ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ರಾಜ್ಯದ ತೆರಿಗೆ ಸಂಗ್ರಹಣಾ ಇಲಾಖೆಗಳಾದ ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ, ಸಾರಿಗೆ ಇಲಾಖೆ ಮತ್ತು ನೋಂದಣಿ ಮತ್ತು ಮುದ್ರಾಂಕ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಇದೊಂದು ಕುತೂಹಲದ ಸಂಗತಿ. ಈ ಕಡೆಗೆ ಫೋಕಸ್..
ವಾಣಿಜ್ಯ ತೆರಿಗೆ ಇಲಾಖೆ: ವಾಣಿಜ್ಯ ತೆರಿಗೆ ಇಲಾಖೆಯ ಈ ವರ್ಷದ ತೆರಿಗೆ ಸಂಗ್ರಹ ಗುರಿ 76,046 ಕೋಟಿ ರೂ. ಆಗಿದ್ದು, ಈ ವರೆಗೆ 33,618 ಕೋಟಿ ರೂ. ತೆರಿಗೆ ಸಂಗ್ರಹ ಆಗಿದೆ. ಇದು ವಾರ್ಷಿಕ ಗುರಿಯ ಶೇ. 44.2 ರಷ್ಟು ಇದೆ. ಕಳೆದ ವರ್ಷ ಇದೇ ಅವಧಿಯ ತೆರಿಗೆ ಸಂಗ್ರಹಕ್ಕೆ ಹೋಲಿಸಿದರೆ, ಶೇ. 20.3 ರಷ್ಟು ಹೆಚ್ಚಳ ಆಗಿದೆ. ಜಿಎಸ್ಟಿ ತೆರಿಗೆ ಸಂಗ್ರಹದಲ್ಲಿಯೂ ಶೇ. 14.3 ರಷ್ಟು ಬೆಳವಣಿಗೆ ಆಗಿದೆ.
ಜಿಎಸ್ಟಿ ಜಾರಿಯಾದಾಗ 4.51 ಲಕ್ಷ ಮಂದಿ/ ಕಂಪೆನಿಗಳು ಜಿಎಸ್ಟಿಯಲ್ಲಿ ನೋಂದಾಯಿಸಿಕೊಂಡಿದ್ದರು. ಈಗ ನೋಂದಣಿ ಮಾಡಿಕೊಂಡವರ ಸಂಖ್ಯೆ 8,16,573 ದಾಟಿದ್ದು, ಜಿಎಸ್ಟಿಯಲ್ಲಿ ನೋಂದಾಯಿಸಿಕೊಂಡವರ ಸಂಖ್ಯೆ ಸುಮಾರು ಶೇ. 100 ರಷ್ಟು ಹೆಚ್ಚಳವಾಗಿದೆ.ಜಿಎಸ್ಟಿ ಪಾವತಿಯಲ್ಲಿ ನಿರ್ಲಕ್ಷ್ಯ ತೋರಿದ 64 ಸಾವಿರಕ್ಕೂ ಹೆಚ್ಚು ಲೈಸನ್ಸ್ಗಳನ್ನು ರದ್ದುಪಡಿಸಲಾಗಿದೆ. ಈ ಸಾಲಿನಲ್ಲಿ 44 ಲಕ್ಷ ಇ-ವೇ ಬಿಲ್ಗಳನ್ನು ತಪಾಸಣೆ ಮಾಡಲಾಗಿದೆ.
ಅಬಕಾರಿ ಇಲಾಖೆ: ಅಬಕಾರಿ ಇಲಾಖೆಯಲ್ಲಿ 2019-2020ನೇ ಸಾಲಿಗೆ 20950 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ನಿಗದಿಪಡಿಸಲಾಗಿದೆ.ಏಪ್ರಿಲ್ 1 ರಿಂದ ಆಗಸ್ಟ್ 30 ರ ವರೆಗೆ 9145.36 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು, ಶೇ. 43.65 ರಷ್ಟು ಗುರಿ ಸಾಧನೆಯಾಗಿದೆ.ತೆರಿಗೆ ಸಂಗ್ರಹದಲ್ಲಿ ಕಳೆದ ವರ್ಷಕ್ಕಿಂತ 952.70 ಕೋಟಿ ರೂ. ಹೆಚ್ಚುವರಿ ಮೊತ್ತ ಸಂಗ್ರಹವಾಗಿದ್ದು, ಶೇ. 11.63 ರಷ್ಟು ಹೆಚ್ಚಳವಾಗಿದೆ.
ಸಾರಿಗೆ ಇಲಾಖೆ:ಸಾರಿಗೆ ಇಲಾಖೆ ಹಾಗೂ ಸಾರಿಗೆ ನಿಗಮಗಳ ತೆರಿಗೆ ಸಂಗ್ರಹದ ವಾರ್ಷಿಕ ಗುರಿ 7100 ಕೋಟಿ ರೂ. ಗಳಷ್ಟಿದ್ದು, ಆಗಸ್ಟ್ 30 ರ ವರೆಗೆ 2750.82 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ನಿಗದಿ ಪಡಿಸಲಾಗಿತ್ತು.ಅದರಲ್ಲಿ 2476 ಕೋಟಿ ರೂ. ತೆರಿಗೆ ಸಂಗ್ರವಾಗಿದ್ದು, ತೆರಿಗೆ ಸಂಗ್ರಹ ನಿಗದಿತ ಗುರಿಯ ಶೇ. 90 ರಷ್ಟಾಗಿದೆ.ವಾಹನ ಮಾರಾಟದಲ್ಲಿ ಸಾರಿಗೆ ಮತ್ತು ಸಾರಿಗೇತರ ವಾಹನಗಳ ನೋಂದಣಿಯಲ್ಲಿ ಶೇ. 10.34 ರಷ್ಟು ಕಡಿಮೆಯಾಗಿದೆ. ಇದರಿಂದಾಗಿ ತೆರಿಗೆ ಸಂಗ್ರಹದಲ್ಲಿ ವ್ಯತ್ಯಯವಾಗಿದೆ.
ಸಂಚಾರ ನಿಯಮ ಹಾಗೂ ಮೋಟಾರು ವಾಹನ ಕಾಯಿದೆ ಉಲ್ಲಂಘನೆಗೆ ಸಂಬಂಧಿಸಿದಂತೆ ದಂಡದ ಮೊತ್ತವನ್ನು ಇಳಿಸುವ ಬಗ್ಗೆ ಗುಜರಾತ್ ಸರ್ಕಾರ ಹೊರಡಿಸಿರುವ ಆದೇಶವನ್ನು ತರಿಸಿಕೊಂಡು ಪರಿಶೀಲಿಸಿ, ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆ:ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ತೆರಿಗೆ ಸಂಗ್ರಹದ ವಾರ್ಷಿಕ ಗುರಿ 11,828 ಕೋಟಿ ರೂ. ಗಳಷ್ಟಿದ್ದು, ಆಗಸ್ಟ್ 30 ರ ವರೆಗೆ 4574.51 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ನಿಗದಿ ಪಡಿಸಲಾಗಿತ್ತು.ಅದರಲ್ಲಿ 4620.30 ಕೋಟಿ ರೂ. ತೆರಿಗೆ ಸಂಗ್ರವಾಗಿದ್ದು, ಶೇ. ಶೇ.101.1 ರಷ್ಟಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸಂಗ್ರಹವಾದ ತೆರಿಗೆಗಿಂತ 530. 27 ಕೋಟಿ ರೂ. ತೆರಿಗೆ ಹೆಚ್ಚಳವಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಆಸ್ತಿ ನೋಂದಣಿಯಲ್ಲಿ ಬೆಂಗಳೂರಿನಲ್ಲಿ ಶೇ. 3.86 ರಷ್ಟು ಹೆಚ್ಚಳವಾಗಿದೆ.ವಿವಿಧ ಸೇವೆಗಳನ್ನು ಆನ್ಲೈನ್ನಲ್ಲಿ ಒದಗಿಸುತ್ತಿರುವುದು ತೆರಿಗೆ ಸಂಗ್ರಹಕ್ಕೆ ಪೂರಕವಾಗಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆ:ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ 2019-20ನೇ ಸಾಲಿಗೆ 3550 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ಇತ್ತು. ಅದರಲ್ಲಿ ಒಟ್ಟು 1314 ಕೋಟಿ ರೂ. ಅಂದರೆ ಶೇ. 37 ರಷ್ಟು ರಾಜಸ್ವ ಸಂಗ್ರಹ ಆಗಿದೆ.
ರಾಜ್ಯದಲ್ಲಿ ಮರಳು ಮಾಫಿಯಾ ಮಟ್ಟಹಾಕಿ ಜನಸಾಮಾನ್ಯರಿಗೆ ಸುಲಭ ದರದಲ್ಲಿ ಮರಳು ಒದಗಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.