ಹಲಸು ಮೇಳ ‘ವೀಕೆಂಡ್’ ಹಬ್ಬ ಅಲ್ಲ!

June 23, 2019
10:00 AM

ಎರಡು ವರುಷದ ಹಿಂದೊಮ್ಮೆ ಹಲಸು ಮೇಳದಲ್ಲಿ ವಿಷಯಕ್ಕಾಗಿ ಹೊಂಚು ಹಾಕುತ್ತಿದ್ದೆ! “ಸರ್, ಇಂದು ವೀಕೆಂಡ್.. ಸಿಕ್ಕಾಪಟ್ಟೆ ಜನ ಬರ್ತಾರೆ” ಮಳಿಗೆದಾರರೊಬ್ಬರ ಖುಷಿ. ‘ವೀಕೆಂಡಿಗೂ, ಮೇಳಕ್ಕೂ ಏನು ಸಂಬಂಧ’ ಅರ್ಥಗೊತ್ತಾಗಲಿಲ್ಲ ಎಂದಾಗ, ‘ನೋಡ್ರಿ.. ಇಷ್ಟು ಐಟಂ ತಂದಿದೀನಿ. ವ್ಯಾಪಾರ ಆದ್ರೆ ಆಯಿತು.” ಎಂದ. ಆ ವಿಷಯ ಮರೆತಿದ್ದೆ.
ಮೊನ್ನೆ ಪುತ್ತೂರಿನಲ್ಲಿ ಹಲಸು ಮೇಳ ಸಂಪನ್ನವಾಗಿತ್ತು. ಮಳಿಗೆಗಳನ್ನು ಸುತ್ತುತ್ತಿದ್ದಾಗ ಅಂದಿನ ಘಟನೆ ನೆನಪಾಯಿತು. “ಜನ ಬರ್ತಾರೆ, ವ್ಯಾಪಾರವಾಗ್ತದೆ. ಇಂದು ಬಂದವರು ನಾಳೆಯೂ ಬರ್ತಾರೆ. ಐಟಂ ಮುಗಿಯುತ್ತದೆ..” ಇಂತಹುದೇ ಮಾತುಕತೆ.

Advertisement
Advertisement

‘ಹಲಸು ಮೇಳವೆಂದರೆ ವೀಕೆಂಡ್ ಹಬ್ಬವಾ’ ನನ್ನೊಳಗಿನ ಚೋದ್ಯ. ವೀಕೆಂಡ್ ಹಬ್ಬವಾದರೆ ಅದಕ್ಕೆ ಹಲಸಿನ ಮೇಳ ಎನ್ನುವ ಲೇಬಲ್ ಬೇಕೇ? ಪರ್ಸ್ ಖಾಲಿಯಾಗುವಷ್ಟು ತಿನ್ನುವುದು ಮಾತ್ರವಲ್ಲ, ಮನೆಗೂ ಕಟ್ಟಿ ಒಯ್ಯಬಹುದು. ಆಪ್ತೇಷ್ಟರಿಗೂ ಹಂಚಬಹುದು.

 

ಕಳೆದ ಹತ್ತು ವರುಷಗಳಲ್ಲಿ ಕರ್ನಾಟಕ-ಕೇರಳಗಳಲ್ಲಿ ಏನಿಲ್ಲವೆಂದರೂ ನೂರೈವತ್ತಕ್ಕೂ ಮಿಕ್ಕಿ ಹಲಸಿನ ಹಬ್ಬಗಳಾಗಿವೆ. ಆರಂಭದ ದಿನಮಾನಗಳಲ್ಲಿ ಹಲಸು ಪ್ರಿಯರನ್ನು ಸೆಳೆಯಲು ‘ಲೈವ್’ ಮಳಿಗೆಗಳು ಅನಿವಾರ್ಯ. ಹೊಸ ಹೊಸ ರುಚಿಗಳನ್ನು ತಿಂದು, ತಂತಮ್ಮ ಅಡುಗೆಮನೆಗಳಲ್ಲಿ ಅನುಷ್ಠಾನವಾಗಬೇಕೆಂಬ ದೃಷ್ಟಿಕೋನ. ಆದರೆ ಇಂದು ಹಾಗಾಗುತ್ತಿಲ್ಲ. ಮೇಳದಲ್ಲಿ ರುಚಿಯನ್ನು ಸವಿದು ಮನೆ ತಲಪುವುದರೊಳಗೆ ಮರೆತುಬಿಡುವಷ್ಟು ಜಾಣ ಮರೆವು. ಮರೆವಿನ ಮನಸ್ಸುಗಳಿಗೆ ಹಲಸು ಮೇಳವೂ ಒಂದೇ, ಯಂತ್ರಮೇಳವೂ ಒಂದೇ. ತಿಂದರಾಯಿತು!

Advertisement

ಒಂದು ಕಾಲಘಟ್ಟದಲ್ಲಿ ‘ನಿರ್ಲಕ್ಷಿತ’ ಹಣ್ಣಾಗಿದ್ದ ಹಲಸು ಆ ಶಾಪದಿಂದ ಹೊರಬಂದಿದೆ. ಹಲಸು ಕೃಷಿ ಅಭಿವೃದ್ಧಿಯಾಗಿದೆ. ಮೌಲ್ಯವರ್ಧಿತ ಉತ್ಪನ್ನಗಳು ಸಿದ್ಧವಾಗುತ್ತಿವೆ. ತಳಿಗಳು ಅಭಿವೃದ್ಧಿಯಾಗುತ್ತಿವೆ. ಇದೆಲ್ಲಾ ಹಲಸು ಮೇಳಗಳ ಫಲಶ್ರುತಿ. ಈ ಎಲ್ಲಾ ಆಭಿವೃದ್ಧಿಗಳ ಹಿಂದೆ ವೈಯಕ್ತಿಕವಾಗಿ ಹಲಸು ಪ್ರೀತಿಯನ್ನಿಟ್ಟುಕೊಂಡು ಮೇಳಕ್ಕೆ ಬರುವ ನಮ್ಮಲ್ಲಿ ಯಥಾಸಾಧ್ಯ ರುಚಿಗಳನ್ನು ‘ಸಬೂಬು ಹೇಳದೆ’ ನಮ್ಮ ಮನೆಗಳಲ್ಲೇ ಯಾಕೆ ಮಾಡಿಕೊಳ್ಳಬಾರದು?

 

“ಪುರುಸೊತ್ತಿಲ್ಲ, ಹಲಸನ್ನು ಬಿಡಿಸುವುದು ಸಮಸ್ಯೆ. ಸೊಳೆ ತೆಗೆಯುವುದು ಕಿರಿಕಿರಿ. ಮೇಣ ಬೇರೆ..” ಹೀಗೆ ನೂರಾರು ಕಾರಣಗಳು ರಾಚುತ್ತವೆ. ಇವೆಲ್ಲವನ್ನೂ ಮೀರಿ ಇಂದು ಎಷ್ಟೋ ಅಡುಗೆಮನೆಗಳಲ್ಲಿ ಹಲಸಿನ ಪರಿಮಳ ಬೀರುತ್ತದೆ. ಹೊಸ ರುಚಿಗಳನ್ನು ತಮಗಾಗಿ ಮಾಡುತ್ತಾರೆ. ಅಂತಹವರಲ್ಲಿ ಮಾತನಾಡಿಸಿದರೆ “ಹೊಸ ರುಚಿಯನ್ನು ಮೇಳದಿಂದ ಕಲಿತೆ” ಉತ್ತರ ಬರುತ್ತದೆ. ಹಲಸು ಮೇಳದಲ್ಲಿ ಇಂತಹ ಉತ್ತರಗಳನ್ನು ಕೇಳುವ ದಿನಮಾನಗಳು ಬರಬೇಕು.

ಹಲಸು ಮೇಳವು ಒಂದು ಕೈತಾಂಗು. ಅಲ್ಲಿ ಖಾದ್ಯಗಳನ್ನು ಸವಿದು ಹೊಸ ರುಚಿಯೊಂದು ಮನೆ ತಲುಪಬೇಕು. ಹೊಸ ಹೊಸ ವಿಚಾರಗಳು ಮನದೊಳಕ್ಕೆ ಇಳಿಯಬೇಕು. ಗಿಡಗಳನ್ನು ನೆಡಲು ಮನೆಯಲ್ಲಿ ಜಾಗ ಇಲ್ಲದವರು ಮನದಲ್ಲಿ ಅದಕ್ಕೆ ಜಾಗ ಕೊಡಬೇಕು. ನಮ್ಮ ಅಡುಗೆ ಮನೆಗಳಲ್ಲಿ ಹಲಸಿನ ಮೇಳವಾಗಬೇಕು.

Advertisement

 

ಸರಿ, ಹೀಗನ್ನುವಾಗ ಮೌಲ್ಯವರ್ಧಿತ ಉತ್ಪನ್ನಗಳು ನೂರಾರು ಸಿದ್ಧವಾಗುತ್ತಿವೆ. ಅದಕ್ಕೆ ಗಿರಾಕಿಗಳು ಯಾರು? ಎನ್ನುವ ಉಡಾಫೆ ಧುತ್ತೆಂದು ಎದುರು ನಿಲ್ಲುತ್ತವೆ. ಹಲಸಿನ ಪ್ರೀತಿಯಿದ್ದು ಉತ್ಪನ್ನಗಳನ್ನು ಕೊಳ್ಳುವ ವರ್ಗಕ್ಕೆ ಇದು ಪ್ರಯೋಜನಕಾರಿ. ಆ ಉತ್ಪನ್ನ ತಯಾರಿಯ ಹಿಂದಿರುವ ಕಷ್ಟ-ಸುಖಗಳು ಉತ್ಪನ್ನದ ಜತೆಗೆ ಮನೆ ಸೇರುತ್ತದೆ. ಮನೆಯಲ್ಲಿ ಮಾತಾಗುತ್ತದೆ.
ಸಮಾಜವೇ ನಮಗೆ ಪಾಠಶಾಲೆ. ಓರ್ವ ಪ್ರತಿಷ್ಠಿತ ವ್ಯಕ್ತಿ ಮೇಳದಲ್ಲಿ ಮಳಿಗೆ ತೆರೆದು ಹಲಸು, ಮಾವು, ಉತ್ಪನ್ನವನ್ನು ಮಾರಲು ನಿಂತರೆ, ದೂರದಲ್ಲಿ ನಿಂತು ನೋಡುತ್ತಿರುವ ಸಾಮಾನ್ಯ ವ್ಯಕ್ತಿಗೆ ಅದು ಮಾದರಿಯಾಗುತ್ತದೆ. ಮುಂದಿನ ಮೇಳಗಳಲ್ಲಿ ಆತನೂ ಹಣ್ಣನ್ನು ಮಾರಲು, ಉತ್ಪನ್ನ ತಯಾರಿಸಲು ಉತ್ಸುಕನಾಗುತ್ತಾನೆ. ಹೀಗೆ ಹಲಸಿನ ಗುಂಗನ್ನು ಹಬ್ಬಿಸುವುದೇ ಮೇಳಗಳ ಆಶಯ.

ಹಲಸು ‘ಬಡವರ ಹಣ್ಣು’ ಎಂದು ಬಾಲ್ಯವನ್ನು ನೆನಪಿಸಿಕೊಳ್ಳುತ್ತೇವೆ. ಅದನ್ನು ಬಡವರ ಹಣ್ಣೆಂದು ಕರೆಯುತ್ತಾ ‘ಬಡತನವನ್ನು’ ಗೇಲಿ ಮಾಡಿಸಿಕೊಳ್ಳುವ ದಿನಮಾನದಲ್ಲಿ ನಾವಿಲ್ಲ. ಯಾಕೆ ಹೇಳಿ, ಹಲಸು ಪಂಚತಾರಾ ಹೋಟೆಲನ್ನು ಪ್ರವೇಶಿಸಿದೆ. ಹೀಗಾಗಲು ಎಷ್ಟೋ ಮಂದಿಯ ಪರಿಶ್ರಮ ಇರುವುದು ಶ್ಲಾಘನೀಯ. ಇವರ ಶ್ರಮ ಎಲ್ಲೂ ದಾಖಲಾಗುವುದಿಲ್ಲ.

(ಚಿತ್ರಗಳು : ಸಾಂದರ್ಭಿಕ)

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ

ಹೊಸರುಚಿ | ಹಲಸಿನ ಹಣ್ಣಿನ ಜಾಮ್
May 17, 2025
8:00 AM
by: ದಿವ್ಯ ಮಹೇಶ್
ಅಡಿಕೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಗಳಿಂದ ರಚಿಸಲಾದ ಸಮಿತಿಗಳು ಏನು ಹೇಳಿವೆ..?
May 17, 2025
7:27 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ವಾರಣಾಸಿ ಎಂಬ ದ್ವಂದ್ವಗಳ ನಗರ
May 16, 2025
1:02 PM
by: ರಮೇಶ್‌ ದೇಲಂಪಾಡಿ
ಮನ ಗೆಲ್ಲುವ ಕೈರುಚಿ, ಸುಲಭದಲ್ಲಿ ಕೈಸೆರೆಯಾಗದೇಕೆ..?
May 16, 2025
12:48 PM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

You cannot copy content of this page - Copyright -The Rural Mirror

Join Our Group