ಸವಣೂರು: ಶ್ರೀ ಶಾರದಾಂಬಾ ಸೇವಾ ಸಂಘ ಸವಣೂರು ಇದರ ವತಿಯಿಂದ ನಡೆಯುವ 15ನೇ ವರ್ಷದ ಶ್ರೀ ಶಾರದೋತ್ಸವ ಅ.8ರಂದು ಸವಣೂರು ವಿನಾಯಕ ಸಭಾಭವನದಲ್ಲಿ ನಡೆಯಿತು. ಬೆಳಿಗ್ಗೆ ಶ್ರೀ ಶಾರದಾ ದೇವಿಯ ಪ್ರತಿಷ್ಟೆ, ಗಣಹೋಮ ನಡೆಯಿತು. ನಂತರ ದ್ವಜಾರೋಹಣವನ್ನು ಉದಯ ಕುಮಾರ್ ಸರ್ವೆ ನೆರವೇರಿಸಿದರು. ಕೆಳಗಿನಕೇರಿ ಕೊಪ್ಪ ಶಾರದಾಂಬಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಶ್ರೀ ಶಾರದಾ ದೇವಿಗೆ ಬೆಳ್ಳಿ ಕಿರೀಟ ಸಮರ್ಪಣೆ ನಡೆಯಿತು.
ನಂತರ ನಡೆದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹರಿಭಜನಾ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಧಾರ್ಮಿಕ ಉಪನ್ಯಾಸ ನೀಡಿ, ಹಬ್ಬಗಳು ನಮ್ಮನ್ನು ಒಂದುಗೂಡಿಸುತ್ತದೆ. ವೇದಗಳ ಅಧ್ಯಯನದಿಂದ ದೇವರು ಏನೆಂಬುದು ತಿಳಿಯಲು ಸಾಧ್ಯ. ಕಲಿಯುಗದಲ್ಲಿ ಭಗವಂತನ ನಾಮಸ್ಮರಣೆಗೆ ಮಹತ್ವವಿದ್ದು ಆತನ ನಾಮ ಸ್ಮರಣೆಯೇ ನಮಗೆ ಶಕ್ತಿ. ಸನಾತನ ಸಂಸ್ಕೃತಿಯ ಹಿಂದೂ ಧರ್ಮದಲ್ಲಿ ಸಾಮೂಹಿಕ ಆರಾಧನೆಗೆ ಹೆಚ್ಚು ಮಹತ್ವವಿದ್ದು, ಸಾಮೂಹಿಕ ಆರಾಧನಾ ಕೇಂದ್ರಗಳಿಗೆ ಎಲ್ಲರೂ ಮುಕ್ತವಾಗಿ ಪಾಲ್ಗೊಳ್ಳಬಹುದು. ಹಿಂದೂ ಧರ್ಮದ ಕುರಿತು ಎಲ್ಲರಿಗೂ ಪ್ರಾಥಮಿಕ ಶಿಕ್ಷಣದ ಅಗತ್ಯತೆ ಇದೆ. ಧರ್ಮದ ಬಗ್ಗೆ ಅರಿವಿರಬೇಕಾಗಿದೆ ಎಂದರು.

ಸವಣೂರು ಜಿನ ಬಸದಿಯ ಆಡಳಿತ ಮಂಡಳಿ ಅಧ್ಯಕ್ಷ ಬಿ. ಶತ್ರುಂಜಯ ಆರಿಗ ಮಾತನಾಡಿ, ಸಾಧಕನಿಗೆ ಆತನ ಸಾಧನೆಯೇ ಕಿರೀಟವಾಗಬೇಕು. ಧರ್ಮವೆಂದರೆ ಅದೊಂದು ಜೀವನ ಮಾರ್ಗ. ಧರ್ಮವನ್ನರಿತು ಬಾಳಿದರೆ ಅದರ ಮರ್ಮ ಅರಿಯಲು ಸಾಧ್ಯ. ಧರ್ಮವೆಂದರೆ ಮುಕ್ತಿಯೆಡೆಗೆ ಸಾಗುವ ದಾರಿ. ದೇವರ ಆರಾಧನೆ ಎಲ್ಲರೂ ಮಾಡಬಹುದು. ಹಿಂದೂ ಧರ್ಮ ಜಗತ್ತಿನ ಶ್ರೇಷ್ಠ ಧರ್ಮ ಎಂದರು.

ಸವಣೂರು ಶಾರದಾಂಬಾ ಸೇವಾ ಸಂಘದ ಗೌರವಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಅಧ್ಯಕ್ಷತೆ ವಹಿಸಿದ್ದರು.
ಶಾರದಾಂಬಾ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಮೋಹನ್ ರೈ ಕೆರೆಕ್ಕೋಡಿ ಪ್ರಸ್ತಾವನೆಗೈದರು. ಅಧ್ಯಕ್ಷ ಸಂಪತ್ ಕುಮಾರ್ ಇಂದ್ರ ಸ್ವಾಗತಿಸಿದರು. ಕಾರ್ಯದರ್ಶಿ ಜತ್ತಪ್ಪ ಗೌಡ ಆರೇಲ್ತಡಿ ವಂದಿಸಿದರು. ಭವಹರಿ ರೈ ಪ್ರಾರ್ಥಿಸಿದರು. ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು.
ಬೆಳ್ಳಿ ಕಿರೀಟಕ್ಕೆ 25 ಸಾವಿರ ದೇಣಿಗೆ ನೀಡಿದ ಸವಣೂರು ಕೆ.ಸೀತಾರಾಮ ರೈ ಸವಣೂರು ಮತ್ತು 22,222 ರೂ ನೀಡಿದ ಚಂದ್ರಕಲಾ ಮೋಹನ ರೈ ಕೆರೆಕ್ಕೋಡಿ ದಂಪತಿಗಳನ್ನು ವೇದಿಕೆಯಲ್ಲಿ ಸಮ್ಮಾನಿಸಲಾಯಿತು. ದೇಣಿಗೆ ನೀಡಿದ ದಾನಿಗಳನ್ನು ಶಾರದಾ ದೇವಿಯ ಸನ್ನಿದಿಯಲ್ಲಿ ಗೌರವಿಸಲಾಯಿತು. ನಂತರ ಮಹಾಪೂಜೆ , ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ಶಾರದಾಂಬಾ ಸೇವಾ ಸಂಘದ ಉಪಾಧ್ಯಕ್ಷ ಬಾಲಚಂದ್ರ ರೈ ಕೆರೆಕ್ಕೋಡಿ, ಜತೆ ಕಾರ್ಯದರ್ಶಿ ದಯಾನಂದ ಬೇರಿಕೆ, ಕೋಶಾಧಿಕಾರಿ ವಸಂತ ರೈ ಸೊರಕೆ, ವೆಂಕಪ್ಪ ಗೌಡ ಅಡೀಲು, ಆದರ್ಶ ಜೆ ರೈ, ಗಿರಿಧರ ಗೌಡ ಮೆದು, ವಿಶ್ವನಾಥ ಮಡಿವಾಳ ಅತಿಥಿಗಳನ್ನು ಗೌರವಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಲೆ ತೆಲಿಪಾಲೆ ಖ್ಯಾತಿಯ ಉಮೇಶ್ ಮಿಜಾರ್ತಂಡದಿಂದ ತೆಲಿಕೆದ ಗೊಂಚಿಲ್ ತುಳು ಹಾಸ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು 2 ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಪಾಲ್ಗೊಂಡಿದ್ದರು.

ಸಂಜೆ 5 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆಯ ಬಳಿಕ ಶಾರದಾ ಮೂರ್ತಿಯ ಶೋಭಾ ಯಾತ್ರೆ ಸವಣೂರಿನಿಂದ ಹೊರಟು ಪಣೆಮಜಲು, ಪೆರಿಯಡ್ಕ ಮೂಲಕ ಸರ್ವೆಯವರೆಗೆ ಸಾಗಿ ಸರ್ವೆ ಗೌರಿ ಹೊಳೆಯಲ್ಲಿ ಜಲಸ್ಥಂಬನ ನಡೆಯಿತು. ಪಣೆಮಜಲಿನಲ್ಲಿ ವಿನಾಯಕ ಫ್ರೆಂಡ್ಸ್ ಮತ್ತು ಗಣಪತಿ ಕಟ್ಟೆ ಪೂಜಾ ಸಮಿತಿ ಪೆರಿಯಡ್ಕದಲ್ಲಿ ಆದಿಶಕ್ತಿ ಭಜನಾ ಮಂಡಳಿಯ ವತಿಯಿಂದ ಭಕ್ತರಿಗೆ ಪಾನೀಯ ಮತ್ತು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಶಾಲಾ ಮಕ್ಕಳ ಕಣಿತ ಭಜನೆ ಹಾಗೂ ಕೇರಳ ಚೆಂಡೆ ಮೇಳ ಮೆರವಣಿಗೆಗೆ ವಿಶೇಷ ಮೆರುಗು ನೀಡಿತ್ತು.

