ಶಿಕ್ಷಕನ ಕೈಯಲ್ಲಿ ಮುದ್ದಾಗಿ ಅರಳುವ ವಿಘ್ನವಿನಾಶಕನಿಗೆ ಇಂದು ಶರಣು ಶರಣು….

September 2, 2019
8:00 AM

ನಾಡಿನೆಲ್ಲೆಡೆ ಗಣೇಶ ಹಬ್ಬದ ಸಡಗರ. ಪ್ರತೀ ಊರಿನಲ್ಲಿ ಸಾರ್ವಜನಿಕ ಗಣೇಶ ಉತ್ಸವಗಳು ಸಂಭ್ರಮದಿಂದ ನಡೆಯುತ್ತದೆ. ಇಂತಹ ಸಂದರ್ಭದಲ್ಲಿ ಪೂಜೆ, ಭಕ್ತಿಗೆ ಇಂಬು ನೀಡುವುದು  ಗಣೇಶ ಮೂರ್ತಿ. ಇಂತಹ ಮೂರ್ತಿಗಳನ್ನು ರಚನೆ ಮಾಡುವವರಲ್ಲಿ ಸುಳ್ಯದ ಶ್ರೀನಿವಾಸ ರಾವ್ ಒಬ್ಬರು. ಬೆಲೆ ಕಟ್ಟಲಾಗದ ಮೂರ್ತಿಯನ್ನು ರಚನೆ ಮಾಡುವ ಶ್ರೀನಿವಾಸ ರಾವ್ ಕಡೆಗೆ ಫೋಕಸ್..


ಸುಳ್ಯ: ಇಂದು ಚೌತಿ. ಎಲ್ಲೆಡೆ ಸಾರ್ವಜನಿಕ ಗಣೇಶೋತ್ಸವದ ಸಂಭ್ರಮ. ಗಣೇಶೋತ್ಸವಗಳಲ್ಲಿ ಪೂಜಿಸಲು ತಿಂಗಳ ಹಿಂದೆಯೇ ಆರಂಭಗೊಳ್ಳುವ ವಿಗ್ರಹ ತಯಾರಿ ಕಾರ್ಯ ಮುಗಿದು ವೈವಿಧ್ಯಮಯ, ಮನಮೋಹಕ ಗಣಪತಿ ವಿಗ್ರಹಗಳು ಮಂಟಪ ಏರಲಿದೆ.

 

ಕಳೆದ ಇಪ್ಪತ್ತೈದು ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವದಲ್ಲಿ ಪೂಜಿಸುವ ಗಣಪತಿ ವಿಗ್ರಹಗಳನ್ನು ತಯಾರಿಸುತ್ತಿರುವವರು ಸುಳ್ಯ ಹಳೆಗೇಟಿನ ಶ್ರೀನಿವಾಸ ರಾವ್. ಈ ಬಾರಿಯ ಗಣೇಶೋತ್ಸವಕ್ಕಾಗಿ ಈ ಶಿಕ್ಷಕನ ಕೈಚಳಕದಲ್ಲಿ 10 ಆಕರ್ಷಕ ಗಣಪತಿಯ ವಿಗ್ರಹಗಳು ಅರಳಿದೆ. ಪೂರ್ತಿಯಾಗಿ ಕೈಯಿಂದಲೇ ವಿಗ್ರಹ ನಿರ್ಮಿಸುವ ಇವರು ಮಣ್ಣಿನಿಂದ ಮನಮೋಹಕ ಗಣೇಶ ವಿಗ್ರಹಗಳನ್ನು ತಯಾರಿಸಿ ಸೈ ಎನಿಸಿಕೊಂಡವರು. ಹೆಂಚು ನಿರ್ಮಾಣಕ್ಕೆ ಉಪಯೋಗಿಸುವ ಮಣ್ಣನ್ನು ತಂದು ಬೇಕಾದಂತೆ ಪಾಕ ಬರಿಸಿ ವಿಗ್ರಹಗಳನ್ನು ತಯಾರಿಸುವ ಇವರು ಕಬ್ಬಿಣದ ಮತ್ತು ಬಿದಿರಿನ ಮೊಳೆ ಮತ್ತಿತರ ಪರಿಕರಳನ್ನು ಬಳಸಿ  ವಿಗ್ರಹಕ್ಕೆ ಬೇಕಾದ ರೂಪ ಕೊಡುತ್ತಾರೆ. ಬಳಿಕ ಬಣ್ಣ ನೀಡಿ, ಪಾಲೀಶ್ ಹಚ್ಚಿ ವಿಗ್ರಹವನ್ನು ಸುಂದರಗೊಳಿಸುತ್ತಾರೆ. ಗಣೇಶೋತ್ಸವ ಸಮಿತಿಯವವರ ಬೇಡಿಕೆಯ ರೂಪ ಮತ್ತು ಅಳತೆಯಲ್ಲಿ ಗಣೇಶ ಮೂರ್ತಿಗಳನ್ನು ರಚಿಸಿ ನೀಡುತ್ತಾರೆ. ಸುಳ್ಯ ಸಮೀಪದ ಪೆರಾಜೆ ಕೋಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿರುವ ಶ್ರೀನಿವಾಸ ರಾವ್ ಬೆಳಿಗ್ಗೆ ಮತ್ತು ಸಂಜೆಯ ಬಿಡುವಿನ ಸಮಯವನ್ನು ವಿಗ್ರಹ ತಯಾರಿಗಾಗಿ ಬಳಸಿಕೊಳ್ಳುತ್ತಾರೆ. ಜುಲೈ ಮೊದಲ ವಾರದಿಂದ ಗಣಪತಿ ವಿಗ್ರಹಗಳ ನಿರ್ಮಾಣ ಕಾರ್ಯ ಆರಂಭಿಸಿದ್ದು ಸಂಜೆ ಐದರಿಂದ ಎಂಟರವರೆಗೆ ಮತ್ತು ಬೆಳಿಗ್ಗೆ ಐದರಿಂದ ಎಂಟರವರೆಗೆ ಇದಕ್ಕಾಗಿ ಸಮಯವನ್ನು ಮೀಸಲಿಡುತ್ತಾರೆ.

ಅಭ್ಯಾಸದಿಂದಲೇ ಸಾಧನೆ:ವಿಗ್ರಹ ತಯಾರಿ ಕಲೆಯನ್ನು ಶ್ರೀನಿವಾಸ ರಾವ್ ಎಲ್ಲಿಯೂ ಕಲಿತದ್ದಲ್ಲ. ಹವ್ಯಾಸಕ್ಕಾಗಿ ಹಿಂದೆ ಮೂರ್ತಿಯನ್ನು ತಯಾರಿಸುತ್ತಿದ್ದರು. ಹಳೆಗೇಟಿನಲ್ಲಿ ಗಣೇಶೋತ್ಸವಕ್ಕೆ ಮೂರ್ತಿ ತಯಾರಿಸಲು ಯಾರು ಇಲ್ಲದ ಸಂದರ್ಭ ಬಂದಾಗ ಇವರಲ್ಲಿ ಗಣಪತಿ ವಿಗ್ರಹ ತಯಾರಿಸುವಂತೆ ಸಮಿತಿಯವರು ಬೇಡಿಕೆಯಿಟ್ಟಿದ್ದರು. ಅದರಂತೆ ಮೂರ್ತಿ ಮಾಡಿ ಕೊಟ್ಟರು. ಅಂದಿನಿಂದ  ಕಾಲು ಶತಮಾನಗಳ ಕಾಲ ಆಕರ್ಷಕ ಗಣಪತಿ ವಿಗ್ರಹಗಳ ಮೂಲಕ ಇವರು ತನ್ನ ಕಲಾ ನೈಪುಣ್ಯತೆಯನ್ನು ಮೆರೆದಿದ್ದಾರೆ. ಆರಂಭದಲ್ಲಿ ಒಂದೆರಡು ವಿಗ್ರಹಗಳಷ್ಟೇ ಮಾಡುತ್ತಿದ್ದರು. ಬಳಿಕದ ವರ್ಷಗಳಲ್ಲಿ ಇವರ   ಗಣಪತಿ ಮೂರ್ತಿಗೆ ಬಾರೀ ಬೇಡಿಕೆ ಉಂಟಾಯಿತು. ಕೆಲವು ವರ್ಷ 20, 25 ವಿಗ್ರಹಗಳನ್ನು ತಯಾರಿಸಿದ್ದೂ ಇದೆ. ಸುಳ್ಯ ಮಾತ್ರವಲ್ಲದೆ ನೆರೆಯ ಕಾಸರಗೋಡು ಜಿಲ್ಲೆಯ ದೇಲಂಪಾಡಿ, ಅಡೂರು, ಕುಂಟಾರುಗಳಲ್ಲಿನ ಗಣೇಶೋತ್ಸವಕ್ಕೂ ಇವರು ವಿಗ್ರಹ ತಯಾರಿಸಿ ನೀಡುತ್ತಿದ್ದರು. ಆದರೆ ಈಗ ಸಮಯ ಸಾಕಾಗದ  ಕಾರಣ ಹೆಚ್ಚು ಕಡೆ ವಿಗ್ರಹ ನಿರ್ಮಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಶ್ರೀನಿವಾಸ ರಾವ್. ಈ ಬಾರಿ ಸುಳ್ಯ ತಾಲೂಕಿನ 10 ಗಣೇಶೋತ್ಸವಗಳಿಗೆ ವಿಗ್ರಹಗಳಿಗೆ ರೂಪ ಕೊಟ್ಟಿದ್ದಾರೆ.

ದೊಡ್ಡ ಮೂರ್ತಿಗೆ ವಾರ ಬೇಕು:ದೊಡ್ಡ ಗಣಪತಿ ವಿಗ್ರಹ ನಿರ್ಮಿಸಲು ಒಂದು ವಾರ ಸಮಯ ಬೇಕಾಗುತ್ತದೆ. ಚಿಕ್ಕ ಮೂರ್ತಿಗಳಾದರೆ ಒಂದೆರಡು ದಿವಸಗಳಲ್ಲಿ ತಯಾರಿಸುತ್ತಾರೆ. ಮಣ್ಣನ್ನು ಮಾತ್ರ ಬಳಸಿ ಪರಿಸರ ಸ್ನೇಹಿ ವಿಗ್ರಹಗಳನ್ನು ತಯಾರಿಸುವ ಇವರು ತನ್ನ ಶಾಲೆಯ ಮಕ್ಕಳಿಗೆ ಮತ್ತು ಪರಿಸರದ ಆಸಕ್ತರಿಗೆ ವಿಗ್ರಹ ತಯಾರಿ ಕಲೆಯನ್ನು ಕಲಿಸುತ್ತಾರೆ. ವೇದಿಕೆಗಳನ್ನು ಅಲಂಕರಿಸುವುದರಲ್ಲಿಯೂ ಇವರು ನಿಸ್ಸೀಮರು. ವರ್ಲಿ ಚಿತ್ರ ಕಲಾವಿದರೂ ಆಗಿರುವ ಶ್ರೀನಿವಾಸ ಮಾಸ್ತರ್ ತನ್ನ ವಿದ್ಯಾರ್ಥಿಗಳಿಗೆ ವರ್ಲಿ ಚಿತ್ರಕಲೆ, ಮಣ್ಣಿನ ಮಾದರಿ ತಯಾರಿ, ವಿಗ್ರಹಗಳ ರಚನಾ ಕೌಶಲ್ಯವನ್ನು ಕಲಿಸುತ್ತಾರೆ. ಥರ್ಮೋಕೋಲ್ ಬಳಸಿ ಉಬ್ಬು ಚಿತ್ರಗಳನ್ನೂ ತಯಾರಿಸುತ್ತಾರೆ.

ಮೂರ್ತಿಗಳಿಗೆ ಬೆಲೆ ಹೇಳುವುದಿಲ್ಲ:ಗಣೇಶೋತ್ಸವ ಸಮಿತಿಯವರು ಹೇಳಿದ ಮಾದರಿಯಲ್ಲಿ ಮತ್ತು ನೀಡಿದ ಅಳತೆಯಂತೆ ವಿಗ್ರಹಗಳನ್ನು ನಿರ್ಮಿಸಿ ನೀಡುವ ಶ್ರೀನಿವಾಸ ರಾವ್ ತಾನು ನಿರ್ಮಿಸಿದ ವಿಗ್ರಹಗಳಿಗೆ ಬೇಲೆ ಹೇಳುವುದಿಲ್ಲ. ಗಣೇಶೋತ್ಸವ ಸಮಿತಿಯವರು ನೀಡುವ ಮೊತ್ತವನ್ನು ಸ್ವೀಕರಿಸಿ ತೃಪ್ತರಾಗುತ್ತಾರೆ. ತಾನು ಮಾಡುವ ದೇವರ ಮೂರ್ತಿಗೆ ಇಷ್ಟೇ ರೂಪಾಯಿ ಎಂದು ಬೆಲೆ ಕಟ್ಟಲು ಸಾಧ್ಯವಿಲ್ಲ ಎನ್ನುತ್ತಾರವರು.

 ಗಣಪತಿ ವಿಗ್ರಹಗಳನ್ನು ನಿರ್ಮಿಸಿ ಕೊಡುವಂತೆ ತುಂಬಾ ಕಡೆಗಳಿಂದ ಬೇಡಿಕೆ ಬರುತ್ತದೆ. ಹಿಂದೆಲ್ಲ 20-25 ಗಣಪತಿ ವಿಗ್ರಹಗಳನ್ನು ನಿರ್ಮಿಸುತ್ತಿದ್ದೆ. ಈಗ ಸಮಯ ಸಾಕಾಗದ ಕಾರಣ ಎಲ್ಲವನ್ನೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಗಿದ್ದರೂ ಸಾಧ್ಯವಾದಷ್ಟು ವಿಗ್ರಹಗಳನ್ನು ತಯಾರಿಸಿ ಕೊಡುತ್ತೇನೆ. – ಶ್ರೀನಿವಾಸ ರಾವ್

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಆಟೋ ಗ್ಯಾಸ್ ಕೊರತೆ ವದಂತಿ- ರಾಜ್ಯ ಸರ್ಕಾರದಿಂದ ಸ್ಪಷ್ಟನೆ..!
April 8, 2026
10:24 PM
by: ಮಿರರ್‌ ಡೆಸ್ಕ್
ರಸ್ತೆ ಬದಿ ತ್ಯಾಜ್ಯ ಎಸೆತಕ್ಕೆ ಎಫ್‌ಐಆರ್ | ʼನಾನು ಎಸೆದಿಲ್ಲ’ ಎಂದರೂ ಸಿಕ್ಕ ಸಾಕ್ಷಿ…!
April 8, 2026
9:59 PM
by: ಮಿರರ್‌ ಡೆಸ್ಕ್
ಸರ್ಕಾರದ ಸೌಲಭ್ಯಕ್ಕೆ ‘ಫ್ರೂಟ್ಸ್ ಐಡಿ’ ಕಡ್ಡಾಯ | ರೈತರಿಗೆ ಸೂಚನೆ
April 7, 2026
7:41 AM
by: ಮಿರರ್‌ ಡೆಸ್ಕ್
ಅಡಿಕೆ ಎಲೆ ಚುಕ್ಕಿ ರೋಗ ನಿರ್ವಹಣೆ | ಗುತ್ತಿಗಾರಿನ ಪ್ರಾತ್ಯಕ್ಷಿಕೆ ತೋಟಕ್ಕೆ ಸಿಪಿಸಿಆರ್‌ಐ ನಿರ್ದೇಶಕರ ಭೇಟಿ | ವೈಜ್ಞಾನಿಕ ಕ್ರಮಗಳು ರೈತರಿಗೆ ಆಶಾಕಿರಣ
April 6, 2026
7:32 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror