರು. ಈ ವೇಳೆ ಸುಳ್ಯ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆ ಅರಿತು ಸಂಬಂದಿಸಿದ ಇಲಾಖೆ ಅಧಿಕಾರಿಗಳ ಜತೆ ನಾಗರಿಕರ ಸಮ್ಮುಖ ಸಭೆ ನಡೆಸಿದ್ದರು. ಆದರೆ ಬ್ರಹತ್ ಮೊತ್ತದ ಅನುದಾನದ ಅವಶ್ಯಕತೆ ಇರುವುದರಿಂದ ಸೇತುವೆ ನಿರ್ಮಾಣಕ್ಕೆ ಇಲಾಖೆಗಳ ಬಳಿ ಅಷ್ಟು ಹಣವಿಲ್ಲದೆ ತಹಶೀಲ್ದಾರ್ ಯತ್ನ ವಿಫಲಗೊಂಡಿತ್ತು.

ಈ ಸೇತುವೆಯಲ್ಲಿ ಒಂದು ಹೆಜ್ಜೆ ಇಟ್ಟರೂ ಕೆಳಗೆ ಬೀಳುವ ಆತಂಕ. ಪ್ರತಿದಿನ ಮಕ್ಕಳ ಪೋಷಕರು ಬೆಳಗ್ಗೆ ಸಂಜೆ ಈ ಎರಡು ಅವದಿ ಸೇತುವೆ ದಡದ ತನಕ ಮಕ್ಕಳನ್ನು ಕರೆತಂದು ಸೇತುವೆ ದಾಟಿಸುತ್ತಾರೆ. ಸಂಜೆ ಶಾಲೆ ಬಿಟ್ಟಾಗ ಮನೆಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಾರೆ.
ಇಲ್ಲಿನ ಮಕ್ಕಳ, ಪೋಷಕರ ವ್ಯಥೆ ಇಂದು ನಿನ್ನೆಯದಲ್ಲ. ಹಲವು ವರ್ಷ ಕಲ್ಮಕಾರು ಶಾಲೆಯಷ್ಟೆ ಇತಿಹಾಸ ಇಲ್ಲಿನ ಸಮಸ್ಯೆಗೂ ಆಗಿದೆ. ತಾತ್ಕಾಲಿಕ ತೂಗು ಸೇತುವೆ ನಿರ್ಮಾಣಕ್ಕೂ ಮೊದಲು ಮಕ್ಕಳು ಇಲ್ಲಿ ನೆರೆ ನೀರಿನ ಪ್ರಮಾಣದ ಅಂದಾಜಿಲ್ಲದೆ ದಾಟುವ ಪ್ರತ್ನ ನಡೆಸಿ ಅಪಾಯಕ್ಕೆ ಸಿಲುಕಿಕೊಂಡ ಘಟನೆಗಳು ಇಲ್ಲಿ ಸಂಭವಿಸಿದ ಕುರಿತು ಸ್ಥಳೀಯರು ಹೇಳುತ್ತಾರೆ.

ಕಲ್ಮಕಾರು-ಅಂಜನಕಜೆ ಕೊಪ್ಪಡ್ಕ ಗುಳಿಕಾನ ಗುಡ್ಡೆಕಾನ ಪೆರ್ಮುಕಜೆ ಮಧ್ಯೆ ಸಂಪರ್ಕ ಸಾಧಿಸುವ ಈ ಪ್ರದೇಶದಲ್ಲಿ ನಲವತ್ತಕ್ಕೂ ಅಧಿಕ ಮನೆಗಳಿವೆ. ಪರಿಶಿಷ್ಟ ಜಾತಿ ಪಂಗಡಗಳ ಕುಟುಂಬಗಳು ಇಲ್ಲಿವೆ. ಮಲೆಕುಡಿಯ ನಿವಾಸಿಗಳು ಇಲ್ಲಿದ್ದಾರೆ. ಪಡಿತರ, ಆಹಾರ ಸಾಮಾಗ್ರಿ, ಅನಾರೋಗ್ಯ ಇತ್ಯಾಧಿಗಳ ಪೂರೈಕೆಗೆ ಸೇತುವೆ ಆಶ್ರಯಿಸಿ ತೆರಳಬೇಕು. ಅನಾರೋಗ್ಯ ಪೀಡಿತರನ್ನು ಚಿಕಿತ್ಸೆಗೆ ಸೇತುವೆ ಮೇಲೆ ಹೊತ್ತು ಒಯ್ಯಬೇಕು.
ಪರ್ಯಾಯ ರಸ್ತೆಯಿದ್ದರೂ ಅದನ್ನು ಸುತ್ತು ಬಳಸಿ ತೆರಳಬೇಕು. ಅಲ್ಲಿಯೂ ಕೂಡ ಹೊಳೆ ಸಿಗುತ್ತದೆ ಅಲ್ಲಿಯೂ ಹೊಳೆ ನೆರೆಗೆ ತುಂಬಿ ಹರಿಯುವುದರಿಂದ ಆ ರಸ್ತೆಯೂ ಪ್ರಯೋಜನಕ್ಕೆ ಬರುತಿಲ್ಲ. ಕುಟುಂಬಗಳು ವಾಸವಿರುವ ಈ ಪ್ರದೇಶದ ಸುತ್ತ ಹೊಳೆ ಹರಿಯುತ್ತಿರುವದರಿಂದ ಈ ಊರು ದ್ವೀಪದಂತಿದೆ.

ಇಲ್ಲಿಯ ಜ್ವಲಂತ ಸಮಸ್ಯೆ ಕುರಿತು ಸ್ಥಳೀಯರು ಸಚಿವರು, ಸಂಸದರು, ಶಾಸಕರು ಸೇರಿದಂತೆ ಸ್ಥಳಿಯ ಜನಪ್ರತಿನಿಧಿ ಹಾಗೂ ಅಧಿಕಾರಿ ಹೀಗೆ ಎಲ್ಲರ ಗಮನಕ್ಕೆ ತಂದಿದ್ದರೂ ಪ್ರಯೋಜನ ಶೂನ್ಯ. ಗ್ರಾಮ ಸಭೆಗಳಲ್ಲೂ ಚರ್ಚೆ ನಡೆದರೂ ಪರಿಹಾರ ಆಗಿಲ್ಲ.

ತಾತ್ಕಾಲಿಕ ಸೇತುವೆಯೂ ಕೈ ಕೊಟ್ಟರೆ ತ್ರಿಶಂಕು ಸ್ಥಿತಿ. ಮಕ್ಕಳಿಗೆ ಶಾಲೆಗೆ ತೆರಳಲು ಸಾಧ್ಯವಾಗದೆ ರಜೆ ಹಾಕಿ ಮನೆಯಲ್ಲಿ ಕುಳಿತುಕೊಳ್ಳಬೇಕು. ಕೆಲ ಪೋಷಕರು ಈ ಸಂಕಷ್ಟ ಬೇಡಪ್ಪ ಅಂತ ತಮ್ಮ ಮಕ್ಕಳನ್ನು ಸಂಬಂದಿಕರ ಮನೆಯಲ್ಲಿ, ಹಾಸ್ಟೇಲ್‍ಗಳಲ್ಲಿ ಸೇರಿಸಿದ್ದಾರೆ. ಮಳೆಗಾಲ ಈಗ ಆರಂಭವಾಗುತ್ತಿದ್ದಂತೆ ಸ್ಥಳಿಯರು ತಾತ್ಕಾಲಿಕ ಸೇತುವೆ ನಿರ್ಮಿಸಲು ಸಿದ್ಧತೆ ನಡೆಸುತ್ತಿದ್ದಾರೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯದಲ್ಲಿ ವಿದ್ಯುತ್‌ ಸಂಕಷ್ಟದ ಸುಳಿವು – ರಾತ್ರಿ 6.30 ರಿಂದ 9ರವರೆಗೆ ಪೂರೈಕೆ ವ್ಯತ್ಯಯ ಸಾಧ್ಯತೆ
September 10, 2026
10:59 AM
by: ದ ರೂರಲ್ ಮಿರರ್.ಕಾಂ
ದೇಶಾದ್ಯಂತ ಮುಂಗಾರು ಬಿತ್ತನೆ 1,086 ಲಕ್ಷ ಹೆಕ್ಟೇರ್ ದಾಟಿದೆ – ಕರ್ನಾಟಕದಲ್ಲಿ ಭತ್ತ, ದ್ವಿದಳ ಧಾನ್ಯ ಕೃಷಿ ಕುಸಿತ
September 8, 2026
10:02 PM
by: ದ ರೂರಲ್ ಮಿರರ್.ಕಾಂ
ಜಾನುವಾರುಗಳ ಮೇವಿನ ಕೊರತೆಗೆ ಅಜೋಲಾ ಪರಿಹಾರ – ರಾಜ್ಯದಲ್ಲಿ 12 ಸಾವಿರ ಘಟಕಗಳ ಸ್ಥಾಪನೆಗೆ ಚಾಲನೆ
September 8, 2026
9:38 PM
by: ದ ರೂರಲ್ ಮಿರರ್.ಕಾಂ
‘ಅರ್ಧ ಎಕರೆ ಸಾಕು… ಹಳ್ಳಿಯಲ್ಲೇ ಜೀವನ ಮಾಡಬಹುದು’ ಈ ಮಾತಿನ ಹಿಂದೆ ಇರುವ ದೊಡ್ಡ ಪ್ರಶ್ನೆ ಏನು..?
September 8, 2026
9:43 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror